ಆಕ್ಟರ್ ಚಿತ್ರ ಬಿಡುಗಡೆಗೆ ಮುನ್ನ ನಿರ್ದೇಶಕ, ಹೀರೋ ಸಂದರ್ಶನ
ಉತ್ತಮ ಪ್ರಶಂಸೆಗೊಳಗಾಗಿದ್ದ 'ಹಗ್ಗದಕೊನೆ' ಚಿತ್ರದ ನಂತರ ನಿರ್ದೇಶಕ ದಯಾಳ್ ಪದ್ಮನಾಭನ್ ಮತ್ತು ನಾಯಕನಟ ನವೀನ್ ಕೃಷ್ಣ 'ಆಕ್ಟರ್' ಚಿತ್ರದಲ್ಲಿ ಮತ್ತೆ ಒಂದಾಗಿದ್ದಾರೆ.
ಕಪಾಲಿ ಸೇರಿದಂತೆ ರಾಜ್ಯದ ಐವತ್ತಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಚಿತ್ರ ಇದೇ ಶುಕ್ರವಾರ (ಫೆ 19) ಬಿಡುಗಡೆಯಾಗುತ್ತಿದೆ. 'ಒನ್ ಇಂಡಿಯಾ' ಕಚೇರಿಗೆ ಆಗಮಿಸಿದ್ದ ದಯಾಳ್ ಮತ್ತು ನವೀನ್ ಕೃಷ್ಣ ಜೊತೆ ನಾವು ನಡೆಸಿದ ಸಂದರ್ಶನದ ಆಯ್ದ ಭಾಗ ಇಂತಿದೆ: (ವೀರೇಶ್ ನಿರ್ಮಾಪಕ ಆಗುವ ಕನಸು ಈಡೇರಿದ್ದು ಹೀಗೆ)
ಪ್ರ: ಚಿತ್ರದ ಬಗ್ಗೆ ನಿಮ್ಮ ವಿವರಣೆ?
ದಯಾಳ್ : ಚಿತ್ರದಲ್ಲಿ ಇರುವುದು ಎರಡೇ ಪಾತ್ರ ಒಂದು ನವೀನ್ ಇನ್ನೊಂದು ಗೀತಾ. ಕಲಾವಿದನೊಬ್ಬನ ಜೀವನದ ಏರುಪೇರುಗಳನ್ನು ಆಧರಿಸಿ ಚಿತ್ರ ನಿರ್ದೇಶಿಸಿದ್ದೇನೆ. ಚಿತ್ರ ಮುಗಿಯುವ ಹತ್ತು ನಿಮಿಷದ ಮುನ್ನ ಗೀತಾ ಮೇಡಂ ಪಾತ್ರಕ್ಕೆ ಎಂಟ್ರಿ ಸಿಗುತ್ತದೆ. ಈ ಚಿತ್ರಕ್ಕೆ 1 ಲೋಕೇಶನ್, 2 ಕ್ಯಾರೆಕ್ಟರ್, 100 ಮಿನಿಟ್ಸ್ ಎಂದು ಸಬ್ ಟೈಟಲ್ ಕೊಟ್ಟಿದ್ದೇವೆ.

ಪ್ರ: ಸ್ಯಾಂಡಲ್ ವುಡ್ ನಟರ ಕಾಲೆಳೆಯುವ ಸನ್ನಿವೇಶಗಳು ಚಿತ್ರದಲ್ಲಿ ಇದೆಯಾ?
ದಯಾಳ್ : ಚಿತ್ರದಲ್ಲಿ ಬರುವ ಕೆಲವೊಂದು ಸನ್ನಿವೇಶಗಳು ಕೆಲವೊಂದು ನಟರನ್ನು ಹೋಲಿಕೆಯಾದರೂ ಆಗಬಹುದು. ಇದು ಉದ್ದೇಶಪೂರ್ವಕವಲ್ಲ, ಚಿತ್ರದ ಸನ್ನಿವೇಶಗಳು ನಮ್ಮನ್ನೇ ಹೋಲುತ್ತವೆ ಎಂದು ಅಂತಹ ನಟರು ಭಾವಿಸಿದರೆ ಅದು ಅವರವರ ವಿವೇಚನೆಗೆ ಬಿಟ್ಟ ವಿಚಾರ.
