ನಮ್ಮ ಕೈಬಿಡಬೇಡಿ, ಕಾಪಾಡಿ: ಅಫ್ಘಾನ್ ಸಿನಿಮಾ ನಿರ್ದೇಶಕಿ ಪತ್ರ
ತಾಲಿಬಾನಿಗಳ ಪ್ರವೇಶದಿಂದ ಅಫ್ಘಾನಿಸ್ತಾನ ಜನರ ಜೀವನ ಪಲ್ಲಟವಾಗಿದೆ. ಜೀವ ಉಳಿದರೆ ಸಾಕೆಂದು ದೇಶ ಬಿಟ್ಟು ಪಲಾಯನ ಮಾಡುತ್ತಿದ್ದಾರೆ. ಮಹಿಳೆಯರು ಇನ್ನಿಲ್ಲದ ಜೀವಭಯ ಎದುರಿಸುತ್ತಿದ್ದಾರೆ. ಕಲಾವಿದರಂತೂ ಅತೀವ ಭೀತಿ ಎದುರಿಸುತ್ತಿದ್ದಾರೆ.
ತಾಲಿಬಾನಿಗಳು ಅಧಿಕಾರ ಹಿಡಿದರೆಂದರೆ ಅಲ್ಲಿಗೆ ಕಲೆ ಸತ್ತಿತೆಂದೇ ಅರ್ಥ. ತಾಲಿಬಾನಿಗಳು ಮೊದಲ ಕಟ್ಟುಪಾಡು ವಿಧಿಸುವುದು ಮಹಿಳೆಯ ಸ್ವಾತಂತ್ರ್ಯದ ಮೇಲೆ ಅವರ ಎರಡನೇ ಆದೇಶ ಕಲೆಯ ನಿಷೇಧ. ಕಲಾವಿದರು ಭಯಾನಕ ಜೀವ ಭಯವನ್ನು ಅಫ್ಘಾನಿಸ್ತಾನದಲ್ಲಿ ಅನುಭವಿಸುತ್ತಿದ್ದಾರೆ. ಅಫ್ಘಾನಿಸ್ತಾನದ ಸಿನಿಮಾ ನಿರ್ದೇಶಕಿಯೊಬ್ಬರು ಜಗತ್ತಿಗೆ ಬರೆದಿರುವ ಪತ್ರ ಇದಕ್ಕೆ ಸಾಕ್ಷಿ.
ಅಫ್ಘಾನಿಸ್ತಾನ ಸಿನಿಮಾ ನಿರ್ದೇಶಕಿ ಸರಾ ಕರೀಮಿ ಜಗತ್ತಿಗೆ ಬಹಿರಂಗ ಪತ್ರವೊಂದನ್ನು ಬರೆದಿದ್ದಾರೆ. ಅದರಲ್ಲಿಯೂ ವಿಶೇಷವಾಗಿ ಸಿನಿಮಾ ಪ್ರಪಂಚಕ್ಕೆ ಈ ಪತ್ರ ಬರೆದಿದ್ದು, ''ನನ್ನ ಸುಂದರ ದೇಶವನ್ನು ಕಾಪಾಡಿ, ಇಲ್ಲಿನ ಸಿನಿಮಾ ಕರ್ಮಿಗಳನ್ನು ಕಾಪಾಡಿ. ತಾಲಿಬಾನಿಗಳು ನಮ್ಮನ್ನು ಕೊಂದು ಬಿಡುತ್ತಾರೆ'' ಎಂದಿದ್ದಾರೆ.
''ಒಡೆದ ಹೃದಯದಿಂದ ನಾನು ಈ ಪತ್ರ ಬರೆಯುತ್ತಿದ್ದೇನೆ. ಆದರೆ ನೀವು ನನ್ನ ದೇಶ ಉಳಿಸಲು ಕೈಜೋಡಿಸುತ್ತೀರ ಎಂಬ ಭರವಸೆಯೊಂದಿಗೆ ನಾನು ಈ ಪತ್ರ ಬರೆಯುತ್ತಿದ್ದೇನೆ. ಅವರು (ತಾಲಿಬಾನಿಗಳು) ನಮ್ಮ ಜನರ ರುಂಡ ಚೆಂಡಾಡಿದ್ದಾರೆ. ಮಹಿಳೆಯರನ್ನು ಎತ್ತೊಯ್ದಿದ್ದಾರೆ. ಮಹಿಳೆಯರನ್ನು ಅವರು ತೊಡುವ ಉಡುಪಿನ ಕಾರಣಕ್ಕೆ ಕೊಂದಿದ್ದಾರೆ. ನಮ್ಮಲ್ಲಿ ಕೆಲವರನ್ನು (ಕಲಾವಿದರನ್ನು) ನಡು ಬೀದಿಯಲ್ಲಿ ನೇಣು ಹಾಕಿದ್ದಾರೆ. ಲಕ್ಷಾಂತರ ಕುಟುಂಬಗಳು ಪರಸ್ಪರ ದೂರಾಗುವಂತೆ ಮಾಡಿದ್ದಾರೆ'' ಎಂದಿದ್ದಾರೆ ಈ ನಿರ್ದೇಶಕಿ.

