'ಮಿನಿ ಮಿನಿ ಹ್ಯಾಪಿ ಬರ್ತ ಡೇ' ಡೈಲಾಗ್ ನಿಂದ ಫೇಮಸ್ ಆಗಿರೋ ಈ ನಟನ ಕುತೂಹಲಕಾರಿ ಕಥೆ!
''ಇವತ್ತು ನನ್ ಮಗಂದು ಮಿನಿ ಮಿನಿ ಹ್ಯಾಪಿ ಬರ್ತ್ ಡೇ'' ಈ ಡೈಲಾಗ್ ಈಗ ಸಿಕ್ಕಾಪಟ್ಟೆ ಫೇಮಸ್. ಈ ಡೈಲಾಗ್ ಕೇಳುತ್ತಿದ್ದ ಹಾಗೆ ಇಡೀ ಚಿತ್ರಮಂದಿರವೇ ಜೋರಾಗಿ ನಗುತ್ತಿದೆ. 'ಒಂದಲ್ಲಾ ಎರಡಲ್ಲಾ' ಸಿನಿಮಾದ ಎಲ್ಲ ಪಾತ್ರಗಳು ಒಂದೊಂದು ರೀತಿ ಇಷ್ಟ ಆಗುತ್ತದೆ. ಅದರಲ್ಲಿ ಫೈನಾನ್ಶಿಯರ್ ನಂದ ಗೋಪಾಲ್ ಕೂಡ ಒಂದು.
ಸಮೀರಾ, ಬಾನು, ರಾಜಣ್ಣ, ಸುರೇಶ ಹೀಗೆ ಈ ಎಲ್ಲಾ ಪಾತ್ರಗಳ ನಡುವೆ ಫೈನಾನ್ಶಿಯರ್ ನಂದ ಗೋಪಾಲ್ ತೆರೆ ಮೇಲೆ ಎದ್ದು ಕಾಣಿಸಿಕೊಳ್ಳುತ್ತಾನೆ, ಪ್ರೇಕ್ಷಕರ ಮನಸಿನಲ್ಲಿ ಜಾಗ ಮಾಡಿಕೊಳ್ಳುತ್ತಾನೆ. ಇಂತಹ ಒಂದು ಪಾತ್ರವನ್ನು ಅದ್ಬುತವಾಗಿ ನಿರ್ವಹಿಸಿರುವುದು ನಟ ಆನಂದ್ ತುಮಕೂರು.
ಒಬ್ಬ ಪ್ರತಿಭಾವಂತ ಕಲಾವಿದನಿಗೆ ಒಂದು ಸಣ್ಣ ಅವಕಾಶ ಸಿಕ್ಕರೆ ಸಾಕು ತನ್ನನ್ನು ತಾನು ಸಾಬೀತು ಮಾಡಿಕೊಂಡು ಬಿಡುತ್ತಾನೆ. ಅದೇ ರೀತಿ ತಮಗೆ ಬಂದ ಅವಕಾಶವನ್ನು ಆನಂದ್ ತುಮಕೂರು ಚೆನ್ನಾಗಿ ಬಳಸಿಕೊಂಡಿದ್ದಾರೆ. ಅಪ್ಪಟ್ಟ ರಂಗಭೂಮಿ ಕಲಾವಿದರಾಗಿರುವ ಆನಂದ್ ತುಮಕೂರು 'ಒಂದಲ್ಲಾ ಎರಡಲ್ಲಾ' ಮೂಲಕ ಸಿನಿಮಾ ಪಯಣ ಶುರು ಮಾಡಿದ್ದಾರೆ.
ಅಂದಹಾಗೆ, 'ಒಂದಲ್ಲಾ ಎರಡಲ್ಲಾ' ಸಿನಿಮಾ ನೋಡಿದ ಪ್ರತಿಯೊಬ್ಬರಿಗೂ ಈ ಫೈನಾನ್ಶಿಯರ್ ನಂದ ಗೋಪಾಲ್ ಯಾರು ಎಂಬ ಕುತೂಹಲ ಇರುತ್ತದೆ. ಆ ನಿಮ್ಮ ಎಲ್ಲ ಪ್ರಶ್ನೆಗಳಿಗೆ ಉತ್ತರ ಈ ಸಂದರ್ಶನದಲ್ಲಿ ಸಿಗುತ್ತದೆ ಮುಂದೆ ಓದಿ....
ಸಂದರ್ಶನ : ನವಿ ಕನಸು (ನವೀನ್ ಎಂ ಎಸ್)