ಪ್ರ: ನಿಮ್ಮ ಪಾತ್ರದ ಬಗ್ಗೆ?
ನವೀನ್ : ದಯಾಳ್ ಜೊತೆ ಇದು ನನ್ನ ಮೂರನೇ ಸಿನಿಮಾ. ಹಿಂದೆ ಶ್ರೀಹರಿಕಥೆ ಚಿತ್ರದಲ್ಲಿ ನಾಯಕನ ಸ್ನೇಹಿತನಾಗಿ ಕಾಣಿಸಿಕೊಂಡಿದ್ದೆ. ಅದಾದ ನಂತರ ಹಗ್ಗದ ಕೊನೆ ಚಿತ್ರ. ಆ ಚಿತ್ರ ನನಗೆ ಹೆಸರನ್ನು ತಂದು ಕೊಟ್ಟಿತು. ಆದರೆ ಕಮರ್ಷಿಯಲ್ ಆಗಿ ಅಷ್ಟಾಗಿ ಕ್ಲಿಕ್ ಆಗಿರಲಿಲ್ಲ.
ಆಕ್ಟರ್ ನನ್ನ ವೃತ್ತಿ ಜೀವನದ ಇದುವರೆಗಿನ ಬೆಸ್ಟ್ ಪಾತ್ರ. ನಿಮ್ಮ ಸಿನಿಮಾ ಲೈಫಿನಲ್ಲಿ ಮಾಡಿದ ಉತ್ತಮ ಪಾತ್ರವೇನು ಎಂದು ಯಾರಾದರೂ ನನ್ನನು ಕೇಳಿದರೆ, ಅದು ಆಕ್ಟರ್ ಚಿತ್ರದಲ್ಲಿನ ಪಾತ್ರ ಎಂದು ಹೇಳುತ್ತೇನೆ.
ಪ್ರ: ಚಿತ್ರದ ಸಂಗೀತ, ಸಾಹಿತ್ಯದ ಬಗ್ಗೆ?
ದಯಾಳ್ : ಚಿತ್ರಕ್ಕೆ ಗೌತಮ್ ಶ್ರೀವತ್ಸ ಸಂಗೀತ ನೀಡಿದ್ದಾರೆ. ಚಿತ್ರದಲ್ಲಿ ಮೂರು ಹಾಡುಗಳಿವೆ. ಒಂದು ಹಾಡಿಗೆ ನವೀನ್, ಇನ್ನೊಂದು ಹಾಡಿಗೆ ಶ್ರೀನಿವಾಸಮೂರ್ತಿ ಸರ್ ಸಾಹಿತ್ಯ ನೀಡಿದ್ದಾರೆ. ಗೌತಂ, ಹರ್ಟ್ ಆಫ್ ಲೀವಿಂಗ್ ಶ್ರೀನಿವಾಸ ಮತ್ತು ನವೀನ್ ಒಂದೊಂದು ಹಾಡನ್ನು ಹಾಡಿದ್ದಾರೆ.
ಪ್ರ: ನಾಯಕ ನವೀನ್ ಬಗ್ಗೆ ಹೇಳಿ?
ದಯಾಳ್ : ನವೀನ್ ಕೃಷ್ಣ ಒಬ್ಬ ಪ್ರತಿಭಾನ್ವಿತ ನಟ, ಹಗ್ಗದ ಕೊನೆ ಚಿತ್ರದ ನಂತರ ಮತ್ತೆ ಒಟ್ಟಿಗೆ ಚಿತ್ರ ಮಾಡುತ್ತಿದ್ದೇವೆ. ನವೀನ್ ಬಗ್ಗೆ ಒಂದು ಮಾತು ಹೇಳಲೇ ಬೇಕು. ಹಿಂದಿನ ನನ್ನ ಚಿತ್ರದ ಶೂಟಿಂಗ್ ವೇಳೆ, ಕರಾವಳಿ ಭಾಗದಲ್ಲಿ ಚಿತ್ರೀಕರಣ ನಡೆಯುತ್ತಿತ್ತು. ಎಲ್ಲರೂ ಒಂದು ಕಡೆ ಕೂತು ಮಾತಾಡುತ್ತೆದ್ದೆವು, ನವೀನ್ ಮಾತ್ರ ಅರಬ್ಬೀ ಸಮುದ್ರದತ್ತ ಮುಖಮಾಡಿ ಹತಾಶೆಯಿಂದ ಏನೋ ಒಬ್ಬರೇ ಮಾತಾಡಿಕೊಳ್ಳುತ್ತಿದ್ದರು.
