ನಾನು ಅವರಂತೆ ಡ್ರಾಮಾ ಮಾಡಿದ್ದರೆ ಇನ್ನಷ್ಟು ದಿನ ಮನೆಯಲ್ಲಿರಬಹುದಿತ್ತು: ಕಿರಣ್
ಬಿಗ್ಬಾಸ್ ಮನೆಯ ಒಳಗೆ ಮಾಡೆಲ್, ಕಿರಣ್ ಯೋಗೇಶ್ವರ್ ಹೋದಾಗ ಆಕೆಯ ಬಗ್ಗೆ ಗೊತ್ತಿದ್ದವರು ಬಹಳ ವಿರಳ. ರಾಜಸ್ಥಾನಿ ಮೂಲದ ಆದರೆ ಬೆಂಗಳೂರಿನಲ್ಲಿ ನೆಲೆ ಕಂಡುಕೊಂಡಿರುವ ಕಿರಣ್ ಬಗ್ಗೆ ಹೆಚ್ಚಾಗಿ ಗೊತ್ತಿರದ ಕಾರಣಕ್ಕೆಯೇ ವೀಕ್ಷಕರಿಗೆ ಅವರ ಬಗ್ಗೆ ಕುತೂಹಲ ಇತ್ತು.
ಮೊದಲ ವಾರದಲ್ಲಿ ತಮ್ಮ ಪ್ರಬುದ್ಧ ಮಾತು, ನಡವಳಿಕೆಗಳಿಂದ ಗಮನ ಸೆಳೆದ ಕಿರಣ್, ಚೆನ್ನಾಗಿ ಅಡುಗೆ ಬಲ್ಲವರಾದ್ದರಿಂದ ಎಲ್ಲರಿಗೂ ಅಡುಗೆ ಮಾಡಿ ತಿನಿಸುತ್ತಾ, ಡ್ಯಾನ್ಸ್ ಮಾಡುತ್ತಾ, ಯೋಗ ಕಲಿಸಿಕೊಡುತ್ತಾ ಮನೆಯ ಸದಸ್ಯರ ಮೆಚ್ಚಿನ ಸ್ಪರ್ಧಿಯಾದರು.
ಮನೆಯವರ ಮೆಚ್ಚಿನ ಸ್ಪರ್ಧಿಯಾಗಿದ್ದ ಕಿರಣ್ ಯೋಗೀಶ್ವರ್ ಮೊದಲ ವಾರದಲ್ಲಿಯೇ ಮನೆಯಿಂದ ಹೊರಗೆ ಹೋಗಬಹುದೆಂದು ಯಾರೂ ಊಹಿಸಿರಲಿಲ್ಲ. ಆದರೆ ಇದೀಗ ಅವರು ಹೊರಗೆ ಬಂದಿದ್ದಾರೆ. ಕನ್ನಡ ಭಾಷೆ ಬರದೇ ಇರದಿರುವುದು ಹಾಗೂ ಅಡುಗೆ ಮನೆಯಲ್ಲಿ ಹೆಚ್ಚು ಸಮಯ ಕಳೆದಿದ್ದು ನನಗೆ ಎಲಿಮಿನೇಶನ್ಗೆ ಕಾರಣ ಆಗಿರಬಹುದು ಎಂದು ಸುದೀಪ್ ಬಳಿ ಹೇಳಿಕೊಂಡಿದ್ದಾರೆ ಕಿರಣ್. ಇದೀಗ 'ಫಿಲ್ಮೀಬೀಟ್ ಕನ್ನಡ'ದ ಜೊತೆಗೆ ಮಾತಿಗೆ ಸಿಕ್ಕ ಕಿರಣ್, ಬಿಗ್ಬಾಸ್ ಮನೆಯ ಹೊರಗೆ ಹಾಗೂ ಒಳಗಿನ ಪರಸ್ಥಿತಿಗಳ ಬಗ್ಗೆ ಮಾತನಾಡಿದ್ದಾರೆ.

