Don't Miss!
- Lifestyle ಗಾಯ ಗುಣವಾಗಲು, ದೃಷ್ಟಿ ಸುಧಾರಣೆ ಸೇರಿ ಕೀವಿ ಹಣ್ಣಿನ ಲಾಭ ಎಷ್ಟಿದೆ ಗೊತ್ತಾ?
- News ಕುಡಿಯುವ ನೀರಿಲ್ಲದೇ ಜನ ಬೆಂಗಳೂರಿಗೆ ಬಾಯ್ ಹೇಳುತ್ತಿದ್ದಾರೆ: ಆರ್.ಅಶೋಕ್
- Sports ರೋಹಿತ್ vs ಹಾರ್ದಿಕ್: ಸತತ ಸೋಲಿನ ನಡುವೆಯೇ ಮುಂಬೈ ಇಂಡಿಯನ್ಸ್ ಇಬ್ಭಾಗ!?
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಇದು ಆದಿಲಕ್ಷ್ಮಿಯ ಹಾದಿಯಲ್ಲಿನ ನಮ್ಮ ಪಯಣ: ನಿರ್ದೇಶಕಿ ವಿ ಪ್ರಿಯಾ
ಕನ್ನಡದಲ್ಲಿ ಪ್ರಸಿದ್ಧಿ, ಪ್ರಶಸ್ತಿಗಳನ್ನು ಬಾಚಿ ಮೆರೆಯುತ್ತಿರುವ ನಟಿ ಎಂದರೆ ರಾಧಿಕಾ ಪಂಡಿತ್. ಅವರ ನಟನೆಯಲ್ಲಿ ಈ ವಾರ ತೆರೆಗೆ ಬರುತ್ತಿರುವ ಚಿತ್ರ 'ಆದಿಲಕ್ಷ್ಮಿ ಪುರಾಣ'. ಸಿನಿಮಾದ ಹೆಸರೇ ಇದು ಒಂದು ಮಹಿಳಾ ಪ್ರಧಾನ ಚಿತ್ರ ಎನ್ನುವುದನ್ನು ಸೂಚಿಸುತ್ತಿದೆ. ವಿಶೇಷ ಏನೆಂದರೆ ಈ ಚಿತ್ರದ ನಿರ್ದೇಶಕಿ ಕೂಡ ಮಹಿಳೆಯೇ.
ಸುಮಾರು 15 ವರ್ಷಗಳ ಹಿಂದೆ ತಮಿಳಿನಲ್ಲಿ 'ಕಂಡನಾಳ್ ಮುದಲ್' ಎನ್ನುವ ಚಿತ್ರದ ಮೂಲಕ ನಿರ್ದೇಶಕಿಯಾಗಿ ಎಂಟ್ರಿ ನೀಡಿದ ಅವರು ಬಳಿಕ 'ಕಣ್ಣಾಮೂಚಿ ಏನಡ' ಎಂಬ ಚಿತ್ರಕ್ಕೂ ನಿರ್ದೇಶಕಿಯಾಗಿದ್ದರು. ಶುದ್ಧ ಹಾಸ್ಯದ ಕೌಟುಂಬಿಕ ಪ್ರೇಮಕತೆಗಳಿಂದ ಗಮನ ಸೆಳೆದಿರುವ ಪ್ರಿಯಾ ದಶಕದ ಬಳಿಕ ಮತ್ತೊಂದು ಸಿನಿಮಾವನ್ನು ಕೈಗೆತ್ತಿಕೊಂಡಿದ್ದಾರೆ.
ಈ ಬಾರಿ ಅವರು ಕನ್ನಡದಲ್ಲಿ ಪ್ರಾಜೆಕ್ಟ್ ಕೈಗೆತ್ತಿಕೊಂಡಿರುವುದು ವಿಶೇಷ. ಹಾಗೆ ನೋಡಿದರೆ ಪ್ರಿಯಾ ವೃತ್ತಿ ಬದುಕು ಶುರುಮಾಡಿದ್ದು ಮಣಿರತ್ನಂ ಅವರ ಅಸಿಸ್ಟೆಂಟ್ ಆಗಿ. ಮಣಿರತ್ನಂ ಅವರು ಕೂಡ ಕನ್ನಡ ಚಿತ್ರರಂಗದಿಂದಲೇ ವೃತ್ತಿ ಬದುಕು ಆರಂಭಿಸಿದವರು. ಇದೀಗ ಪ್ರಿಯಾ ಕೂಡ ಒಂದು ಕೌಟುಂಬಿಕ ಚಿತ್ರದ ಜತೆಗೆ ಆಗಮಿಸಿದ್ದಾರೆ. ನಿರ್ದೇಶಕಿಯಾಗಿ ಅವರ ಅನುಭವದ ಬಗ್ಗೆ ಫಿಲ್ಮಿಬೀಟ್ ಜತೆಗೆ ನಡೆಸಿರುವ ವಿಶೇಷ ಮಾತುಕತೆ ಇದು.
