ಮನ ಮುಟ್ಟುವ 'ರುದ್ರಿ' ಹಾಡುಗಳು: ಸಂಗೀತ ನಿರ್ದೇಶಕ ಸಾಧು ಕೋಕಿಲ ಸಂದರ್ಶನ
ಕನ್ನಡ ಚಿತ್ರರಂಗದ ಬಹು ಬೇಡಿಕೆಯ ಹಾಸ್ಯ ಕಲಾವಿದರಲ್ಲಿ ಸಾಧು ಕೋಕಿಲ ಕೂಡ ಒಬ್ಬರು. ಸಿನಿಮಾದಲ್ಲಿ ಸಾಧು ಕೋಕಿಲ ಇರ್ತಾರೆ ಅಂದ್ರೆ, ನಗುವಿಗೆ ಬರವೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಪ್ರೇಕ್ಷಕರಿಗೆ ಅವರು ಕಾಮಿಡಿ ಕಚಗುಳಿ ಇಡುತ್ತಾರೆ.
ಕಾಮಿಡಿ ಮಾಡುವುದರಲ್ಲಿ ಮಾತ್ರ ಅಲ್ಲ.. ಸಂಗೀತ ಸಂಯೋಜಿಸುವುದರಲ್ಲೂ ಸಾಧು ಕೋಕಿಲ್ಲ ಎತ್ತಿದ ಕೈ. 'ಶ್', 'H20', 'ಲಾಲಿ ಹಾಡು', 'ರಕ್ತ ಕಣ್ಣೀರು', 'ಸಂಜು ವೆಡ್ಸ್ ಗೀತಾ' ಮುಂತಾದ ಚಿತ್ರಗಳಿಗೆ ಸಾಧು ಕೋಕಿಲ ಸಂಗೀತ ನಿರ್ದೇಶನ ಮಾಡಿದ್ದಾರೆ. ಮಧುರವಾದ ಹಾಡುಗಳನ್ನು ನೀಡಿ ಸಿನಿ ಪ್ರಿಯರ ಮನಗೆದ್ದಿದ್ದಾರೆ. ಇಂತಿಪ್ಪ ಸಾಧು ಕೋಕಿಲ 'ಮಾಸ್ತಿ ಗುಡಿ' ಚಿತ್ರದ ನಂತರ 'ರುದ್ರಿ' ಎಂಬ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ.
ಮಹಿಳೆಯರ ಮೇಲಿನ ದೌರ್ಜನ್ಯದ ಘಟನೆಗಳು ಹೆಚ್ಚು ಬೆಳಕಿಗೆ ಬರುತ್ತಿರುವ ಈ ಸಮಯದಲ್ಲಿ 'ರುದ್ರಿ' ಸಿನಿಮಾ ಮಹಿಳೆಯರ ಆಂತರಿಕ ಮನಸ್ಥಿತಿಯನ್ನು ಬಿಚ್ಚಿಡುವಂತಿದೆ. ಈ ಸಿನಿಮಾದಲ್ಲಿ ವ್ಯಕ್ತವಾಗಿರುವ ನೋವು, ಹಿಂಸೆ, ಪ್ರತಿರೋಧ ಭಾವಗಳಿಗೆ ಸಾಧು ಕೋಕಿಲ ಸಂಗೀತದ ರೂಪ ಕೊಟ್ಟಿದ್ದಾರೆ. ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಸಾಧುಕೋಕಿಲ ಅವರ ಸಂಗೀತ ನಿರ್ದೇಶನಕ್ಕೆ ವಿಭಿನ್ನವಾದ ನೆಲೆಗಟ್ಟಿದೆ. ಈ ಸಿನಿಮಾದ ಸಂಗೀತ ನಿರ್ದೇಶನವನ್ನೂ ಅವರು ಅಷ್ಟೇ ಪ್ರೀತಿ ಹಾಗೂ ಭಾವನಾತ್ಮಕ ನೆಲೆಯಲ್ಲಿ ರೂಪಿಸಿದ್ದಾರೆ. 'ರುದ್ರಿ' ಚಿತ್ರದ ಕುರಿತು ಸಾಧು ಕೋಕಿಲ ಜೊತೆಗಿನ ಸಂವಾದ ಇಲ್ಲಿದೆ...

