ಕಡ್ಡಿಪುಡಿ ಚಿತ್ರಕ್ಕೆ ರಾಧಿಕಾ ಪಂಡಿತ್ ನಾಯಕಿ ಅಂದಾಗ ಶಿವಣ್ಣ ಮಾಡಿದ್ದೇನು ? ಮಾಸ್ತಿ ಕಂಡಂತೆ ಹ್ಯಾಟ್ರಿಕ್ ಹೀರೋ..!
ಹ್ಯಾಟ್ರಿಕ್ ಹೀರೋ, ಸೆಂಚುರಿ ಸ್ಟಾರ್, ಕರುನಾಡ ಚಕ್ರವರ್ತಿ, ಸ್ಯಾಂಡಲ್ವುಡ್ ಕಿಂಗ್, ಹೀಗೆ ಹಲವು ಹೆಸರುಗಳಿಂದ ಕರೆಯಲ್ಪಡುವ ಸ್ಟಾರ್ ಡಾ.ಶಿವರಾಜ್ ಕುಮಾರ್. ಕಳೆದ ಮೂರುವರೆ ದಶಕಗಳಿಂದ ಕಲಾ ಸೇವೆಯನ್ನು ಮಾಡುತ್ತಾ ಅಭಿಮಾನಿಗಳನ್ನು ರಂಜಿಸುತ್ತಾ ಬಂದಿರುವ ಶಿವಣ್ಣ ಈಗ ಕೇವಲ ಕರುನಾಡಿಗೆ ಮಾತ್ರ ಸೀಮಿತವಾಗಿಲ್ಲ. ಅಕ್ಕ-ಪಕ್ಕದ ರಾಜ್ಯದಲ್ಲಿ ಕೂಡ ಇವರ ಆರಾಧಕರಿದ್ದಾರೆ. ಅದರಲ್ಲಿಯೂ ರಜನಿಕಾಂತ್ ಅವರ ಜೊತೆ ಜೈಲರ್ ..
ಮತ್ತು ಧನುಷ್ ಜೊತೆ ಕ್ಯಾಪ್ಟನ್ ಮಿಲ್ಲರ್ ಚಿತ್ರಗಳಲ್ಲಿ ಶಿವಣ್ಣ ಅಭಿನಯಿಸಿದ್ದೇ ತಡ, ತಮಿಳುನಾಡಿನ ಜನ ಶಿವಣ್ಣ ಅವರನ್ನು ಥೇಟು ರಜನಿಯಂತೆಯೇ ಹೆಗಲ ಮೇಲೆ ಹೊತ್ತು ಮೆರೆಸುತ್ತಿದ್ದಾರೆ. ಬಾಯ್ತುಂಬ ಕೊಂಡಾಡುತ್ತಿದ್ದಾರೆ. ಶಿವಣ್ಣಗೆ ಇರುವ ಈ ಜನಪ್ರಿಯತೆಯ ಅರಿವು ಅಲ್ಲಿನ ನಿರ್ದೇಶಕರಿಗೆ ಕೂಡ ಇದೆ.

ಇಂಥಾ ಶಿವಣ್ಣ ಸದ್ಯ ಚಿತ್ರರಂಗದಲ್ಲಿ 40 ವರ್ಷಗಳನ್ನು ಪೂರೈಸಿದ್ದಾರೆ. ಈ ಹಿನ್ನೆಲೆ ಎಲ್ಲೆಡೆಯಿಂದ ನಮ್ಮ ಹೆಮ್ಮೆಯ ಡಾ. ಶಿವರಾಜ್ ಕುಮಾರ್ ಅವರಿಗೆ ಶುಭಾಶಯಗಳ ಮಹಾಪೂರ ಹರಿದು ಬರುತ್ತಿದೆ. ಶಿವಣ್ಣ ಅವರ ಕಲಾ ಸೇವೆಯನ್ನು ಮೆಚ್ಚಿ ಅನೇಕರಿಂದ ಮೆಚ್ಚುಗೆ ಕೂಡ ವ್ಯಕ್ತವಾಗುತ್ತಿದೆ.
