ಚಂದನವನದಲ್ಲಿ ಬೃಂದಾ ಬೆಡಗು ಬಿನ್ನಾಣ; ವಿಭಿನ್ನ ಪಾತ್ರಗಳ ಬಗ್ಗೆ ಚೆಲುವೆ ಮಾತು
ಚಿತ್ರರಂಗದಲ್ಲಿ ನಾಯಕಿಯರ ಕರಿಯರ್ 5 ವರ್ಷ ಮಾತ್ರ ಎನ್ನುವ ಮಾತಿದೆ. ಆದರೆ ಕೆಲವರು ಆ ಮಾತನ್ನು ಸುಳ್ಳಾಗಿಸುತ್ತಾರೆ. ಇನ್ನು ಪ್ರತಿದಿನ ಚಿತ್ರರಂಗಕ್ಕೆ ಹೊಸಬರು ಬರ್ತಿರ್ತಾರೆ. ಆದರೆ ತಮ್ಮ ಪ್ರತಿಭೆ ಮೂಲಕ ಇಲ್ಲಿ ಉಳಿದುಕೊಳ್ಳುವವರು ಕೆಲವರು ಮಾತ್ರ. ನಟಿ ಬೃಂದಾ ಆಚಾರ್ಯ ಈಗ ಚಂದನವನದಲ್ಲಿ ಸಖತ್ ಬ್ಯುಸಿಯಾಗಿದ್ದಾರೆ.
ಬೃಂದಾ ಆಚಾರ್ಯ ನಟನೆಯ ಮೂರ್ನಾಲ್ಕು ಚಿತ್ರಗಳು ಬಿಡುಗಡೆಗೆ ಸಜ್ಜಾಗಿದೆ. ಈ ವಾರ ಆಕೆ ನಟಿಸಿರುವ 'ಮಾರುತ' ಸಿನಿಮಾ ಪ್ರೇಕ್ಷಕರ ಮುಂದೆ ಬರ್ತಿದೆ. ಮತ್ತೊಂದು ಸಿನಿಮಾ 'ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿ' ಮುಂದಿನ ವಾರ ತೆರೆಗಪ್ಪಳಿಸಲಿದೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಈ ಸಿನಿಮಾ ಕೂಡ ಈ ವಾರವೇ ತೆರೆಗೆ ಬರಬೇಕಿತ್ತು. ಕೊನೆ ಕ್ಷಣದಲ್ಲಿ ರಿಲೀಸ್ ಮುಂದಕ್ಕೆ ಹೋಗಿದೆ.

2 ವರ್ಷಗಳ ಹಿಂದೆ ಬೃಂದಾ ಆಚಾರ್ಯ ನಟಿಸಿದ್ದ 'ಕೌಸಲ್ಯ ಸುಪ್ರಜಾ ರಾಮಾ' ಸಿನಿಮಾ ಹಿಟ್ ಆಗಿತ್ತು. ಶಶಾಂಕ್ ನಿರ್ದೇಶನದ ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ ಜೋಡಿಯಾಗಿ ನಟಿಸಿ ಗಮನ ಸೆಳೆದಿದ್ದರು. ಅದರ ಬೆನ್ನಲ್ಲೇ ಸಾಕಷ್ಟು ಅವಕಾಶಗಳು ಹುಡುಕಿ ಹೋಗಿತ್ತು. ಅದರಲ್ಲಿ ಅಳೆದು ತೂಗಿ 5 ಸಿನಿಮಾಗಳನ್ನು ಒಪ್ಪಿಕೊಂಡಿದ್ದರು. ಅದರಲ್ಲಿ 2 ಸಿನಿಮಾ ಈಗ ಬಿಡುಗಡೆ ಹೊಸ್ತಿಲಲ್ಲಿದೆ. ಈ ಬಗ್ಗೆ ಫಿಲ್ಮಿಬೀಟ್ ಕನ್ನಡ ಜೊತೆ ಬೃಂದಾ ಆಚಾರ್ಯ ಮಾತನಾಡಿದ್ದಾರೆ.
ವಾರದ ಅಂತರದಲ್ಲಿ ನಿಮ್ಮ 2 ಸಿನಿಮಾಗಳು ಬಿಡುಗಡೆ ಆಗ್ತಿದೆ, ಏನನಿಸುತ್ತಿದೆ?
