ಗ್ರ್ಯಾಮಿ ಶೋನಲ್ಲಿ ಕಾಣಿಸಿಕೊಂಡ ಯುದ್ಧ ಪೀಡಿತ ಉಕ್ರೇನ್ ಅಧ್ಯಕ್ಷ ಹೇಳಿದ್ದೇನು?
ಸಂಗೀತಕ್ಕೆ ನೀಡಲಾಗುವ ವಿಶ್ವದ ಅತ್ಯುತ್ತಮ ಪ್ರಶಸ್ತಿಗಳಲ್ಲಿ ಒಂದೆನಿಸಿಕೊಂಡಿರುವ ಗ್ರ್ಯಾಮಿ ಪ್ರಶಸ್ತಿ ಪ್ರದಾನ ಸಮಾರಂಭವು ಲಾಸ್ ವೆಗಾಸ್ನ ಎಂಜಿಎಂ ಗ್ರ್ಯಾಂಡ್ ಗಾರ್ಡನ್ ಅರೆನಾದಲ್ಲಿ ನಿನ್ನೆ (ಏಪ್ರಿಲ್ 03)ರಂದು ಸಮಾಪ್ತಿಯಾಗಿದೆ.
ಗ್ರ್ಯಾಮಿ ಪ್ರಶಸ್ತಿ ವಿತರಣಾ ಸಮಾರಂಭವು ಅದ್ಧೂರಿಯಾಗಿ ಹಲವು ಅಚ್ಚರಿಗಳ ಜೊತೆ ನಡೆದಿದೆ. ಸಮಾರಂಭದ ಅಚ್ಚರಿಗಳಲ್ಲಿ ಒಂದೆಂದರೆ ಸಮಾರಂಭದಲ್ಲಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಕಾಣಿಸಿಕೊಂಡರು.
ಉಕ್ರೇನ್ನಲ್ಲಿ ಯುದ್ಧ ನಡೆಯುತ್ತಿದ್ದು, ರಷ್ಯಾ ದೇಶವು ಉಕ್ರೇನ್ ಮೇಲೆ ಬಾಂಬುಗಳ ಸುರಿಮಳೆಯನ್ನೇ ಸುರಿಸುತ್ತಿದೆ. ಹಂತ-ಹಂತವಾಗಿ ಉಕ್ರೇನ್ ಅನ್ನು ವಶಪಡಿಸಿಕೊಳ್ಳುತ್ತಿದೆ. ಇಂಥಹಾ ಸಮಯದಲ್ಲಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಗ್ರ್ಯಾಮಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕಾಣಿಸಿಕೊಂಡಿದ್ದು ವಿಶ್ವದ ಹುಬ್ಬೇರಿಸಿದೆ.
ಸಮಾರಂಭದ ವೇದಿಕೆಯ ಮೇಲೆ ಜಾನ್ ಲೆಜೆಂಡ್ 'ಫ್ರೀ' ಹೆಸರಿನ ಹಾಡನ್ನು ಪ್ರಸ್ತುತ ಪಡಿಸಿದರು, ಅವರೊಟ್ಟಿಗೆ ಉಕ್ರೇನ್ನ ಹಾಡುಗಾರ, ಸಂಗೀತಗಾರರು ಜೊತೆಗಿದ್ದರು. ಗಾಯಕ ಕಾರ್ಯಕ್ರಮ ಪ್ರಾರಂಭವಾಗುವ ಮೊದಲು ಗ್ರ್ಯಾಮಿಯ ದೊಡ್ಡ ಪರದೆಯ ಮೇಲೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರ ವಿಡಿಯೋ ಒಂದನ್ನು ಪ್ರಸಾರ ಮಾಡಲಾಯಿತು.
ಗ್ರ್ಯಾಮಿ ಸಮಾರಂಭದಲ್ಲಿ ನೆರೆದವರನ್ನುದ್ದೇಶಿಸಿ ಮಾತನಾಡಿದ ವೊಲೊಡಿಮಿರ್ ಝೆಲೆನ್ಸ್ಕಿ ''ನಿಶ್ಯಬ್ಧ, ಸಂಗೀತಕ್ಕೆ ವಿರುದ್ಧದ ಸ್ಥೀತಿ. ಹಾಳುಮಾಡಲಾದ ನಗರಗಳಲ್ಲಿ ಆವರಿಸಿರುವ ನಿಶ್ಯಬ್ಧ, ಕೊಲ್ಲಲ್ಪಟ್ಟ ಜನರ ನಿಶ್ಯಬ್ಧ'' ಎಂದರು.

