'ಅಮೃತಧಾರೆ' ಮಲ್ಲಿ ಪಾತ್ರಕ್ಕೆ ನಟಿ ಸಿಕ್ಕಾಯ್ತು; 'ಗಟ್ಟಿಮೇಳ'ದ ಅನ್ವಿತಾ ಸಾಗರ್ ಮತ್ತೆ ಎಂಟ್ರಿ!
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳ ಪೈಕಿ 'ಅಮೃತಧಾರೆ'ಯೂ ಒಂದು. 'ಅಮೃತಧಾರೆ' ಧಾರಾವಾಹಿಯಲ್ಲಿ ಮಲ್ಲಿಯಾಗಿ ಅಭಿನಯಿಸುತ್ತಿರುವ ರಾಧಾ ಭಗವತಿ ಅವರು ಪಾತ್ರದಿಂದ ಹೊರಗೆ ಬಂದಿರುವ ವಿಚಾರ ಕಿರುತೆರೆ ವೀಕ್ಷಕರಿಗೆ ತಿಳಿದಿದೆ. ಹೌದು, ಕಲರ್ಸ್ ಕನ್ನಡ ವಾಹಿನಿಯಲ್ಲಿ 'ಭಾರ್ಗವಿ ಎಲ್.ಎಲ್.ಬಿ' ಹೆಸರಿನ ಹೊಚ್ಚ ಹೊಸ ಧಾರಾವಾಹಿ ಶುರುವಾಗಿದ್ದು, ಅದರಲ್ಲಿ ನಾಯಕಿ ಭಾರ್ಗವಿಯಾಗಿ ರಾಧಾ ಭಗವತಿ ಅವರು ಅಭಿನಯಿಸುತ್ತಿದ್ದಾರೆ.
ಆ ಕಾರಣದಿಂದಾಗಿ 'ಅಮೃತಧಾರೆ'ಯ ಮಲ್ಲಿ ಪಾತ್ರದಿಂದ ಹೊರಬಂದಿದ್ದಾರೆ ರಾಧಾ ಭಗವತಿ. 'ಅಮೃತಧಾರೆ' ಧಾರಾವಾಹಿಯಲ್ಲಿ ಪೋಷಕ ಪಾತ್ರದಲ್ಲಿ ನಟಿಸುತ್ತಿದ್ದ ರಾಧಾ ಭಗವತಿ ಅವರಿಗೆ 'ಭಾರ್ಗವಿ ಎಲ್.ಎಲ್.ಬಿ' ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸುವ ಸುವರ್ಣಾವಕಾಶ ದೊರಕಿತ್ತು. ಅದೇ ಕಾರಣದಿಂದ ಮಲ್ಲಿ ಪಾತ್ರಕ್ಕೆ ಈಕೆ ವಿದಾಯ ಹೇಳಿದ್ದರು.

ಇದೀಗ ಮಲ್ಲಿಯ ಪಾತ್ರಕ್ಕೆ ಹೊಸ ನಟಿಯ ಆಗಮನವಾಗಿದೆ. ಹೌದು, 'ಗಟ್ಟಿಮೇಳ' ಧಾರಾವಾಹಿಯಲ್ಲಿ ಆದ್ಯಾ ಆಗಿ ನಟಿಸಿ ಕಿರುತೆರೆ ಲೋಕದಲ್ಲಿ ಜನಪ್ರಿಯತೆ ಗಿಟ್ಟಿಸಿಕೊಂಡಿರುವ ಅನ್ವಿತಾ ಸಾಗರ್ ಅವರು ಇನ್ನು ಮುಂದೆ ಮಲ್ಲಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಧಾರಾವಾಹಿಯ ಪ್ರೋಮೋ ರಿಲೀಸ್ ಆಗಿದ್ದು ಮಲ್ಲಿಯಾಗಿ ಅನ್ವಿತಾ ಸಾಗರ್ ಕಾಣಿಸಿಕೊಂಡಿರುವುದು ಅಮೃತಧಾರೆ ವೀಕ್ಷಕರಿಗೆ ಖುಷಿ ನೀಡಿದೆ.
