"ಅಣ್ಣಾವ್ರ 'ಭಕ್ತ ಕನಕದಾಸ'ಕ್ಕಿಂತ ನಮ್ಮ ಸಿನಿಮಾ ಭಿನ್ನ.. ಉಪ್ಪಿ ಆ ಪಾತ್ರಕ್ಕೆ ನ್ಯಾಯ ಒದಗಿಸುತ್ತಾರೆ": ನಾಗಣ್ಣ
ಕನ್ನಡದಲ್ಲಿ ಮತ್ತೊಂದು ಐತಿಹಾಸಿಕ ಕಥಾಹಂದರದ ಚಿತ್ರಕ್ಕೆ ವೇದಿಕೆ ಸಿದ್ಧವಾಗಿದೆ. ಈ ಬಾರಿ ಪ್ರಸಿದ್ಧ ಕೀರ್ತನೆಕಾರ ಕನಕದಾಸರ ಕುರಿತು ಬಯೋಪಿಕ್ ಸಿನಿಮಾ ನಿರ್ಮಾಣವಾಗಲಿದೆ. ನಾಗಣ್ಣ ನಿರ್ದೇಶನದ ಈ ಚಿತ್ರದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಕನಕದಾಸರ ಪಾತ್ರಕ್ಕೆ ಜೀವ ತುಂಬುತ್ತಿದ್ದಾರೆ. ಈ ಸುದ್ದಿ ಕೇಳಿ ಅಭಿಮಾನಿಗಳು ಖುಷಿಯಾಗಿದ್ದಾರೆ. ಸಿನಿಮಾ ಬಗ್ಗೆ ನಿರ್ದೇಶಕರು ಫಿಲ್ಮಿಬೀಟ್ ಜೊತೆ ಮಾತನಾಡಿದ್ದಾರೆ.
ಈಗಾಗಲೇ ಉಪೇಂದ್ರ ಹಾಗೂ ನಾಗಣ್ಣ ಕಾಂಬಿನೇಷನ್ನಲ್ಲಿ ಗೋಕರ್ಣ, ಕುಟುಂಬ, ಗೌರಮ್ಮ ಹಾಗೂ ದುಬೈ ಬಾಬು ಸಿನಿಮಾಗಳು ಬಂದೋಗಿದೆ. ಇನ್ನು 'ಸಂಗೊಳ್ಳಿ ರಾಯಣ್ಣ' ರೀತಿಯ ಐತಿಹಾಸಿಕ ಹಾಗೂ 'ಕುರುಕ್ಷೇತ್ರ' ರೀತಿಯ ಪೌರಾಣಿಕ ಸಿನಿಮಾ ನಿರ್ದೇಶಿಸಿದ ಅನುಭವ ನಾಗಣ್ಣ ಅವರಿಗಿದೆ. ಉಪ್ಪಿ ನಿರ್ದೇಶಿಸಿ ನಟಿಸಿದ್ದ 'ಎ' ಚಿತ್ರವನ್ನು ನಿರ್ಮಿಸಿದ ಬಿ. ಜಗನ್ನಾಥ್ ಅವರ ಪುತ್ರ ಬಿ. ಜಿ ಮಂಜುನಾಥ್ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಸದ್ಯ ಪ್ರೀ ಪ್ರೊಡಕ್ಷನ್ ಕೆಲಸ ನಡೀತಿದ್ದು ಶೀಘ್ರದಲ್ಲೇ ಸಿನಿಮಾ ಘೋಷಣೆ ಆಗಲಿದೆ.

ನಾದಬ್ರಹ್ಮ ಹಂಸಲೇಖ ಚಿತ್ರಕ್ಕೆ ಬಂಡವಾಳ ಹೂಡುವುದು ಖಚಿತವಾಗಿದೆ. ಈಗಾಗಲೇ ಆ ನಿಟ್ಟಿನಲ್ಲಿ ಕೆಲಸ ಆರಂಭವಾಗಿದೆ. ಕನಕದಾಸರ ಕೀರ್ತನೆಗಳನ್ನು ಕೂಡ ಬಳಸಿ ಹಾಡುಗಳನ್ನು ಕಟ್ಟಿಕೊಡುವ ಸಾಧ್ಯತೆಯಿದೆ. ಈಗಾಗಲೇ ಕನ್ನಡದಲ್ಲಿ ಡಾ. ರಾಜ್ಕುಮಾರ್ ಭಕ್ತ ಕನಕದಾಸ ಚಿತ್ರದಲ್ಲಿ ನಟಿಸಿದ್ದಾರೆ. ಆದರೂ ಮತ್ತೊಂದು ಸಿನಿಮಾ ಯಾಕೆ? ವಿಭಿನ್ನ ಮ್ಯಾನರಿಸಂನಿಂದ ಗಮನ ಸೆಳೆದ ಉಪ್ಪಿ ಕನಸದಾಸರ ಪಾತ್ರದಲ್ಲಿ ಹೇಗೆ? ಎನ್ನುವ ಬಗ್ಗೆ ನಿರ್ದೇಶಕರು ಪ್ರತಿಕ್ರಿಯಿಸಿದ್ದಾರೆ.
