ಸಿನಿಮಾ, ಸಮಾಜ ಸೇವೆ ಹಾಗೂ ಇನ್ನಷ್ಟು: 2021 ಕ್ಕೆ ಚೇತನ್ ಅಹಿಂಸಾ ಗುರಿಗಳೇನು?
ಕೊರೊನಾ ವು 2020ರಲ್ಲಿ ಜಗತ್ತನ್ನೇ ತಲ್ಲಣಗೊಳಿಸಿದೆ. ಕೊರೊನಾದಿಂದ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಪರಿಣಾಮ ಎದುರಿಸದ ಜೀವಿಯೇ ಇಲ್ಲ.
ಕೊರೊನಾ ಇತ್ತೆಂದ ಮಾತ್ರಕ್ಕೆ ಜೀವನ ಸ್ಥಬ್ಧವೇನೂ ಆಗಿರಲಿಲ್ಲ, ಪ್ರಕೃತಿ ನಿಯಮದಂತೆ ದಿನಗಳು ಕಳೆಯುತ್ತಲೇ ಇದ್ದವು ಬದುಕು ಮುಂದಕ್ಕೆ ಸಾಗಿಯೇ ಸಾಗಿತು. ಆದರೆ ಈ ವರ್ಷ ಹಲವರ ಮೇಲೆ ಹಲವು ರೀತಿಯ ಪರಿಣಾಮಗಳನ್ನು ಬೀರಿತು. ಸೆಲೆಬ್ರಿಟಿಗಳಿಗೂ ಇದು ಅನ್ವಯ. ಹಾಗಿದ್ದರೆ ಯಾವ ಸೆಲೆಬ್ರಿಟಿಗೆ ಈ ವರ್ಷ ಹೇಗಿತ್ತು, ಮುಂದಿನ ವರ್ಷದ ಮೇಲೆ ಅವರಿಗಿರುವ ನಿರೀಕ್ಷೆಗಳೇನು ಎಂಬುದರ ಬಗ್ಗೆ ತಿಳಿಯುವ ಸಂದರ್ಶನ ಸರಣಿ ಇದು.
ನಟ ಚೇತನ್ ಅಹಿಂಸಾ, ಸಿನಿಮಾ ಮಾತ್ರವಲ್ಲದೆ ಸಮಾಜ ಸೇವೆ ಮತ್ತು ಪ್ರಗತಿಪರ ಹೋರಾಟಗಳಲ್ಲಿ ತಮ್ಮನ್ನು ಗುರುತಿಸಿಕೊಂಡವರು. ಅವರ ಪಾಲಿಗೆ 2020 ಹೇಗಿತ್ತು ಮತ್ತು 2021 ರಿಂದ ಏನೇನು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದೇನೆ ಎಂಬ ಬಗ್ಗೆ 'ಫಿಲ್ಮೀಬೀಟ್' ಜೊತೆ ಮಾತನಾಡಿದ್ದಾರೆ ಚೇತನ್.

ವೈಯಕ್ತಿಕವಾಗಿ 2020 ನನಗೆ ಒಳ್ಳೆಯ ವರ್ಷ: ಚೇತನ್
''2020, ಜಗತ್ತನ್ನೇ ಕಷ್ಟಕ್ಕೆ ತಳ್ಳಿದ ವರ್ಷ. ಸಿನಿಮಾ ರಂಗ ಸಂಪೂರ್ಣ ಸ್ಥಬ್ಧವಾಗಿತ್ತು. ಆದರೆ ವೈಯಕ್ತಿಕ ನೆಲೆಯಲ್ಲಿ ನೋಡುವುದಾದರೆ ನನ್ನ ಪಾಲಿಗೆ ಈ ವರ್ಷ ಚೆನ್ನಾಗಿಯೇ ಇತ್ತು. ಫೆಬ್ರವರಿಯಲ್ಲಿ ಮದುವೆಯಾದೆ. ಆ ನಂತರ ಲಾಕ್ಡೌನ್ ಸಮಯದಲ್ಲಿ ನಾನು ಮತ್ತು ಪತ್ನಿಗೆ ಒಟ್ಟಿಗೆ ಇದ್ದೆವು. ಪರಸ್ಪರ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಲಾಕ್ಡೌನ್ ಸಮಯ ನಮಗೆ ಸಾಕಷ್ಟು ಸಹಾಯ ಮಾಡಿತು' ಎಂದರು ಚೇತನ್.

