ಸೋತವರ ಗೆಲ್ಲೋ ಹಠ; ಯುವ ಸಿನಿಮಾ ಕೈ ಬಿಟ್ಟು ಧ್ರುವ ಮೇಲೆ ಸೂರಿ ಕಣ್ಣು?
ದುನಿಯಾ ಸೂರಿ ಮುಂದಿನ ಸಿನಿಮಾ ಯಾವ್ದು? ಇದು ಗಾಂಧಿನಗರದಲ್ಲಿ ಚರ್ಚೆ ಹುಟ್ಟಾಕ್ಕಿರುವ ಮಿಲಿಯನ್ ಡಾಲರ್ ಪ್ರಶ್ನೆ. ಈಗಾಗಲೇ ಯುವ ರಾಜ್ಕುಮಾರ್ ನಟನೆಯ ಚಿತ್ರಕ್ಕೆ ಸೂರಿ ಆಕ್ಷನ್ ಕಟ್ ಹೇಳುವುದು ಪಕ್ಕಾ ಆಗಿದೆ. ಸಿನಿಮಾ ಮುಹೂರ್ತ ಕೂಡ ನೆರವೇರಿದೆ. ಇಂತಹ ಹೊತ್ತಲ್ಲೇ ಈ ಸಿನಿಮಾ ನಿಂತು ಹೋಗುತ್ತದೆ ಎನ್ನಲಾಗ್ತಿದೆ.
ಅದ್ಯಾಕೋ ದುನಿಯಾ ಸೂರಿ ಮ್ಯಾಜಿಕ್ ನಡೀತಿಲ್ಲ. 'ಟಗರು' ಬಳಿಕ ಮಾಡಿದ ಎರಡೂ ಸಿನಿಮಾ ಗೆಲ್ಲಲಿಲ್ಲ. ಹಾಗಂತ ಬ್ಯಾಕ್ ಟು ಬ್ಯಾಕ್ ಪ್ರಾಜೆಕ್ಟ್ ಕೈಗೆತ್ತಿಕೊಳ್ಳುವ ಉತ್ಸಾಹ ಅವರಿಗಿಲ್ಲ. ಅಂತೂ ಇಂತೂ ಯುವ ರಾಜ್ಕುಮಾರ್ ನಟನೆಯ 3ನೇ ಚಿತ್ರಕ್ಕೆ ಸಾರಥ್ಯ ವಹಿಸುತ್ತಾರೆ ಎನ್ನಲಾಗಿತ್ತು. ಈಗ ಅದು ಕೈಗೂಡುವ ಲಕ್ಷಣಗಳು ಕಾಣ್ತಿಲ್ಲ. ಅಕ್ಷಯ ತೃತಿಯ ದಿನದಂದೇ ಸಿನಿಮಾ ಮುಹೂರ್ತ ನಡೆದಿತ್ತು. ಆದರೆ ಬಳಿಕ ಅದರ ಸುಳಿವೇ ಇಲ್ಲ.

'ಎಕ್ಕ' ಸಿನಿಮಾ ಬಿಡುಗಡೆಗೂ ಮುನ್ನ ಯುವ03 ಸಿನಿಮಾ ಶುರುವಾಗಿತ್ತು. ಪುನೀತ್ ರಾಜ್ಕುಮಾರ್ ಹಾಗೂ ಶಿವರಾಜ್ಕುಮಾರ್ ಬಳಿಕ ಯುವ ರಾಜ್ಕುಮಾರ್ ಚಿತ್ರಕ್ಕೆ ಸೂರಿ ಆಕ್ಷನ್ ಕಟ್ ಹೇಳ್ತಾರೆ ಅನ್ನೋದೇ ನಿರೀಕ್ಷೆ ಹೆಚ್ಚಿಸಿತ್ತು. ಆದರೆ ಅದು ಸಾಧ್ಯವಾಗಲ್ಲ ಎನ್ನುವ ಗುಸುಗುಸು ಶುರುವಾಗಿದೆ. ಚಿತ್ರತಂಡ ಕೂಡ ಈ ಬಗ್ಗೆ ಮೌನ ವಹಿಸಿದೆ. ಹಾಗಾಗಿ ಅದು ನಿಜ ಎಂದೇ ಕೆಲವರು ಭಾವಿಸಿದ್ದಾರೆ.
ಯುವ ನಟನೆಯ ಮುಂದಿನ ಚಿತ್ರವನ್ನು ಸೂರಿ ಬದಲು ತರುಣ್ ಸುಧೀರ್ ಕಟ್ಟಿಕೊಡುತ್ತಿದ್ದಾರೆ ಎನ್ನುವ ಊಹಾಪೋಹ ಶುರುವಾಗಿದೆ. ದಸರಾ ಹಬ್ಬದ ಸಂಭ್ರಮದಲ್ಲಿ ಸಿನಿಮಾ ಘೋಷಣೆ ಆಗುವ ಸಾಧ್ಯತೆಯಿದೆ. ಸೂರಿ ನಿರ್ದೇಶನದ ಚಿತ್ರವನ್ನು ಸದ್ಯಕ್ಕೆ ಪಕ್ಕಕ್ಕಿಟ್ಟು ಯುವ ಬೇರೆ ಚಿತ್ರದಲ್ಲಿ ನಟಿಸುತ್ತಾರೆ ಎನ್ನುವ ವಾದವೂ ಇದೆ. ಮತ್ತೊಂದು ಕಡೆ ಧ್ರುವ ಸರ್ಜಾ ಜೊತೆ ಸಿನಿಮಾ ಮಾಡಲು ಸೂರಿ ಪ್ಲ್ಯಾನ್ ಮಾಡುತ್ತಿದ್ದಾರೆ.

