ಡಾ. ರಾಜ್ ಜತೆ ಆಪ್ತ ನಂಟು ಹೊಂದಿದ್ದ ಸುದರ್ಶನ್: ಭಗವಾನ್
ಡಾ. ರಾಜ್ ಕುಮಾರ್ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರೆಂದು ತಿಳಿಸಿದ ಹಿರಿಯ ನಿರ್ದೇಶಕ ಎಸ್.ಕೆ. ಭಗವಾನ್. ಹಿರಿಯ ನಟ ಸುದರ್ಶನ್ ನಿಧನಕ್ಕೆ ಬೇಸರ ವ್ಯಕ್ತಪಡಿಸಿದ ಹಿರಿಯ ನಿರ್ದೇಶಕ.
ಕನ್ನಡ ಚಿತ್ರರಂಗದ ಮೇರು ನಟ ಡಾ. ರಾಜ್ ಕುಮಾರ್ ಜತೆಗೆ ಹಿರಿಯ ನಟ ಸುದರ್ಶನ್ ಅವರು ಭಾವನಾತ್ಮಕವಾದ ನಂಟು ಹೊಂದಿದ್ದರು ಎಂದು ಹಿರಿಯ ಚಿತ್ರ ನಿರ್ದೇಶಕ ಭಗವಾನ್ ತಿಳಿಸಿದರು.
ಹಿರಿಯ ನಟ ಸುದರ್ಶನ್ ಅವರು ಶುಕ್ರವಾರ (ಸೆ. 8) ನಿಧನರಾದ ಹಿನ್ನೆಲೆಯಲ್ಲಿ, ತಮ್ಮನ್ನು ಸಂಪರ್ಕಿಸಿದ 'ಒನ್ ಇಂಡಿಯಾ' ಜತೆಗೆ ಹಳೆಯ ನೆನಪುಗಳನ್ನು ಹಂಚಿಕೊಂಡ ಅವರು, ಸುದರ್ಶನ್ ಬಗ್ಗೆ ಕೆಲವಾರು ವಿಚಾರಗಳನ್ನು ಹೇಳಿದರು.
ಅವರು ನೀಡಿದ ಮಾಹಿತಿ, ಅವರದ್ದೇ ಮಾತುಗಳಲ್ಲಿ...

ಚಿತ್ರರಂಗದ ದಿಗ್ಗಜ ಆರ್. ನಾಗೇಂದ್ರ ರಾಯರೆಂದರೆ, ಡಾ. ರಾಜ್ ಕುಮಾರ್ ಅವರಿಗೆ ಅಪಾರದವಾದ ಗೌರವ. ಅವರನ್ನು ಗುರು ಹಾಗೂ ತಂದೆಯ ಸಮಾನದ ಸ್ಥಾನಗಳಲ್ಲಿಟ್ಟು ಅವರು ಹೃತ್ಪೂರ್ವಕವಾಗಿ ಪೂಜಿಸುತ್ತಿದ್ದರು. ಹಾಗೆಯೇ, ನಾಗೇಂದ್ರರಾಯರ ಕುಟುಂಬದ ಬಗ್ಗೆಯೂ ರಾಜ್ ಗೌರವ ಇಟ್ಟುಕೊಂಡಿದ್ದರು.
ನಾಗೇಂದ್ರ ರಾಯರ ಪುತ್ರರಾದ ಆರ್.ಎನ್. ಜಯಗೋಪಾಲ್, ಆರ್.ಎನ್. ಸುದರ್ಶನ್ ಹಾಗೂ ಛಾಯಾಗ್ರಾಹಕ ಕೃಷ್ಣಕುಮಾರ್ ಅವರ ಜತೆಗೆ ಆತ್ಮೀಯ ಒಡನಾಟ ಹೊಂದಿದ್ದರು ರಾಜ್.
ತಮ್ಮ ಸ್ವಂತ ಬ್ಯಾನರಿನಲ್ಲಿ ಚಿತ್ರಗಳನ್ನು ತಯಾರಿಸಲು ಆರಂಭಿಸಿದಾಗಲೂ ಕೆಲವು ಚಿತ್ರಗಳಲ್ಲಿ ಸುದರ್ಶನ್ ಅವರಿಗೆ ಅವುಗಳಲ್ಲಿ ಅಭಿನಯಿಸುವಂತೆ ಆಹ್ವಾನ ನೀಡಿದ್ದರು ರಾಜ್. ಹಾಗಾಗಿಯೇ ಸುದರ್ಶನ್ ಅವರು ರಾಜ್ ನಾಯಕತ್ವದ ಹಾವಿನ ಹೆಡೆ ಸೇರಿದಂತೆ ಕೆಲವಾರು ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದರು.
ಪ್ರತಿಭೆಯನ್ನು ತಾವೇ ಮೂಲೆಗುಂಪು ಮಾಡಿಕೊಂಡರು
80ರ ದಶಕದಲ್ಲಿ ಕನ್ನಡ ಚಿತ್ರರಂಗದ ಚಟುವಟಿಕೆಗಳು ಆಗಿನ ಮದ್ರಾಸ್ ನಿಂದ (ಈಗಿನ ಚೆನ್ನೈ) ಬೆಂಗಳೂರಿಗೆ ವರ್ಗಾವಣೆಗೊಂಡವು. ಆಗ, ಚೆನ್ನೈನಲ್ಲಿ ನೆಲೆನಿಂತಿದ್ದ ಎಲ್ಲಾ ಕಲಾವಿದರು, ತಂತ್ರಜ್ಞರು ಬೆಂಗಳೂರಿಗೆ ಸ್ಥಳಾಂತರಗೊಂಡರು. ಆದರೆ, ಆರ್.ಎನ್. ಜಯಗೋಪಾಲ್, ಸುದರ್ಶನ್ ಹಾಗೂ ಕೃಷ್ಣ ಪ್ರಸಾದ್ ಚೆನ್ನೈನಿಂದ ಬೆಂಗಳೂರಿಗೆ ಶಿಫ್ಟ್ ಆಗಲೇ ಇಲ್ಲ.
