''ನೀನು ಏನೇ ಕೇಳಿದರೂ, 15 ನಿಮಿಷದಲ್ಲಿ ಮಾಡುತ್ತೇನೆ''- ಕಾಶೀ ಪುತ್ರನಿಗೆ 'ಗಜ'ಬಲ
Recommended Video
ದಿನ ಸೂರ್ಯ ಹುಟ್ಟುತ್ತಾನೆ.. ಕತ್ತಲು ಕಳೆದು ಬೆಳಕು ಆಗುತ್ತದೆ. ಹೀಗೆಯೇ ಪ್ರತಿಯೊಬ್ಬರ ಜೀವನದಲ್ಲಿ ಬೆಳಕು ಬಂದೇ ಬರುತ್ತದೆ. ಈ ರೀತಿ ಕಾಶಿನಾಥ್ ಪುತ್ರ ಅಭಿಮನ್ಯು ಜೀವನದಲ್ಲಿಯೂ ಇದೀಗ ಬೆಳಕು ಕಾಣಿಸುತ್ತಿದೆ.
'ಅಪ್ಪ ಐ ಲವ್ ಯೂ' ಹಾಡಿನಲ್ಲಿ ಅಪ್ಪನಾಗಿ ಕಾಣಿಸಿಕೊಂಡಿದ್ದು, ನಟ ಕಾಶೀನಾಥ್. ಆದರೆ, ಈಗ ಅವರ ಮಗನ ಜೊತೆಯೇ ತಂದೆ ಇಲ್ಲ. ಇಂತಹ ದೊಡ್ಡ ನೋವು ಇಟ್ಟುಕೊಂಡು ಅಭಿಮನ್ಯು ಮುಂದು ಸಾಗುತ್ತಿದ್ದಾರೆ.
'ಎಲ್ಲಿಗೆ ಪಯಣ ಯಾವುದೋ ದಾರಿ' ಸಿನಿಮಾ ಮೂಲಕ ಕಾಶೀನಾಥ್ ಪುತ್ರನ ಸೆಕೆಂಡ್ ಇನ್ನಿಂಗ್ ಶುರು ಆಗುತ್ತಿದೆ. 7 ವರ್ಷದ ನಂತರ ಮತ್ತೆ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾದ ವಿಶೇಷವಾಗಿ 'ಫಿಲ್ಮಿ ಬೀಟ್ ಕನ್ನಡ' ಅಭಿಮನ್ಯು ಸಂದರ್ಶನ ನಡೆಸಿದೆ.
ಜಯನಗರದ ಕಾಶೀನಾಥ್ ಅವರ ಪುಟ್ಟ ಮನೆಯಲ್ಲಿ ಈಗಲೂ ಮೌನವಿತ್ತು. ಅದರ ನಡುವೆ ನಮ್ಮ ಜೊತೆಗೆ ಅಭಿಮನ್ಯು ಮಾತು ಶುರು ಮಾಡಿದರು. ಚಿತ್ರರಂಗಕ್ಕೆ ಬಂದಿದ್ದು ಹೇಗೆ, ಹೊಸ ಸಿನಿಮಾ, ತಂದೆಯನ್ನು ಕಳೆದುಕೊಂಡ ನೋವು ಹೀಗೆ ತಮ್ಮ ಮನಸ್ಸಿನ ಮಾತನ್ನು ಹೇಳಿಕೊಂಡಿದ್ದಾರೆ.

ನಿಮ್ಗೆ ಅಭಿಮನ್ಯು ಅಂತ ಕರೀಬೇಕಾ, ಅಲೋಕ್ ಅಂತ ಕರೀಬೇಕಾ?
''ಅಭಿಮನ್ಯು ನಮ್ಮ ಅಪ್ಪ ಅಮ್ಮ ಇಟ್ಟ ಹೆಸರು. 'ಬಾಜಿ' ಸಿನಿಮಾ ಮಾಡುವಾಗ ನನ್ನ ಹೆಸರಿನ ಅಕ್ಷರ ಬದಲಿಸಬೇಕು ಎಂದು ಹೇಳಿದರು. ಆ ಸಿನಿಮಾದ ನಿರ್ಮಾಪಕರು, ನ್ಯೂಮರಾಲಜಿ ನಂಬುತ್ತಿದ್ದರು. ಹೀಗಾಗಿ ಅಲೋಕ್ ಎಂದು ಹೆಸರು ಬದಲಿಸಿದರು. ಬಾಜಿ ಟೀಮ್ ಬಿಟ್ಟರೆ ಎಲ್ಲರೂ ನನ್ನನ್ನು ಅಭಿ, ಅಭಿಮನ್ಯು ಎಂದೇ ಕರೆಯುತ್ತಾರೆ. ಆಗ ನನಗೆ ಕೆಲವು ಬಾರಿ ನನ್ನ ಹೆಸರು ಗೊಂದಲ ಆಗುತ್ತಿತ್ತು. ಇನ್ನು ಮುಂದೆ ನಾನು ಅಭಿಮನ್ಯು ಅಷ್ಟೇ.''