ನಿರ್ದೇಶನದ ಮೂರನೇ ಚಿತ್ರಕ್ಕೆ ಇಷ್ಟೊಂದು ಗ್ಯಾಪ್ ಆಗಲು ಕಾರಣವೇನು?
ಎರಡನೇ ಚಿತ್ರ ಮುಗಿಸಿದೊಡನೆ ಹೊಸ ಚಿತ್ರದ ಪ್ರಾಜೆಕ್ಟ್ ವರ್ಕ್ ಶುರುವಾಗಿತ್ತು. ಆದರೆ ಅದು ಅರ್ಧದಲ್ಲೇ ನಿಂತು ಹೋಯಿತು. ಮತ್ತೊಂದು ಚಿತ್ರವೂ ಹಾಗೆಯೇ ಆಯಿತು. ಹಾಗಂತ ನಾನು ಚಿತ್ರರಂಗದಿಂದ ದೂರ ಹೋಗಲು ನಿರ್ಧರಿಸಿರಲಿಲ್ಲ. ಆದರೆ ವೈಯಕ್ತಿಕ ಕಾರಣಗಳಿಂದಾಗಿ ಸ್ವಲ್ಪ ಗ್ಯಾಪ್ ತೆಗೆದುಕೊಳ್ಳಬೇಕಾಯಿತು. ಆದರೆ ಈ ಸಂದರ್ಭದಲ್ಲಿ ಒಂದೆರಡು ಕತೆ ಚಿತ್ರಕತೆಗಳಲ್ಲಿ ತೊಡಗಿಸಿಕೊಂಡೆ.
ಆದಿಲಕ್ಷ್ಮಿ ಪುರಾಣ ಚಿತ್ರದ ಒಂದು ಎಳೆಯನ್ನು ಹೇಗೆ ಹೇಳುತ್ತೀರಿ?
ಒಂದು ಲೈನ್ ನಲ್ಲಿ ಹೇಳುವುದಾದರೆ ಆದಿಲಕ್ಷ್ಮಿಯ ಬದುಕಿನ ಪಯಣ ಎಂದು ಮಾತ್ರ ಹೇಳಬಹುದು. ಅಷ್ಟೇ. ತುಂಬ ಕಾಲದಿಂದ ಇದರ ಒಂದು ಎಳೆ ಮನಸಿನಲ್ಲೇ ಇತ್ತು. ಆದರೆ ಇತ್ತೀಚೆಗಷ್ಟೇ ಕತೆಯನ್ನು ಡೆವಲಪ್ ಮಾಡಿ ಈ ರೀತಿ ಕಾರ್ಯರೂಪಕ್ಕೆ ಬಂದಿತು ಎನ್ನಬಹುದು.
ಚಿತ್ರದಲ್ಲಿ ನಿರೂಪ್ ಭಂಡಾರಿ ಕೂಡ ಪ್ರಧಾನ ಪಾತ್ರದಲ್ಲಿ ನಟಿಸಿರುವ ಬಗ್ಗೆ?
ಹೌದು ನಿರೂಪ್ ಅವರು ಅಂಡರ್ ಕವರ್ ಪೊಲೀಸ್ ಆಫೀಸರ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಈ ಕತೆ ಬ್ಯಾಕ್ ಡ್ರಾಪ್ ನಲ್ಲಿ ಬರೋದು. ಬೇಸಿಕಲಿ ಇದು ಒಂದು ಲವ್ ಸ್ಟೋರಿ. ಸಿನ್ಸಿಯರ್ ಆಫಿಸರ್ ಮತ್ತು ಪ್ಲೇ ಫುಲ್ ಗರ್ಲ್ ನಡುವಿನ ಘಟನೆಗಳು ಚಿತ್ರದ ಪ್ರಮುಖ ಘಟ್ಟದೊಂದಿಗೆ ಮುಂದುವರಿಯುತ್ತವೆ.