ಭಾಷೆಯ ಕಾರಣಕ್ಕೆ ಹೊರಗೆ ಬರಬೇಕಾಗಿದ್ದು ಸರಿ ಎನಿಸಿತೆ?
ಭಾಷೆಯ ಕಾರಣಕ್ಕೆ ನನ್ನನ್ನು ಸೋಲಿಸಿದ್ದು ಅಥವಾ ಭಾಷೆಯೇ ನನ್ನ ಎಲಿಮಿನೇಶನ್ಗೆ ಆಗಿದ್ದರೆ ಅದು ಸರಿಯಲ್ಲ. ಏಕೆಂದರೆ ಬಿಗ್ಬಾಸ್ ಎಂಬುದು ವ್ಯಕ್ತಿತ್ವದ ಪರೀಕ್ಷೆ, ಭಾಷೆಯ ಪರೀಕ್ಷೆ ಅಲ್ಲ. ನಾನು ಮಾಡಿದ ಟಾಸ್ಕ್, ನಾನು ನಿರ್ವಹಿಸಿದ ಕೆಲಸ ಎಲ್ಲವನ್ನೂ ನೋಡಬೇಕಿತ್ತು. ಕೇವಲ ಭಾಷೆ ನೋಡುವುದು ಸರಿಯಲ್ಲ. ಕನ್ನಡ ಮಾತನಾಡಬೇಕು ಎಂಬುದು ಸರಿ, ಅದನ್ನು ಒಪ್ಪಿಕೊಳ್ಳುವೆ. ನಾನು ಚೆನ್ನಾಗಿ ಕನ್ನಡ ಕಲಿಯಲಿ ಎಂಬುದು ಬಿಗ್ಬಾಸ್ ಉದ್ದೇಶವಾಗಿದ್ದರೆ ನನಗೆ ಇನ್ನಷ್ಟು ಕಾಲಾವಕಾಶ ಕೊಡಬಹುದಿತ್ತು. ನಾನು ಸಾಕಷ್ಟು ಕನ್ನಡ ಕಲಿತಿದ್ದೀನಿ, ಮಾತನಾಡುತ್ತಿದ್ದೀನಿ. ಇನ್ನಷ್ಟು ಕಾಲಾವಕಾಶ ಕೊಟ್ಟಿದ್ದಿದ್ದರೆ ನಾನು ಇನ್ನಷ್ಟು ಸುಧಾರಣೆ ಆಗಬಹುದಿತ್ತು.

ಬಿಗ್ಬಾಸ್ ಮನೆ ಹಾಗೂ ಹೊರಗಿನ ಪ್ರಪಂಚದ ನಡುವಿನ ವ್ಯತ್ಯಾಸ ಎಂಥಹದ್ದು?
ಆಚೆ ಸಾಕಷ್ಟು ಜನರಿದ್ದಾರೆ ಆದರೆ ಯಾರೂ ನಿಮ್ಮನ್ನು ಗಮನಿಸುತ್ತಿಲ್ಲ, ಎಲ್ಲರೂ ಇದ್ದರೂ ಯಾರಿಂದಲೂ ನೀವು ಗಮನಿಕೆಗೆ ಒಳಗಾಗುತ್ತಿಲ್ಲ. ಆದರೆ ಬಿಗ್ಬಾಸ್ ಮನೆಯ ಒಳಗೆ ಕಡಿಮೆ ಜನ ಇದ್ದಾರೆ ಆದರೆ ಆ ಮನೆಯವರು ಹಾಗೂ ಹೊರಗಿನ ಜನ ನಿಮ್ಮನ್ನು ಗಮನಿಸುತ್ತಿರುತ್ತಾರೆ, ಅದರ ಎಚ್ಚರ ಸದಾ ಇರುತ್ತದೆ. ಹೊರಗಿನ ಪ್ರಪಂಚದಲ್ಲಿ ನಿಮಗೆ ಕೆಲವು ಯೋಚನೆ, ಗುರಿ ಇರುತ್ತದೆ. ಆದರೆ ಬಿಗ್ಬಾಸ್ ಮನೆಯ ಒಳಗೆ ಹಾಗಿಲ್ಲ. ನಮಗೆ ಬಿಗ್ಬಾಸ್ ಹೇಳಿದಂತೆ ಮಾಡುವುದು ಬಿಟ್ಟು ಬೇರೆ ಗುರಿ, ಕೆಲಸ ಇಲ್ಲ. ಜೊತೆಗೆ ಎಲ್ಲ ಕ್ಯಾಮೆರಾಗಳು ನಮ್ಮನ್ನು ನೋಡುತ್ತಿವೆ, ನಾವು ಆಡುವ ಮಾತು, ನಮ್ಮ ನಡೆಯ ಮೇಲೆ ನಮ್ಮನ್ನು ಹೊರಗಿನ ಕೋಟ್ಯಂತರ ಜನ ನಮ್ಮ ವ್ಯಕ್ತಿತ್ವ ಜಡ್ಜ್ ಮಾಡಲು ಕೂತಿದ್ದಾರೆ ಎಂಬುದರ ಎಚ್ಚರ ಸದಾ ಇರುತ್ತದೆ ಹಾಗಾಗಿ ಎಲ್ಲ ಸಮಯದಲ್ಲಿಯೂ ನಾವು ನಾವಾಗಿರಲು ಸಾಧ್ಯವಾಗುವುದಿಲ್ಲ. ಕೆಲವೊಮ್ಮೆ ಅನಿಸಿದ್ದು ಹೇಳಲು, ಮಾಡಲು ಸಾಧ್ಯವಾಗದು.

