ತಂದೆ ವಿರೋಧ, 'ಗತವೈಭವ' ಪಾತ್ರ, ನಟನೆ ಅನುಭವ- ನಟ ದುಷ್ಯಂತ್ ಸಂದರ್ಶನ
ಸಿಂಪಲ್ ಸುನಿ ನಿರ್ದೇಶನದ 'ಗತವೈಭವ' ಸಿನಿಮಾ ಈ ವಾರ ಬಿಡುಗಡೆ ಆಗ್ತಿದೆ. ದುಷ್ಯಂತ್ ಹಾಗೂ ಆಶಿಕಾ ರಂಗನಾಥ್ ಚಿತ್ರದ ಲೀಡ್ ರೋಲ್ಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಕಿಚ್ಚ ಸುದೀಪ್ ಚಿತ್ರದ ಟ್ರೈಲರ್ ಬಿಡುಗಡೆ ಮಾಡಿ ಚಿತ್ರಕ್ಕೆ ಶುಭ ಹಾರೈಸಿದ್ದರು.
ಇದು ಹೀರೊ ದುಷ್ಯಂತ್ ನಟನೆಯ ಚೊಚ್ಚಲ ಸಿನಿಮಾ. ಮೊದಲ ಚಿತ್ರದಲ್ಲೇ ನಾಲ್ಕು ವಿಭಿನ್ನ ಶೇಡ್ಗಳಿರೋ ಪಾತ್ರದಲ್ಲಿ ಮಿಂಚಿದ್ದಾರೆ. ಬಹಳ ಅದ್ಧೂರಿಯಾಗಿ ಸಿನಿಮಾ ಮೂಡಿ ಬಂದಿದ್ದು ಬಹಳ ನಿರೀಕ್ಷೆ ಹುಟ್ಟಾಕ್ಕಿದೆ. ಗುಬ್ಬಿ ಕ್ಷೇತ್ರದ ಶಾಸಕ ಎಸ್ .ಆರ್ ಶ್ರೀನಿವಾಸ್ ಪುತ್ರ ದುಷ್ಯಂತ್. ಅಂದಹಾಗೆ ತಂದೆಗೆ ಮಗ ಚಿತ್ರರಂಗಕ್ಕೆ ಹೋಗುವುದು ಇಷ್ಟವಿಲ್ಲ. ಆದರೆ ತಾಯಿಗೆ ಮಗನನ್ನು ಹೀರೊ ಆಗಿ ನೋಡುವ ಆಸೆಯಿದೆ.

ತಂದೆಯ ವಿರೋಧದ ನಡುವೆಯೇ ದುಷ್ಯಂತ್ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಮೊದಲ ಪ್ರಯತ್ನದಲ್ಲೇ ಗೆಲ್ಲುವ ಹುಮ್ಮಸ್ಸಿನಲ್ಲಿದ್ದಾರೆ. 'ಗತವೈಭವ' ಸಿನಿಮಾ ಹಾಗೂ ತಮ್ಮ ಪಾತ್ರದ ಬಗ್ಗೆ ಫಿಲ್ಮಿಬೀಟ್ ಕನ್ನಡ ಜೊತೆ ದುಷ್ಯಂತ್ ಮಾತನಾಡಿದ್ದಾರೆ.
ಸಿನಿಮಾ ಬಿಡುಗಡೆ ಹೊಸ್ತಿಲಲ್ಲಿದೆ, ಹೇಗನಿಸುತ್ತಿದೆ?
ಮಿಶ್ರ ಭಾವ. ಕುತೂಹಲ, ನಿರೀಕ್ಷೆ, ನರ್ವಸ್ ಎಲ್ಲವೂ ಇದೆ. ಸಿನಿಮಾ ಅಂತೂ ಇಂತೂ ಬಿಡುಗಡೆ ಆಗುತ್ತಿದೆ. ನಾಲ್ಕೈದು ವರ್ಷಗಳ ಪ್ರಯಾಣ ಇದು. ಪ್ರೇಕ್ಷಕರು ಸಿನಿಮಾ ನೋಡಿ ಮೆಚ್ಚಿಕೊಳ್ಳುವ ಭರವಸೆಯಿದೆ.