ನಿಮ್ಮ ಕತೆಗೆ ರಾಧಿಕಾ ಮತ್ತು ನಿರೂಪ್ ಅವರನ್ನು ನಿರ್ಮಾಪಕರು ಆಯ್ಕೆ ಮಾಡಿದಾಗ ನಿಮಗೆ ಏನು ಅನಿಸಿತು?
ಖಂಡಿತವಾಗಿಯೂ ಉತ್ತಮ ಆಯ್ಕೆ ಎಂದೇ ಅನಿಸಿತು. ನಿರ್ಮಾಪಕರು ಹೇಳುವಾಗಲೇ ನಾನು ರಾಧಿಕಾ ಅವರ ನಟನೆಯ ಕ್ಲಿಪಿಂಗ್ಸ್ ನೋಡಿದ್ದೆ. ನನಗೆ ಇಷ್ಟವಾಗಿದ್ದರು. ಯಾಕೆಂದರೆ ಈ ಚಿತ್ರದಲ್ಲಿ ಸಂತೋಷ, ನೋವು, ಡ್ರಾಮ.. ಹೀಗೆ ವೈವಿಧ್ಯತೆಯ ಅಭಿನಯಬೇಕಿತ್ತು. ರಾಧಿಕಾ ನಟಿಸಲು ಶುರು ಮಾಡಿದ ಮೇಲೆಯಂತೂ, ಆಕೆಯನ್ನು ಬಿಟ್ಟು ಬೇರೆ ಯೋಚನೆ ಇಲ್ಲ. ಹಾಗೆ ನಿರೂಪ್ ಕೂಡ ಅಷ್ಟೇ. ನಾನು ಕಂಡ ಹಾಗೆ ಅವರೊಬ್ಬ ರಿಯಲ್ ಲೈಫ್ ಜಂಟಲ್ ಮ್ಯಾನ್. ಚಿತ್ರದಲ್ಲಿ ಅವರ ಪಾತ್ರವೂ ಹಾಗೇ ಇತ್ತು. ಅದಕ್ಕೆ ತಕ್ಕಂತೆ ನಿರೂಪ್ ಜಾಸ್ತಿ ಡ್ರಾಮ ಮಾಡದಂಥ, ಸೆಟಲ್ ಆಗಿ ನಟಿಸುವ ರೀತಿ ಕೂಡ ನನಗೆ ಇಷ್ಟವಾಗಿತ್ತು.
ಆದರೆ ನೀವು ಕತೆ ಬರೆಯುವಾಗ ಪೃಥ್ವಿರಾಜ್ ಅವರನ್ನು ಕಲ್ಪಿಸಿಕೊಂಡಿದ್ದಿರ?
ಹೌದು. ಕತೆ ಮಾಡುವಾಗ ಮಲಯಾಳಂ ನಟ ಪೃಥ್ವಿರಾಜ್ ರಾಜ್ ಅವರನ್ನು ಈ ಪಾತ್ರದಲ್ಲಿ ಕಲ್ಪಿಸಿದ್ದೆ. ಅವರನ್ನು ಮಾತ್ರವಲ್ಲ ತುಂಬ ನಟರ ಬಗ್ಗೆಯೂ ಕಲ್ಪನೆ ಇರುತ್ತದೆ. ಆದರೆ ಫೈನಲಾಗಿ ಯಾರು ನಟಿಸಿದ್ದಾರೆ ಎನ್ನುವುದಕ್ಕಿಂತ ನಮ್ಮ ಕಲ್ಪನೆಗೆ ಜೀವ ನೀಡುವವರು ನಟಿಸಿದ್ದಾರೆಯೇ ಎನ್ನುವುದು ಮುಖ್ಯವಾಗುತ್ತದೆ. ಅಂಥ ಮ್ಯಾಜಿಕ್ ಇಲ್ಲಿ ಸಂಭವಿಸಿರುವ ಬಗ್ಗೆ ನನಗೆ ಕಾನ್ಫಿಡೆನ್ಸ್ ಇದೆ.
