Exclusive: "ಅನಿರುದ್ದ್ ಸರ್ ಜೊತೆ ನಟಿಸಿದ್ದು ದಾದಾ ಜೊತೆ ಅಭಿನಯಿಸಿದಂತಿತ್ತು".. ಕೊನೆ ದಿನ ಮೇಘಾ ಭಾವುಕ
ಕೊನೆಗೂ 'ಜೊತೆ ಜೊತೆಯಲಿ' ಧಾರಾವಾಹಿ ಮುಕ್ತಾಯವಾಗ್ತಿದೆ. ಈ ವಾರವೇ ಧಾರಾವಾಹಿ ಕೊನೆಯಾಗಲಿದ್ದು ಮುಂದಿನ ವಾರದಿಂದ ಜೀ ಕನ್ನಡ ವಾಹಿನಿಯಲ್ಲಿ ರಾತ್ರಿ 10 ಗಂಟೆಗೆ ಹೊಸ ಧಾರಾವಾಹಿ ಪ್ರಸಾರವಾಗಲಿದೆ. ಭಾನುವಾರವೇ ಚಿತ್ರೀಕರಣ ಮುಕ್ತಾಯವಾಗಿದ್ದು ತಂಡ ಕೊನೆ ದಿನ ಬಹಳ ಭಾವುಕವಾಗಿದೆ. ಈ ಬಗ್ಗೆ ಅನು ಸಿರಿಮನೆ ಪಾತ್ರಧಾರಿ ಮೇಘಾ ಶೆಟ್ಟಿ ಫಿಲ್ಮಿಬೀಟ್ ಜೊತೆ ಮಾತನಾಡಿದ್ದಾರೆ.
ಈ ಮೆಗಾ ಧಾರಾವಾಹಿಯಲ್ಲಿ ನಟಿಸಿದ ಅಷ್ಟು ಜನಕ್ಕೆ ಒಳ್ಳೆ ನೇಮು, ಫೇಮು ಸಿಕ್ಕಿತ್ತು. ಅದರಲ್ಲೂ ಮುಖ್ಯವಾಗಿ ಹೊಸ ಪ್ರತಿಭೆ ಮೇಘಾ ಶೆಟ್ಟಿ ಇದೇ ಧಾರಾವಾಹಿಯಿಂದ ಮನೆ ಮಾತಾಗಿದ್ದಾರೆ. ಅನು ಸಿರಿಮನೆ ಪಾತ್ರದಲ್ಲೇ ಜನ ಆಕೆಯನ್ನು ಗುರ್ತಿಸುವಂತಾಯಿತು. ಇದೀಗ ಕನ್ನಡ ಸಿನಿಮಾಗಳಲ್ಲೂ ಅವಕಾಶ ಪಡೆದುಕೊಳ್ಳುತ್ತಿದ್ದಾರೆ. 4 ವರ್ಷಗಳ ಕಾಲ 'ಜೊತೆ ಜೊತೆಯಲಿ' ಧಾರಾವಾಹಿ ಫ್ಯಾಮಿಲಿ ಜೊತೆಯಾಗಿ ಮೇಘಾ ಇದ್ದರು. ನಟ ಅನಿರುದ್ಧ್ ತಂಡದ ಜೊತೆ ಕಿರಿಕ್ ಮಾಡಿಕೊಂಡು ಹೊರಬಂದ್ರು ಮೇಘಾ ಮುಂದುವರೆದರು.

900ಕ್ಕೂ ಅಧಿಕ ಎಪಿಸೋಡ್ಗಳಲ್ಲಿ ನಟಿಸಿದ್ದಾರೆ. ಓದುತ್ತಿದ್ದ ದಿನಗಳಲ್ಲೇ ಜೀ ವಾಹಿನಿಯಿಂದ 'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ನಟಿಸುವ ಅವಕಾಶ ಹುಡಕಿ ಹೋಗಿತ್ತು. ಈ 4 ವರ್ಷಗಳ ಜರ್ನಿಯನ್ನು ಮರೆಯೋಕೆ ಸಾಧ್ಯವಿಲ್ಲ ಎಂದು ಮೇಘಾ ಹೇಳಿದ್ದಾರೆ. ಆಕೆ ಜೊತೆಗಿನ ಸಣ್ಣ ಸಂದರ್ಶನ ಇಲ್ಲಿದೆ.
4 ವರ್ಷಗಳ ಧಾರಾವಾಹಿ ಅನುಭವ ಹೇಗಿತ್ತು?
