ವೀರಪ್ಪನ್ ಕಿಡ್ನ್ಯಾಪ್ ಪ್ರಕರಣದ ನಂತರ ಡಾ.ರಾಜ್ ಕುಮಾರ್ ಅವರಿಗೆ ಅಸುರಕ್ಷತೆ- ಅಭದ್ರತೆ ಭಾವನೆ ಕಾಡುತ್ತಿತ್ತಾ ?
ಕನ್ನಡ ಚಿತ್ರರಂಗದ ಮಾಸದ ಮುತ್ತು, ಕರ್ನಾಟಕದ ಸಾಂಸ್ಕ್ರತಿಕ ರಾಯಭಾರಿ ವರನಟ ಡಾ.ರಾಜ್ ಕುಮಾರ್ ಅವರನ್ನ ಹೊರತು ಪಡಿಸಿದ ಕನ್ನಡ ಚಿತ್ರರಂಗದ ಇತಿಹಾಸ ಸಮಾಪ್ತಿಯಾಗದು. 52 ವರ್ಷದ ತಮ್ಮ ಸಿನಿ ಬದುಕಿನಲ್ಲಿ ಮುತ್ತುರಾಜ್ ಮಾಡದ ಪಾತ್ರಗಳಿಲ್ಲ. ಇಂಥಾ ಡಾ.ರಾಜ್ ಕುಮಾರ್ ಅವರನ್ನು 25 ವರ್ಷದ ಹಿಂದೆ ನರಹಂತಕ, ಕಾಡುಗಳ್ಳ ವೀರಪ್ಪನ್ ಕಿಡ್ನಾಪ್ ಮಾಡಿದ್ದ. ಗಾಜನೂರಿನ ತೋಟದ ಮನೆಯಿಂದ ಡಾ.ರಾಜ್ ಕುಮಾರ್ ಅವರನ್ನು ಅಪಹರಿಸಿದ್ದ.
ಈ ಘಟನೆ ನಡೆದು ''25 ವರ್ಷ''ಗಳಾಗಿವೆ. ಆದರೆ ಕನ್ನಡಿಗರು ಇವತ್ತು ಕೂಡ ಆ ಕರಾಳ ದಿನಗಳನ್ನು ಮರೆತಿಲ್ಲ. ಯಾಕೆಂದರೆ.. ರಾಜ್ ಹೆಸರು ಕರುನಾಡಿನ ಆವರಿಸಿಕೊಂಡಿದೆ. ತಲೆ ಮಾರು ಬದಲಾದರೂ ಕೂಡ ಡಾ.ರಾಜ್ ಕುಮಾರ್ ಅವರ ಪ್ರಭೆ ಹಾಗೇಯೇ ಇದೆ. ಕನ್ನಡಿಗರಿಗೊಂದು ಭಾವುಕ ಬಂಧ ಇದೆ.

ಹೀಗಾಗಿಯೇ ಡಾ.ರಾಜ್ ಅಪಹರಣದ ನಂತರ ಮತ್ತು ಅವರು 108 ದಿನಗಳ ಕಾಲ ವನವಾಸ ಮುಗಿಸಿಕೊಂಡು ಮರಳಿ ಮನೆಗೆ ನಂತರ ಆದ ಬೆಳವಣಿಗೆ ಅವರಲ್ಲಿ ಆದ ಬದಲಾವಣೆಯ ಕುರಿತು ಮಾಹಿತಿ ನೀಡುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದ್ದು ಕನ್ನಡದ ನಿರ್ದೇಶಕ.. ಲೇಖಕ ಮತ್ತು ಡಾ.ರಾಜ್ ಕುಮಾರ್ ಅಭಿಮಾನಿಯಾದ ಅವರ ಜೊತೆ ಆತ್ಮೀಯ ಒಡನಾಟವನ್ನು ಕೂಡ ಹೊಂದಿದ್ದ ''ಪ್ರಕಾಶರಾಜ್ ಮೇಹು'' ಈ ಕುರಿತು ತಮ್ಮ ಮನದ ಮಾತುಗಳನ್ನು ''ಫಿಲ್ಮಿಬೀಟ್ ಕನ್ನಡ'' ಜೊತೆ ಹಂಚಿಕೊಂಡಿದ್ದಾರೆ.