ಒಳಗಿದ್ದವರದ್ದು ನಿಜ ವ್ಯಕ್ತಿತ್ವವಾ? ಅಥವಾ ಮುಖವಾಡವಾ?
ಒಳಗಿದ್ದವರು ಎಷ್ಟೇ ಆಪ್ತವಾಗಿದ್ದಂತೆ ಅನಿಸಿದರು ನೀವು ಎಲ್ಲವನ್ನೂ ಅವರೊಟ್ಟಿಗೆ ಹೇಳಿಕೊಳ್ಳಲು ಆಗುವುದಿಲ್ಲ. ಯಾರನ್ನೂ ಪೂರ್ಣವಾಗಿ ನಂಬಲು ಆಗುವುದಿಲ್ಲ. ಎಲ್ಲರೂ ಮುಖವಾಡ ಹಾಕಿಕೊಂಡು ಗೇಮ್ ಆಡುತ್ತಿರುತ್ತಾರೆ. ಎಲ್ಲರ ಆಟವನ್ನೂ ಎದುರಿಸಲು ಬಹಳ ಸ್ಟ್ರಾಂಗ್ ಆಗಿರಬೇಕಾಗುತ್ತದೆ. ಅಲ್ಲಿ ಯಾರೂ ಅವರಂತೆ ಇರುತ್ತಾರೊ ಅವರು ಹೊರಗೆ ಹೋಗುತ್ತಾರೆ. ನಾನು ಹೊರಗೆ ಹೇಗಿದ್ದೆನೊ ಹಾಗೆಯೇ ಮನೆಯ ಒಳಗೂ ಇದ್ದೆ, ಅದೇ ಕಾರಣಕ್ಕೆ ಇಂದು ನಾನು ಹೊರಗೆ ಇದ್ದೀನಿ. ನನಗೆ ಜಗಳ ಇಷ್ಟ ಇರಲಿಲ್ಲ ಹಾಗಾಗಿ ಯಾರೊಟ್ಟಿಗೂ ಜಗಳ ಮಾಡಲಿಲ್ಲ, ನನಗೆ ಅಡುಗೆ ಇಷ್ಟವಿತ್ತು ಹಾಗಾಗಿ ಅಡುಗೆ ಮನೆಯಲ್ಲಿ ಹೆಚ್ಚು ಸಮಯ ಇದ್ದೆ. ನನಗೆ ಎಲ್ಲರೊಟ್ಟಿಗೆ ಮಾತನಾಡುವುದು ಇಷ್ಟ, ನಾನು ಮಾತನಾಡಿದೆ. ಅದೇ ನಾನು ಡ್ರಾಮಾ ಮಾಡುತ್ತಾ ಇದ್ದಿದ್ದರೆ ನನಗೆ ಹೆಚ್ಚು ಕ್ಯಾಮೆರಾ ಅಟೆನ್ಷನ್ ಸಿಗುತ್ತಿತ್ತು. ಆಗ ನಾನು ಇನ್ನೂ ಹೆಚ್ಚು ಸಮಯ ಮನೆಯಲ್ಲಿರಬಹುದಿತ್ತು.

ಬಿಗ್ಬಾಸ್ ಮನೆಯಲ್ಲಿ ಸಂಬಂಧಕ್ಕಿಂತ ಗೆಲುವೇ ನಿಮಗೆ ಮುಖ್ಯವಾ?
ಆಟಗಳ ವಿಷಯಕ್ಕೆ ಬಂದರೆ ಖಂಡಿತ ನನಗೆ ಗೆಲುವು ಮುಖ್ಯವಾಗಿತ್ತು, ಚೆನ್ನಾಗಿ ಆಡುತ್ತಿದ್ದೆ, ಗೆಲ್ಲಲು ಯತ್ನಿಸುತ್ತಿದ್ದೆ ಆದರೆ ನಾನು ಮನುಷ್ಯತ್ವ, ಮಾನವೀಯತೆಗೆ ಗೆಲುವಿಗಿಂತಲೂ ಹೆಚ್ಚು ಪ್ರಾಮುಖ್ಯತೆ ಕೊಡುತ್ತೀನಿ. ಯಾರೋ ಬರುವ ದಾರಿಗೆ ಎಣ್ಣೆ ಹಾಕಿ ಅವರನ್ನು ಬೀಳಿಸು, ಕೊಲ್ಲು ಎಂದರೆ ಅದು ನನ್ನಿಂದ ಸಾಧ್ಯವಿಲ್ಲ. ನನ್ನಿಂದ ಇನ್ನೊಬ್ಬರಿಗೆ ತೊಂದರೆ ಆಗದಿರಲಿ ಎಂದುಕೊಳ್ಳುತ್ತೇನೆ. ಮನುಷ್ಯತ್ವದ ಜೊತೆಗೆ ಆಟವಾಡಿ ಗೆಲ್ಲಲು ಯತ್ನಿಸುತ್ತೇನೆ. ಬರೀ ಗೇಮ್ ಗೆಲ್ಲುವುದು ಮಾತ್ರವೇ ಉದ್ದೇಶವಾದರೆ ಅದು ಸ್ವಾರ್ಥ ಎಂದಾಗುತ್ತದೆ.