ನಿಮ್ಮ ಫಿಲ್ಮಿಬೀಟ್ ಕನ್ನಡ ಕೂಡ ಶಿವಣ್ಣ ಅವರ ಈ ಅದ್ಭುತ- ಅಭೂತಪೂರ್ವ ಸಾಧನೆಯ ಕುರಿತು, ಶಿವಣ್ಣ ಕುರಿತು ಗೊತ್ತಿರದ ಆಸಕ್ತಿಕರ ವಿಚಾರಗಳ ಕುರಿತು ವಿಶೇಷ ವರದಿಯನ್ನು ಪ್ರಕಟಿಸಲು ಟೊಂಕ ಕಟ್ಟಿ ನಿಂತಿದೆ. ನಮ್ಮ ಈ ಪ್ರಯತ್ನಕ್ಕೆ ಕನ್ನಡದ ಖ್ಯಾತ ಸಂಭಾಷಣೆಗಾರ ಮಾಸ್ತಿ ಕೂಡ ಕೈ ಜೋಡಿಸಿದ್ದು ಶಿವಣ್ಣ ಅವರ ಜೊತೆಗಿನ ಮರೆಯಲಾಗದ ಅನುಭವವನ್ನು ನಮ್ಮ ಜೊತೆ ಹಂಚಿಕೊಂಡಿದ್ದಾರೆ. ಶಿವಣ್ಣ ಯಾಕೆ ವಿಶೇಷ ಮತ್ತು ವಿಶಿಷ್ಠ ವ್ಯಕ್ತಿ ಎನ್ನುವದನ್ನು ಹೇಳಿದ್ದಾರೆ. ಹಾಗಿದ್ದರೆ ಕನ್ನಡ ಚಿತ್ರರಂಗದ ಸೆಂಚ್ಯೂರಿ ಸ್ಟಾರ್ ಡಾ ಶಿವರಾಜ್ ಕುಮಾರ್ ಅವರ ಬಗ್ಗೆ ಕಡ್ಡಿಪುಡಿ, ಟಗರು, ಘೋಸ್ಟ್ ಹೀಗೆ ಹತ್ತು ಹಲವು ಚಿತ್ರಗಳಿಗೆ ಸಂಭಾಷಣೆಯನ್ನು ಬರೆದ ಮಾಸ್ತಿ ಹೇಳಿದ್ದೇನು ಎಂದು ತಿಳಿಯಲು ಮುಂದೆ ಓದಿ.
ಕಡ್ಡಿಪುಡಿ ಕಥೆಯನ್ನೇ ಕೇಳಲಿಲ್ಲ ಶಿವಣ್ಣ
ನಿಮಗೆ ಆಶ್ವರ್ಯವಾಗಬಹುದು ಕಡ್ಡಿಪುಡಿ ಚಿತ್ರದ ಕಥೆಯನ್ನು ಶಿವಣ್ಣ ಯಾವತ್ತೂ ಕೇಳಿಯೇ ಇಲ್ಲ. ಆಗ ನಾನು ಯಾಕೆ ಸರ್ ಅಂತ ಕೇಳಿದೆ. ಆಗ ಅವರು ನಿರ್ದೇಶಕರ ಮೇಲೆ ನನಗೆ ಇರುವ ನಂಬಿಕೆ ಅದು ಎಂದು ಹೇಳಿದರು. ಅವರು ನನಗೆ ಕಥೆ ಹೇಳುವುದು, ನನ್ನ ಪಾತ್ರವೇನು, ನನ್ನ ಪಾತ್ರಕ್ಕಿರುವ ಪ್ರಾಮುಖ್ಯತೆಯ ಕುರಿತು ಅವರು ನನಗೆ ಹೇಳುವುದೇ ಬೇಕಾಗಿಲ್ಲ, ಸೂರಿ ಎನ್ನುವ ಹೆಸರೇ ನಂಬಿಕೆ ಎಂದು ಶಿವಣ್ಣ ಹೇಳಿದ್ದನ್ನು ಮಾಸ್ತಿಯನ್ನು ಫಿಲ್ಮಿ ಬೀಟ್ ಕನ್ನಡಗೆ ನೀಡಿದ ಸಂದರ್ಶನದಲ್ಲಿ ನೆನಪು ಮಾಡಿಕೊಂಡಿದ್ದಾರೆ.
