ತಾರಾ ಮತ್ತು ಸುಧಾರಾಣಿ ಕಂಡಂತೆ ನೈಜ ಮಹಿಳೆಯ ಎತ್ತರ
ತಾರಾ ಅನುರಾಧಾ ಅವರು ನಟಿಯಾಗಿ ಮಾತ್ರವಲ್ಲ, ರಾಜಕಾರಣಿಯಾಗಿಯೂ ಗುರುತಿಸಿಕೊಂಡವರು. ಸಿನಿಮಾಗಳಲ್ಲಿ ನಾಯಕಿ ಪ್ರಾಧಾನ್ಯತೆಯ ಚಿತ್ರಗಳಿಗೆ ಜೀವವಾದ ಕೀರ್ತಿ ಹೊಂದಿರುವ ತಾರಾ ಈ ಎಲ್ಲ ಕಾರಣಗಳಿಂದಾಗಿಯೇ ಮಹಿಳಾ ದಿನಾಚರಣೆಯ ಬಗ್ಗೆ ಮಾತನಾಡಲು ಸೂಕ್ತ ವ್ಯಕ್ತಿಯಾಗಿ ಕಾಣಿಸುತ್ತಾರೆ. ಅವರು ಫಿಲ್ಮಿಬೀಟ್ ಗೆ ಪ್ರತಿಕ್ರಿಯಿಸಿದ್ದು ಹೀಗೆ.
"ನಮ್ಮ ದೇಶದಲ್ಲಿ ಪಾಶ್ಚಾತ್ಯ ಶೈಲಿಯಿಂದ ಆಚರಿಸಲ್ಪಡುತ್ತಿರುವ ಯಾವುದೇ ದಿನಾಚರಣೆಗಳ ಬಗ್ಗೆ ನನಗೆ ಆಸಕ್ತಿ ಇಲ್ಲ. ಆದರೆ ಮಹಿಳಾ ದಿನಾಚರಣೆಯ ಬಗ್ಗೆ ಹೇಳಲು ಒಂದಷ್ಟು ವಿಚಾರ ಇದೆ. ಅದಕ್ಕೆ ಕಾರಣ ಹಲವಾರು ವಿಷಯಗಳನ್ನು ಮಂಥನ ಮಾಡಿಕೊಳ್ಳುವಂಥ ಸಂದರ್ಭವನ್ನು ಅದು ಸೃಷ್ಟಿಸುತ್ತದೆ. ಹಲವಾರು ಸಂಗತಿಗಳನ್ನು ವಿಚಾರ ಮಾಡುವಂಥ ಕಾಲಘಟ್ಟಕ್ಕೆ ನಾವು ಬಂದಿದ್ದೇವೆ.
ಮಹಿಳೆ ಈಗಾಗಲೇ ಎಲ್ಲ ರಂಗಗಳಲ್ಲಿಯೂ ಹೆಸರು ಮಾಡಿದ್ದಾಳೆ. ಆದರೆ ಎಲ್ಲೋ ಒಂದು ಕಡೆ ನಮಗೆ ನ್ಯಾಯವಾಗಿ ಸಿಗಬೇಕಾದಂಥದ್ದು ಸಿಗುತ್ತಿಲ್ಲ ಎನ್ನುವುದು ಅಷ್ಟೇ ಸತ್ಯ. ಸುಮ್ಮನೇ ಹೋರಾಟ, ಮಾತುಗಳು ನಡೆಯುತ್ತವೆ. ಆದರೆ ನಾನು ರಾಜಕಾರಣಿಯಾಗಿಯೂ ಇರುವುದರಿಂದ ಮತದಾರರ ಪರ್ಸೆಂಟೇಜ್ ದೊಡ್ಡ ಮಟ್ಟದಲ್ಲಿದೆ ಎನ್ನುವುದನ್ನು ಬಲ್ಲೆ. ಮಹಿಳೆಯರ ಪ್ರತಿನಿಧಿಯಾಗಿ ಮಹಿಳೆಯರು ಮಾತ್ರ ತುಂಬ ಕಡಿಮೆ ಪ್ರಮಾಣದಲ್ಲಿದ್ದಾರೆ.