ಅದ್ಯಾಕೋ, ಅವತ್ತಿನಿಂದ ನಾನು ಇವರನ್ನು ನಾಯಕನನ್ನಾಗಿ ಮಾಡಿ ಸಿನಿಮಾ ನಿರ್ದೇಶಿಸಲೇ ಬೇಕು ಎನ್ನುವ ನಿರ್ಧಾರಕ್ಕೆ ಬಂದೆ. ಇದು ನಮ್ಮಿಬ್ಬರ ಕ್ಯಾಂಬಿನೇಶನಿನ ಎರಡನೇ ಸಿನಿಮಾ. ವೀರೇಶ್ ಇನ್ನೊಂದು ಚಿತ್ರ ನಿರ್ಮಿಸುವುದಾಗಿ ಹೇಳಿದ್ದಾರೆ. (ನವೀನ್ ಕೃಷ್ಣ ಬರೆದಿರುವ ಪತ್ರದಲ್ಲಿ ಏನಿದೆ)

ಪ್ರ: ಚಿತ್ರದ ಸಂಭಾಷಣೆ ಮತ್ತು ಸಾಹಿತ್ಯದ ಬಗ್ಗೆ?
ನವೀನ್ : ಈ ಚಿತ್ರಕ್ಕೆ ಸಂಭಾಷಣೆ ಜೊತೆ ಒಂದು ಹಾಡಿಗೆ ಸಾಹಿತ್ಯ ಕೂಡಾ ಬರೆದಿದ್ದೇನೆ. ಇದೊಂತರ ಡಿಫರೆಂಟ್ ಅನುಭವ. ಇನ್ನು, ದಯಾಳ್ ಒಬ್ಬ ಪ್ರೊಫೆಷನಲ್ ನಿರ್ದೇಶಕ. ಚಿತ್ರೀಕರಣದ ನಂತರ ಎಡಿಟಿಂಗ್ ವೇಳೆ ಕೂತಾಗ, ಇಷ್ಟು ಚೆನ್ನಾಗಿ ಮಾಡಿದ್ದೀನಾ ಎಂದು ನನಗನಿಸುತ್ತಿತ್ತು.
ಯಾಕೆ ಈ ಮಾತು ಹೇಳುತ್ತಿದ್ದೇನೆಂದರೆ, ಸನ್ನಿವೇಶಕ್ಕೆ ಪೂರಕವಾಗುವ ನಟನೆ ನಮ್ಮಿಂದ ಹೊರಹೊಮ್ಮುವ ತನಕ ನಮ್ಮಿಂದ ದಯಾಳ್ ರಿಟೇಕ್ ಮಾಡಿಸುತ್ತಲೇ ಇರುತ್ತಾರೆ.
ಇಷ್ಟಪಟ್ಟು, ಕಷ್ಟಪಟ್ಟು ಸಿನಿಮಾ ಮಾಡಿದ್ದೇವೆ, ಇದೊಂದು ಹೊಸರೀತಿಯ ಸಿನಿಮಾ. ಇದೇ ಫೆಬ್ರವರಿ 19ರಂದು ಸಿನಿಮಾ ಬಿಡುಗಡೆಯಾಗುತ್ತಿದೆ. ಎಲ್ಲರೂ ಚಿತ್ರ ವೀಕ್ಷಿಸಿ, ನಮಗೆ ಬೆಂಬಲ ನೀಡಬೇಕೆಂದು ನವೀನ್, ದಯಾಳ್ ಮತ್ತು ಚಿತ್ರದ ನಿರ್ಮಾಪಕ ವೀರೇಶ್ ಚಿತ್ರರಸಿಕರಲ್ಲಿ ವಿನಂತಿಸಿ ಕೊಂಡಿದ್ದಾರೆ.


Click it and Unblock the Notifications