"ಮಲ್ಲಿ ಪಾತ್ರದಲ್ಲಿ ಅಭಿನಯಿಸುತ್ತಿರುವುದಕ್ಕೆ ನನಗೆ ನಿಜವಾಗಿಯೂ ಖುಷಿಯಿದೆ. ಯಾಕೆಂದರೆ ಮಲ್ಲಿ ಪಾತ್ರಕ್ಕೆ ಅದರದೇ ಆದ ಒಂದು ಮಹತ್ವವಿದೆ. ಇದರ ಜೊತೆಗೆ ಒಂದು ಭಯವೂ ಕೂಡಾ ನನಗಿದೆ. ಮಲ್ಲಿ ಮಾತನಾಡುವ ಭಾಷೆ ಬೇರೆ ತರದ್ದು. ಪಕ್ಕಾ ಹಳ್ಳಿ ಹುಡುಗಿ ಮಾತನಾಡುವ ಭಾಷೆಯದು. ಭಾಷೆಯ ಜೊತೆಗೆ ಮಲ್ಲಿಯಲ್ಲಿರುವ ಮುಗ್ಧತೆಯನ್ನು ಕೂಡಾ ನಾನು ಕ್ಯಾರಿ ಮಾಡಬೇಕು. ಅದು ನನಗಿರುವ ಸವಾಲು" ಎಂದು ಫಿಲ್ಮ್ಬೀಟ್ ಕನ್ನಡ ಜೊತೆಗಿನ ಸಂದರ್ಶನದಲ್ಲಿ ಅನ್ವಿತಾ ಸಾಗರ್ ಹೇಳಿದ್ದಾರೆ.

"ಈ ಮೊದಲು ಮಲ್ಲಿಯಾಗಿ ಅಭಿನಯಿಸುತ್ತಿದ್ದ ರಾಧಾ ಭಗವತಿ ಅವರು ಅವರದ್ದೇ ಆದ ಫ್ಯಾನ್ ಬೇಸ್ ಹೊಂದಿದ್ದರು. ಹಳ್ಳಿ ಹುಡುಗಿಯ ಪಾತ್ರವಾದರೂ ಅವರದೇ ಆದ ಸ್ಟ್ಯಾಂಡರ್ಡ್ ಕೂಡಾ ಮೈನ್ ಟೈನ್ ಮಾಡಿದ್ದಾರೆ. ಸಹಜವಾಗಿ, ತುಂಬಾ ಚೆನ್ನಾಗಿ ಆಕೆ ಅಭಿನಯಿಸುತ್ತಿದ್ದ ಕಾರಣ ಮಲ್ಲಿ ಪಾತ್ರ ಸಾಕಷ್ಟು ಜನಪ್ರಿಯತೆಯನ್ನು ಗಿಟ್ಟಿಸಿಕೊಂಡಿದೆ" ಎಂದು ಮಲ್ಲಿ ಪಾತ್ರದ ಮೂಲಕ ವೀಕ್ಷಕರನ್ನು ರಂಜಿಸುವುದಕ್ಕೆ ಎಂಟ್ರಿ ಕೊಟ್ಟಿರುವ ಅನ್ವಿತಾ ಸಾಗರ್ ಹೇಳುತ್ತಾರೆ.
