Don't Miss!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
Exclusive: ದರ್ಶನ್ ಬೆದರಿಕೆ ಹಾಕಿದ್ದು ಹೇಗೆ? ಏಕೆ? ವಿವರಿಸಿದ ನಿರ್ಮಾಪಕ ಭರತ್
ನಟ ದರ್ಶನ್ ತಮಗೆ ಬೆದರಿಕೆ ಹಾಕಿದ್ದಾರೆಂದು ನಿರ್ಮಾಪಕ ಭರತ್ ವಿಷ್ಣುಕಾಂತ್ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಈ ಬಗ್ಗೆ ಫಿಲ್ಮಿಬೀಟ್ ಕನ್ನಡದೊಟ್ಟಿಗೆ ಮಾತನಾಡಿರುವ ಭರತ್ ವಿಷ್ಣುಕಾಂತ್ ವಿವರವಾಗಿ ಘಟನೆಯನ್ನು ವಿವರಿಸಿದ್ದು, ನಟ ಧ್ರುವನ್ ಮಾತು ಕೇಳಿ ದರ್ಶನ್ ನನಗೆ ಬೆದರಿಕೆ ಹಾಕಿದ್ದಾರೆ. ಧ್ರುವನ್, ದರ್ಶನ್ ಅವರಿಗೆ ಹಾದಿ ತಪ್ಪಿಸಿದ್ದಾರೆ ಎಂದಿದ್ದಾರೆ.
ನಟ ದರ್ಶನ್ ಸುತ್ತ ಹೊಸ ವಿವಾದ: ಜೀವ ಬೆದರಿಕೆ, ಠಾಣೆಗೆ ದೂರು
ಘಟನೆಯನ್ನು ವಿವರಿಸಿದ ನಿರ್ಮಾಪಕ ಭರತ್, ''2020 ರಲ್ಲಿ ಧ್ರುವನ್ ಅನ್ನು ನಾಯಕ ನಟನನ್ನಾಗಿಸಿಕೊಂಡು 'ಭಗವಾನ್ ಶ್ರೀ ಕೃಷ್ಣ ಪರಮಾತ್ಮ' ಹೆಸರಿನ ಸಿನಿಮಾ ಪ್ರಾರಂಭಿಸಿದೆ. ಕೆಲವು ದಿನಗಳ ಬಳಿಕ ದರ್ಶನ್ ಅವರು ಕರೆ ಮಾಡಿ ಬೇರೆ ಕತೆಯೊಂದನ್ನು ಸೂಚಿಸಿ ಆ ಕತೆಯನ್ನು ಸಿನಿಮಾ ಮಾಡುವಂತೆ ಹೇಳಿದರು. ದರ್ಶನ್ ಹಾಗೂ ನಟ ಧ್ರುವನ್ ಸೇರಿ ನಿರ್ದೇಶಕರನ್ನೂ ಬದಲಿಸಿದರು. ನಾನೂ ಸಹ ಒಪ್ಪಿಕೊಂಡೆ ಆದರೆ ಕಾರಣಾಂತರಗಳಿಂದ ಸಿನಿಮಾದ ಚಿತ್ರೀಕರಣ ತಡವಾಯಿತು'' ಎಂದಿದ್ದಾರೆ.
''ಅದೇ ಸಮಯದಲ್ಲಿ ಹೊಸದಾಗಿ 'ಭಗವಾನ್ ಶ್ರೀ ಕೃಷ್ಣ ಪರಮಾತ್ಮ' ಸಿನಿಮಾ ನಿರ್ದೇಶಿಸಲು ಬಂದಿದ್ದ ಅನೂಪ್ ಆಂಟೊನಿ ಮೂಲಕ ಕರೆ ಮಾಡಿಸಿದ ದರ್ಶನ್, ಸಿನಿಮಾ ನಿರ್ಮಾಣಕ್ಕೆ ಹಣ ಇಲ್ಲದೇ ಹೋದರೆ ಬಡ್ಡಿ ರಹಿತವಾಗಿ ಒಂದು ಕೋಟಿ ಹಣ ಕೊಡುವುದಾಗಿ ಹೇಳಿದರು. ಸಿನಿಮಾ ಬಿಡುಗಡೆಗೆ ಮುಂಚೆ ಹಣ ಸೆಟಲ್ ಮಾಡುವಂತೆ ಕೇಳಿದರು. ಆದರೆ ನಾನು ಆ ಹಣವನ್ನು ತೆಗೆದುಕೊಳ್ಳಲಿಲ್ಲ. ಆ ನಂತರ ಹಣ ತೆಗೆದುಕೊಂಡು ಚಿತ್ರೀರಕಣ ಪ್ರಾರಂಭಿಸುವ ಎಂದುಕೊಳ್ಳುವ ವೇಳೆಗೆ ಸೆಕೆಂಡ್ ಲಾಕ್ಡೌನ್ ಆಯಿತು. ನಮ್ಮ ಚಿತ್ರಿಕತೆ ಸಹ ಪೂರ್ಣವಾಗಿ ರೆಡಿಯಾಗಿರಲಿಲ್ಲ. ಆದರೆ ಚಿತ್ರೀಕರಣ ಪ್ರಾರಂಭ ಮಾಡದೇ ಇರುವ ಬಗ್ಗೆ ಧ್ರುವನ್, ದರ್ಶನ್ ಬಳಿ ದೂರು ಹೇಳಿದರು'' ಎಂದು ಕಳೆದ ವರ್ಷ ಆಗಸ್ಟ್ ತಿಂಗಳ ಸಮಯದಲ್ಲಿ ನಡೆದ ಘಟನೆಗಳನ್ನು ವಿವರಿಸಿದರು.