ಅವರೇ ನೃತ್ಯ ನಿರ್ದೇಶಕ ಅವರೇ ಸಾಹಸ ನಿರ್ದೇಶಕ
ಕೇವಲ ಕಡ್ಡಿಪುಡಿ ಮಾತ್ರವಲ್ಲ ಟಗರು ಚಿತ್ರದ ಸಂದರ್ಭದಲ್ಲಿ ಕೂಡ ಅವರು ಕಥೆಯನ್ನು ಕೇಳಲೇ ಇಲ್ಲ. ಇವೆರಡು ಚಿತ್ರಗಳನ್ನು ಅವರು ಕಥೆ ಕೇಳದೆಯೇ ಒಪ್ಪಿಕೊಂಡಿದ್ದರು. ಇನ್ನು ವಿಶೇಷ ಅಂದರೆ ಕಡ್ಡಿಪುಡಿಯಲ್ಲಿ ನೃತ್ಯ ನಿರ್ದೇಶಕರಿಲ್ಲ, ಸಾಹಸ ನಿರ್ದೇಶಕರಿಲ್ಲ ಎಂದು ನಾವು ಅವರಿಗೆ ಮೊದಲೇ ಹೇಳಿದ್ವಿ..ನಮ್ಮ ಈ ಮಾತುಗಳಿಗೆ ಶಿವಣ್ಣ ಸಮ್ಮತಿಯನ್ನು ಸೂಚಿಸಿದ್ದೇ ನಮ್ಮ ಪಾಲಿಗೆ ಇವತ್ತು ಕೂಡ ಸೋಜಿಗ. ಅವರ ಅನುಭವವನ್ನೆಲ್ಲ ನಮ್ಮ ಚಿತ್ರಕ್ಕೆ ಧಾರೆ ಎರೆದು ಅವರೇ ಒಂದು ಹಾಡಿಗೆ ನೃತ್ಯ ಸಂಯೋಜನೆ ಮಾಡಿದರು. ಒಂದು ಆಕ್ಷನ್ ಸನ್ನಿವೇಶವನ್ನು ಕೂಡ ಅವರೇ ಕೊರಿಯೋಗ್ರಾಫ್ ಮಾಡಿದರು ಎಂದು ಆ ದಿನವನ್ನು ನೆನಪು ಮಾಡಿಕೊಂಡಿದ್ದಾರೆ ಮಾಸ್ತಿ.

ರಾಧಿಕಾ ಪಂಡಿತ್ ನಾಯಕಿ ಎಂದಾಗ ಶಿವಣ್ಣ ಮಾಡಿದ್ದೇನು ?
ಇನ್ನು ಕಡ್ಡುಪುಡಿ ಮಾಡುವ ಸಮಯದಲ್ಲಿ ಶಿವಣ್ಣ ಅವರು ಸ್ವಲ್ಪ ದಪ್ಪ ಆಗಿದ್ದರು. ಆದರೆ ರಾಧಿಕಾ ಪಂಡಿತ್ ಈ ಚಿತ್ರದ ನಾಯಕಿ ಎಂದು ನಾವು ಹೇಳಿದ ತಕ್ಷಣ ಸ್ಕ್ರೀನ್ ಮೇಲೆ ಜೋಡಿ ಚೆನ್ನಾಗಿ ಕಾಣಬೇಕೆಂಬ ಉದ್ದೇಶದಿಂದ ನಾವು ಹೇಳದಿದ್ದರೂ ಕೂಡ ಅವರೇ ಸ್ವಯಂ ಪ್ರೇರಿತರಾಗಿ 7 ಕೆಜಿ ತೂಕ ಕಡಿಮೆ ಮಾಡಿಕೊಂಡರು. ಒಬ್ಬ ಬರಹಗಾರನಾಗಿ ನನಗೆ ಶಿವಣ್ಣ ಅವರ ಈ ಶ್ರದ್ದೆ ಮತ್ತು ಶ್ರಮ ತುಂಬಾನೇ ಇಷ್ಟವಾಯ್ತು ಎಂದು ಹೇಳಿದ್ದಾರೆ ಮಾಸ್ತಿ.
ಕಡ್ಡಿಪುಡಿಯಲ್ಲಿ ರೌಡಿ ಟಗರುದಲ್ಲಿ ಪೊಲೀಸ್
ಕಡ್ಡಿಪುಡಿಯಲ್ಲಿ ಒಬ್ಬ ರೌಡಿಯಾಗಿ ಆ ನಂತರ ಟಗರು ಚಿತ್ರದಲ್ಲಿ ಒಬ್ಬ ಎಸಿಪಿಯಾಗಿ ಅವರು ತಮ್ಮನ್ನು ತಾವು ತೋಡಗಿಸಿಕೊಂಡ ರೀತಿಯನ್ನು ಪದಗಳಲ್ಲಿ ಹೇಳಲು ಸಾಧ್ಯ ಇಲ್ಲ. ಅವರಲ್ಲಿರುವ ನಿಜವಾದ ಕಲಾವಿದನ ಪರಿಚಯ ನನಗೆ ಆಗಿದ್ದು ಆಗಲೇ. ಇನ್ನು ಕಡ್ಡಿಪುಡಿ, ಟಗರು, ಮತ್ತು ಘೋಸ್ಟ್ ಈ ಮೂರು ಚಿತ್ರಗಳಲ್ಲಿ ನಾನು ಅವರ ಜೊತೆ ಕೆಲಸ ಮಾಡಿದ್ದೇನೆ, ಈ ಸಮಯದಲ್ಲಿ ನಾನು ಒಂದು ದಿನ ಕೂಡ ಅವರು ಬೇರೆ ಕಲಾವಿದರ ಕುರಿತು ಕೆಟ್ಟದಾಗಿ ಮಾತನಾಡಿದ್ದು, ಹಾಗಂತೆ-ಹೀಗಂತೆ ಎಂದು ಹೇಳಿದ್ದು ನೋಡಿಲ್ಲ. ಅವರಾಯ್ತು ಅವರ ಕೆಲಸವಾಯ್ತು ಎಂದು ಅವರ ಪಾಡಿಗೆ ಇರುವ ವ್ಯಕ್ತಿ ಅವರು ಎಂದು ಮಾಸ್ತಿ ಹೇಳಿದ್ದಾರೆ.
