'ಯುವ' ಬರೋಕು ಮುನ್ನ ಯುವರಾಜ್ಕುಮಾರ್ ನಟನೆಯ ಮತ್ತೆರಡು ಚಿತ್ರಗಳು ಫಿಕ್ಸ್?
ದೊಡ್ಮನೆ ಹುಡ್ಗ, ಡಾ. ರಾಜ್ಕುಮಾರ್ ಮೊಮ್ಮಗ ಯುವ ರಾಜ್ಕುಮಾರ್ ಸಿನಿ ಆರಂಗೇಟ್ರಂಗೆ ದಿನಗಣನೆ ಶುರುವಾಗಿದೆ. 'ಯುವ' ಸಿನಿಮಾ ಮೂಲಕ ರಾಘಣ್ಣನ ಕಿರಿಮಗ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಸಿನಿಮಾ ಚಿತ್ರೀಕರಣ ಭರದಿಂದ ಆಗುತ್ತಿದೆ. ಸಂತೋಷ್ ಆನಂದ್ ರಾಮ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಿದ್ದಾರೆ.
ಹೊಂಬಾಳೆ ಸಂಸ್ಥೆ 'ಯುವ' ಸಿನಿಮಾ ನಿರ್ಮಾಣ ಮಾಡ್ತಿದೆ. ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣವಾಗುತ್ತಿದೆ. ಯುವ ಜೋಡಿಯಾಗಿ 'ಕಾಂತಾರ' ಬೆಡಗಿ ಸಪ್ತಮಿ ಗೌಡ ಮಿಂಚಿದ್ದಾರೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಡಿಸೆಂಬರ್ 22ಕ್ಕೆ ಸಿನಿಮಾ ತೆರೆಗೆ ಬರಬೇಕಿತ್ತು. ಆದರೆ ಹೊಂಬಾಳೆ ಸಂಸ್ಥೆಯ ಮತ್ತೊಂದು ಸಿನಿಮಾ ಆ ಸಮಯಕ್ಕೆ ಬರೋದ್ರಿಂದ 'ಯುವ' ಮುಂದೆ ಹೋಗುವಂತಾಗಿದೆ. ಮಾರ್ಚ್ 28ಕ್ಕೆ ಸಿನಿಮಾ ರಿಲೀಸ್ ಆಗಲಿದೆ.

'ಯುವ' ಸಿನಿಮಾ ಸೆಟ್ಟೇರುವುದಕ್ಕು ಮುನ್ನ ಸಣ್ಣ ಟೀಸರ್ ರಿಲೀಸ್ ಆಗಿತ್ತು. ಟೀಸರ್ನಲ್ಲಿ ಯುವ ರಾಜ್ಕುಮಾರ್ ಖದರ್ ನೋಡಿದ ಅಭಿಮಾನಿಗಳು ಫಿದಾ ಆಗಿದ್ದರು. ಪುನೀತ್ ರಾಜ್ಕುಮಾರ್ ಅಗಲಿಕೆ ಬಳಿಕ ಯುವ ಅವರ ಸ್ಥಾನ ತುಂಬುತ್ತಾರೆ ಅನ್ನೋದು ಕೆಲ ಅಭಿಮಾನಿಗಳ ಆಸೆ. ಹಾಗಾಗಿ ಸಿನಿಮಾ ರಿಲೀಸ್ಗೂ ಮೊದ್ಲೆ ಭಾರೀ ಜವಾಬ್ದಾರಿ ಯುವ ಹೆಗಲೇರಿದೆ ಅನ್ನೋರು ಇದ್ದಾರೆ.
ಯುವ ರಾಜ್ಕುಮಾರ್ನ ಸಂತೋಷ್ ಆನಂದ್ ರಾಮ್ ಆಕ್ಷನ್ ಹೀರೋ ಆಗಿ ಪ್ರಸೆಂಟ್ ಮಾಡುವ ಪ್ರಯತ್ನದಲ್ಲಿದ್ದಾರೆ. ಲವ್ ಜೊತೆ ಆಕ್ಷನ್ ಬೆರಸಿ ಒಂದೊಳ್ಳೆ ಕಮರ್ಷಿಯಲ್ ಸಿನಿಮಾ ಪ್ಲ್ಯಾನ್ ಮಾಡುತ್ತಿದ್ದಾರೆ. 'ಅವನ್ನ ಹೊಡಿಯೋಕೆ ಅಂತಾನೇ ಒಂದು ಗ್ಯಾಂಗ್ ಕಾಯ್ತಾ ಇತ್ತು. ಅವನ್ನ ತಡಿಯೋಕೂ ಒಂದು ಗ್ಯಾಂಗ್ ಇತ್ತು. ಗ್ಯಾಂಗ್ವಾರ್ ಅವನು ಶುರು ಮಾಡಲಿಲ್ಲ. ಆದರೆ ಮುಗುಸ್ತಾನೆ' ಎನ್ನುವ ಪ್ರಕಾಶ್ ರಾಜ್ ಡೈಲಾಗ್, 'ನೀವು ದಾಟಿರೋದು ಬ್ಲಡ್ ಲೈನ್. ರಕ್ತ ಅಂಟೇ ಅಂಟುತ್ತೆ' ಎನ್ನುವ ಯುವ ಡೈಲಾಗ್ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಿಸಿದೆ.
ಮೊದಲ ಸಿನಿಮಾ ಬಿಡುಗಡೆಗೂ ಮುನ್ನ ಯುವ ರಾಜ್ಕುಮಾರ್ ಮುಂದಿನ ಸಿನಿಮಾಗಳ ಬಗ್ಗೆ ಚರ್ಚೆ ಶುರುವಾಗಿದೆ. ಯುವ ನಟನೆಯ 2 ಮತ್ತು 3ನೇ ಸಿನಿಮಾ ಕೂಡ ಕನ್ಫರ್ಮ್ ಆಗಿದೆ ಎನ್ನುವ ಗುಸುಗುಸು ಶುರುವಾಗಿದೆ. ಯುವ ರಾಜ್ಕುಮಾರ್ 2ನೇ ಚಿತ್ರಕ್ಕೆ ನರ್ತನ್ ಆಕ್ಷನ್ ಕಟ್ ಹೇಳುತ್ತಾರೆ ಎನ್ನುವ ಊಹಾಪೋಹ ಬಹಳ ದಿನಗಳಿಂದ ಇದೆ. ಇನ್ನು ಪಿಆರ್ಕೆ ಪ್ರೊಡಕ್ಷನ್ಸ್ ಬ್ಯಾನರ್ನಲ್ಲೂ ಯುವ ನಟಿಸೋದು ಬಹುತೇಕ ಖಚಿತ ಎನ್ನುವ ಮಾತುಗಳು ಕೇಳಿಬರ್ತಿದೆ. ಮತ್ತೊಂದು ಚಿತ್ರವನ್ನು ಹೆಬ್ಬುಲಿ ಕೃಷ್ಣ ನಿರ್ದೇಶನ ಮಾಡ್ತಾರೆ ಎನ್ನಲಾಗ್ತಿದೆ.