ಹೊರಗೆ ಬಂದ ಮೇಲೆ ಶೋ ನೋಡಿ, ಹೀಗೆ ಆಡಬಹುದಿತ್ತು, ಹಾಗೆ ಆಡಬೇಕಿತ್ತು ಎಂದುಕೊಂಡಿರಾ?
ಇಲ್ಲ, ನಾನು ಹೊರಗೆ ಬಂದ ಮೇಲೆ ಶೋ ನೋಡಿಯೇ ಇಲ್ಲ. ನನಗೆ ಬಿಗ್ಬಾಸ್ನಲ್ಲಿ ಒಳ್ಳೆಯ ಅನುಭವವೇ ಆಗಿದೆ. ನಾನೀಗ ಒಳ್ಳೆಯ ವ್ಯಕ್ತಿಯಾಗಿ ಹೊರಗೆ ಬಂದಿದ್ದೀನಿ, ಈಗ ಹಳೆಯ ಎಪಿಸೋಡ್ಗಳನ್ನು ನೋಡಿ ಅವರೇಕೆ ಹಾಗೆ ಮಾತನಾಡಿದರು, ನಾನು ಹೀಗೆ ಮಾತನಾಡಬೇಕಿತ್ತು ಎಂದುಕೊಂಡು ನೆಗೆಟಿವಿಟಿ ತುಂಬಿಕೊಳ್ಳುವುದು ನನಗೆ ಬೇಡ. ಬಿಗ್ಬಾಸ್ ಎಂಬುದು ನನಗೆ ಒಳ್ಳೆಯ ಅವಕಾಶ ಆಗಿತ್ತು. ಅಲ್ಲಿ ಒಳ್ಳೆಯ ನೆನಪುಗಳು ಇವೆ, ನಾನು ಈಗಲೂ ಬಿಗ್ಬಾಸ್ ಮನೆ ಮಿಸ್ ಮಾಡಿಕೊಳ್ಳುತ್ತಿದ್ದೇನೆ, ಸೋ ಅದು ಹಾಗೆಯೇ ಇರಲಿ ಎಂಬ ಕಾರಣಕ್ಕೆ ಶೋ ಅನ್ನು ನಾನು ನೋಡುತ್ತಿಲ್ಲ. ಮುಂದೆ ಯಾವಾಗಲಾದರೂ ನೋಡಬಹುದು.

ಬಿಗ್ಬಾಸ್ ಮನೆಯಿಂದ ಹೊರಗೆ ಬಂದ ಮೇಲೆ ನಿಮ್ಮಲ್ಲಾದ ಬದಲಾವಣೆ?
ನಾನು ಇಷ್ಟು ಜನರಿಗೆ ಅಡುಗೆ ಮಾಡಿ ಬಡಿಸಬಲ್ಲೆ ಎಂಬುದು ನನಗೆ ಗೊತ್ತಿರಲಿಲ್ಲ. ಎಲ್ಲರೊಟ್ಟಿಗೆ ನಾನು ಸಹಬಾಳ್ವೆ ಮಾಡಬಹುದು ಎಂಬುದನ್ನು ಕಲಿತುಕೊಂಡಿದ್ದೇನೆ. ನಾನು ಬಹಳ ವರ್ಷಗಳಿಂದಲೂ ಒಬ್ಬಳೇ ಇದ್ದೀನಿ. ನಾನು ಕುಟುಂಬದ ಜೊತೆಗೆ ಇಲ್ಲ. ಆದರೆ ನಾನು ಅಷ್ಟು ಜನರೊಟ್ಟಿಗೆ ಇದ್ದು ಎಲ್ಲವನ್ನೂ ನಿಭಾಯಿಸಿಕೊಂಡು ಹೋಗಬಲ್ಲೆ ಎಂಬುದನ್ನು ಕಲಿತುಕೊಂಡೆ. ಫೋನ್ ಇಲ್ಲದೆಯೂ ಇರಬಹುದು ಎಂಬುದನ್ನು ಕಲಿತೆ. ಬೇರೆ ಬೇರೆ ರೀತಿಯ ವ್ಯಕ್ತಿಗಳೊಡನೆ ಹೇಗೆ ವ್ಯವಹರಿಸಬೇಕು ಎಂಬುದನ್ನು ಕಲಿತುಕೊಂಡೆ. ಇನ್ನೂ ಹಲವು ವಿಷಯ ಕಲಿತುಕೊಂಡೆ.


Click it and Unblock the Notifications