ನಿರೂಪ್ ಭಂಡಾರಿಯವರ ಚಿತ್ರಗಳನ್ನು ಈ ಮೊದಲು ನೋಡಿದ್ದಿರಾ?
ಹೌದು. 'ರಂಗಿತರಂಗ' ಚೆನ್ನೈನಲ್ಲಿಯೂ ತೆರೆಕಂಡಿತ್ತು. ಆಗ ಯಾರೋ ಅದು ಕನ್ನಡದಲ್ಲಿ ತುಂಬ ಹಿಟ್ ಆಗಿರುವ ಸಿನಿಮಾ ಎಂದು ತಿಳಿಸಿದರು. ಅದರಲ್ಲಿದ್ದ ಯಕ್ಷಗಾನದ ವೇಷ, ಕ್ಲಾಸಿ ಫ್ರೇಮ್ಸ್.. ಎಲ್ಲವೂ ಕಂಡಾಗ ನನಗೂ ಚಿತ್ರ ತುಂಬ ಡಿಫರೆಂಟ್ ಆಗಿದೆ ಎಂಬ ಭಾವ ಮೂಡಿಸಿತ್ತು. ಆದರೆ ಆಗ ನನಗೆ ಅದೇ ನಿರೂಪ್ ಜತೆಗೆ ಕೆಲಸ ಮಾಡುತ್ತೇನೆ ಎಂದು ಗೊತ್ತಿರಲಿಲ್ಲ. ಆದರೆ ಭೇಟಿಯಾದ ತಕ್ಷಣ ಅವರ ಚಿತ್ರವನ್ನು ಮೆಚ್ಚಿದ್ದಾಗಿ ಹೇಳಿಕೊಂಡೆ.
ಚಿತ್ರದ ಟ್ರೇಲರ್ ನೋಡಿದಾಗ ಗೊಂದಲಗಳ ಮೂಲಕವೇ ಕತೆ ಸಾಗುವಂತಿದೆ?
ಇದರಲ್ಲಿ ಷೇಕ್ಸ್ ಪಿಯರ್ ಶೈಲಿಯ ಕಾಮಿಡಿ ಆಫ್ ಎರರ್ಸ್ ರೀತಿ ಬಳಸಿದ್ದೇನೆ. ಒಂದು ತಪ್ಪಿನಿಂದ ಮತ್ತೊಂದು ತಪ್ಪಾಗೋದು, ಮಿಸ್ ಅಂಡರ್ಸ್ಟ್ಯಾಂಡಿಂಗ್ ಮುಂದುವರಿಯೋದು.. ಇವೆಲ್ಲವೂ ಇರುತ್ತದೆ.
ಈ ಚಿತ್ರಕ್ಕೆ ನಿರ್ದೇಶಕಿಯಾಗುವ ಮೊದಲು ಕನ್ನಡ ಚಿತ್ರೋದ್ಯಮದ ಕುರಿತಾದ ನಿಮ್ಮ ಅರಿವೇನಿತ್ತು?
ನನ್ನ ಚಿತ್ರದ ಛಾಯಾಗ್ರಾಹಕಿ ಪ್ರೀತಾ ವರ್ಷಗಳಿಂದ ನನಗೆ ಸ್ನೇಹಿತೆ. ಅವರು ಬೆಂಗಳೂರಿನಲ್ಲೇ ಇರುವವರಾಗಿದ್ದು, ಅವರ ಮೂಲಕ ಕನ್ನಡದಲ್ಲಿ ಇತ್ತೀಚೆಗೆ ಹೆಚ್ಚು ಹೆಚ್ಚು ಹೊಸ ಅಲೆಯ ಚಿತ್ರಗಳು ಬರುತ್ತಿರುವುದಾಗಿ ತಿಳಿದುಕೊಂಡಿದ್ದೆ. ಹಾಗೆ ನಾನು 'ಕಿರಿಕ್ ಪಾರ್ಟಿ', 'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಮೊದಲಾದ ಚಿತ್ರಗಳನ್ನು ನೋಡಿದೆ. ನಾವು ಕೂಡ ಇಂಥ ಹೊಸ ಅಲೆಯ ಚಿತ್ರಗಳನ್ನು ಮಾಡಲು ಕನ್ನಡದಲ್ಲಿ ಈಗ ಅವಕಾಶ ಇದೆ ಎನ್ನುವ ಅರಿವು ಆಗಲೇ ಆಯಿತು.