ಅಲ್ಲಿಯೇ ಅವರು ತಮ್ಮದೇ ಆದ ಒಂದು ಸ್ನೇಹಿತರ, ಹಿತೈಷಿಗಳ ಗುಂಪನ್ನು ಕಟ್ಟಿಕೊಂಡು ತಮ್ಮದೇ ಸಿನಿಮಾ ಬ್ಯಾನರಿನಲ್ಲಿ ಕೆಲವಾರು ಚಿತ್ರಗಳನ್ನು ಮಾಡಿಕೊಳ್ಳುವ ಮೂಲಕ ಅಲ್ಲೇ ಉಳಿದುಬಿಟ್ಟರು. ಇದು ಅವರ ಚಿತ್ರ ಜೀವನದಲ್ಲಿ ಮಾಡಿದ ಅತಿ ದೊಡ್ಡ ತಪ್ಪು.
ಇಂಗ್ಲೀಷ್ ನಲ್ಲಿ 'ಔಟ್ ಆಫ್ ಸೈಟ್ ಈಸ್ ಔಟ್ ಆಫ್ ಮೈಂಡ್' ಎನ್ನುವಂತೆ ಬೆಂಗಳೂರಿಗೆ ಶಿಫ್ಟ್ ಆದ ಚಿತ್ರರಂಗ ಅವರನ್ನು ಮರೆತೇಬಿಟ್ಟಿತು. ಆದರೂ, ಅವರ ತಂದೆಯ ಮೇಲೆ ಗೌರವವಿದ್ದ ಜನರು ಅಥವಾ ಇವರ ಪ್ರತಿಭೆಯ ಪರಿಚಯವಿದ್ದ ಕೆಲ ನಿರ್ಮಾಪಕ, ನಿರ್ದೇಶಕರು ಅವರಿಗೆ ತಮ್ಮ ಚಿತ್ರಗಳಲ್ಲಿ ಆಗಾಗ ಪಾತ್ರಗಳನ್ನು ಗೌರವಾನ್ವಿತವಾಗಿ ಕರೆದು ಕೊಡುತ್ತಿದ್ದರು. ಹಾಗಾಗಿ, ಅವರು 90ರ ದಶಕದಲ್ಲಿ ಕೆಲವಾರು ಚಿತ್ರಗಳನ್ನು ಮಾಡಿದರು.
ನಿಜ ಹೇಳಬೇಕೆಂದರೆ, ಅವರೊಬ್ಬ ಉತ್ತಮ ನಟ, ಉತ್ತಮ ಗಾಯಕ. ಆದರೆ, ಅವರು ಚೆನ್ನೈನಲ್ಲೇ ಉಳಿದುಕೊಂಡಿದ್ದರಿಂದ ಅವರ ಪ್ರತಿಭೆಯು ಅವರೇ ಮುಕ್ಕಾಗುವಂತೆ ಮಾಡಿದರು. ಆದರೆ, ಅಷ್ಟರಲ್ಲಿ ಅವರು ತೆಲುಗು, ತಮಿಳಿನಲ್ಲಿ ಕೆಲವಾರು ವಿಲನ್ ರೋಲ್ ಗಳನ್ನು ಮಾಡಿ ಜನಮನ್ನಣೆ ಗಳಿಸಿದ್ದರು.
ನಿರ್ದೇಶಕ ಮಣಿರತ್ನಂ ಅವರಿಗೆ ಹೆಚ್ಚು ಆಪ್ತರು
ಖ್ಯಾತ ನಿರ್ದೇಶಕ ಮಣಿರತ್ನಂ ಅವರಿಗೆ ಆರ್. ನಾಗೇಂದ್ರ ರಾಯರೆಂದರೆ ಪಂಚಪ್ರಾಣ. ಈ ಹಿನ್ನೆಲೆಯಲ್ಲಿ, ಅವರಿಗೆ ರಾಯರ ಪುತ್ರರಾದ ಆರ್.ಎನ್. ಜಯಗೋಪಾಲ್ ಹಾಗೂ ಕೃಷ್ಣಪ್ರಸಾದ್ ಅವರೊಂದಿಗೆ ಆಪ್ತತೆಯಿತ್ತು. ಈ ಆಪ್ತತೆಯಿಂದಲೇ, ಮಣಿ ಅವರು, ತಮ್ಮ 'ನಾಯಗನ್' ಚಿತ್ರದಲ್ಲಿ ಈ ಮೂವರನ್ನೂ ಖಳನಟರ ಪಾತ್ರಗಳನ್ನು ಕೊಟ್ಟು ಆ ಮೂಲಕ ಅವರ ಪ್ರತಿಭೆಯ ಮತ್ತೊಂದು ಮಗ್ಗುಲನ್ನು ಪರಿಚಯಿಸಿದ್ದರು. ಈ ಚಿತ್ರದಲ್ಲಿನ ಪಾತ್ರ ಸುದರ್ಶನ್ ಅವರ ಪ್ರತಿಭಾ ಸಾಮರ್ಥ್ಯವನ್ನು ಪರಿಚಯಿಸಲು ಕಾರಣವಾಯಿತು. ಆನಂತರ, ಅವರು ತೆಲುಗು ಚಿತ್ರಗಳಲ್ಲೂ ವಿಲನ್ ಪಾತ್ರಗಳಲ್ಲಿ ಮಿಂಚಿದರು.


Click it and Unblock the Notifications