ಸಿನಿಮಾ ರಂಗಕ್ಕೆ ದೊಡ್ಡ ನಷ್ಟವನ್ನು ಮಾಡಿದ ವರ್ಷ: ಚೇತನ್
'ಸಿನಿಮಾ ರಂಗದ ಬಗ್ಗೆ ಮಾತನಾಡುವುದಾದರೆ. ಸಿನಿಮಾ ರಂಗ ಹೀಗೆ ಇಷ್ಟು ಸುದೀರ್ಘ ಅವಧಿಗೆ ಚಲಿಸದೇ ನಿಂತುಬಿಟ್ಟಿದ್ದು ಇತಿಹಾಸದಲ್ಲಿಯೇ ಇದೆ ಮೊದಲು. ಸಿನಿಮಾಕ್ಕೆ ಸಂಬಂಧಿಸಿದ ಪ್ರತಿಯೊಬ್ಬ ವ್ಯಕ್ತಿಯೂ ಇದು ದೊಡ್ಡ ನಷ್ಟವನ್ನೇ ಮಾಡಿತು. ವಿಶೇಷವಾಗಿ ಸಿನಿಮಾ ಕಾರ್ಮಿಕರ ಬದುಕು ತೀವ್ರ ಸಂಕಷ್ಟಕ್ಕೆ ಸಿಲುಕಿತು, ಸಿನಿಮಾ ಕಾರ್ಮಿಕರು ಮಾತ್ರವಲ್ಲದೆ ವಲಸೆ ಕಾರ್ಮಿಕರು, ಸಣ್ಣ ಉದ್ದಿಮೆದಾರರು ಸಂಕಷ್ಟಕ್ಕೆ ಸಿಲುಕಿದರು. ಸರ್ಕಾರಗಳು ಕೊರೊನಾ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ತೀವ್ರವಾಗಿ ಎಡವಿತು' ಎಂದು ಬೇಸರ ವ್ಯಕ್ತಪಡಿಸಿದರು ಚೇತನ್.

'ಈ ವರ್ಷ ಹೆಚ್ಚು ಸಿನಿಮಾಗಳಲ್ಲಿ ನಟಿಸುವ ಗುರಿ ಇದೆ'
2020 ರಲ್ಲಿ ಸಾಕಷ್ಟು ಸಂಕಷ್ಟಗಳನ್ನು ಅನುಭವಿಸಿರುವ ಎಲ್ಲರೂ 2021 ರ ಬಗ್ಗೆ ಉತ್ತಮ ನಿರೀಕ್ಷೆಗಳನ್ನೇ ಇಟ್ಟುಕೊಂಡಿದ್ದಾರೆ. ಕಳೆದ ಕೆಲ ವರ್ಷಗಳಿಗೆ ಹೋಲಿಸಿಕೊಂಡರೆ ಈ ವರ್ಷ ಹೆಚ್ಚು ಸಿನಿಮಾಗಳಲ್ಲಿ ನಟಿಸಬೇಕು ಎಂಬ ಗುರಿಯನ್ನು ಹಾಕಿಕೊಂಡಿದ್ದೇನೆ. ಈಗಾಗಲೇ ಕನ್ನಡ ಸೇರಿದಂತೆ ಕೆಲವು ಭಾಷೆಗಳಲ್ಲಿ ಸಿನಿಮಾ ಬಗ್ಗೆ ಮಾತುಕತೆ ಚಾಲ್ತಿಯಲ್ಲಿದೆ ಎಂದು ಭವಿಷ್ಯದ ನೀಲನಕ್ಷೆ ಬಗ್ಗೆ ಹೇಳಿದರು ಚೇತನ್.