* ಒಂದು ವರ್ಷದ ಬಳಿಕ 'ರುದ್ರಿ' ಸಿನಿಮಾಕ್ಕೆ ಸಂಗೀತ ನಿರ್ದೇಶನ ಮಾಡಲು ಕಾರಣ ಏನು?
- ಹೌದು ಒಂದು ವರ್ಷ ಆಯಿತು. 'ಮಾಸ್ತಿಗುಡಿ' ಸಿನಿಮಾಕ್ಕೆ ತುಂಬಾ ಒಳ್ಳೆ ಕೆಲಸ ಮಾಡಿದ್ದೆವು. ತುಂಬಾ ಇಷ್ಟಪಟ್ಟು ಸಂಗೀತ ಮಾಡಿದ್ದೆ. ಆದರೆ ನೀರಿನಲ್ಲಿ ಬಿದ್ದು ಆ ಹುಡುಗರು ಸತ್ತಿದ್ದನ್ನು ನೋಡಲು ಆಗಲಿಲ್ಲ. ಈಗಲೂ ಆ ದೃಶ್ಯ ಕಣ್ಣ ಮುಂದೆಯೇ ಇದೆ. ಆ ನಂತರ ಯಾಕೋ ಮನಸ್ಸಿಗೆ ಬೇಸರ ಆಗಿ ಸಂಗೀತ ನಿರ್ದೇಶನ ಮಾಡಿರಲಿಲ್ಲ. 'ರುದ್ರಿ' ಹೊಸತನದಿಂದ ಕೂಡಿರುವ ಸಿನಿಮಾ. ಇಲ್ಲಿ ಒಂದು ರೀತಿಯ ಆಕ್ರೋಶ ಇದೆ. ನೋವು ಇದೆ. ಹೆಣ್ಣು ಮಗಳೊಬ್ಬಳ ಕನಸುಗಳನ್ನು ಕಿತ್ತುಕೊಂಡ ಆಕ್ರಂದನ ಇದೆ. ಇವೆಲ್ಲ ಭಾವಗಳಿಗೆ ಸಂಗೀತದ ಸ್ಪರ್ಶ ನೀಡುವುದು ಸವಾಲಿನ ಕೆಲಸ. ಈ ಸವಾಲನ್ನು ನಾನು ಪ್ರೀತಿಯಿಂದ ಸ್ವೀಕರಿಸಿದೆ.

ಈ ಸಿನಿಮಾಗೆ ಹಾಡುವಾಗ ಆದ ಅನುಭವ?
- ಅದೊಂದು ಅಪೂರ್ವ ಕ್ಷಣ. ಆ ಹಾಡನ್ನು ಹಾಡುವಾಗ ಕಣ್ಣಲ್ಲಿ ನೀರು ಬಂತು. ಪದಗಳಿಗೆ ಜೀವ ತುಂಬುವ ಪುಣ್ಯದ ಕೆಲಸ ನಾನು ಮಾಡುತ್ತಿದ್ದೇನೆ ಎಂಬ ಧನ್ಯತಾ ಭಾವ ಮೂಡಿತು. "ಯಾರೋ ಬರೆದ ಹಣೆಬರಹವೋ ಈಕೆ, ಸುಂದರ ಹೂವಿದೆ, ಅರಳೋ ಮುನ್ನವೇ ಬಾಡಿದೆ'' ಈ ಹಾಡನ್ನು ಹಾಡಿದ್ದೇನೆ. ನೀವು ಕೇಳಿ ಖಂಡಿತಾ ಇಷ್ಟಪಡುತ್ತೀರಾ..