ಮಕ್ಕಳು ಹಸಿವಿನಿಂದ ಸಾಯುತ್ತಿದ್ದಾರೆ: ಕರೀಮಿ
''ನಿರ್ಗತಿಕ ಕೇಂದ್ರಗಳಲ್ಲಿ ಮಕ್ಕಳು ದೌರ್ಜನ್ಯ ಮತ್ತು ಹಸಿವಿನಿಂದ ಸಾಯುತ್ತಿದ್ದಾರೆ. ಇದು ಅಮಾನವೀಯ, ಆದರೆ ಜಗತ್ತು ಈ ಅಮಾನವೀಯತೆ ಕಂಡು ಮೌನವಾಗಿದೆ. ಈ ಮೌನ ನಾವು ಈ ಹಿಂದೆಯೂ ನೋಡಿದ್ದೇವೆ. ಆದರೆ ಇದು ನ್ಯಾಯವಲ್ಲ. ಹೀಗೆ ನಮ್ಮ ಕೈಬಿಟ್ಟುಬಿಡುವುದು ಮಾನವೀಯತೆ ಅಲ್ಲ. ನಮ್ಮ ಪರವಾಗಿ ದಯವಿಟ್ಟು ದನಿ ಎತ್ತಿ. ಸಿನಿಮಾಕ್ಕಾಗಿ ನಾನು ನನ್ನ ದೇಶದಲ್ಲಿ ಎಷ್ಟೆಲ್ಲಾ ಕೆಲಸ ಮಾಡಿದ್ದೆನೊ ಅದೆಲ್ಲವೂ ಈಗ ಕುಸಿದು ಬೀಳುತ್ತಿದೆ. ನಾನು ಮತ್ತು ಇತರ ಕೆಲವು ಸಿನಿಮಾಕರ್ಮಿಗಳು ತಾಲಿಬಾನಿಗಳ ಹಿಟ್ ಲಿಸ್ಟ್ನಲ್ಲಿದ್ದೇವೆ. ಮಹಿಳೆಯರ ಹಕ್ಕುಗಳನ್ನು ಅವರು ಉಲ್ಲಂಘಿಸುತ್ತಾರೆ ಮತ್ತು ನಮ್ಮನ್ನು (ಕಲಾವಿದರನ್ನು) ಮೌನವಾಗಿಸಿಬಿಡುತ್ತಾರೆ.

ಕಾಬೂಲ್ ತಾಲಿಬಾನಿಗಳ ವಶವಾಗುವ ಮುನ್ನ ಕಾಪಾಡಿ: ಮನವಿ
ದಯವಿಟ್ಟು ನಮ್ಮ ಪರವಾಗಿ ದನಿ ಎತ್ತಿ. ಈ ಪತ್ರವನ್ನು ಎಲ್ಲೆಡೆ ಹಂಚಿಕೊಳ್ಳಿ. ನಮ್ಮ ನೋವಿನ ಬಗ್ಗೆ ಮಾತನಾಡಿ, ಕಲವಿದರು, ಸಿನಿಮಾ ಕರ್ಮಿಗಳ ಪರವಾಗಿ ದನಿ ಎತ್ತಿ. ಈ ಪತ್ರವನ್ನು ಎಲ್ಲೆಡೆ ಹಂಚಿಕೊಳ್ಳಿ. ಮಾಧ್ಯಮಗಳಲ್ಲಿ ಪ್ರಕಟ ಮಾಡಿ, ಜಗತ್ತು ನಮ್ಮ ಕಷ್ಟಕ್ಕೆ ಬೆನ್ನು ತಿರುಗಿಸದಂತೆ ನೋಡಿಕೊಳ್ಳಿ. ನಮಗೆ ನಿಮ್ಮ ಬೆಂಬಲ ಈಗ ಬೇಕಿದೆ. ನಿಮ್ಮ ಬೆಂಬಲವೇ ನೀವು ನೀಡುವ ಅತಿ ದೊಡ್ಡ ಸಹಾಯ. ಕಾಬೂಲ್ ಸಹ ತಾಲಿಬಾನಿಗಳ ವಶಕ್ಕೆ ಬರುವ ಮುನ್ನ ಸಹಾಯ ಮಾಡಿ'' ಎಂದು ಕರೀಮಿ ಪತ್ರ ಬರೆದಿದ್ದಾರೆ.

