ಆಸ್ಕರ್ ಪ್ರಶಸ್ತಿ ವಿತರಣೆ: ಆಯೋಜಕರ ತೀರ್ಮಾನದ ಬಗ್ಗೆ ಅಸಮಾಧಾನ
ಆಸ್ಕರ್ ಪ್ರಶಸ್ತಿ ಸಮಾರಂಭದ ಮೇಲೆ ಇಡೀಯ ವಿಶ್ವವೇ ಕಣ್ಣು ನೆಟ್ಟಿದೆ. ಭಾರತದ ಒಂದು ಡಾಕ್ಯುಮೆಂಟರಿ ಸಹ ಈ ಬಾರಿ ನಾಮಿನೇಟ್ ಆಗಿದ್ದು ಗೆಲ್ಲುವ ವಿಶ್ವಾಸದಲ್ಲಿದೆ.
ಆಸ್ಕರ್ ಪ್ರಶಸ್ತಿ ವಿತರಣೆ ಸಮಾರಂಭ ವಿಶ್ವದಲ್ಲಿ ಅತಿ ಹೆಚ್ಚು ಮಂದಿ ನೋಡುವ ಪ್ರತಿಷ್ಠಿತ ಕಾರ್ಯಕ್ರಮಗಳಲ್ಲಿ ಒಂದು. ಆದರೆ ಈ ಬಾರಿ ಆಸ್ಕರ್ ಆಯೋಜಕರ ಒಂದು ನಿರ್ಣಯ ನಾಮಿನೇಟ್ ಆಗಿರುವ ಸಿನಿಮಾ ತಂಡಗಳು ಹಾಗೂ ನೆಟ್ಟಿಗರ ಅಸಮಾಧಾನಕ್ಕೆ ಕಾರಣವಾಗಿದೆ.
ನಾಮಿನೇಟ್ ಆಗಿರುವ ಕೆಲವು ತಾಂತ್ರಿಕ ಅಂಶಗಳ ಪ್ರಶಸ್ತಿಯನ್ನು ಲೈವ್ನಲ್ಲಿ ನೀಡಲಾಗುವುದಿಲ್ಲ ಬದಲಿಗೆ ಕಾರ್ಯಕ್ರಮ ಪ್ರಾರಂಭ ಆಗುವ ಮೊದಲೇ ನೀಡಲಾಗುತ್ತದೆ ಎಂದು ಆಯೋಜಕರು ಘೋಷಿಸಿದ್ದು ಇದು ಅಸಮಾಧಾನಕ್ಕೆ ಕಾರಣವಾಗಿದೆ.

ಅತ್ಯುತ್ತಮ ಸೌಂಡ್ ಡಿಜೈನಿಂಗ್, ಅತ್ಯುತ್ತಮ ಡಾಕ್ಯುಮೆಂಟರಿ, ಅತ್ಯುತ್ತಮ ಸಂಕಲನ, ಮೇಕಪ್, ಒರಿಜಿನಲ್ ಸಂಗೀತ, ಪ್ರೊಡಕ್ಷನ್ ಡಿಸೈನ್, ಅನಿಮೇಟೆಡ್ ಕಿರುಚಿತ್ರ, ಲೈವ್ ಆಕ್ಷನ್ ಇನ್ನೂ ಕೆಲವು ವಿಭಾಗದ ಪ್ರಶಸ್ತಿಯನ್ನು ಪ್ರತ್ಯೇಕವಾಗಿ ನೀಡಲಾಗುವುದು. ಈ ವಿಭಾಗಗಳಿಗೆ ಪ್ರಶಸ್ತಿ ನೀಡುವುದನ್ನು ಟಿವಿ ಅಥವಾ ಇನ್ನಾವುದೇ ಮಾಧ್ಯಮಗಳಲ್ಲಿ ಪ್ರಸಾರ ಮಾಡಲಾಗುವುದಿಲ್ಲ ಎಂದು ಆಸ್ಕರ್ ಆಯೋಜಕರು ಹೇಳಿದ್ದಾರೆ. ಸಮಯ ಉಳಿಸಲು ಈ ನಿರ್ಣಯ ಮಾಡಿರುವುದಾಗಿ ಅವರು ಹೇಳಿದ್ದಾರೆ.