ಕರೆ ಮಾಡಿ ಬೆದರಿಕೆ ಹಾಕಿದ ದರ್ಶನ್: ಭರತ್ ಆರೋಪ
''ಆಗಸ್ಟ್ ತಿಂಗಳ ವೇಳೆಗೆ ನನಗೆ ಕರೆ ಮಾಡಿದ ದರ್ಶನ್, ಇವನ (ಧ್ರುವನ್) ಜೀವನ ನೀನು ಹಾಳು ಮಾಡುತ್ತಿದ್ದೀಯ. ನೀನು ಹೀಗೆ ಸಿನಿಮಾ ತಡ ಮಾಡಿದರೆ, ಅವನ ಕೆರಿಯರ್ ಅನ್ನು ಯಾರು ನೋಡ್ತಾರೆ. ನೀನು ಬರ್ತೀಯ? ಎಲ್ಲಾ ನೋಡ್ಕೊಂಡು ತಾನೇ ಮಾಡ್ಬೇಕು. ಸಿನಿಮಾ ಅನೌನ್ಸ್ ಮಾಡಿದೀಯ ಅದನ್ನು ಮುಗಿಸಬೇಕು. ಇಲ್ಲ ಅಂದ್ರೆ ನೀನು ಇರಲ್ಲ. ಏನಾದ್ರೂ ಮಾಡಬೇಕು ಅಂದ್ರೆ ಹೇಳಿಬಿಟ್ಟೇ ನಾನು ಮಾಡೋದು. ನೀನು ರೆಡಿ ಇರು. ಎಲ್ಲಾದರೂ ಕಂಡಾಗ ಏನಪ್ಪ ಅಂತ ಮಾತನಾಡೋ ಥರ ಇಟ್ಕೋ, ಇಲ್ಲ ಅಂದ್ರೆ ನೀನೇ ಕಾಣ್ದೇ ಇರೋ ಥರ ಮಾಡಿ ಬಿಡ್ತೀನಿ. ಇದನ್ನ ವಾರ್ನಿಂಗ್ ಅಂತ ಬೇಕಾದ್ರೂ ಅನ್ಕೊ' ಅಂತ ದರ್ಶನ್ ಹೇಳಿದರು. ಆಗ ನಾನು ಲಾಕ್ಡೌನ್ ಮುಗಿದ ಕೂಡಲೇ ಚಿತ್ರೀಕರಣ ಸ್ಟಾರ್ಟ್ ಮಾಡ್ತೀನಿ ಎಂದೆ. ನಂತರ ಒಂದು ಹತ್ತು ದಿನ ಶೂಟಿಂಗ್ ಸಹ ಮಾಡಿದೆ'' ಎಂದಿದ್ದಾರೆ ಭರತ್. ದರ್ಶನ್, ನನಗೆ ಬೆದರಿಕೆ ಹಾಕಿರುವ ಆಡಿಯೋ ಸಹ ನನ್ನ ಬಳಿ ಇದೆ ಎಂದರು ಭರತ್.