'ಒಂದಲ್ಲಾ ಎರಡಲ್ಲಾ' ನಿಮ್ಮ ಮೊದಲ ಸಿನಿಮಾನಾ?
''ನಾನು ನೀನಾಸಂ ನಲ್ಲಿ ಇದ್ದೇ. ಕಳೆದ 15 ವರ್ಷಗಳಿಂದ ನಟನಾಗಿ ಕೆಲಸ ಮಾಡುತ್ತಿದ್ದೇನೆ. 'ಒಂದಲ್ಲಾ ಎರಡಲ್ಲಾ' ಸಿನಿಮಾದಲ್ಲಿ ನನಗೆ ಗುರುತಿಸಿಕೊಳ್ಳುವಂತಹ ಪಾತ್ರ ಸಿಕ್ಕಿದೆ. ಈ ಸಿನಿಮಾಗೆ ಮುಂಚೆ 'ಚಂಬಲ್', 'ಸೂಜಿಧಾರ', 'ರವಿ ಹಿಸ್ಟರಿ' ಸಿನಿಮಾಗಳಲ್ಲಿ ಸಹ ನಟಿಸಿದ್ದೇನೆ. ಆ ಚಿತ್ರಗಳು ಇನ್ನೂ ಬಿಡುಗಡೆಯಾಗಿಲ್ಲ. ನಾನು ನಟಿಸಿದ ಚಿತ್ರಗಳಲ್ಲಿ ಬಿಡುಗಡೆಯಾದ ಮೊದಲ ಸಿನಿಮಾ ಇದು.''

ನೀವು ರಂಗಭೂಮಿಯಲ್ಲಿ ಇರುವುದರಿಂದ ಮೊದಲೇ ಈ ಟೀಂ ಪರಿಚಯವಿತ್ತೆ?
''ರಾಮಾ ರಾಮಾ ರೇ' ಸಿನಿಮಾವನ್ನು ನಾನು ನೋಡಿರಲಿಲ್ಲ. ಇದು ಒಳ್ಳೆಯ ತಂಡ ಅಂತ ಕೇಳಿದ್ದೆ. ಆಮೇಲೆ ಒಮ್ಮೆ ಚಿತ್ರ ನೋಡಿದೆ. ಆ ಸಿನಿಮಾದಲ್ಲಿ ಸಹಾಯಕ ನಿರ್ದೇಶಕನಾಗಿ ಪುನೀತ್ ಅಂತ ಒಬ್ಬರು ಇದ್ದರೂ. ಅವರು 'ಒಂದಲ್ಲಾ ಎರಡಲ್ಲಾ'ಗೆ ಆಡಿಷನ್ ಕೊಡಿ ಎಂದರು. ಆದರೆ, ಆಗಲೇ ಆ ಸಿನಿಮಾದ ಕಲಾವಿದರು ಬಹುತೇಕ ಫಿಕ್ಸ್ ಆಗಿದ್ದರು.''

ಹಾಗದ್ರೆ, ನೀವು ಸಿನಿಮಾಗೆ ಆಯ್ಕೆ ಆಗಿದ್ದು ಹೇಗೆ ?
''ನಾನು ಆಡಿಷನ್ ಅಂತ ಹೋದಾಗ ಅವರು ಶೂಟಿಂಗ್ ಗೆ ಹೋಗುವುದಕ್ಕೆ ಸಿದ್ಧರಾಗಿದ್ದರು. ನಾಲ್ಕೈದು ದಿನಗಳಲ್ಲಿ ಚಿತ್ರೀಕರಣ ಪ್ರಾರಂಭ ಆಗಬೇಕಿತ್ತು. ಆದರೂ ನನಗೆ ಎರಡು ರೀತಿಯಲ್ಲಿ ಆಡಿಷನ್ ಮಾಡಿದರು. ನೀನಾಸಂ ನಲ್ಲಿ ಇರುವ ಕಾರಣ ಎಲ್ಲ ರಸಗಳಲ್ಲಿ ನಾನು ನಟನೆ ಮಾಡುವುದು ಗೊತ್ತಿತ್ತು. ಯಾವುದಾದರು ಸಣ್ಣ ಪಾತ್ರ ಕೊಡಿ ಎಂದಿದ್ದೆ. ಆದರೆ, ನನ್ನನ್ನು ನೋಡಿ ಒಂದು ಒಳ್ಳೆಯ ಅವಕಾಶವನ್ನೇ ಕೊಟ್ಟರು.