ಸಾಧು ಅವರಿಗೆ ಎರಡರಲ್ಲಿ ಒಂದು ಆಯ್ಕೆ ಮಾಡಿಕೊಳ್ಳಿ ಎಂದರೆ ನಟನೆನಾ ಅಥವಾ ಸಂಗೀತ ನಿರ್ದೇಶನವಾ?
- ಒಳ್ಳೆಯ ಪ್ರಶ್ನೆ. ಸಾಧು ತನ್ನ ಬಗ್ಗೆ ಹಾಗೂ ಜೀವನದ ಬಗ್ಗೆ ಯೋಚನೆ ಮಾಡಿದರೆ ಅದು ನಟನೆನೇ. ಸಂಗೀತ ನಿರ್ದೇಶನದಲ್ಲಿ ದುಡ್ಡು ಇಲ್ಲ ಕಣ್ರೀ. ಹೆಸರು ಮಾಡಬಹುದು. ಮನಸ್ಸಿನ ತೃಪ್ತಿಗೆ ಒಂದಿಷ್ಟು ಒಳ್ಳೆಯ ಕೆಲಸ ಮಾಡಬಹುದು. ಆದರೆ ನಟಿಸಿದರೆ ಮಾತ್ರ ದುಡ್ಡು. ಹಾಗಾಗಿ ಜೀವನಕ್ಕಾಗಿ ನಟನೆ, ತೃಪ್ತಿಗಾಗಿ ಸಂಗೀತ.

ರುದ್ರಿ ಸಂಗೀತದಲ್ಲಿ ಸಿಕ್ಕ ತೃಪ್ತಿ?
- ಮೊದಲಿಗೆ ಕಥೆಯಲ್ಲಿರುವ ಭಾವ ಇಷ್ಟ ಆಯಿತು. ನಿರ್ದೇಶಕರು ನಮ್ಮ ಸ್ನೇಹಿತರು, ಅವರ ಪ್ರೀತಿಗಾಗಿ ಸಿನಿಮಾ ಮಾಡಲು ಒಪ್ಪಿದ್ದೆ. ಆದರೆ ಹೋಗುತ್ತಾ ಹೋಗುತ್ತಾ ಈ ಸಿನಿಮಾದ ಹಾಡುಗಳು ಮನಸ್ಸನ್ನು ಕಾಡಿತು.

ಈ ಸಿನಿಮಾ ಸಂಗೀತದ ವಿಶೇಷ?
- ಈ ಸಿನಿಮಾದ ಹಾಡುಗಳು ಸಿನಿಮ್ಯಾಟಿಕ್ ಆಗಿಲ್ಲ. ಇಲ್ಲಿ ಒಂದು ನೈಜ ಕಥೆ ಇದೆ. ಅದಕ್ಕೆ ತಕ್ಕಂತೆ ನೈಜ ಭಾವನೆಗಳಿಂದ ಸಿನಿಮಾ ವ್ಯಕ್ತವಾಗಿದೆ. ಹಾಗಾಗಿ ಸಂಗೀತ ಕೂಡ ನಾವು ಮನಸ್ಸಿಗೆ ಹತ್ತಿರವಾಗುವಂತೆಯೇ ನೈಜವಾಗಿದೆ. ಪ್ಯಾಥೊ ಭಾವಕ್ಕಾಗಿ ಕೆಲವು ವಿಶೇಷ ವಾದ್ಯಗಳನ್ನು ಬಳಕೆ ಮಾಡಿದ್ದೇವೆ. ಬೇಸರ ಆದಾಗ ಈ ಹಾಡು ಕೇಳಿದರೆ ನಿಜಕ್ಕೂ ಕಣ್ಣೀರು ಬರುತ್ತದೆ ನೋಡಿ. 'ಕಿರಗೂರಿನ ಗಯ್ಯಾಳಿಗಳು', 'ಎದೆಗಾರಿಕೆ' ಸಿನಿಮಾಕ್ಕಾಗಿ ಸಂಗೀತ ಮಾಡುವಾಗ ಆದ ಅನುಭವವೇ ಇಲ್ಲಿ ಆಯಿತು ಎಂದರೆ ತಪ್ಪಲ್ಲ.


Click it and Unblock the Notifications











