'ರಾಮಾಯಣ' ಚಿತ್ರದಲ್ಲಿ ರಾವಣ ಯಶ್ ಸ್ಟಂಟ್ ಡಬಲ್ ಆಗಿ ವ್ರೆಸ್ಲರ್ ಚಾರ್ಲಿ ಸ್ಪೂನರ್?
ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ' ಸಿನಿಮಾ ಟೀಸರ್ ರಿಲೀಸ್ ಬಳಿಕ ಭಾರೀ ಚರ್ಚೆ ಹುಟ್ಟಾಕ್ಕಿದೆ. ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ರಾವಣನಾಗಿ ಯಶ್ ನಟಿಸಿರುವುದು ಕನ್ನಡ ಚಿತ್ರರಂಗದಲ್ಲಿ ಕೂಡ ನಿರೀಕ್ಷೆ ಹುಟ್ಟಾಕ್ಕಿದೆ. ಶ್ರೀರಾಮನಾಗಿ ರಣ್ಬೀರ್ ಕಪೂರ್, ಸೀತಾಮಾತೆಯಾಗಿ ಸಾಯಿಪಲ್ಲವಿ ಬಣ್ಣಹಚ್ಚಿದ್ದಾರೆ.
ಕಾಜಲ್ ಅಗರ್ವಾಲ್, ಅರುಣ್ ಗೋವಿಲ್, ರವಿ ದುಬೆ, ಸನ್ನಿ ಡಿಯೋಲ್ ಹೀಗೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. 'ರಾಮಾಯಣ' ಕಾವ್ಯದಲ್ಲಿ ಪ್ರತಿ ಪಾತ್ರಕ್ಕೂ ಬಹಳ ಮಹತ್ವ ಇದೆ. ನಿತೇಶ್ ತಿವಾರಿ ಅಳೆದು ತೂಗಿ ಕಲಾವಿದರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಸಾವಿರಾರು ಕೋಟಿ ವೆಚ್ಚದಲ್ಲಿ ಈ ಪೌರಾಣಿಕ ಸಿನಿಮಾ ನಿರ್ಮಾಣವಾಗ್ತಿದೆ. ಎರಡು ಭಾಗಗಳಾಗಿ ಸಿನಿಮಾ ತೆರೆಗೆ ಬರ್ತಿದೆ.

ಅಂದಹಾಗೆ ಮೊದಲ ಭಾಗದಲ್ಲಿ ರಾವಣನಾಗಿ ಯಶ್ ಕೆಲವೇ ನಿಮಿಷಗಳ ಕಾಲ ಕಾಣಿಸಿಕೊಳ್ಳಲಿದ್ದಾರೆ. ರಣ್ಬೀರ್ ಜೊತೆ ತೆರೆ ಹಂಚಿಕೊಂಡಿಲ್ಲ ಎಂದು ಕೂಡ ಯಶ್ ಹೇಳಿದ್ದಾರೆ. ಇದೆಲ್ಲದರ ನಡುವೆ ಚಿತ್ರದಲ್ಲಿ ರಾವಣನಾಗಿ ನಟಿಸಿರುವ ಯಶ್ ಸ್ಟಂಟ್ ಡಬಲ್ ಆಗಿ ಪ್ರೋ ವ್ರೆಸ್ಲರ್ ಚಾರ್ಲಿ ಸ್ಪೂನರ್ ಕೆಲಸ ಮಾಡಿದ್ದಾರೆ ಎನ್ನಲಾಗ್ತಿದೆ.
ಸ್ಟಂಟ್ ಡಬಲ್ ಅಂದ್ರೆ ರಿಸ್ಕಿ ಸ್ಟಂಟ್ ಮಾಡುವಾಗ ನಟ ಅಥವಾ ನಟಿಯ ಬದಲು ಕಾಣಿಸಿಕೊಳ್ಳುವ ತರಬೇತಿ ಪಡೆದ ವೃತ್ತಿಪರರು. ಸಿನಿಮಾ ಅಥವಾ ವೆಬ್ ಸೀರಿಸ್ಗಳಲ್ಲಿ ಅಪಾಯಕಾರಿ ಎನಿಸುವ ಸನ್ನಿವೇಶಗಳಲ್ಲಿ ಕಲಾವಿದರ ಬದಲು ಇಂತಹವರು ಡ್ಯೂಪ್ ಆಗಿ ಕೆಲಸ ಮಾಡುತ್ತಾರೆ. ಅದೇ ರೀತಿ 'ರಾಮಾಯಣ' ಚಿತ್ರದಲ್ಲಿ ರಾವಣ ಪಾತ್ರಧಾರಿ ಯಶ್ ಸ್ಟಂಟ್ ಡಬಲ್ ಆಗಿ ಚಾರ್ಲಿ ಸ್ಪೂನರ್ ಕಾಣಿಸಿಕೊಂಡಿದ್ದಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೀತಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಇಲ್ಲ.
