ಅಣು ಬಾಂಬ್ ಸೃಷ್ಟಿಕರ್ತನ ಪಾತ್ರ ಮಾಡಲು ಭಗವದ್ಗೀತೆ ಓದಿಕೊಂಡ ಐರಿಷ್ ನಟ ಕಿಲಿಯನ್ ಮರ್ಫಿ
ಭಾರತದಲ್ಲಿ ಭಗವದ್ಗೀತೆಗೆ ಶ್ರೇಷ್ಠ ಸ್ಥಾನವಿದೆ. ಶ್ರೀಕೃಷ್ಣನೇ ಈ ಭಗವದ್ಗೀತೆಯನ್ನು ಅರ್ಜುನನಿಗೆ ಕುರುಕ್ಷೇತ್ರದ ಯುದ್ಧಭೂಮಿಯಲ್ಲಿ ಉಪದೇಶಿಸಿದನೆಂದು ನಮ್ಮ ಪುರಾಣಗಳು ಹೇಳುತ್ತವೆ. ಈ ಗ್ರಂಥದಲ್ಲಿ ಮಾನವನ ಜೀವನಕ್ಕೆ ಬೇಕಾದ ಎಲ್ಲಾ ವಿಚಾರಗಳು ಇವೆ. ಇದನ್ನು ಭಾರತೀಯರು ಮಾತ್ರವಲ್ಲ ವಿದೇಶಿಯರು ಓದಿದ್ದಾರೆ. ಓದುತ್ತಾರೆ, ಓದುತ್ತಲೇ ಇದ್ದಾರೆ. ಹಾಲಿವುಡ್ ನಟ ತಮ್ಮ ಸಿನಿಮಾ ಪಾತ್ರಕ್ಕಾಗಿ ಭಗವದ್ಗೀತೆ ಓದಿದ್ದಾಗಿ ಹೇಳಿದ್ದಾರೆ.
ಹಾಲಿವುಡ್ ಸಿನಿಮಾಕ್ಕೂ ಆ ಚಿತ್ರದ ನಾಯಕನ ಪಾತ್ರಕ್ಕೂ ಭಗವದ್ಗೀತೆಗೂ ಏನು ಸಂಬಂಧ ಎನ್ನುವ ಅನುಮಾನ ಮೂಡುವುದು ಸಹಜ. 2ನೇ ಮಹಾಯುದ್ಧದ ಸಮಯದಲ್ಲಿ ಅಣು ಬಾಂಬ್ ಸೃಷ್ಟಿಸಿದ ವಿಧ್ವಂಸ ಎಂಥದ್ದು ಎನ್ನುವುದು ಗೊತ್ತೇಯಿದೆ. ಈ ಅಣುಬಾಂಬ್ ತಯಾರಿಕೆಗೆ ಒಂದರ್ಥದಲ್ಲಿ ಭಗವದ್ಗೀತೆ ಕೂಡ ಸ್ಫೂರ್ತಿ ಆಗಿತ್ತು. ಜೆ ರಾಬರ್ಟ್ ಒಪನ್ಹೈಮರ್ ಅಣುಬಾಂಬ್ ಕಂಡುಹಿಡಿದರು. ಇದಕ್ಕಾಗಿ ವೈಜ್ಞಾನಿಕ ಪುಸ್ತಕಗಳ ಜೊತೆಗೆ ಭಗವದ್ಗೀತೆಯನ್ನು ಓದಿದ್ದರು. ಭಗವದ್ಗೀತೆಯಲ್ಲಿನ ಶ್ರೀಕೃಷ್ಣನ ಒಂದು ಶ್ಲೋಕವು ಅಣುಬಾಂಬ್ ಸೃಷ್ಟಿಗೆ ಪ್ರೇರಣೆ ನೀಡಿತು. ಆ ಶ್ಲೋಕ ಯಾವುದು ಅಂದರೆ 'ಸೃಷ್ಟಿಸುವವನು ನಾನೇ ವಿನಾಶ ಮಾಡುವವನು ನಾನೇ'.

ಇದೀಗ ಹಾಲಿವುಡ್ ನಿರ್ದೇಶಕ ಕ್ರಿಸ್ಟೋಫರ್ ನೋಲನ್ ಅಣು ಬಾಂಬ್ ತಯಾರಿಕೆಯ ಹಿನ್ನೆಲೆಯಲ್ಲಿ ಸಿನಿಮಾ ಕಟ್ಟಿಕೊಡುತ್ತಿದ್ದಾರೆ. ವಿಜ್ಞಾನಿ ಒಪನ್ಹೈಮರ್ ಜೀವನಾಧರಿತ ಸಿನಿಮಾ ಇದೀಗ ನಿರ್ಮಾಣ ಆಗುತ್ತಿದೆ. ಆ ಚಿತ್ರದಲ್ಲಿ ಒಪನ್ಹೈಮರ್ ಆಗಿ ಐರಿಷ್ ನಟ ಕಿಲಿಯನ್ ಮರ್ಫಿ ಬಣ್ಣ ಹಚ್ಚಿದ್ದಾರೆ. ಒಪನ್ಹೈಮರ್ ಪಾತ್ರವನ್ನು ಅರ್ಥಮಾಡಿಕೊಳ್ಳಲು ತಾನು ಭಗವದ್ಗೀತೆಯನ್ನು ಓದಿದ್ದೇನೆ ಎಂದು ಕಿಲಿಯನ್ ಮರ್ಫಿ ಹೇಳಿದ್ದಾರೆ. ಭಗವದ್ಗೀತೆ ಬಗ್ಗೆ ಮಾತನಾಡಿದ್ದು "ಇದು ಬಹಳ ಸುಂದರವಾದ ಗ್ರಂಥವಾಗಿದೆ. ತುಂಬಾ ಸ್ಪೂರ್ತಿದಾಯಕ. ಈ ಭಗವದ್ಗೀತೆಯು ಒಪನ್ಹೈಮರ್ಗೆ ಸಾಂತ್ವನ ನೀಡಿತ್ತು ಎಂದು ನಾನು ಭಾವಿಸುತ್ತೇನೆ" ಎಂದಿದ್ದಾರೆ.