ಮುಂದುವರೆದು ಆದರೂ ಕೂಡ ನನಗೆ ತೀವೃ ಕೆಟ್ಟ ಕುತೂಹಲ, ಹೀಗಾಗಿ ನಾನು ನೀವು ಮೊದಲಿಂದ ಯಾರ ಬಗ್ಗೆಯೂ ಮಾತನಾಡುವುದಿಲ್ವಾ ಅಥವಾ ಈಗೀಗ ಬದಲಾಗಿದ್ದೀರಾ ಎಂದು ಕೇಳಿಯೇ ಬಿಟ್ಟಿದ್ದೇ, ಅದಕ್ಕೆ ಅವರು ಅದೆಲ್ಲ ಮಾಡುತ್ತಾ ಮಾತನಾಡುತ್ತಾ ಕುಂತಿದ್ದರೆ ನಾನು ನೂರಕ್ಕೂ ಅಧಿಕ ಸಿನಿಮಾ ಮಾಡಲು ಸಾಧ್ಯವಾಗ್ತಿತ್ತಾ ಎಂದು ಪ್ರಶ್ನೆ ಕೇಳಿದರು, ಅವರ ಈ ಮಾತು ಅಕ್ಷರಶ ಸತ್ಯ ಎಂದು ಕೂಡಾ ಮಾಸ್ತಿ ಫಿಲ್ಮಿಬೀಟ್ ಕನ್ನಡದಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ರಾಜ್ಕುಮಾರ್ ಮಗ ಎನ್ನುವ ಕಾರಣಕ್ಕೆ ಒಂದು ಮೆಟ್ಟಿಲು ಹತ್ತಬಹುದು,ಆದರೆ...
ಡಾ.ರಾಜ್ಕುಮಾರ್ ಅವರ ಮಗ ಎನ್ನುವ ಕಾರಣಕ್ಕೆ ಮೊದಲ ಮೆಟ್ಟಿಲು ಅವರು ಸುಲಭವಾಗಿ ಹತ್ತಿರಬಹುದು. ಆದರೆ ರಾಜ್ ಕುಮಾರ್ ಮಗ ಎಂಬ ಕಾರಣಕ್ಕೆ ಎರಡನೇ ಸಿನಿಮಾವನ್ನು ಅವರು ಮಾಡಲು ಸಾಧ್ಯವೇ ಇಲ್ಲ. 40 ವರ್ಷಗಳಿಂದ ಕಲಾಸೇವೆ ಮಾಡುತ್ತಾ 130-135 ಸಿನಿಮಾ ಮಾಡಿದಾರೆ, ಈ ತರಹದ ಸಾಧನೆಯನ್ನು ಮಾಡಲು ಕೇವಲ ಡಾ.ಶಿವರಾಜ್ ಕುಮಾರ್ ಅವರಿಂದ ಮಾತ್ರ ಸಾಧ್ಯ.
ಇನ್ನು ಪಾತ್ರವೇ ಅವರಾಗಿ ಹೋಗುತ್ತಾರೆ. ಕೆಲ ಒಮ್ಮೆ ಡೈಲಾಗ್ ಕಷ್ಟ ಎಂದು ಅನಿಸಿದಾಗ ಆ ಡೈಲಾಗ್ನ ಬರೆದುಕೊಂಡು ಅವರ ವ್ಯಾನಿಟಿ ವ್ಯಾನ್ನಲ್ಲಿ ಕುಳಿತುಕೊಂಡು ಇವತ್ತು ಕೂಡ ಅವರು ಪ್ರ್ಯಾಕ್ಟಿಸ್ ಮಾಡ್ತಾರೆ, ತಮ್ಮ ಹಾವ ಭಾವದ ಕಡೆ ಗಮನ ಕೊಡ್ತಾರೆ, ಶಿವಣ್ಣ ಅವರ ಈ ಗುಣಗಳೆಲ್ಲ ಈಗೀನ ಹೊಸ ನಾಯಕರಿಗೆ ನಿಜಕ್ಕೂ ಮಾದರಿ ಎನ್ನುವುದು ಮಾಸ್ತಿ ಅವರ ಅಂಬೋಣ.


Click it and Unblock the Notifications