ಕಾಬೂಲ್ನ ರಸ್ತೆಯಲ್ಲಿ ದಿಕ್ಕೆಟ್ಟು ಓಡಿದ ಕರೀಮಿ
ಪತ್ರ ಬರೆದ ಬಳಿಕ ಭಾನುವಾರ ಆಕೆ ವಿಡಿಯೋ ಒಂದನ್ನು ಅಪ್ಲೋಡ್ ಮಾಡಿದ್ದರು. ಆ ವಿಡಿಯೋದಲ್ಲಿ ಆಕೆ ಕಾಬೂಲ್ನ ರಸ್ತೆಗಳಲ್ಲಿ ಓಡುತ್ತಿದ್ದರು. ತಾಲಿಬಾನಿಗಳು ಕಾಬೂಲ್ಗೆ ಪ್ರವೇಶ ಮಾಡಿಬಿಟ್ಟಿದ್ದಾರೆ ಎಂದು ಆತಂಕದಿಂದ ಹೇಳುತ್ತಿದ್ದರು. ಆಕೆ ಮಾತ್ರವೇ ಅಲ್ಲದೆ ಕಾಬೂಲ್ನ ಜನರೆಲ್ಲ ತೀವ್ರ ಆತಂಕದಿಂದ ದೇಶ ತೊರೆಯಲು ಮನೆ-ಮಠ ಬಿಟ್ಟು ಓಡುತ್ತಿರುವುದು ಕಾಣುತ್ತಿತ್ತು.

ಹಾಸ್ಯ ನಟನನ್ನು ಕೊಂದ ತಾಲಿಬಾನಿಗಳು
ತಾಲಿಬಾನಿಗಳುಗಳು ಕಲೆ, ಸಾಹಿತ್ಯ, ಸಂಗೀತಗಳಿಗೆ ನಿಷೇಧ ಹೇರಿದ್ದಾರೆ. ರೇಡಿಯೋ ಸ್ಟೇಷನ್ ವಶಪಡಿಸಿಕೊಂಡಿದ್ದ ತಲಿಬಾನಿಗಳು ಅಲ್ಲಿಂದ ಪ್ರಸಾರವಾಗುತ್ತಿದ್ದ ಸಂಗೀತವನ್ನು ನಿಲ್ಲಿಸಿ ಕೇವಲ ಧರ್ಮ ಪ್ರಚಾರ ಆರಂಭಿಸಿದ್ದರು. ಆ ನಂತರ ಅಫ್ಘಾನಿಸ್ತಾನದ ಹಾಸ್ಯ ಕಲಾವಿದನೊಬ್ಬನನ್ನು ಬಹುವಾಗಿ ಹಿಂಸೆ ಮಾಡಿ ಕೊಂದರು. ಮಹಿಳೆಯ ಮುಖವಿರುವ ಜಾಹೀರಾತುಗಳಿಗೆ ಕಪ್ಪು ಬಣ್ಣ ಮೆತ್ತಿದರು. ಮಹಿಳೆಯರು ಪುರುಷರು ಜೊತೆಗಿಲ್ಲದೆ, ಬುರ್ಖಾ ತೊಡದೆ ಹೊರಗೆ ಬರುವಂತಿಲ್ಲ ಎಂದು ಫರ್ಮಾನು ಹೊರಡಿಸಿದರು.


Click it and Unblock the Notifications