'ಮಫ್ತಿ' ಸಿನಿಮಾ ಮಾಡಿ ನರ್ತನ್ ಸಕ್ಸಸ್ ಕಂಡಿದ್ದರು. ಬಳಿಕ 2ನೇ ಸಿನಿಮಾ ಆರಂಭಿಸೋದು ತಡವಾಯಿತು. ಯಶ್ ಜೊತೆ ಮಾಡಬೇಕಿದ್ದ ಸಿನಿಮಾ ಸಾಧ್ಯವಾಗಲಿಲ್ಲ. ಸದ್ಯ ಶಿವಣ್ಣನ ನಟನೆಯಲ್ಲಿ 'ಭೈರತಿ ರಣಗಲ್' ಚಿತ್ರೀಕರಣ ನಡೀತಿದೆ. ಈ ಸಿನಿಮಾ ಮುಗಿದ ಬಳಿಕ ಯುವ ನಟನೆಯ ಚಿತ್ರಕ್ಕೆ ನರ್ತನ್ ಆಕ್ಷನ್ ಕಟ್ ಹೇಳ್ತಾರೆ ಅನ್ನುವ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ನಡೀತಿದೆ. ಆದರೆ ಈ ಬಗ್ಗೆ ಖಚಿತ ಮಾಹಿತಿ ಇನ್ನು ಸಿಕ್ಕಿಲ್ಲ.
ಸಾಮಾನ್ಯವಾಗಿ ಸ್ಟಾರ್ ನಟರ ಒಂದು ಸಿನಿಮಾ ಶೂಟಿಂಗ್ ಮುಗಿಯೋದಕ್ಕು ಮುನ್ನ ಮುಂದಿನ ಸಿನಿಮಾಗಳು ಫಿಕ್ಸ್ ಆಗುತ್ತವೆ. ಭಾರೀ ಕ್ರೇಜ್ ಹುಟ್ಟಿಸುವ ಸ್ಟಾರ್ ನಟರ ಮಕ್ಕಳು ಚಿತ್ರರಂಗಕ್ಕೆ ಬರುವಾಗಲೂ ಇಂತಹ ಚರ್ಚೆ ನಡೆಯುತ್ತದೆ. ಯುವ ರಾಜ್ಕುಮಾರ್ ಸಿನಿಎಂಟ್ರಿ ಬಗ್ಗೆ ಕೂಡ ಭಾರೀ ನಿರೀಕ್ಷೆ ಇದೆ. ಗೆದ್ದೇ ಗೆಲ್ಲುತ್ತಾರೆ ಎನ್ನುವ ನಂಬಿಕೆ ಹಲವರಲ್ಲಿದೆ. ಹಾಗಾಗಿ ಮುಂದಿನ ಸಿನಿಮಾ ಚರ್ಚೆ ಶುರುವಾಗಿಬಿಟ್ಟಿದೆ.
'ಯುವ ರಣಧೀರ ಕಂಠೀರವ' ಚಿತ್ರದ ಮೂಲಕ ಯುವ ರಾಜ್ಕುಮಾರ್ ಚಿತ್ರರಂಗಕ್ಕೆ ಬರಬೇಕಿತ್ತು. ಆ ಸಿನಿಮಾ ಟೀಸರ್ ರಿಲೀಸ್ ಆಗಿತ್ತು. ಯುವ ಆರ್ಭಟ ನೋಡಿದ ಅಭಿಮಾನಿಗಳು ಖುಷಿಯಾಗಿದ್ದರು. ಆದರೆ ಕಾರಣಾಂತರಗಳಿಂದ ಆ ಸಿನಿಮಾ ನಿಂತು ಹೋಯಿತು. ಬಳಿಕ ಹೊಂಬಾಳೆ ಸಂಸ್ಥೆ ಯುವ ಲಾಂಚಿಂಗ್ ಸಿನಿಮಾ ಜವಾಬ್ದಾರಿ ವಹಿಸಿಕೊಂಡಿತು.


Click it and Unblock the Notifications