ಬಹಳ ಖುಷಿ ಇದೆ. ಎರಡೂ ವಿಭಿನ್ನವಾದ ಚಿತ್ರಗಳು, ನನ್ನ ಪಾತ್ರಗಳು ಕೂಡ ಅಷ್ಟೇ ವಿಭಿನ್ನವಾಗಿದೆ. ಪ್ರೇಕ್ಷಕರಿಗೆ ವೆರೈಟಿ ಗೊತ್ತಾಗುತ್ತದೆ. ಒಬ್ಬ ನಟಿಯ 2 ಸಿನಿಮಾ ಬರ್ತಿದೆ ಎನ್ನುವುದಕ್ಕಿಂತ ಎರಡು ಬೇರೆ ಬೇರೆ ಸಿನಿಮಾಗಳಲ್ಲಿ ನಾನು ವಿಭಿನ್ನ ಪಾತ್ರಗಳಲ್ಲಿ ನಟಿಸಿದ್ದೀನಿ ಎನ್ನಬಹುದು. ಬಹಳ ಉತ್ಸುಕಳಾಗಿದ್ದೇನೆ.
'ಮಾರುತ' ಚಿತ್ರದ ಅನನ್ಯಾ ಪಾತ್ರದ ಬಗ್ಗೆ ಹೇಳಿ
ಇಡೀ ಸಿನಿಮಾ ಕಥೆ ಅನನ್ಯಾ ಪಾತ್ರದ ಸುತ್ತಾ ಸುತ್ತುತ್ತದೆ. ಕಥೆಯಲ್ಲಿ ಒಂದು ಇಶ್ಯೂ ಇದೆ. ಅದಕ್ಕೆ ದುನಿಯಾ ವಿಜಯ್, ಶ್ರೇಯಸ್ ಪಾತ್ರಗಳೆಲ್ಲಾ ಸೇರಿಕೊಳ್ಳುತ್ತಾ ಹೋಗುತ್ತದೆ. ಸಾಮಾಜಿಕ ಜಾಲತಾಣಗಳ ಅನಾನುಕೂಲಗಳ ಬಗ್ಗೆ ಈ ಚಿತ್ರದಲ್ಲಿ ಚರ್ಚಿಸಲಾಗಿದೆ. ಹುಡುಗಿಯೊಬ್ಬಳು ಆನ್ಲೈನ್ನಲ್ಲಿ ಹುಡುಗನ ಜೊತೆ ಚಾಟ್ ಮಾಡಿ ಅವನನ್ನು ಪ್ರೀತಿಸಿ ಆತನಿಗಾಗಿ ಮನೆಬಿಟ್ಟು ಬಂದಮೇಲೆ ಏನಾಗುತ್ತದೆ. ಆಕೆ ಎದುರಿಸುವ ಸಮಸ್ಯೆಗಳೇನು? ಮೋಸ ಮಾಡಿದ ಜಾಲ ಎಂಥದ್ದು ಎನ್ನುವುದು ಈ ಸಿನಿಮಾ ಕಥೆ.

ಸೋಶಿಯಲ್ ಮೀಡಿಯಾದ ಅನಾನುಕೂಲಗಳ ಬಗ್ಗೆ ನೀವು ಏನಂತೀರಾ?
ನಿಜಕ್ಕೂ ಸೋಶಿಯಲ್ ಮೀಡಿಯಾ ಅಂದ್ರೆ ಭಯವಾಗುತ್ತದೆ. ಇತ್ತೀಚೆಗೆ ನನ್ನ ಫೋಟೊ ಬಳಸಿ ಒಂದು ಮಾರ್ಕೆಟಿಂಗ್ ಏಜೆನ್ಸಿಯನ್ನು ಪ್ರಮೋಟ್ ಮಾಡುತ್ತಿದ್ರು. ನಾನೇ ಮಾಡುತ್ತಿದ್ದೇನೆ ಎನ್ನುವಂತೆ ಬಿಂಬಿಸಿದ್ರು. ಜನರನ್ನು ನಂಬಿಸಲು ಸೆಲೆಬ್ರೆಟಿಗಳ ಹೆಸರನ್ನು ಇದಕ್ಕೆ ಹೆಚ್ಚು ಬಳಸಿಕೊಳ್ತಾರೆ. ಹಾಗಾಗಿ ಆನ್ಲೈನ್ ಸ್ಕ್ಯಾಮ್ ಸುಲಭ. ಎಲ್ಲೋ ಕೂತು ಇದನ್ನೆಲ್ಲಾ ಮಾಡ್ತಾರೆ. ಯಾರು ಮಾಡ್ತಿದ್ದಾರೆ ಅನ್ನೋದು ಗೊತ್ತಾಗಲ್ಲ. ಈ ಬಗ್ಗೆ ಎಲ್ಲರೂ ಎಚ್ಚರಿಕೆ ವಹಿಸಬೇಕು.
'ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿ' ಚಿತ್ರದ ಪಾತ್ರದ ಬಗ್ಗೆ ಏನು ಹೇಳ್ತೀರಾ?