ಇದೀಗ ನಿಮಗೆ ಸಿಕ್ಕ ಅನುಭವದ ಪ್ರಕಾರ ಎರಡು ಚಿತ್ರೋದ್ಯಮಗಳ ನಡುವಿನ ವ್ಯತ್ಯಾಸವೇನು?
ಸಿನಿಮಾ ಎಂದು ಬಂದರೆ ಯಾವ ಇಂಡಸ್ಟ್ರಿಯೂ ಸಪರೇಟ್ ಅನಿಸಲ್ಲ. ಯಾಕೆಂದರೆ ಒಳ್ಳೆಯ ಸಿನಿಮಾ ಮಾಡಬೇಕು ಎಂಬ ಪ್ಯಾಷನ್ ಇಟ್ಟುಕೊಂಡು ಕೆಲಸ ಮಾಡುವ ಪ್ರತಿಯೊಬ್ಬರು ಒಂದೇ ರೀತಿಯಲ್ಲಿ ಡೆಡಿಕೇಟೆಡ್ ಆಗಿ ಕೆಲಸ ಮಾಡುವುದನ್ನು ಕಂಡಿದ್ದೇನೆ. ತಂತ್ರಜ್ಞರಿಗೆ ನೀಡುವಂಥ ಗೌರವ ಕೂಡ ಒಂದೇ ರೀತಿಯಲ್ಲಿರುತ್ತದೆ. ಇವುಗಳಲ್ಲಿ ಯಾವ ವ್ಯತ್ಯಾಸ ಕೂಡ ನಾನು ಕಂಡಿಲ್ಲ.
ಸಿನಿಮಾ ಶುರುವಾದ ಬಳಿಕ ನಾಯಕಿ ರಾಧಿಕಾ ಗರ್ಭಿಣಿಯಾದರು. ಇದರಿಂದಾಗಿ ಚಿತ್ರೀಕರಣ, ಪ್ರಚಾರದ ವಿಚಾರಗಳಲ್ಲಿ ಕಾಂಪ್ರಮೈಸ್ ಮಾಡಬೇಕಾಯಿತೇ?
ನಿಜಕ್ಕೂ ಇಲ್ಲ! ಚಿತ್ರೀಕರಣ ಮುಗಿಸುವ ಹಂತಕ್ಕೆ ಬಂದಾಗ ಅವರು ಗರ್ಭಿಣಿಯಾಗಿರುವ ವಿಚಾರ ತಿಳಿಯಿತು. ಹಾಗಾಗಿ ಆನಂತರದಲ್ಲಿ ಬದಲಾಯಿಸಬೇಕಾದಂಥ ದೃಶ್ಯಗಳೇನೂ ಇರಲಿಲ್ಲ. ಕೆಲವು ದೃಶ್ಯಗಳು ಮತ್ತು ಒಂದಷ್ಟು ಪ್ಯಾಚ್ ವರ್ಕ್ಸ್ ಇದ್ದವು. ಅವುಗಳನ್ನು ಚೆನ್ನಾಗಿ ಮುಗಿಸಿದ್ದೇವೆ. ಇದೀಗ ಪ್ರಚಾರ ಅಂದರೆ ಮಾಧ್ಯಮಗೋಷ್ಠಿಗೆ ಬಂದಿದ್ದನ್ನು ನೀವೇ ನೋಡಿರುತ್ತೀರಿ. ಹಾಗಾಗಿ ಅವರು ಗರ್ಭಿಣಿಯಾದ ಕಾರಣ ಚಿತ್ರಕ್ಕೆ ತೊಂದರೆ ಆಯಿತು ಎಂದರೆ ತಪ್ಪಾಗುತ್ತದೆ.
ಚಿತ್ರೀಕರಣದ ವೇಳೆ ನಡೆದಿರುವ, ನಿಮಗೆ ಮರೆಯಲಾಗದಂಥ ಘಟನೆ ಯಾವುದು?