'ಮಾಸ್ಗಿರಿ' ನಡೆಯುವುದಿಲ್ಲ: ಚೇತನ್
'ಕೊರೊನಾ ಕಾಲದಲ್ಲಿ ಒಟಿಟಿಗಳ ಮೂಲಕ ಪ್ರಕ್ಷಕನಿಗೆ ಬೆರಳ ತುದಿಗೆ ವಿಶ್ವ ಸಿನಿಮಾ ಸಿಗುವಂತಾಗಿದೆ. ಹಾಗಾಗಿ ಇನ್ನು ಮುಂದೆ ಪ್ರೇಕ್ಷಕ ಕಂಟೆಂಟ್ ಅನ್ನು ಬೇಡುತ್ತಾನೆ. ನಾಯಕ ನಟರುಗಳ 'ಮಾಸ್ ಗಿರಿ' ನಡೆಯುವುದಿಲ್ಲ, ಹಾಗಾಗಿ 2021 ರಲ್ಲಿ ಕಂಟೆಂಟ್ ಉಳ್ಳ, ಕತೆಯುಳ್ಳ, ಸೂಕ್ಷ್ಮ ಸಿನಿಮಾಗಳನ್ನು ತೆಗೆಯಬೇಕಿದೆ. ಒಟ್ಟಾರೆ ಸಿನಿಮಾರಂಗದ ಏಳಿಗೆಗೆ ಇದು ಪೂರಕವಾಗಲಿದೆ' ಎಂದು ವಿಶ್ಲೇಸಿದರು ಚೇತನ್.

'ರೈತರನ್ನು ಸಂಘಟಿಸುವ ಕಾರ್ಯ ಮಾಡಬೇಕಿದೆ'
ಸಾಮಾಜಿಕವಾಗಿ ಹೋರಾಟಗಳಲ್ಲಿ ಗುರುತಿಸಿಕೊಂಡಿರುವ ಚೇತನ್, 'ರೈತ ಹೋರಾಟಗಳು ಮತ್ತೆ ಉಚ್ರಾಯಕ್ಕೆ ಬರುತ್ತಿರುವುದು ಗೋಚರವಾಗುತ್ತಿದೆ. ಕರ್ನಾಟಕದಲ್ಲಿ ಸಹ ರೈತರನ್ನು ಸಂಘಟಿಸಿ ಅವರನ್ನು ಶಕ್ತಿವಂತರನ್ನಾಗಿ ಮಾಡುವ ಕಾರ್ಯ 2021 ರಲ್ಲಿ ಮಾಡಬೇಕಿದೆ. ಇನ್ನುಳಿದಂತೆ ಪ್ರಜಾಪ್ರಭುತ್ವದ ಪರವಾದ ಹೋರಾಟಗಳನ್ನು ಮುಂದುವರೆಸಿಕೊಂಡು ಹೋಗಬೇಕಿದೆ' ಎಂದರು ಚೇತನ್.
Recommended Video

ಅಡುಗೆ ಕಲಿಯಬೇಕು, ಸ್ಯಾಕ್ಸ್ಫೋನ್ ಕಲಿಯಬೇಕು: ಚೇತನ್
'ಕೆಲವು ವೈಯಕ್ತಿಕ ಆಸಕ್ತಿಗಳಿಗೆ ಹೆಚ್ಚು ಸಮಯವನ್ನು 2021 ರಲ್ಲಿ ಕೊಡಬೇಕು ಎಂದು ತೀರ್ಮಾನಿಸಿದ್ದೇನೆ. ನನಗೆ ಸ್ಯಾಕ್ಸೊಫೋನ್ ವಾದ್ಯವೆಂದರೆ ಇಷ್ಟ, ಅದರ ಕಲಿಕೆಗೆ ಹೆಚ್ಚು ಸಮಯ ಕೊಡಬೇಕು ಎಂದುಕೊಂಡಿದ್ದೇನೆ. ಇನ್ನು ಅಡಿಗೆ ಮಾಡುವುದು ಕಲಿಯುವ ಇಚ್ಛೆಯೂ ಇದೆ. ನನ್ನ ಪತ್ನಿ ಚೆನ್ನಾಗಿ ಅಡುಗೆ ಮಾಡುತ್ತಾರೆ, ಆದರೆ ಅಡುಗೆ ಅವರೊಬ್ಬರ ಕೆಲಸವೇನಲ್ಲ, ಹಾಗಾಗಿ ನಾನೂ ಸಹ ಅಡುಗೆ ಕಲಿತು ಅವರಿಗೆ ಸಹಾಯವಾಗಲು ಬಯಸಿದ್ದೇನೆ' ಎಂದರು ಚೇತನ್.


Click it and Unblock the Notifications