ಬಹು ನಿರೀಕ್ಷಿತ ಚಿತ್ರ 'ಒಪನ್ಹೈಮರ್' ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಭಾರತದಲ್ಲೂ ದೊಡ್ಡಮಟ್ಟದಲ್ಲಿ ಈ ವಾರವೇ ಸಿನಿಮಾ ರಿಲೀಸ್ ಆಗಲಿದೆ. ಮಲ್ಟಿಪ್ಲೆಕ್ಸ್ಗಳಾದ ಪಿವಿಆರ್, ಐನಾಕ್ಸ್ ಮತ್ತು ಸಿನಿಪೊಲಿಸ್ಗಳಲ್ಲಿ ಈಗಾಗಲೇ 1 ಲಕ್ಷ ಟಿಕೆಟ್ ಅಡ್ವಾನ್ಸ್ ಬುಕ್ಕಿಂಗ್ ಆಗಿದೆ. ದೊಡ್ಡಮಟ್ಟದಲ್ಲೇ ಚಿತ್ರಕ್ಕೆ ಓಪನಿಂಗ್ ಸಿಗುವ ನಿರೀಕ್ಷೆಯಿದೆ. ಅಚ್ಚರಿಯ ಸಂಗತಿ ಅಂದರೆ ಸಂಸ್ಕೃತ ಕಲಿತಿದ್ದ ವಿಜ್ಞಾನಿ ಒಪನ್ಹೈಮರ್ ಭಗವದ್ಗೀತೆಯನ್ನು ಮೂಲ ಸಂಸ್ಕೃತದಲ್ಲೇ ಓದಿ ತಿಳಿದಿದ್ದರು. ಬಾಂಬ್ ಪ್ರಯೋಗಾತ್ಮಕ ಪರೀಕ್ಷೆಯನ್ನು ಕಣ್ಣಾರೆ ಕಂಡು ಅದು ಸೃಷ್ಟಿಸಬಹುದಾದ ವಿಧ್ವಂಸದ ಕುರಿತು ಆತಂಕಗೊಂಡಿದ್ದರು. ಭಗವದ್ಗೀತೆಯ ಶ್ಲೋಕಗಳು ಅವರ ಆತಂಕವನ್ನು ಕೊಂಚ ದೂರ ಮಾಡಿತ್ತು.
ಒಪನ್ಹೈಮರ್ ಅಣುಬಾಂಬ್ ಕಂಡು ಹಿಡಿದಿದ್ದು, ಆ ಹಾದಿಯಲ್ಲಿ ಎದುರಿಸಿದ ಸಂಕಷ್ಟದ ಬಗ್ಗೆ ಕ್ರಿಸ್ಟೊಫರ್ ನೋಲನ್ ಈ ಸಿನಿಮಾ ಮಾಡಿದ್ದಾರೆ. ಅಷ್ಟಕ್ಕೂ ಅಣುಬಾಂಬ್ ತಯಾರಿಸುವ ಅವಶ್ಯಕತೆ ನಿರ್ಮಾಣವಾಗಿದ್ದು ಹೇಗೆ? ಅಂದು ವಿನಾಶಕಾರಿ ಅಣುಬಾಂಬ್ ನಿರ್ಮಾಣದ ಅಗತ್ಯ ಏನಿತ್ತು? ಅಣು ಬಾಂಬ್ ತಯಾರಿಕೆ ವೇಳ ಒಪನ್ಹೈಮರ್ ಹಾಗೂ ಆತನ ಸುತ್ತ ಇದ್ದವರ ಮನಸ್ಥಿತಿ ಹೇಗಿತ್ತು? ಎದುರಿಸಬೇಕಾದ ಟೀಕೆಗಳ ಭಯ, ಅದನ್ನೆಲ್ಲಾ ಮೀರಿ ಅಣುಬಾಂಬ್ ನಿರ್ಮಾಣ ಆಗಿದ್ದು ಹೇಗೆ? ಎನ್ನುವುದನ್ನು ಎಳೆ ಎಳೆಯಾಗಿ ಈ ಸಿನಿಮಾದಲ್ಲಿ ಕಟ್ಟಿಕೊಡಲಾಗುತ್ತಿದೆ.
ಅತ್ಯಾಧುನಿಕ ಕ್ಯಾಮರಾಗಳನ್ನು ಬಳಸಿ ಬಹಳ ರೋಚಕವಾಗಿ ಅಷ್ಟೇ ಪರಿಣಾಮಕಾರಿಯಾಗಿ 'ಒಪನ್ಹೈಮರ್' ನಿರ್ಮಾಣ ಮಾಡಲಾಗಿದೆ. ಪ್ರೇಕ್ಷಕರಿಗೆ ಈ ಸಿನಿಮಾ ಅನುಭವ ನೀಡಲಿದೆ. ಐಮ್ಯಾಕ್ಸ್ ಥಿಯೇಟರ್ಗಳಲ್ಲಿ ಸಿನಿಮಾ ನೋಡುವಂತೆ ಕ್ರಿಸ್ಟೋಫರ್ ಮನವಿ ಮಾಡಿದ್ದಾರೆ.


Click it and Unblock the Notifications