ಪ್ರತಿ ದಿನವೂ ತುಂಬ ಎಂಜಾಯ್ ಮಾಡಿಕೊಂಡು ಚಿತ್ರೀಕರಣ ಮಾಡಿದೆವು. ಆದರೆ ತುಂಬ ಎಕ್ಸೈಟಿಂಗ್ ಆಗಿದ್ದಿದ್ದು ಅಂದರೆ ಕೆ.ಆರ್ ಮಾರ್ಕೆಟ್ ನಲ್ಲಿ ನಡೆಸಿದಂಥ ಚಿತ್ರೀಕರಣದ ಸನ್ನಿವೇಶ. ಯಾಕೆಂದರೆ ಅಲ್ಲಿ ತುಂಬಿದ ಜನಜಂಗುಳಿಯ ನಡುವೆ ಮೂರು ದಿನಗಳ ಕಾಲ ಒಂದು ಆ್ಯಕ್ಷನ್ ಸೀನ್ ಶೂಟ್ ಮಾಡಿದ್ದೆವು. ಅದನ್ನು ಖಂಡಿತವಾಗಿ ಮರೆಯಲು ಸಾಧ್ಯವಿಲ್ಲ. ಯಾಕೆಂದರೆ ನನ್ನ ನಿರ್ದೇಶನದ ಚಿತ್ರದಲ್ಲಿ ಇಷ್ಟು ದೊಡ್ಡ ಆ್ಯಕ್ಷನ್ ದೃಶ್ಯದ ಚಿತ್ರೀಕರಣ ಇದೇ ಪ್ರಥಮ ಆಗಿತ್ತು. ರೋಪ್ ಕಟ್ಟೋದು, ಅದಕ್ಕೆ ತೆಗೆದುಕೊಳ್ಳುತ್ತಿದ್ದ ಸಮಯ.. ಅದೆಲ್ಲವನ್ನು ಕಲಿತುಕೊಳ್ಳುವ ಎಕ್ಸೈಟ್ಮೆಂಟ್ ಕೂಡ ನನ್ನಲ್ಲಿತ್ತು.
ಮಣಿರತ್ನಂ ಮತ್ತು ಸುಹಾಸಿನಿ ಮಧ್ಯೆ ನಿರ್ದೇಶಕರಾಗಿ ನಿಮ್ಮ ಮೇಲೆ ಹೆಚ್ಚು ಪ್ರಭಾವ ಬೀರಿರುವುದು ಯಾರು?
ನಿರ್ದೇಶನ ಎನ್ನುವ ವಿಚಾರಕ್ಕೆ ಬಂದರೆ ಖಂಡಿತವಾಗಿ ಮಣಿರತ್ನಂ ಅವರ ಚಿತ್ರಗಳ ಪ್ರಭಾವ ಸಾಕಷ್ಟು ಇವೆ. ಅವರ ಹಾಗೆ ದೃಶ್ಯ ಹೊರಗೆ ತರಲು ಪ್ರಯತ್ನ ನಡೆಸುತ್ತೇನೆ. ಆದರೆ ಅದು ಸಾಧ್ಯವಿಲ್ಲ; ಯಾಕೆಂದರೆ ಅವರು ಗುರು. ಆದರೆ ಬರಹಗಾರ್ತಿಯಾಗಿ ನನಗೆ ಹಾಸಿನಿಯವರು ತುಂಬ ಇಷ್ಟ. ಅವರ ಸಂಭಾಷಣೆಯ ಶೈಲಿಯಿಂದ ಸ್ಫೂರ್ತಿ ಪಡೆಯುತ್ತೇನೆ.
ಈ ಚಿತ್ರ ತಮಿಳಿನಲ್ಲಿ ಕೂಡ ಬಿಡುಗಡೆಗೊಳ್ಳಲಿದೆಯೇ?