ಟ್ರೈಲರ್ಗೆ ಸಿಕ್ಕ ಅದ್ಭುತ ರೆಸ್ಪಾನ್ಸ್ ಬಗ್ಗೆ ಹೇಳಿ
ಬಹಳ ಒಳ್ಳೆಯ ರೆಸ್ಪಾನ್ಸ್ ಸಿಗುವ ನಿರೀಕ್ಷೆ ಇತ್ತು. ಆದರೆ ಅದಕ್ಕಿಂತಲೂ ಹೆಚ್ಚು ಮೆಚ್ಚಿಕೊಂಡಿದ್ದಾರೆ. ಚಿತ್ರಕ್ಕೆ ಸಿಗಬೇಕಾದ ರೆಸ್ಪಾನ್ಸ್ ಬರೀ ಟ್ರೈಲರ್ಗೆ ಸಿಕ್ಕಿದ್ದು ಇದಕ್ಕಿಂತಲೂ ಹೆಚ್ಚು ಮೆಚ್ಚುಗೆ ಚಿತ್ರಕ್ಕೆ ಸಿಗುವ ಭರವಸೆ ಮೂಡಿದೆ.
ನಿಮ್ಮ ಪಾತ್ರಕ್ಕೆ ಸಾಕಷ್ಟು ಶೇಡ್ಗಳಿವೆ, ಆ ಅನುಭವ ಹೇಗಿತ್ತು?
ಮೊದಲ ಚಿತ್ರಕ್ಕೆ ಇಂತಾದೊಂದು ಅವಕಾಶ ಸಿಕ್ಕಿದ್ದು ವಿಶೇಷ. ರಾಕ್ಷಸನ ಪಾತ್ರ, ವಾಸ್ಕೋಡಗಾಮನ ಜೊತೆ ಬರುವ ಪಾತ್ರ, ಮಗದೊಂದು ಕಂಬಳ ವೀರನಾಗಿ ಕೊನೆಯದಾಗಿ ವಿಎಫ್ಎಕ್ಸ್ ಡಿಸೈನರ್ ತರಹದ ಶೇಡ್ ನನ್ನ ಪಾತ್ರಕ್ಕಿದೆ. ನಾಲ್ಕು ವೈವಿಧ್ಯಮಯ ಪಾತ್ರಗಳು ಮೊದಲ ಚಿತ್ರದಲ್ಲೇ ಸಿಕ್ಕಿದ್ದು ಅದೃಷ್ಟ. ಎಲ್ಲದಕ್ಕೂ ತಲಾ 6 ತಿಂಗಳು ತಯಾರಿ ನಡೀತಿತ್ತು. ಎಲ್ಲವೂ ಅದ್ಭುತವಾಗಿತ್ತು ಖುಷಿಯಾಗಿದೆ.
ಅಪ್ಪ ಟ್ರೈಲರ್ ನೋಡಿದ್ರಾ? ಅವರ ರೆಸ್ಪಾನ್ಸ್ ಹೇಗಿದೆ?
ಗೊತ್ತಿಲ್ಲ. ಈವರೆಗೆ ಆ ಬಗ್ಗೆ ಚರ್ಚೆಸಿಲ್ಲ. ನಾಲ್ಕೈದು ವರ್ಷಗಳ ಹಿಂದೆ ಆಕ್ಟಿಂಗ್ ಕ್ಲಾಸ್ ಸೇರ್ತೀನಿ ಎಂದು ಹೇಳಿದ್ದು ಬಿಟ್ಟರೆ ಬಳಿಕ ನಮ್ಮಿಬ್ಬರ ನಡುವೆ ಸಿನಿಮಾ ಮಾತುಕತೆ ಆಗಲಿಲ್ಲ. ಅವತ್ತು ಹಾಗೆ ಹೇಳಿದಾಗ ನೀನು ಜೀವನದಲ್ಲಿ ಏನು ಆಗಲ್ಲ ಬಿಡು ಅಂದ್ರು ಅಷ್ಟೆ. ಅಮ್ಮ ಮಾತ್ರ ನನ್ನ ಬೆಂಬಲಕ್ಕೆ ನಿಂತಿದ್ದಾರೆ. ತಂದೆ ಆರಂಭದಲ್ಲಿ ವಿರೋಧಿಸಿದ್ರು, ಈಗ ವಿರೋಧ ಇಲ್ಲ ಅಂತ ಭಾವಿಸ್ತೀನಿ. ಅವರ ಆಪ್ತರು, ಅಭಿಮಾನಿಗಳ ಮೂಲಕ ಸಿನಿಮಾ ಬಗ್ಗೆ ಹೇಳಿರ್ತಾರೆ. ಹಾಗಾಗಿ ಅವರಿಗೆ ವಿರೋಧ ಇದೆ ಅಂತ ನಾನು ಅಂದುಕೊಳ್ಳಲ್ಲ. ನಾನು ತುಮಕೂರಿಗೆ ಹೋಗುವುದು ಕಮ್ಮಿಯಾಗಿದೆ.