"ಇವತ್ತು ನಾನು ಏನು ಆಗಿದ್ದಿನೋ ಅದಕ್ಕೆ ಕಾರಣ 'ಜೊತೆ ಜೊತೆಯಲಿ' ಧಾರಾವಾಹಿ. ಇವತ್ತು ನಾನು ಸಿನಿಮಾಗಳಲ್ಲಿ ನಟಿಸ್ತಿದ್ದೀನಿ ಅಂದ್ರೆ, ನಾಲ್ಕು ಜನರ ಆರ್ಶಿವಾದ, ಪ್ರೀತಿ ಸಿಕ್ಕಿದೆ ಅಂದ್ರೆ ಅದಕ್ಕೆಲ್ಲಾ ಮುಖ್ಯ ಕಾರಣ ಈ ಧಾರಾವಾಹಿ. ಮೊದಲ ಧಾರಾವಾಹಿಯಲ್ಲೇ ಇಷ್ಟು ಜನಪ್ರಿಯತೆ ಸಿಕ್ಕಿದೆ. ಜನ ತಮ್ಮ ಮನೆ ಮಗಳ ತರ ನನ್ನನ್ನು ಒಪ್ಪಿಕೊಂಡಿದ್ದಾರೆ. ಈ 4 ವರ್ಷ ನನಗೆ ಮರೆಯೋಕೆ ಸಾಧ್ಯವಿಲ್ಲ. ನನ್ನ ಫ್ಯಾಮಿಲಿ ಬಿಟ್ಟರೆ ಈ ತಂಡ ನನಗೆ 2ನೇ ಫ್ಯಾಮಿಲಿ ಅಂತಾಗಿತ್ತು. ಕೊನೆ ದಿನ ಬಹಳ ಎಮೋಷನಲ್ ಆಗಿಬಿಟ್ಟಿದ್ದೆ.

ಅನು ಸಿರಿಮನೆ ಪಾತ್ರದ ಬಗ್ಗೆ ಹೇಳಿ?
"ಆ ಪಾತ್ರವೇ ನಾನಾಗಿ ಬಿಟ್ಟಿದ್ದೆ. ಈಗ ಪಾತ್ರ ಬಿಟ್ಟು ಹೊರ ಬಂದು ನಾನು ಮೇಘಾ ಶೆಟ್ಟಿ ಆಗಿ ನನ್ನ ಲೈಫ್ ಲೀಡ್ ಮಾಡಬೇಕು ಈಗ. ಏನು ಗೊತ್ತಿಲ್ಲದೇ ಹೋಗಿ ಒಂದು ಪಾತ್ರಕ್ಕೆ ಅಂಟಿಕೊಂಡು ನಟಿಸೋದು ಅಂದ್ರೆ ಅದೊಂದು ಅದ್ಭುತ ಅನುಭವ. ಜೀ ಚಾನಲ್ ನನಗೆ ಬಹಳ ಒಳ್ಳೆ ಪಾತ್ರ ಕೊಡ್ತು. ನಾನು ಅದಕ್ಕೆ ಯಾವಾಗಲೂ ಚಿರಋಣಿ ಆಗಿರುತ್ತೀನಿ. ಜನ ಆ ಪಾತ್ರವನ್ನು ಬಹಳ ಇಷ್ಟಪಟ್ಟು ನೋಡುತ್ತಾ ಬಂದರು.
ಪಾತ್ರ ಸಿಕ್ಕಿದ್ದು, ನಟನೆ ಆರಂಭಿಸಿದ್ದು ಹೇಗೆ?
"ನಾನು ಓದುವಾಗಲೇ ಜೀ ವಾಹಿನಿಯಿಂದ ನನಗೆ ಈ ಅವಕಾಶ ಸಿಕ್ತು. ಆ ರೀತಿ ಆಯ್ಕೆ ಆಗಿದ್ದೆ. ನಂತರ ವರ್ಕ್ಶಾಪ್ ಎಲ್ಲಾ ಮಾಡಿ ನಂತರ ಹೇಗೆ ನಟಿಸಬೇಕು ಅನ್ನೋದನ್ನೆಲ್ಲಾ ಹೇಳಿಕೊಟ್ಟರು. ಅಲ್ಲಿಂದ ಮುಂದೆ ಧಾರಾವಾಹಿ ಶುರುವಾಯಿತು., ಜನಪ್ರಿಯವಾಯಿತು, ಆ ಪಾತ್ರವನ್ನು ಎಲ್ಲರೂ ಒಪ್ಪಿಕೊಂಡರು ನಿಮಗೆ ಗೊತ್ತಿದೆ"
ಇಷ್ಟು ವರ್ಷಗಳಲ್ಲಿ ಏನೆಲ್ಲಾ ಬದಲಾವಣೆ ಆಗಿದೆ?
"ಈ ಧಾರಾವಾಹಿಯಲ್ಲಿ ಮೊದಲ ಶಾಟ್ನಲ್ಲಿ ನಟಿಸಿದ್ದು ನಾನೇ. ಕೊನೆ ಶಾಟ್ನಲ್ಲಿ ಕಾಣಿಸಿಕೊಂಡಿದ್ದು ನಾನೇ. ಈ ಬಗ್ಗೆ ಬಹಳ ಹಮ್ಮೆ ಇದೆ. ಖುಷಿ ಇದೆ. ಈ ಬಗ್ಗೆ ನಮ್ಮ ಮನೆಯಲ್ಲಿ ಎಲ್ಲರೂ ಬಹಳ ಹೆಮ್ಮೆ ಪಡುತ್ತಾರೆ. 4 ವರ್ಷ ನಿನ್ನ ಪರಿಶ್ರಮ್ಕೆ ಫಲ ಸಿಕ್ಕಿದೆ ಎಂದು ಎಲ್ಲರೂ ಹೇಳುತ್ತಿದ್ಧಾರೆ. ನಮ್ಮ ತಂಡ ಕೂಡ ಬಹಳ ಖುಷಿಯಿಂದ ನನ್ನ ಬೆನ್ನು ತಟ್ಟಿದೆ.