"ಇನ್ನು ಮಲ್ಲಿ ಎಂದ ತಕ್ಷಣ ವೀಕ್ಷಕರ ಮನಸ್ಸಲ್ಲಿ ರಾಧಾ ಭಗವತಿ ಅವರ ಮುಖವೇ ಬರುತ್ತದೆ. ಹಾಗಾಗಿ ಅವರು ನನ್ನನ್ನು ಮಲ್ಲಿಯಾಗಿ ಸ್ವೀಕರಿಸುವುದಕ್ಕೆ ಕೊಂಚ ಸಮಯಾವಕಾಶ ಬೇಕಾಗುತ್ತದೆ. ನಾವು ಎಷ್ಟು ಕಷ್ಟ ಪಟ್ರು ಒಂದು ಕಂಪೇರಿಸನ್ ಶುರುವಾಗುತ್ತೆ. ಯಾರು ಬೆಟರ್ ಅನ್ನುವುದು ಚರ್ಚೆಯಾಗುತ್ತದೆ. ಒಮ್ಮೆಗೆ ಬೇಜಾರು ಆದರೂ, ಜನ ಸ್ವೀಕರಿಸಿದಾಗ ಎಲ್ಲವೂ ಸರಿಯಾಗುತ್ತೆ" ಎನ್ನುತ್ತಾರೆ ಅನ್ವಿತಾ ಸಾಗರ್.
"ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಗಟ್ಟಿಮೇಳ ಧಾರಾವಾಹಿಯಲ್ಲಿ ಆದ್ಯಾ ಆಗಿ ನಾನು ನಟಿಸಿದ್ದೆ. ಇದೀಗ ಮಲ್ಲಿಯಾಗಿ ಮತ್ತೆ ಜೀ ಕನ್ನಡಕ್ಕೆ ಮರಳಿ ಬರುತ್ತಿರುವುದು ನನಗಂತೂ ಖುಷಿ ನೀಡಿದೆ. ನನಗಿಂತಲೂ ಜಾಸ್ತಿ ನನ್ನ ಕುಟುಂಬದವರು, ಕಿರುತೆರೆ ವೀಕ್ಷಕರು ಜೀ ಕನ್ನಡಕ್ಕೆ ಬನ್ನಿ ಎಂದು ಹೇಳುತ್ತಿದ್ದರು. ಬಹುಶಃ ಮಲ್ಲಿ ರೋಲ್ ಮೂಲಕವೇ ನಾನು ಮತ್ತೆ ಜೀ ಕನ್ನಡಕ್ಕೆ ಬರಬೇಕು ಎಂದಿತ್ತೋ ಏನೋ!" ಎಂದು ಜೀ ಕನ್ನಡಕ್ಕೆ ತಮ್ಮ ಕಂ ಬ್ಯಾಕ್ ಆದ ಬಗೆಗೆ ಈಕೆ ಹೇಳಿಕೊಂಡಿದ್ದಾರೆ.
"ಅಂದ ಹಾಗೇ ಮಲ್ಲಿ ಪಾತ್ರದಲ್ಲಿ ನಟಿಸುವ ಅವಕಾಶ ಬಂದಾಗ ಖುಷಿಗಿಂತಲೂ ಕನ್ಫ್ಯೂಶನ್ ಜಾಸ್ತಿ ಇತ್ತು. ಆದರೆ ಒಂದು ಒಳ್ಳೆಯ ಪಾತ್ರದ ಮೂಲಕ ಜೀ ಕನ್ನಡ ವಾಹಿನಿಯಲ್ಲಿ ಕಾಣಿಸಿಕೊಳ್ಳಬೇಕು ಎಂದು ನಾನು ತುಂಬಾ ಸಮಯದಿಂದ ಅಂದುಕೊಂಡಿದ್ದೆ. ಹಾಗಾಗಿ ನಟಿಸುವ ಅವಕಾಶ ಬಂದಾಗ ಓಕೆ ಎಂದೆ. ನೋಡೋಣ ಏನಾಗುತ್ತೆ ಅಂತ ಎಂದೆನಿಸಿತು. ಎಟ್ ದಿ ಎಂಡ್ ಆಫ್ ದಿ ಡೇ.. ಐ ವಿಲ್ ಗಿವ್ ಮೈ ಬೆಸ್ಟ್ ಅಂತ ಗೊತ್ತು" ಎಂದು ಹೇಳುತ್ತಾರೆ ಅನ್ವಿತಾ ಸಾಗರ್.


Click it and Unblock the Notifications