ಸಿನಿಮಾ ಮಾರುವಂತೆ ಒತ್ತಾಯ
''ಆದರೆ ಆ ನಂತರ ಚಿತ್ರಕತೆ ರೆಡಿ ಇಲ್ಲದ ಕಾರಣಕ್ಕೆ ಮತ್ತೆ ಚಿತ್ರೀಕರಣ ನಿಂತು ಹೋಯಿತು. ಆಗ ಅಕ್ಟೋಬರ್ 28 ರಂದು ನನ್ನನ್ನು 'ಕ್ರಾಂತಿ' ಸಿನಿಮಾದ ಸೆಟ್ಗೆ ದರ್ಶನ್ ಅವರು ಕರೆದರು. ಆದರೆ ಅಂದು ಶೂಟಿಂಗ್ನಲ್ಲಿ ಅವರು ಬ್ಯುಸಿ ಇದ್ದ ಕಾರಣ ಏನೂ ಮಾತನಾಡಲಿಲ್ಲ. ಅಕ್ಟೋಬರ್ 29 ರಂದು ಪುನೀತ್ ರಾಜ್ಕುಮಾರ್ ನಿಧನದಿಂದ ನಮ್ಮ ಮೀಟಿಂಗ್ ಕ್ಯಾನ್ಸಲ್ ಆಯಿತು. ನವೆಂಬರ್ 18 ರಂದು ಕಾಲ್ ಮಾಡಿದ ದರ್ಶನ್, ಧ್ರುವನ್ ಜೀವನದ ಜೊತೆ ಆಟವಾಡುತ್ತಿದ್ದೀಯ? ಎಂದು ರೇಗಿ ನವೆಂಬರ್ 19 ರಂದು ಸೆಟ್ಗೆ ಬಾ ಎಂದು ಕರೆದರು. ನಾನು ಹೋದೆ. ಅಂದು ಸಿನಿಮಾವನ್ನು ಬಿಟ್ಟುಬಿಡುವಂತೆ ಹೇಳಿದರು. ಸಿನಿಮಾವನ್ನು ನಾನು ಬೇರೊಬ್ಬರಿಗೆ ಮಾರುತ್ತಿರುವಂತೆ ಪತ್ರ ರೆಡಿ ಮಾಡಿ ಆ ಪತ್ರಕ್ಕೆ ಸಹಿ ಹಾಕುವಂತೆ ಒತ್ತಾಯಿಸಿದರು. ನಿನ್ನ ಕೈಯ್ಯೊ ಕಾಲೊ ಮುರೀತೀನಿ ಸುಮ್ಮನೆ ಸೈನ್ ಹಾಕಿ ಹೋಗು, ಬೇರೆಯವರು ಸಿನಿಮಾ ಟೇಕ್ಆಫ್ ಮಾಡುತ್ತಾರೆ ಎಂದರು. ನನಗೆ ಹಣ ಸೆಟಲ್ ಮಾಡಿ ಸಹಿ ಮಾಡ್ತೀನಿ ಎಂದು ಹಠ ಮಾಡಿದೆ. ಟೀ ಕುಡಿಯಲು ಹೊರಗೆ ಹೋಗುತ್ತೀನಿ ಎಂದರೂ ಸಹ ಬಿಡಲಿಲ್ಲ'' ಎಂದು ಅಂದು ನಡೆದ ಘಟನೆ ನೆನಪು ಮಾಡಿಕೊಂಡರು ಭರತ್.
ಹಣ ಸೆಟಲ್ ಮಾಡಿಸದೆ ಸಿನಿಮಾ ಟೇಕ್ ಓವರ್!