ಡಾ.ರಾಜ್ ಕುಮಾರ್ ಅಪಹರಣ ಮತ್ತು ಬಿಡುಗಡೆಯ ಕುರಿತು ''ಫಿಲ್ಮಿಬೀಟ್ ಕನ್ನಡ'' ಜೊತೆ ಮಾತನಾಡಿರುವ ''ಪ್ರಕಾಶರಾಜ್ ಮೇಹು'', ''ಡಾ.ರಾಜ್ ಕುಮಾರ್ ಅವರ ಅಪಹರಣದ ನಂತರ ಕರುನಾಡಿನೆಲ್ಲೆಡೆ ಸೂತಕದ ವಾತಾವರಣ ಇದ್ದಿದ್ದು ಎಲ್ಲರಿಗೆ ಗೊತ್ತೇ ಇದೆ. ಆದರೆ ಅವರು ಕಾಡಿಂದ ಬಂದ ನಂತರ ನಮ್ಮೆಲ್ಲರ ಜೊತೆ ಅವರು ಏಕಾಂತದಲ್ಲಿ ಮಾತನಾಡುವುದನ್ನು ಕಡಿಮೆ ಮಾಡಿದರು. ಅದೇನೋ ಗೊತ್ತಿಲ್ಲ ಅವರಿಗೆ ಒಂದು ರೀತಿಯ ಅಭದ್ರತೆ ಕಾಡಲು ಶುರುವಾಗಿತ್ತು. ನನ್ನ ನೋಡ್ತಿದ್ದಾರೆ.. ನನ್ನ ಕಾಯುತ್ತಿದ್ದಾರೆ.. ಎನ್ನುವ ಭಾವನೆ ಅವರಲ್ಲಿ ಬಂದಿತ್ತು. ಹೀಗಾಗಿ ನಮ್ಮ ಜೊತೆ ಅವರು ಚರ್ಚೆ ಮಾಡುವುದನ್ನು ನಿಲ್ಲಿಸಿದ್ದರು'' ಎಂದು ಹೇಳಿದ್ದಾರೆ.
''ಪ್ರಕಾಶರಾಜ್ ಮೇಹು'' ಅವರ ಈ ಮಾತುಗಳಿಗೆ ಪೂರಕವಾಗಿ ಕಾಡಿನಿಂದ ಬಂದ ನಂತರ ಡಾ.ರಾಜ್ ಕುಮಾರ್ ತಾವು ಅತೀವವಾಗಿ ಇಷ್ಟ ಪಡುತ್ತಿದ್ದ, ತಾವು ಹುಟ್ಟಿ ಬೆಳೆದ ಗಾಜನೂರಿಗೆ ಕೇವಲ ಮೂರು ಬಾರಿ ಮಾತ್ರ ಭೇಟಿ ಕೊಟ್ಟಿದ್ದರು.ಇನ್ನು ಮೊದಲೆಲ್ಲಾ ತಮ್ಮ ತೋಟದ ಮನೆಯಲ್ಲಿ ವಾಸ್ತವ್ಯ ಹೂಡುತ್ತಿದ್ದ ರಾಜ್ ಈ ಪ್ರಕರಣದ ನಂತರ ಒಂದು ಬಾರಿಯೂ ಕೂಡ ರಾತ್ರಿ ಅಲ್ಲಿ ಉಳಿದುಕೊಳ್ಳುವ ಧೈರ್ಯ ಮಾಡಲಿಲ್ಲ.
ಇನ್ನೂ ಅಪ್ಪು ಚಿತ್ರದ ಶತದಿನೋತ್ಸವ ಸಮಾರಂಭಕ್ಕೆ ಡಾ.ರಾಜ್ ಕುಮಾರ್ ಬರಬೇಕಿತ್ತಾದರೂ ಅದೇ ಸಮಯದಲ್ಲಿ ಮಾಜಿ ಸಚಿವ ಹನೂರಿನ ನಾಗಪ್ಪ ಅವರನ್ನು ವೀರಪ್ಪನ್ ಕಿಡ್ನ್ಯಾಪ್ ಮಾಡಿರುವ ಸುದ್ದಿ ತಿಳಿದು ಡಾ.ರಾಜ್ ಕುಮಾರ್ ವಾಪಾಸ್ ಹೋಗಿದ್ದರು. ಅಪಹರಣದ ವಿಚಾರ ಮತ್ತೇ ಮತ್ತೇ ಕಾಡುತ್ತಿದ್ದ ಹಿನ್ನಲೆ, ಅಪಹರಣವಾಗಿದ್ದ ಮನೆಯನ್ನು ಕೂಡ ಆ ನಂತರ ಕೆಡವಲಾಯಿತು.