ದಿಢೀರ್ ಧಾರಾವಾಹಿ ಮುಗಿಸಲು ಕಾರಣ?
"ಜೀ ವಾಹಿನಿಯಲ್ಲಿ ಹೊಸ ಧಾರಾವಾಹಿಗಳು ಬರುತ್ತಿವೆ. 1000 ಎಪಿಸೋಡ್ ಮಾಡಬೇಕು ಎನ್ನುವುದು ತಂಡ ಪ್ಲ್ಯಾನ್ ಆಗಿತ್ತು. ಪ್ರೊಡಕ್ಷನ್ ಹೌಸ್ ಕೂಡ ಇದೇ ಲೆಕ್ಕಾಚಾರದಲ್ಲಿ ಇತ್ತು. ಹಾಗಾಗಿ ಎಲ್ಲರೂ ಒಪ್ಪಿ ಈಗ ಧಾರಾವಾಹಿ ಮುಗಿಸುತ್ತಿದ್ಧೇವೆ. ಚಾನಲ್ ಹಾಗೂ ಪ್ರೊಡಕ್ಷನ್ ಹೌಸ್ ಒಪ್ಪಿಗೆಯಂತೆ ಪ್ರೀತಿಯಿಂದ ಬೀಳ್ಕೊಟ್ಟಿದ್ದೇವೆ."
ಅನಿರುದ್ಧ್ ಅವರ ಜೊತೆ ನಟಿಸಿದ ಅನುಭವ?
"ಅನಿರುದ್ದ್ ಸರ್ ಜೊತೆ ನಟಿಸಿದ್ದು ಸಾಹಸ ಸಿಂಹ ವಿಷ್ಣುವರ್ಧನ್ ಅವರೊಟ್ಟಿಗೆ ನಟಿಸಿದಂತೆ ಭಾಸವಾಗುತ್ತಿತ್ತು. ದಾದಾ ಪ್ರತಿರೂಪ ಅವರಲ್ಲಿದೆ. ಮೊದಲ ಪ್ರಯತ್ನದಲ್ಲೇ ಅವರೊಟ್ಟಿಗೆ ನಟಿಸಿದ್ದು ಬಹಳ ಖುಷಿಯಾಯಿತು. ಬಹಳಷ್ಟು ವಿಚಾರಗಳನ್ನು ಹೇಳಿಕೊಟ್ಟರು. ನಾನು ಅವರಿಂದ ಬಹಳ ಕಲಿತ್ತಿದ್ದೇನೆ. ಒಬ್ಬರು ಮಾಡಿದ ಪಾತ್ರವನ್ನು ಮತ್ತೊಬ್ಬರು ಮುಂದುವರೆಸಿ ಗೆಲ್ಲೋದು ಬಹಳ ಕಷ್ಟ. ಹರೀಶ್ ರಾಜ್ ಸರ್ ಅದನ್ನು ಮಾಡಿ ತೋರಿಸಿದರು. ಅವರು ಕೂಡ ಒಳ್ಳೆ ವ್ಯಕ್ತಿ. ಅವರೊಟ್ಟಿಗೆ ಕೆಲಸ ಮಾಡಿದ್ದು ಕೂಡ ಒಳ್ಳೆಯ ಅನುಭವ"
ಮತ್ತೆ ಧಾರಾವಾಹಿಗಳಲ್ಲಿ ನಟಿಸ್ತೀರಾ?
"ಸದ್ಯಕ್ಕೆ ಆ ಬಗ್ಗೆ ಏನು ಯೋಚಿಸಿಲ್ಲ. ಸದ್ಯ ಸಿನಿಮಾಗಳ ಬಗ್ಗೆ ಗಮನ ಹರಿಸಿದ್ದೇನೆ. ಮನೆಯಲ್ಲಿ ಮಾತುಕತೆ ಮಾಡಿ ಧಾರಾವಾಹಿಯಲ್ಲಿ ನಟಿಸೋ ಬಗ್ಗೆ ನಿರ್ಧರಿಸಬೇಕು. ಸದ್ಯ 'ಕೈವ' ಹಾಗೂ 'ಆಪರೇಷನ್ ಲಂಡನ್ ಕೆಫೆ' ಸಿನಿಮಾಗಳಲ್ಲಿ ನಟಿಸುತ್ತಿದ್ದೇನೆ" ಎಂದಿದ್ದಾರೆ.


Click it and Unblock the Notifications