ನಿಮ್ಮ ಹಿನ್ನಲೆ, ಊರಿನ ಬಗ್ಗೆ ಸ್ವಲ್ಪ ಹೇಳಿ?
ನಾನು ಹುಟ್ಟಿದ್ದು, ಬೆಳೆದಿದ್ದು ಎಲ್ಲ ತುಮಕೂರಿನಲ್ಲಿ. 17 ವರ್ಷ ಇರುವಾಗ ನಟ ಆಗಬೇಕು ಎಂಬ ಆಸೆ ಬಂತು. ನಾನು ಶಂಕರ್ ನಾಗ್ ಅಭಿಮಾನಿ ಆಗಿದ್ದೆ. ಸಿನಿಮಾದಲ್ಲಿ ನಟಿಸಲು ಆಗಿರಲಿಲ್ಲ ಆದರೆ, ರಂಗಭೂಮಿಯಲ್ಲಿ ನಿರಂತರ ಕೆಲಸ ಮಾಡಿದೆ. ಬಳಿಕ ನೀನಾಸಂ ನಲ್ಲಿ ಒಂದು ವರ್ಷದ ಕೋರ್ಸ್ ಮಾಡಿದೆ. ನೀನಾಸಂ ತಿರುಗಾಟ, ಶಿಬಿರ ಎಲ್ಲ ಮಾಡಿದೆ. ಆಗ ನನ್ನ ಜೊತೆಗೆ ನಟ ಅಚ್ಛುತ್ ಕುಮಾರ್ ಕೂಡ ಇದ್ದರು.

ನಿಮ್ಮ ಕುಟುಂಬದ ಪರಿಚಯ, ನಿಮ್ಮ ನಟನೆಗೆ ಅವರ ಪ್ರೋತ್ಸಾಹ ಹೇಗಿದೆ?
''ನಾನು 25 ವರ್ಷ ಇರುವಾಗಲೇ ಸಿನಿಮಾಗೆ ಬರಬಹುದಿತ್ತು ಆದರೆ ಅದು ಸಾಧ್ಯ ಆಗಲಿಲ್ಲ. ನನಗೆ ಇಬ್ಬರು ಮಕ್ಕಳಿದ್ದಾರೆ. ಮಗಳನ್ನು ಬೆಂಗಳೂರಿಗೆ ಮದುವೆ ಮಾಡಿ ಕೊಟ್ಟಿದ್ದೇನೆ. ಮಗ ಬಿ ಎಸ್ ಸಿ ಓದುತ್ತಿದ್ದಾನೆ. ಸಿನಿಮಾಗೆ ಬಂದರೆ ಫ್ಯಾಮಿಲಿ ನೋಡಿಕೊಳ್ಳೊಕ್ಕೆ ಆಗಲ್ಲ ಅಂತ ರಂಗಭೂಮಿಯಲ್ಲಿ ಇದ್ದು, ಮನೆ, ಸಂಸಾರದ ಹೊಣೆ ಹೊತ್ತುಕೊಂಡಿದ್ದೆ. ಈಗ ಮಗಳ ಮದುವೆಯ ನಂತರ ಸಿನಿಮಾ ಮಾಡುತ್ತಿದ್ದೇನೆ.''