ನಿಮ್ಮ ಪಯಣ ಎಲ್ಲಿಗೆ, ಯಾವುದು ನಿಮ್ಮ ದಾರಿ..?
(ನಗುತ್ತಾ) ''ಯಾವ ಕಡೆ ಪಯಣ ಅಂತ ನಿರ್ದೇಶಕರಿಗೆ ಕೇಳಬೇಕು. ಡೈರೆಕ್ಟರ್ ಕಿರಣ್, ಆನ್ ಲೈನ್ ನಲ್ಲಿ ನಾನು ಅಪ್ಪನ ಜೊತೆಗೆ ಇರುವ ವಿಡಿಯೋ ನೋಡಿ ಕಥೆಗೆ ಸೂಕ್ತ ಆಗುತ್ತೇನೆ ಎಂಬ ಕಾರಣಕ್ಕೆ ನನ್ನನ್ನು ಆಯ್ಕೆ ಮಾಡಿದ್ದಾರೆ. ಒನ್ ಲೈನ್ ಕಥೆ ಹೇಳಿದ್ದಾರೆ. ಡೈಲಾಗ್ ಮತ್ತು ಸ್ಕ್ರಿಪ್ಟ್ ನಡೆಯುತ್ತಿದೆ. ಇದು ಸಸ್ಪೆನ್ಸ್ ಜಾನರ್ ಸಿನಿಮಾ, ಒಂದು ಕ್ಯೂಟ್ ಲವ್ ಸ್ಟೋರಿ ಇದೆ. ಬೇರೆ ಬೇರೆ ಶೇಡ್ಸ್ ಇದೆ.''

ಇದು ನಿಮ್ಮ ರೀ ಲಾಂಚ್ ಸಿನಿಮಾ, ಹೇಗಿದೆ ತಯಾರಿ?
''ರೀ ಲಾಂಚ್ ಹಾಗೆ ಹೀಗೆ ಎಂದು ದೊಡ್ಡದಾಗಿ ಹೇಳಲು ಇಷ್ಟವಿಲ್ಲ. ನಾನು ಇದನ್ನು ನನ್ನ ಮೊದಲ ಸಿನಿಮಾ ಎಂದೇ ಕೆಲಸ ಮಾಡಬೇಕು. ರೀ ಲಾಂಚ್ ಎಂದುಕೊಂಡು ನಾವು ದೊಡ್ಡ ದೊಡ್ಡ ರೀತಿಯಲ್ಲಿ ಯೋಚನೆ ಮಾಡಲು ಆಗಲ್ಲ. ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳಬೇಕು ಅಷ್ಟೇ.

ನಟ ಆಗಬೇಕು ಎಂದಾಗ ಕಾಶೀನಾಥ್ ಅವರ ಕಡೆಯಿಂದ ನಿಮಗೆ ಸಿಕ್ಕಿದ್ದ ಸಲಹೆಗಳು ಏನು?
''ನಾನು ಮೊದಲು ಕ್ರಿಕೆಟರ್ ಆಗಬೇಕು ಎಂದುಕೊಂಡಿದೆ. ಫೈನಲ್ ಹಿಯರ್ ಮುಗಿದಾಗ ಕ್ರಿಕೆಟ್ ಕಡಿಮೆ ಮಾಡಿ ಫಿಲ್ಮ್ ಮಾಡಬೇಕು ಅಂತ ಅನಿಸಿತು. ನಾಟಕ, ಡ್ಯಾನ್ಸ್ ಕಾರ್ಯಕ್ರಮಗಳನ್ನು ಮಾಡಿದ್ವಿ. ಅಪ್ಪ ಯಾವುದಕ್ಕೂ ಫೋರ್ಸ್ ಮಾಡುತ್ತಿರಲಿಲ್ಲ. ನನಗೆ ಆಸಕ್ತಿ ಬಂದ ಮೇಲೆ 'ಅಪ್ಪಚ್ಚಿ' ಸಿನಿಮಾದ ಸಮಯದಲ್ಲಿ, ಸಿನಿಮಾ ಸೆಟ್ ಗೆ ಹೋಗಿದ್ದೆ. ಅಲ್ಲಿ ಕೆಲಸಗಳನ್ನು ಗಮನಿಸಲು ಶುರು ಮಾಡಿದೆ.