ಯಾವುದೇ ಒಂದು ವೇದಿಕೆಯಲ್ಲಿ ಕುಳಿತಾಗ ನೋಡಿದರೂ ಹತ್ತು ಹದಿನೈದು ಮಂದಿ ಪುರುಷರ ನಡುವೆ ಒಂದಿಬ್ಬರು ಮಹಿಳೆಯರು ಹಿಂದುಗಡೆ ಎಲ್ಲೋ ಕುಳಿತಿರುತ್ತಾರೆ. ಹಾಗಾಗಿ ಪ್ರಗತಿಯ ನಡುವೆಯೂ ಮಹಿಳೆಗೆ ಅನ್ಯಾಯ ಆಗುತ್ತಲೇ ಇದೆ. ಮಹಿಳೆಯರಿಗೆ ನ್ಯಾಯವಾಗಿ ಸಿಗಬೇಕಾದಂಥ ಹಕ್ಕುಗಳು, ಸ್ಥಾನಮಾನಗಳು ಇಂದಿಗೂ ಸಿಗುತ್ತಿಲ್ಲ. ಸಿಕ್ಕಾಗಲೇ ಮಹಿಳಾ ದಿನಾಚರಣೆ ಅರ್ಥಪೂರ್ಣವಾದೀತು.''
ಸಂಬಂಧಗಳ ನಡುವಿನ ಮಂದಹಾಸವೇ ಮಹಿಳಾ ಸಂಭ್ರಮ -ಸುಧಾರಾಣಿ
ನಟಿ ಸುಧಾರಾಣಿಯವರು ಸ್ಟಾರ್ ಗಳ ನಾಯಕಿಯಾಗಿದ್ದಾಗಲೂ, ಮಹಿಳಾ ಪ್ರಧಾನ ಪಾತ್ರಗಳಲ್ಲೇ ನಟಿಸಿ ಗಮನ ಸೆಳೆದಿದ್ದರು, ಅಚ್ಚರಿ ಮೂಡಿಸಿದ್ದರು. ಇಂದಿಗೂ ಅವರ ನಟನೆಯ ಏಳೆಂಟು ಚಿತ್ರಗಳು ತೆರೆಗೆ ಬರಲು ತಯಾರಿ ಕಾಣುತ್ತಿವೆ. ಇದರ ನಡುವೆ ಅವರ ಮಗಳು ನಿಧಿ ಪಿಯುಸಿ ಪರೀಕ್ಷೆಯ ಸಿದ್ಧತೆಯಲ್ಲಿದ್ದಾಳೆ. ಮುಂದಿನ ತಿಂಗಳು ಒಂದಷ್ಟು ಟ್ರಾವೆಲ್ ಮಾಡುವ ಯೋಜನೆ ಹಾಕಿದ್ದಾರೆ. ಅದು ಮುಗಿಸಿದೊಡನೆ ಮತ್ತೆ ಅಡ್ಮಿಶನ್ ಗೆ ತಯಾರಿ.

ಹೀಗೆ ಸಾಕಷ್ಟು ಪರ್ಸನಲ್ ಕೆಲಸಗಳ ನಡುವೆಯೂ ನಿಜವಾದ ಮಾದರಿ ಮಹಿಳೆ ಎನಿಸುತ್ತಾರೆ. ಬದುಕಿನ ಸವಾಲುಗಳನ್ನು ಎದುರಿಸಿ ನಿಂತಿರುವ, ನಿಂತು ಗೆದ್ದಿರುವ ಸುಧಾರಾಣಿ ಮಹಿಳಾ ದಿನಾಚರಣೆಯ ಬಗ್ಗೆ ಫಿಲ್ಮ್ ಬೀಟ್ ಜೊತೆಗೆ ಏನು ಹೇಳಿದ್ದಾರೆ ಗಮನಿಸೋಣ.
"ಮಹಿಳಾ ಹಕ್ಕುಗಳ ಕುರಿತಾದ ಅನಿಸಿಕೆಗಳ ಬಗ್ಗೆ ಮಹಿಳೆಯರಲ್ಲೇ ಭಿನ್ನಾಭಿಪ್ರಾಯಗಳು ಇರುತ್ತವೆ. ಯಾರೇ ಆಗಲಿ ಅವರಿಗೆ ಮೊದಲು ಬೇಸಿಕ್ ಎಜುಕೇಶನ್ ಬೇಕಾಗುತ್ತದೆ. ಆರ್ಥಿಕ ಸ್ವಾತಂತ್ರ್ಯ ಬೇಕಾಗುತ್ತದೆ. ಎಲ್ಲಕ್ಕಿಂತ ಮೊದಲು ಒಂದು ಹೆಣ್ಣು ಮತ್ತೊಬ್ಬಳನ್ನು ಗೌರವಿಸುವುದನ್ನು ಕಲಿಯಬೇಕು. ಯಾಕೆಂದರೆ ಹೆಣ್ಣಿಗೆ ಹೆಣ್ಣೇ ಶತ್ರು ಎನ್ನುವ ಮಾತು ಈಗಲೂ ನಿಜ.
ವರದಕ್ಷಿಣೆಗಾಗಿ ಅತ್ತೆ ಸೊಸೆ ಜಗಳ, ತಾಯಿಯೇ ಮಗಳನ್ನು ಮಗನಿಗಿಂತ ಕೀಳಾಗಿ ಕಾಣೋದು, ಆಡ್ಕೊಳ್ಳೋದನ್ನು ಬಿಟ್ಟರೆ ನನ್ನ ಪಾಲಿಗೆ ಅದೇ ಸ್ವಾತಂತ್ರ್ಯ'' ಎನ್ನುವುದು ಸುಧಾರಾಣಿಯವರ ಅಭಿಪ್ರಾಯ


Click it and Unblock the Notifications