ಹೇಗಿದೆ ನಿಮ್ಮ ರಂಗಭೂಮಿ ಪ್ರಯಾಣ?
''ನಾನು 35 ವರ್ಷಗಳಿಂದ ರಂಗಭೂಮಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ಚಿಕ್ಕ ಹುಡುಗನಾಗಿದ್ದನಿಂದಲೇ ನಮ್ಮ ಊರಿನಲ್ಲಿ ಪೌರಾಣಿಕ ನಾಟಕ ಮಾಡುತ್ತಿದ್ದೆ. ಎಲ್ಲ ಭಾಷೆಗಳಲ್ಲಿ ನಾಟಕ, ಬೀದಿ ನಾಟಕ ಮಾಡಿದ್ದೇನೆ. 'ರತ್ನ ಮಂಗಲೇ' ಎಂಬ 7 ಗಂಟೆಯ ನಾಟಕ ಮಾಡಿದ್ದೇ. ಬೆಳಗ್ಗೆ 11 ಗಂಟೆಯಿಂದ ಸಂಜೆ 7 ಗಂಟೆವರೆಗೆ ಸುಮಾರು 5 ಸಾವಿರ ಜನ ಆ ನಾಟಕ ನೋಡಿದ್ದರು. ಅದ್ದೂರಿ ಪ್ರೋಡಕ್ಷನ್ ಆದಾಗಿತ್ತು.''

'ಒಂದಲ್ಲಾ ಎರಡಲ್ಲಾ' ನೋಡಿದ ಜನರ ಪ್ರತಿಕ್ರಿಯೆ ಹೇಗಿದೆ?
''ನಮ್ಮ ಊರಿನಲ್ಲಿ ಸಿನಿಮಾ ಬಿಡುಗಡೆಯಾಗಿಲ್ಲ. ಆದರೆ, ನಿನ್ನೆ ನಾನು ಕೆಲವು ಮಾಲ್ ಗಳಲ್ಲಿ ಪ್ರತಿಕ್ರಿಯೆ ಹೇಗಿದೆ ಎಂದು ನೋಡಿದೆ. ಅದೊಂದು ವಿಸ್ಮಯ ನಮಗೆ. ಎಲ್ಲ ಪಾತ್ರಗಳನ್ನು ಜನ ಇಷ್ಟ ಪಟ್ಟಿದ್ದಾರೆ. ನನ್ನ ಪಾತ್ರ ನೋಡಿ ಇಷ್ಟು ಚೆನ್ನಾಗಿ ಮಾಡಿದ್ದೇನಾ ಎಂದು ನನಗೆ ಆಶ್ವರ್ಯ ಆಗುತ್ತದೆ. ನಿರ್ಮಾಪಕರು ಹೊಸ ಕಲಾವಿದರು ಇದ್ದರೂ ತಲೆ ಕೆಡಿಸಿಕೊಳ್ಳಿಲ್ಲ. ಕಥೆ ಚೆನ್ನಾಗಿದೆ ಅಂತ ಸತ್ಯ ಅವರಿಗೆ ಎಲ್ಲ ನಿರ್ಧಾರ ಕೊಟ್ಟಿದ್ದರು.''

ಸಿನಿಮಾದಲ್ಲಿ ನಿಮಗೆ ಇಷ್ಟ ಆದ ಅಂಶ?
ಇಲ್ಲಿ ಕಥೆಯೇ ಹೀರೋ. ನಾನು ಇಲ್ಲದಿದ್ದರೆ ಇನ್ನೊಬ್ಬರನ್ನು ಹಾಕಿಕೊಂಡು ಸಿನಿಮಾ ಮಾಡಬಹುದು. ಆದರೆ, ನಿರ್ಮಾಪಕರು ಇಲ್ಲದೆ ಸಿನಿಮಾ ಆಗುತ್ತಿರಲಿಲ್ಲ. ಪ್ರೇಕ್ಷಕರು ಇಲ್ಲದಿದ್ದರೆ ಸಿನಿಮಾ ಇರುತ್ತರಲಿಲ್ಲ. ಒಂದಲ್ಲಾ ಎರಡಲ್ಲಾ ಎಲ್ಲರೂ ಸೇರಿ ಆಗಿರುವ ಸಿನಿಮಾ. ಸಿನಿಮಾಗೆ ಮೊದಲ ದಿನ ತೊಂದರೆ ಆಗಿದ್ದಕ್ಕೆ ಬೇಸರ ಆಗಿತ್ತು.


Click it and Unblock the Notifications