ಬಹಳ ಹಿಂದೆಯೇ ಇಂತಾದೊಂದು ವದಂತಿ ಹರಿದಾಡಿತ್ತು. ಅದು ಈಗ ನಿಜವಾಗುತ್ತದೆ ಎನ್ನುವ ಚರ್ಚೆ ಗಾಂಧೀನಗರದಲ್ಲಿ ಶುರುವಾಗಿದೆ. ಸದ್ಯ 'ಕೆಡಿ' ಚಿತ್ರದಲ್ಲಿ ಧ್ರುವ ಸರ್ಜಾ ನಟಿಸುತ್ತಿದ್ದಾರೆ. ಮುಂದೆ 'ಕೆರೆಬೇಟೆ' ಚಿತ್ರ ನಿರ್ದೇಶಕ ರಾಜ್ಗುರು ಜೊತೆ ಆಕ್ಷನ್ ಪ್ರಿನ್ಸ್ ಕೈಜೋಡಿಸುತ್ತಾರೆ ಎನ್ನಲಾಗಿತ್ತು. ಅದು ಅಧಿಕೃತವಾಗಿಲ್ಲ. ಇಂತಹ ಸಮಯದಲ್ಲಿ ಸೂರಿ ಕಣ್ಣು ಧ್ರುವ ಮೇಲೆ ಬಿದ್ದಿದೆ. ತೆರೆಮರೆಯಲ್ಲಿ ಸಿನಿಮಾ ಮಾತುಕತೆ ನಡೀತಿದೆ ಎನ್ನುವ ಮಾತುಗಳು ಕೇಳಿಬರ್ತಿದೆ.
ಅದ್ಯಾಕೋ ಧ್ರುವ ಸರ್ಜಾ ಪ್ರತಿ ಚಿತ್ರಕ್ಕೆ ಎರಡ್ಮೂರು ವರ್ಷ ವ್ಯಯಿಸುತ್ತಾರೆ. 'ಕೆಡಿ' ಸಿನಿಮಾ ಪರಿಸ್ಥಿತಿ ಕೂಡ ಅದೇ ರೀತಿ ಇದೆ. ದೀಪಾವಳಿಗೆ ಸಿನಿಮಾ ರಿಲೀಸ್ ಎಂದು ಪ್ರೇಮ್ ಹೇಳಿದ್ದಾರೆ. ಆದರೆ ಈ ವರ್ಷ ಸಿನಿಮಾ ತೆರೆಗೆ ಬರೋದೇ ಅನುಮಾನ ಎನ್ನುವ ಮಾತುಗಳು ಕೇಳಿಬರ್ತಿದೆ. ಧ್ರುವ ನಟನೆಯ 'ಮಾರ್ಟಿನ್' ಸಿನಿಮಾ ಕೂಡ ಗೆದ್ದಿಲ್ಲ. ಹಾಗಾಗಿ ಸೂರಿ ಜೊತೆ ಸೇರಿ ಹಿಟ್ ಕೊಡುವ ಲೆಕ್ಕಾಚಾರದಲ್ಲಿರುವಂತೆ ಕಾಣ್ತಿದೆ.
ಪಿಆರ್ಕೆ ಪ್ರೊಡಕ್ಷನ್ಸ್, ಕೆಆರ್ಜಿ ಸ್ಟುಡಿಯೋಸ್ ಹಾಗೂ ಜಯಣ್ಣ ಫಿಲ್ಮ್ಸ್ ಸಂಸ್ಥೆಗಳು ಒಟ್ಟಾಗಿ 'ಎಕ್ಕ' ಚಿತ್ರ ನಿರ್ಮಾಣ ಮಾಡಿದ್ದವು. ಅದೇ ಕಾಂಬಿನೇಷನ್ನಲ್ಲಿ ಯುವ-03 ಸಿನಿಮಾ ಕೂಡ ಶುರುವಾಗಿತ್ತು. ದುನಿಯಾ ವಿಜಯ್ ಮಗಳು ರಿತನ್ಯಾ ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸಬೇಕಿದೆ. ಸೂರಿ ತಮ್ಮದೇ ಸ್ಟೈಲ್ನಲ್ಲಿ ಒಂದು ಲವ್ ಸ್ಟೋರಿ ಹೇಳಲು ಮುಂದಾಗಿದ್ದರು. ಆದರೆ ಅದನ್ನು ಬಿಟ್ಟು ಧ್ರುವ ಸರ್ಜಾ ಸಿನಿಮಾ ಮಾಡ್ತಾರೆ ಎನ್ನುವುದು ಈಗ ಕೇಳಿಬರುತ್ತಿರುವ ಸುದ್ದಿ. ಶೀಘ್ರದಲ್ಲೇ ಈ ಎಲ್ಲಾ ಗೊಂದಲಗಳಿಗೆ ಉತ್ತರ ಸಿಗಲಿದೆ.


Click it and Unblock the Notifications