ತಂದೆಯನ್ನು ಈಗ ತುಂಬ ಮಿಸ್ ಮಾಡಿಕೊಳ್ಳುತ್ತಿರಾ?
''ಇದರ ಬಗ್ಗೆ ಮಾತನಾಡುವುದು ಕಷ್ಟ. ಅದರ ಬಗ್ಗೆ ಮಾತನಾಡಲು ಆಗುವುದಿಲ್ಲ.'' ಎಂದ ಅಭಿಮನ್ಯು ಒಂದು ಕ್ಷಣ ಮೌನವಾದರು.

ತಂದೆಯ ಸ್ನೇಹಿತರು, ಚಿತ್ರರಂಗದ ಯಾರಾದರೂ ನಿಮಗೆ ಪ್ರೋತ್ಸಾಹ ನೀಡಿದ್ದಾರೆಯೇ?
''ಅಪ್ಪ ಹೋದಾಗ ನನ್ನ ಹಿಂದೆ ನಿಂತಿದ್ದು ದರ್ಶನ್ ಸರ್. ಅವರು ಹೇಳಿದ್ದು ಒಂದೇ ಮಾತು, 'ಚಿನ್ನ ನಿನಗೆ ಏನೇ ಬೇಕು ಅಂದರೂ ಒಂದ್ ಫೋನ್ ಮಾಡು 15 ನಿಮಿಷದಲ್ಲಿ ನಾನು ಅದನ್ನು ಮಾಡುತ್ತೇನೆ' ಎಂದರು. ಆ ಸಮಯದಲ್ಲಿ ನನ್ನ ಮೇಲೆ ಎಲ್ಲ ಜವಾಬ್ದಾರಿ ಇತ್ತು. ಅವರ ಕಡೆಯಿಂದ ಬಂದ ಒಂದು ಮಾತು ನನಗೆ ತುಂಬ ಧೈರ್ಯ ತುಂಬಿತು.''

ಉಪೇಂದ್ರ ಟೈಟಲ್ ಲಾಂಚ್ ಮಾಡಿದ್ರು, ಏನ್ ಹೇಳಿದ್ರು?
''ಉಪೇಂದ್ರ ಸರ್ ತುಂಬ ಪ್ರೋತ್ಸಾಹ ನೀಡಿದರು. ಸಿನಿಮಾದ ಟೈಟಲ್ ಅನ್ನು ಅವರೇ ಲಾಂಚ್ ಮಾಡಿಕೊಟ್ಟರು. ನಿರ್ದೇಶಕರಿಗೂ ಅವರ ಪರಿಚಯ ಇತ್ತು. ಉಪೇಂದ್ರ ಸರ್ ತುಂಬ ಥ್ಯಾಂಕ್ಯು.''
ಸಿನಿಮಾ ಯಾವಾಗ ತೆರೆ ಮೇಲೆ ಬರಬಹುದು?
''ಡಿಸೆಂಬರ್ ಮೇಲೆ ಸಿನಿಮಾದ ಶೂಟಿಂಗ್ ಶುರು ಆಗಲಿದೆ. ಸಾಕಷ್ಟು ತಯಾರಿಗಳು ನಡೆಯುತ್ತಿದೆ. ನಾಲ್ಕೈದು ತಿಂಗಳು ಚಿತ್ರೀಕರಣ ಇರಬಹುದು. ನಂದೀಶ್ ಗೌಡ, ಜಿತಿನ್ ಪಟೇಲ್ ನಿರ್ಮಾಣ ಮಾಡುತ್ತಿದ್ದಾರೆ. ಸ್ಫೂರ್ತಿ ನಾಯಕಿ. ಕಿರಣ್ ಸೂರ್ಯ ನಿರ್ದೇಶನ ಮಾಡುತ್ತಿದ್ದಾರೆ. ನನ್ನ ಪಾತ್ರ ಡಿಫರೆಂಟ್ ಆಗಿದೆ. ಗೆಪಟ್ ಕೂಡ ಬೇರೆ ಇರುತ್ತದೆ.


Click it and Unblock the Notifications