'ಕೌಸಲ್ಯ ಸುಪ್ರಜಾ ರಾಮಾ' ಸಿನಿಮಾ ಬಳಿಕ ಅಂಥದ್ದೇ ಬಬ್ಬಿ ಗರ್ಲ್ ಪಾತ್ರಗಳು ಹೆಚ್ಚು ಹುಡುಕಿ ಬಂದವು. ಎಲ್ಲರೂ ಇಂಥದ್ದೇ ಪಾತ್ರಗಳನ್ನು ಹೇಳಿದ್ರು. ಆದರೆ ನಟಿಯಾಗಿ ನನಗೆ ಬೇರೆ ಜಾನರ್, ಪಾತ್ರಗಳನ್ನು ಮಾಡಬೇಕು ಎನ್ನುವ ಆಸೆಯಿದೆ. ಆ ರೀತಿ ಒಪ್ಪಿಕೊಂಡ ಪಾತ್ರ ಇದು. ನನ್ನ ನಿಜ ಜೀವನಕ್ಕೆ ತದ್ವಿರುದ್ಧ ಪಾತ್ರ ಅರ್ಪಿತಾ. ರಾಬರಿ ಕಥೆ ಚಿತ್ರದಲ್ಲಿದೆ. ಒಂದಷ್ಟು ಕಳ್ಳರು ಬ್ಯಾಂಕ್ ಒಳಗೆ ಹೋಗ್ತಾರೆ, ಮುಂದೇನು? ಎನ್ನುವುದು ಇನ್ನುಳಿದ ಕಥೆ.
ಮುಂದಿನ ಸಿನಿಮಾಗಳ ಬಗ್ಗೆ ಹೇಳಿ
'ಮಾರುತ', 'ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿ' ಬಿಟ್ಟು ಎರಡು ಸಿನಿಮಾ ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿದೆ. ನಿರೂಪ್ ಭಂಡಾರಿ ಜೊತೆ 'ಸನ್ ಆಫ್ ಹರಿಶ್ಚಂದ್ರ' ಚಿತ್ರದಲ್ಲಿ ನಟಿಸಿದ್ದೀನಿ. ಚಿತ್ರೀಕರಣ ಮುಗಿದು ಪೋಸ್ಟ್ ಪ್ರೊಡಕ್ಷನ್ ವರ್ಕ್ ನಡೀತಿದೆ. ಅಜಯ್ ರಾವ್ ಅವರೊಟ್ಟಿಗೆ ಒಂದು ಸಿನಿಮಾ ಮುಗಿಸಿದ್ದೀನಿ. ಅದು ಕೂಡ ಆದಷ್ಟು ಬೇಗ ತೆರೆಗೆ ಬರಲಿದೆ. ಈ 5 ಸಿನಿಮಾಗಳನ್ನು ಜನ ಹೇಗೆ ಸ್ವೀಕರಿಸುತ್ತಾರೆ ಎನ್ನುವುದನ್ನು ನೋಡಿ ಮುಂದಿನ ಸಿನಿಮಾಗಳ ಬಗ್ಗೆ ಗಮನ ಹರಿಸುತ್ತೇನೆ. ಮನೋರಂಜನ್ ಜೊತೆ ಒಂದು ಚಿತ್ರದಲ್ಲಿ ನಟಿಸ್ತಿದ್ದೀನಿ.
ಕನಸಿನ ಪಾತ್ರ, ಯಾರೊಟ್ಟಿಗಾದರೂ ನಟಿಸುವ ಆಸೆ ಇದ್ಯಾ?
ಅಂತಹ ಮನಸ್ಥಿತಿ ನನಗಿಲ್ಲ. ಇಂಥದ್ದೇ ಪಾತ್ರ ಮಾಡಬೇಕು ಅಂತ ಇಲ್ಲ. ನನಗೆ ಚಿತ್ರರಂಗಕ್ಕೆ ಬರುವ ಮನಸ್ಸು ಇರಲಿಲ್ಲ. ಅಚಾನಕ್ ಆಗಿ ಬಂದಿತ್ತು. ಮಾತೃಭಾಷೆಯಲ್ಲಿ ನಟಿಸಬೇಕು ಎಂದು ಆಸೆ ಪಟ್ಟು ಬಂದೆ. ಹಾಗಾಗಿ ಇಂಥದ್ದೇ ನಟ, ನಿರ್ದೇಶಕನ ಜೊತೆ ಕೆಲಸ ಮಾಡಬೇಕು ಎನ್ನುವ ಆಸೆ ಇಲ್ಲ. ಒಳ್ಳೆ ಪಾತ್ರಗಳ ನಿರೀಕ್ಷೆಯಲ್ಲಿದ್ದೀನಿ.


Click it and Unblock the Notifications