ನಮ್ಮ ಸಂಗೀತಗಾರರು ಸೂಟುಗಳನ್ನು ಹಾಕಿಕೊಳ್ಳುತ್ತಿಲ್ಲ: ಝೆಲೆನ್ಸ್ಕಿ
''ನಮ್ಮ ಸಂಗೀತಗಾರರು ಸೂಟುಗಳನ್ನು ಹಾಕಿಕೊಳ್ಳುವ ಬದಲಿಗೆ ಬುಲೆಟ್ ಪ್ರೂಫ್ ಜಾಕೆಟ್, ಬಾಡಿ ಆರ್ಮರ್ಗಳನ್ನು ತೊಟ್ಟುಕೊಳ್ಳುತ್ತಿದ್ದಾರೆ. ಅವರು ಆಸ್ಪತ್ರೆಯಲ್ಲಿನ ಗಾಯಾಳುಗಳಿಗಾಗಿ ಹಾಡು ಹಾಡುತ್ತಿದ್ದಾರೆ. ಯಾರಿಗೆ ಕೇಳಿಸಿಕೊಳ್ಳಲಾಗುವುದಿಲ್ಲವೋ ಅವರಿಗಾಗಿಯೂ ಹಾಡುತ್ತಿದ್ದಾರೆ. ಆದರೆ ಸಂಗೀತ ಎಲ್ಲರ ಮನಸ್ಸನ್ನೂ ನಾಟುತ್ತಿದೆ. ಅದಕ್ಕೆ ಆ ಗುಣವಿದೆ'' ಎಂದಿದ್ದಾರೆ ವೊಲೊಡಿಮಿರ್ ಝೆಲೆನ್ಸ್ಕಿ.

''ನಾವು ನಮ್ಮ ಸ್ವಾತಂತ್ರ್ಯವನ್ನು ರಕ್ಷಿಸಿಕೊಂಡೇ ತೀರುತ್ತೇವೆ''
''ನಾವು ನಮ್ಮ ಸ್ವಾತಂತ್ರ್ಯ, ಪ್ರೀತಿ ಮತ್ತು ಸಂಗೀತವನ್ನು ರಕ್ಷಿಸಿಕೊಂಡೇ ತೀರುತ್ತೇವೆ. ನಾವು ನಮ್ಮ ನೆಲದಲ್ಲಿ ರಷ್ಯಾದ ವಿರುದ್ಧ ಹೋರಾಡುತ್ತಿದ್ದೇವೆ. ಅವರು ತಮ್ಮ ಬಾಂಬುಗಳ ಮೂಲಕ ಕೆಟ್ಟ ನಿಶ್ಯಬ್ದವನ್ನು ನಮ್ಮ ದೇಶದಲ್ಲಿ ತುಂಬುತ್ತಿದ್ದಾರೆ. ಆ ನಿಶ್ಯಬ್ದವನ್ನು ನೀವು ನಿಮ್ಮ ಸಂಗೀತದಿಂದ ಹೊಡೆದೋಡಿಸಿ. ನಮ್ಮ ಕತೆಯನ್ನು ಸಂಗೀತದ ಮೂಲಕ ಹೇಳಿ'' ಎಂದಿದ್ದಾರೆ.

ನಮಗೆ ಬೆಂಬಲ ನೀಡಿ: ವೊಲೊಡಿಮಿರ್ ಝೆಲೆನ್ಸ್ಕಿ
''ನಿಮ್ಮ ಸಾಮಾಜಿಕ ಜಾಲತಾಣಗಳ ಮೂಲಕ ಜಗತ್ತಿಗೆ ಯುದ್ಧದ ಸತ್ಯವನ್ನು ಹೇಳಿ. ಟಿವಿ, ಮಾಧ್ಯಮಗಳ ಮೂಲಕ ನಮ್ಮವರ ಕತೆಗಳನ್ನು ಹೇಳಿ. ನಿಮಗೆ ಹೇಗೆ ಸಾಧ್ಯವೋ ಹಾಗೆ ನಮಗೆ ಸಹಾಯ ಮಾಡಿ, ನಮಗೆ ಬೆಂಬಲ ನೀಡಿ. ಏನಾದರೂ ಸಹಾಯ ಮಾಡಿ ಈ ನಿಶ್ಯಬ್ದವನ್ನು ಹೋಗಲಾಡಿಸಿ. ಆ ನಂತರ ಶಾಂತಿ ತನ್ನಂತಾನೆ ಬರುತ್ತದೆ'' ಎಂದಿದ್ದಾರೆ ವೊಲೊಡಿಮಿರ್ ಝೆಲೆನ್ಸ್ಕಿ.

ನಮ್ಮ ನಗರಗಳನ್ನು ಹಾಳು ಮಾಡಲಾಗಿದೆ: ಉಕ್ರೇನ್ ಅಧ್ಯಕ್ಷ
''ನಮ್ಮ ಚೆರ್ನಿಹಿವ್, ಕಾರ್ಕಿವ್, ವೋಲ್ನೋವಕಾ, ಮಾರಿಯೊಪೊಲ್ ಇನ್ನೂ ಹಲವು ನಗರಗಳನ್ನು ಹಾಳು ಮಾಡಲಾಗಿದೆ. ಅವೆಲ್ಲ ದಂತಕತೆಗಳು, ಅಲ್ಲಿನ ಜನ ಬದುಕುವ, ಸ್ವಾತಂತ್ರ್ಯಗೊಳ್ಳುವ ಅದಮ್ಯ ಆಸೆ ಇಟ್ಟುಕೊಂಡಿದ್ದಾರೆ. ನಿಮ್ಮಂತೆ ಸ್ವಾತಂತ್ರ್ಯವಾಗಿರುವ ಆಸೆ ಅವರದ್ದು, ಗ್ರ್ಯಾಮಿ ಸಮಾರಂಭದಲ್ಲಿ ಇರುವ ನಿಮ್ಮಂತೆ ಅವರು ಸ್ವಾತಂತ್ರ್ಯಗೊಳ್ಳಬೇಕಿದೆ'' ಎಂದರು ಉಕ್ರೇನ್ ಅಧ್ಯಕ್ಷ.


Click it and Unblock the Notifications