ಬೇರೆ ಭಾಷೆಗಳಲ್ಲಿ ಸಿನಿಮಾ ಏಕಕಾಲಕ್ಕೆ ಬಿಡುಗಡೆ ಆಗ್ತಿದೆ, ಆ ಬಗ್ಗೆ ಹೇಳಿ
ಕಥೆಯೇ ಎಲ್ಲದ್ದಕ್ಕೂ ಕಾರಣ. ಈ ಕಥೆ ಭಾರತದಲ್ಲಿ ಯಾವುದೇ ಊರಿನಲ್ಲಿ ಹೇಳಬಹುದು. ದೇವಲೋಕದ ಕಥೆ, ವಾಸ್ಕೋಡಗಾಮನ ಕಥೆ, ಲವ್ ಇದೆಲ್ಲವೂ ಎಲ್ಲರಿಗೂ ತಲುಪುವಂಥದ್ದು. ತೆಲುಗಿನಲ್ಲಿ 'ವರ್ಣಮಾಲ' ಹಾಡಿಗೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿತ್ತು. ಪ್ರೈಂ ಶೋ ಸಂಸ್ಥೆ ತೆಲುಗು ವರ್ಷನ್ ವಿತರಣೆ ಮಾಡ್ತಿದೆ.
ಸುನಿ ಪರಿಚಯ, ಸಿನಿಮಾ ಶುರುವಾಗಿದ್ದು ಹೇಗೆ?
ಒಳ್ಳೆ ಸಿನಿಮಾ ಮಾಡಬೇಕು ಎಂದು ನಾನು ಹಾಗೂ ಸುನಿ ಅವರು ಜೊತೆಯಾಗಿದ್ದೆವು. ಒಂದೂವರೆ ವರ್ಷ ಬೇರೆ ಬೇರೆ ಕಥೆಗಳು ಅಂದುಕೊಂಡೆವು. ಆಗ ಹೀರೊ ಲಾಂಚ್ ವೀಡಿಯೋ ಅಂತ ಮಾಡಿದ್ದೆವು. ಅದರಲ್ಲಿ ನನ್ನ ನಟನೆ ನೋಡಿ ಸುನಿ ಈ ಪಾತ್ರಕ್ಕೆ ನನ್ನ ಆಯ್ಕೆ ಮಾಡಿಕೊಂಡರು. ಅವರ ಬಳಿಕ ಕಥೆ ಅದಾಗಲೇ ಇತ್ತು. ಇಂತಾದೊಂದು ಪಾತ್ರಕ್ಕೆ ಹೊಸ ನಟ ಆಗಲ್ಲ ಎಂದುಕೊಂಡಿದ್ದರು. ಆದರೆ ಆ ವೀಡಿಯೋ ನೋಡಿದ್ಮೇಲೆ ನನ್ನೊಟ್ಟಿಗೆ ಈ ಸಿನಿಮಾ ಮಾಡಬಹುದು ಎಂದು ಆರಂಭಿಸಿದ್ದೆವು.
ಅಪ್ಪಾಜಿಗೆ ಎಲ್ಲಿ ಸಿನಿಮಾ ತೋರಿಸ್ತೀರಾ?
ನೋಡ್ತಾರೆ ಅಂದುಕೊಂಡಿದ್ದೀನಿ. ನಾನು ಕೂಡ ಸಿನಿಮಾ ನೋಡುವಂತೆ ಮನವಿ ಮಾಡಿಕೊಳ್ತೀನಿ. ನೋಡ್ತಾರೆ ಅನ್ನಿಸುತ್ತೆ.


Click it and Unblock the Notifications