ಮುಂದುವರೆದು ಡಾ.ರಾಜ್ ಕುಮಾರ್ ಅವರ ಕಾಡಿಂದ ಮರಳಿ ಬಂದ ನಂತರದ ದಿನಗಳ ಕುರಿತು ಮಾತನಾಡಿರುವ ''ಪ್ರಕಾಶರಾಜ್ ಮೇಹು'', ''ವೀರಪ್ಪನ ಅವರನ್ನು ಕಿಡ್ನಾಪ್ ಮಾಡುವ ಮೊದಲು ನಾವು ಅಲ್ಲಿ ಇಲ್ಲಿ ಚರ್ಚೆಗೆ ಕುಂತಾಗ, ಅಣ್ಣಾವ್ರು.. ಅಣ್ಣಾವ್ರು ಅಂತ ನಮ್ಮ ಅಭಿಮಾನಿಗಳು ಹೀಗೆ ಪರಿತಪಿಸುತ್ತಾರಲ್ಲಾ. ನಾನು ಹೋದ ಮೇಲೆ ಅವರು ಹೇಗೆ ರಿಯ್ಯಾಕ್ಟ್ ಮಾಡಬಹುದು, ಅದು..ನನಗೆ ಗೊತ್ತಾಗುತ್ತಾ ಎನ್ನುವುದೇ ನನ್ನ ಕುತೂಹಲ ಎಂದು ಡಾ.ರಾಜ್ ಕುಮಾರ್ ಅವರು ಹೇಳುತ್ತಿದ್ದರು'' ಎಂದು ಹೇಳಿದ್ದಾರೆ.
ಹೀಗಾಗಿಯೇ ''ಕಾಡಿಂದ ಬಂದ ನಂತರ ನಾನು ಇಲ್ಲವಾದರೆ ಅಭಿಮಾನಿಗಳು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬ ನನ್ನಲ್ಲಿದ್ದ ಕುತೂಹಲಕ್ಕೆ ಉತ್ತರ ಸಿಕ್ಕಿದೆ, ಬಹುಶಃ ನನಗೆ ಗೊತ್ತಾಗಲೇಂದೇ ಈ ತರ ಆಯ್ತೇನೋ, ನನಗೆ ಗೊತ್ತಾಯ್ತು ಅವರು ಹೇಗೆ ಆಡ್ತಾರೆ ಎಂದು ಡಾ.ರಾಜ್ ಕುಮಾರ್ ಅವರು ತಮ್ಮೆದುರು ಹೇಳಿದ್ದರು'' ಎಂದು ಆ ದಿನವನ್ನು ನೆನಪು ಮಾಡಿಕೊಂಡಿದ್ದಾರೆ ಪ್ರಕಾಶರಾಜ್ ಮೇಹು.
ಅಂದ್ಹಾಗೇ 2000ನೇ ಇಸವಿಯ ಜುಲೈ 30ರ ರಾತ್ರಿ ಪತ್ನಿ ಪಾರ್ವತಮ್ಮ ಅವರೊಂದಿಗೆ ತಮ್ಮ ಹುಟ್ಟೂರು ಗಾಜನೂರಿಗೆ ಹೋಗಿದ್ದ ಡಾ. ರಾಜ್ ಕುಮಾರ್ ಅವರನ್ನು ಅಪಹರಿಸಿದ್ದ. ಈ ಘಟನೆ ನಡೆದ 108 ದಿನಗಳ ಬಳಿಕ ರಾಜ್ ಕುಮಾರ್ ಬಿಡುಗಡೆಯಾಗಿ ಮನೆಗೆ ಮರಳಿದ್ದರು. ಆದರೆ ಆ ನಂತರ ಅಣ್ಣಾವ್ರು ಅಭಿಮಾನಿ ದೇವರುಗಳ ಜತೆಗೆ ಇದ್ದದ್ದು ಆರು ವರ್ಷ ಮಾತ್ರ.
ಡಾ. ರಾಜ್ ಕುಮಾರ್ ಅಪಹರಣದ ಸಂದರ್ಭದಲ್ಲಿ ರಾಜ್ಯದಾದ್ಯಂತ ಉಂಟಾದ ಗದ್ದಲ, ಪ್ರತಿಭಟನೆ, ಜನರ ಕಣ್ಣೀರು, ಸರ್ಕಾರದಲ್ಲಿಯೂ ಮೂಡಿಸಿದ ಕೋಲಾಹಲವನ್ನು ಕಂಡವರಿಗೆ, 25 ವರ್ಷಗಳು ಕಳೆದಿದ್ದರೂ ಈ ಕರಾಳ ಘಟನೆಯನ್ನು ಮರೆಯಲು ಸಾಧ್ಯವಾಗುವುದಿಲ್ಲ.


Click it and Unblock the Notifications