''ನಮ್ಮ ಹೀರೋ ಧ್ರುವನ್ ಸಹ ಅಲ್ಲೇ ಇದ್ದರು, ಅವರ ಮಾತು ಕೇಳಿ ದರ್ಶನ್ ನನಗೆ ಬೆದರಿಕೆ ಹಾಕಿದರು. ಹಣ ಸೆಟಲ್ ಮಾಡಿಸುತ್ತೇನೆ ಎಂದಿದ್ದರು ಆದರೆ ಹಣ ಸೆಟಲ್ ಮಾಡಿಸಲಿಲ್ಲ. ಆ ನಂತರ ನಾನು ದರ್ಶನ್ ಅವರನ್ನು ಸಂಪರ್ಕ ಮಾಡಲು ಬಹಳ ಯತ್ನಿಸಿದೆ ಆದರೆ ಸಾಧ್ಯವಾಗಲಿಲ್ಲ. ಕೆಲವು ದಿನ ಬಿಟ್ಟು ದರ್ಶನ್ರ ಆಪ್ತ ಗೆಳೆಯ ನಾಗು ಕಾಲ್ ಮಾಡಿ, ನೀವು ಮಾಡುತ್ತಿದ್ದ ಸಿನಿಮಾ ಬಗ್ಗೆ ಎಲ್ಲೂ ಮಾತನಾಡಬೇಡಿ, ಅವರೂ ನಿಮ್ಮ ಬಗ್ಗೆ ಎಲ್ಲೂ ಮಾತನಾಡುವುದಿಲ್ಲ ಇದನ್ನು ಇಲ್ಲಿಗೆ ಬಿಟ್ಟುಬಿಡಿ ಎಂದರು. ಅದಾದ ಕೆಲ ದಿನದಲ್ಲೇ ನಮ್ಮದೇ ಸಿನಿಮಾದ ಪೋಸ್ಟರ್ಗಳು ಮೈಸೂರಿನಲ್ಲೆಲ್ಲ ಹಾಕಿದ್ದರು. ಆದರೆ ಅದರಲ್ಲಿ ನನ್ನ ಹೆಸರೇ ಇರಲಿಲ್ಲ. 'ಎ ಫಿಲ್ಮ್ ಬೈ ಅನುಪ್ ಆಂಟೊನಿ' ಡಿ ಬಾಸ್ ಪ್ರೆಸೆಂಟ್ ಎಂದು ಹಾಕಿಕೊಂಡಿದ್ದರು. ನಾನು ಆ ಸಿನಿಮಾಕ್ಕೆ ಹಣ ಹಾಕಿದ್ದೆ. ದರ್ಶನ್ ಅವರಿಗೆ ಮಾತು ಕೊಟ್ಟಿದ್ದೀನಿ ಎಂಬ ಕಾರಣಕ್ಕೆ ಸೈಟ್ ಮಾರಿ ಶೂಟಿಂಗ್ ಶುರು ಮಾಡಿದ್ದೆ. ನಾನು ದರ್ಶನ್ ಅವರ ಮಾತು ಕೇಳಿ ಸಿನಿಮಾ ಬಿಟ್ಟು ಹೋಗಿದ್ದೆ ಆದರೆ ನನಗೆ ಹಣ ಸೆಟಲ್ ಮಾಡದೆ ಸಿನಿಮಾವನ್ನು ಟೇಕ್ ಓವರ್ ಮಾಡಿದ್ದಾರೆ'' ಎಂದು ಆಕ್ರೋಶ ಹೊರಹಾಕಿದರು ಭರತ್.
ಧ್ರುವನ್ ಮಾತು ಕೇಳಿ ದರ್ಶನ್ ನನಗೆ ಬೆದರಿಕೆ ಹಾಕಿದರು: ಭರತ್
ನಾನು ಸಹ ಸಿನಿಮಾ ಹಿನ್ನೆಲೆಯಿರುವ ವ್ಯಕ್ತಿಯೇ. ನನ್ನ ತಂದೆ ವಿಷ್ಣುಕಾಂತ್ ರಾಜ್ಯ ಪ್ರಶಸ್ತಿ ವಿಜೇತ ನಿರ್ಮಾಪಕರು. ಚಿಕ್ಕಂದಿನಿಂದಲೂ ಸಿನಿಮಾ ಜಗತ್ತಿನಲ್ಲಿಯೇ ಬೆಳೆದವನು. ಆದರೆ ನಮ್ಮ ಹೀರೋ ಧ್ರುವನ್ ಮಾತು ಕೇಳಿ ದರ್ಶನ್ ನನಗೆ ಬೆದರಿಕೆ ಹಾಕಿದರು. ನನಗೆ ಬರಬೇಕಾದ ಹಣ ಸಹ ಸೆಟಲ್ ಮಾಡಲಿಲ್ಲ. ನಾನು ಸುಮ್ಮನೆ ಇರುವವನಲ್ಲ. ಈಗ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದೇನೆ, ಎನ್ಸಿಆರ್ ಆಗಿದೆ. ನಮ್ಮ ವಕೀಲರ ಸಹಕಾರದ ಮೂಲಕ ನ್ಯಾಯಾಲಯದಲ್ಲಿ ದಾವೆ ಹೂಡಲಿದ್ದೇನೆ. ಎಫ್ಐಆರ್ ದಾಖಲಿಸುವಂತೆ ಮಾಡುತ್ತೇನೆ. ಹೋರಾಟ ಮುಂದುವರೆಸುತ್ತೇನೆ ಎಂದು ಫಿಲ್ಮಿಬೀಟ್ಗೆ ಹೇಳಿದ್ದಾರೆ ಭರತ್.