ಸದ್ಯಕ್ಕೆ ಅಂಥ ಯಾವುದೇ ಯೋಚನೆ ಇಲ್ಲ. ಒಂದುವೇಳೆ ತಮಿಳಲ್ಲಿ ತರುವುದಾದರೆ ಏನು ಟೈಟಲ್ ಇಡೋಣ ಎಂದು ಕೂಡ ಯೋಚನೆ ಮಾಡಿಲ್ಲ. ಮೊದಲು ಒಂದು ಭಾಷೆಯಲ್ಲಿ ಮಾಡೋಣ. ಇಲ್ಲಿನ ಪ್ರತಿಕ್ರಿಯೆ ಗಮನಿಸಿ ಮುಂದೆ ನೋಡೋಣ ಎಂದು ನಿರ್ಮಾಪಕರು ಹೇಳಿದ್ದಾರೆ. ಒಂದು ವೇಳೆ ಡಬ್ ಮಾಡಿದರೂ ನಮ್ಮ ನಾಯಕ, ನಾಯಕಿ ಮಾತ್ರವಲ್ಲ ಬಹಳಷ್ಟು ಪೋಷಕ ಕಲಾವಿದರು ಕೂಡ ಎರಡೂ ಭಾಷೆಗೆ ಸಲ್ಲುವಂಥವರೇ ಆಗಿದ್ದಾರೆ.
ಆದಿಲಕ್ಷ್ಮಿ ಪುರಾಣ ಚಿತ್ರವನ್ನು ಪ್ರೇಕ್ಷಕರು ಯಾಕೆ ನೋಡಬೇಕು ಎಂದು ನಿಮ್ಮ ಅನಿಸಿಕೆ?
ಇದು ಒಂದು ಫನ್ ಫಿಲ್ಮ್. ಚಿತ್ರದಲ್ಲಿ ಡ್ರಗ್ಸ್ ಅಪಾಯದ ಬಗ್ಗೆ ಸಂದೇಶಾತ್ಮಕ ವಿಚಾರಗಳಿದ್ದರೂ, ಇದು ಒಂದು ಕೌಟುಂಬಿಕ ಚಿತ್ರ. ಹಾಗಾಗಿ ಕುಟುಂಬ ಸಮೇತ ಚಿತ್ರ ಮಂದಿರಕ್ಕೆ ಹೋಗಿ ಯಾವುದೇ ಕಸಿವಿಸಿಗಳಿಲ್ಲದೇ ನೋಡಬಹುದಾದ ಚಿತ್ರ. ಕೌಟುಂಬಿಕ ಮೌಲ್ಯದ ವಿಚಾರಗಳನ್ನು ತಮಾಷೆಯೊಂದಿಗೆ ಹೇಳಲಾಗಿರುವುದು ಚಿತ್ರದ ಪ್ರಮುಖ ಪ್ಲಸ್ ಪಾಯಿಂಟ್ ಎನ್ನಬಹುದು.
ಮಹಿಳಾ ನಿರ್ದೇಶಕಿಯಾಗಿ ನಿಮಗೆ ಕೌಟುಂಬಿಕವಾಗಿ ಸಿಗುತ್ತಿರುವ ಪ್ರೋತ್ಸಾಹ ಹೇಗಿದೆ?
ನನಗೆ ತಂದೆ, ತಾಯಿ ಸಹೋದರ ಸಹೋದರಿಯರು ಮಾತ್ರವಲ್ಲ ಗಂಡ, ಅತ್ತೆ, ಮಾವಂದಿರು ಕೂಡ ಬೆಂಬಲವಾಗಿ ನಿಂತಿದ್ದಾರೆ. ನನ್ನ ಕುಟುಂಬದಿಂದ ಸಿನಿಮಾ ಕ್ಷೇತ್ರ ಪ್ರವೇಶಿಸಿರುವ ಪ್ರಥಮಳು ನಾನೇ. ಆದರೆ ನನ್ನ ಪತಿ ಕೂಡ ಚಿತ್ರರಂಗಕ್ಕೆ ಸೇರಿದವರೇ ಆಗಿರುವುದರಿಂದ ಈಗ ಇಂಡಸ್ಟ್ರಿಯ ಜತೆಗೆ ಹೆಚ್ಚು ಸಂಪರ್ಕದಲ್ಲಿದ್ದೇವೆ ಎನ್ನಬಹುದು. ಅಂದಹಾಗೆ ನನ್ನ ಪತಿಯ ಹೆಸರು ಭೂಷಣ್ ಎಂದು. ಅವರು ತೆಲುಗಲ್ಲಿ ನಟನಾಗಿ, ಬರಹಗಾರರಾಗಿ, ಕಿರುತೆರೆಯಲ್ಲಿ ಕ್ರಿಯೇಟಿವ್ ಡೈರೆಕ್ಟರಾಗಿ ಗುರುತಿಸಿಕೊಂಡಿದ್ದಾರೆ.