'ರಾಮಾಯಣ' ಚಿತ್ರದ ಮೊದಲ ಭಾಗದಲ್ಲಿ ಹೆಚ್ಚು ಕಮ್ಮಿ 10-15 ನಿಮಿಷಗಳ ಕಾಲ ರಾವಣನಾಗಿ ಯಶ್ ತೆರೆಮೇಲೆ ವಿಜೃಂಭಿಸಿದ್ದಾರೆ ಎನ್ನಲಾಗ್ತಿದೆ. ಶ್ರೀರಾಮನಿಗೆ ಎದಿರುಬದಿರಾಗುವ ದೃಶ್ಯಗಳು ಇಲ್ಲದೇ ಇದ್ದರೂ ರಾವಣನ ಎಂಟ್ರಿ ಸೇರಿ ಒಂದಷ್ಟು ಬಿಲ್ಡಪ್ ಸನ್ನಿವೇಶಗಳಿವೆ. ವಿದ್ಯುಜ್ಜಿಹ್ವನ ಜೊತೆ ರಾವಣ ಯುದ್ಧ ಮಾಡುವ ಸನ್ನಿವೇಶ ಕೂಡ ಇದೆ ಎನ್ನಲಾಗ್ತಿದೆ. ಹಾಲಿವುಡ್ ಸ್ಟಂಟ್ ಮಾಸ್ಟರ್ ಗೈ ನಾರ್ರಿಸ್ 'ರಾಮಾಯಣ' ಚಿತ್ರಕ್ಕೆ ಆಕ್ಷನ್ ಕಂಪೋಸ್ ಮಾಡಿದ್ದಾರೆ. ಗೈ ನಾರ್ರಿಸ್ ತಂಡದಲ್ಲಿ ಚಾರ್ಲಿ ಸ್ಪೂನರ್ ಕೆಲಸ ಮಾಡಿದ್ದಾರೆ ಎನ್ನುವ ಮಾತುಗಳು ಕೇಳಿಬರ್ತಿದೆ.
ದೀಪಾವಳೀ ಹಬ್ಬದ ಸಂಭ್ರಮದಲ್ಲಿ ಅಕ್ಟೋಬರ್ ಕೊನೆಯ ವಾರದಲ್ಲಿ 'ರಾಮಾಯಣ' ಚಿತ್ರದ ಮೊದಲ ಭಾಗ ತೆರೆಗೆ ಬರಲಿದೆ. ಐಮ್ಯಾಕ್ಸ್ ಸ್ಕ್ರೀನ್ಗಳಲ್ಲಿ ಸಿನಿಮಾ ಬಿಡುಗಡೆ ಮಾಡುವ ಪ್ರಯತ್ನ ಜೋರಾಗಿದೆ. ಹಾಲಿವುಡ್ ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ಸಿನಿಮಾ ನಿರ್ಮಾಣ ಮಾಡಲಾಗುತ್ತಿದೆ. ನಮ್ಮ ಕಥೆಯನ್ನು ವಿಶ್ವದಾದ್ಯಂತ ಇರುವ ಪ್ರೇಕ್ಷಕರ ಮುಂದೆ ಕೊಂಡೊಯ್ಯುವ ಕೆಲಸ ಮಾಡಲಾಗ್ತಿದೆ. ಈಗಾಗಲೇ ಹಾಲಿವುಡ್ ಅಂಗಳದಲ್ಲಿ ಪ್ರಮೋಷನ್ ಶುರುವಾಗಿದೆ.
ಲಾಸ್ ವೇಗಾಸ್ನಲ್ಲಿ ನಡೆದ ಸಿನಿಮಾಕಾನ್ ಸಮಾವೇಶದಲ್ಲಿ 'ರಾಮಾಯಣ' ಚಿತ್ರದ ಪ್ರಮೋಷನ್ ಜೋರಾಗಿತ್ತು. ಯಶ್ ಜೊತೆ ನಿರ್ಮಾಪಕ ನಮಿತ್ ಮಲ್ಹೋತ್ರಾ ಭಾಗಿ ಆಗಿ ಸಿನಿಮಾ ಬಗ್ಗೆ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಈಗಾಗಲೇ 2ನೇ ಭಾಗದ ಚಿತ್ರೀಕರಣ ಕೂಡ ಆರಂಭಿಸಲಾಗಿದೆ. ಆದರೆ ರಣ್ಬೀರ್ ಹಾಗೂ ಯಶ್ ಒಟ್ಟಿಗೆ ಕಾಣಿಸಿಕೊಳ್ಳುವ ದೃಶ್ಯಗಳ ಚಿತ್ರೀಕರಣ ಇನ್ನು ಆರಂಭವಾಗಿಲ್ಲ.
ಮೊದಲ ಭಾಗದಲ್ಲಿ ರಾಮಾಯಣದ ಅರಣ್ಯಕಾಂಡದ ಪ್ರಮುಖ ಘಟನೆಯಾದ ಸೀತಾಪಹರಣದವರೆಗಿನ ಕಥೆಯನ್ನು ಹೇಳಲಾಗ್ತಿದೆ. ಅಲ್ಲಿಂದ ಮುಂದೆ ಹನುಮಂತನ ಭೇಟಿ, ಲಂಕೆಗೆ ಸೇತು ಕಟ್ಟುವುದು, ರಾವಣನ ಜೊತೆ ಶ್ರೀರಾಮನ ಯುದ್ಧ ಹೀಗೆ ಇನ್ನುಳಿದ ಕಥೆಯನ್ನು 2ನೇ ಭಾಗದಲ್ಲಿ ಕಟ್ಟಿಕೊಡಲಾಗ್ತಿದೆ. ಮುಂದಿನ ವರ್ಷ ದೀಪಾವಳಿಗೆ ಪಾರ್ಟ್-2 ತೆರೆಗೆ ಬರಲಿದೆ.


Click it and Unblock the Notifications