ಆದರೆ ಆಯೋಜಕರ ಈ ನಿರ್ಣಯವನ್ನು ವಿರೋಧಿಸಿರುವ ನೆಟ್ಟಿಗರು, ''ಒಮ್ಮೆ ಯೋಚಿಸಿ ಸೌಂಡ್ ಇಲ್ಲದೆ ನೀವು ಕಾರ್ಯಕ್ರಮವನ್ನೇ ಮಾಡಲಾರಿರಿ. ಮೇಕಪ್, ಹೇರ್ ಸ್ಟೈಲ್ ಇಲ್ಲದೆ ನೀವ್ಯಾರು ಕಾರ್ಯಕ್ರಮದ ವೇದಿಕೆ ಸಹ ಹತ್ತಲಾರಿರಿ ಹಾಗಿದ್ದಾಗ ಇಂಥಹಾ ಪ್ರಮುಖ ವಿಭಾಗಗಳ ಬಗ್ಗೆ ತಾರತಮ್ಯವೇಕೆ?'' ಎಂದು ಪ್ರಶ್ನಿಸಿದ್ದಾರೆ.
ಮಾರ್ಚ್ 27 ರಂದು ಆಸ್ಕರ್ 2022 ಪ್ರಶಸ್ತಿ ಪ್ರಧಾನ ಸಮಾರಂಭ ಲಾಸ್ ಎಂಜಲಿಸ್ನ ಡಾಲ್ಬಿ ಥಿಯೇಟರ್ನಲ್ಲಿ ನಡೆಯಲಿದೆ. ಕಳೆದ ವರ್ಷ ಕೊರೊನಾ ಕಾರಣಕ್ಕೆ ಆಸ್ಕರ್ಸ್ ಪ್ರಶಸ್ತಿ ಪ್ರಧಾನ ಸಮಾರಂಭವು ಯೂನಿಯನ್ ರೈಲ್ವೆ ಸ್ಟೇಶನ್ನಲ್ಲಿ ನಡೆಯಿತು. ಸಾಮಾನ್ಯವಾಗಿ ಫೆಬ್ರವರಿಯಲ್ಲಿ ನಡೆಯುವ ಈ ಕಾರ್ಯಕ್ರಮ ಕಳೆದ ವರ್ಷ ಏಪ್ರಿಲ್ನಲ್ಲಿಯೂ ಈ ವರ್ಷ ಮಾರ್ಚ್ನಲ್ಲಿಯೂ ನಡೆಯುತ್ತಿದೆ. ಈ ಬಾರಿ ಆಸ್ಕರ್ ಪ್ರಶಸ್ತಿಯನ್ನು ರೆಜಿನಾ ಹಾಲ್, ಆಮಿ ಸ್ಕಮರ್ ಹಾಗೂ ವಾಂಡಾ ಸ್ಕೈಸ್ ಅವರುಗಳು ನಿರೂಪಣೆ ಮಾಡಲಿದ್ದಾರೆ.
ಭಾರತದಿಂದ ತಮಿಳಿನ 'ಕೂಳಂಗಳ್' ಹಾಗೂ 'ಜೈ ಭೀಮ್', ಮಲಯಾಳಂನ 'ಮರಕ್ಕರ್: ಅರಬ್ಬಿ ಕಡಲಿಂಟೆ ಸಿಂಹಂ' ಸಿನಿಮಾಗಳು ಆಸ್ಕರ್ಗೆ ಹೋಗಿದ್ದವು. 'ಕೂಳಂಗಳ್' ಮೊದಲ ಸುತ್ತಿನಲ್ಲಿಯೇ ವಾಪಸ್ಸಾದರೆ 'ಜೈ ಭೀಮ್' ಹಾಗೂ 'ಮರಕ್ಕರ್' ಸಿನಿಮಾಗಳು ಒಂದು ಹಂತ ಮೇಲೇರಿ ನಾಮಿನೇಶನ್ ಸುತ್ತಿಗೆ ಆಯ್ಕೆ ಆಗಲು ವಿಫಲವಾಗಿ ಹೊರಬಂದವು. ಇದೀಗ ಡಾಕ್ಯುಮೆಂಟರಿ ವಿಭಾಗದಲ್ಲಿ ಭಾರತದ 'ರೈಟಿಂಗ್ ವಿಥ್ ಫೈಯರ್' ಸಾಕ್ಷ್ಯಚಿತ್ರವು ಅಂತಿಮ ಹಂತಕ್ಕೆ ತಲುಪಿದ್ದು ಪ್ರಶಸ್ತಿ ಜಯಿಸುವ ವಿಶ್ವಾಸದಲ್ಲಿದೆ.


Click it and Unblock the Notifications