ಮತ್ತೊಂದು ಬಯೋಪಿಕ್ ಯಾಕೆ?
ಅಣ್ಣಾವ್ರ ಭಕ್ತ ಕನಕದಾಸ ಸಿನಿಮಾ ಅದ್ಭುತ. ಅದನ್ನು ಟಚ್ ಮಾಡುವುದಕ್ಕೆ ಸಾಧ್ಯವಿಲ್ಲ. ಅದು ಬಿಟ್ಟು ಬೇರೆಯದ್ದೇ ರೀತಿಯಲ್ಲಿ ಈ ಸಿನಿಮಾ ಕಟ್ಟಿಕೊಡಲಿದ್ದೇವೆ. ಆ ಸಿನಿಮಾದಲ್ಲಿ ತೋರಿಸಿರದ ಒಂದಷ್ಟು ವಿಚಾರಗಳನ್ನು ಸೇರಿಸಿ ಈ ಸಿನಿಮಾ ಮಾಡುತ್ತಿದ್ದೇವೆ. ಕನಕದಾಸರ ಚರಿತ್ರೆಯನ್ನೇ ಆಧರಿಸಿ ಈ ಸಿನಿಮಾ ಬರುತ್ತದೆ. ಐತಿಹಾಸಿ ಜೊತೆಗೆ ಭಕ್ತಿ ಪ್ರಧಾನ ಸಿನಿಮಾ ಇದು.

ಕನಕದಾಸರ ಪಾತ್ರದಲ್ಲಿ ಉಪ್ಪಿ ಹೇಗೆ?
"ಉಪೇಂದ್ರ ಅದ್ಭುತ ನಟ ಎಂದು ಒಪ್ಪಿಕೊಳ್ಳುತ್ತೀರಾ ಅಲ್ಲವೇ? ಅವರು ಅದ್ಭುತ ನಟರಾಗಿರುವುದರಿಂದ ಅವರು ಯಾವ ಪಾತ್ರವನ್ನು ಬೇಕಾದರೂ ನಿಭಾಯಿಸಬಲ್ಲರು ಅನ್ನೋದು ಒಬ್ಬ ನಿರ್ದೇಶಕರಾಗಿ ನನಗೆ ಗೊತ್ತಿದೆ. 'ಗೌರಮ್ಮ' ಚಿತ್ರದಲ್ಲಿ ಒಂದು ಫೈಟ್ ಇಲ್ಲ, ಉಪ್ಪಿ ಸ್ಟೈಲ್ ಹೆಚ್ಚೇನು ಇಲ್ಲ, ಆದರೂ ಆ ಸಿನಿಮಾ 25 ವಾರ ಓಡ್ತಲ್ಲ. ಹಾಗಾಗಿ ಇಲ್ಲಿ ಇಮೇಜ್ ಮಾತು ಬರುವುದಿಲ್ಲ.
ಯಾವಾಗ ಸಿನಿಮಾ ಶುರುವಾಗುತ್ತದೆ?
ಸದ್ಯ ಸಿನಿಮಾ ಪ್ರೀ ಪ್ರೊಡಕ್ಷನ್ ವರ್ಕ್ ಚಾಲ್ತಿಯಲ್ಲಿದೆ. ಉಪೇಂದ್ರ ಅವರು 'ಯುಐ' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಆ ಸಿನಿಮಾ ಮುಗಿಯಬೇಕು. ಆದಷ್ಟು ಬೇಗ ಸಿನಿಮಾ ಘೋಷಣೆ ಮಾಡಬೇಕು. ಮೊದಲು ಟೈಟಲ್ ರಿವೀಲ್ ಮಾಡ್ತೀವಿ. ಉಪೇಂದ್ರ ಅವರ ಬಲ್ಕ್ ಡೇಟ್ಸ್ ಬೇಕು. ಯಾಕಂದರೆ ಗೆಟಪ್ ಎಲ್ಲಾ ಚೇಂಜ್ ಆಗಬೇಕು, ಗೆಟಪ್ಗಳು ಡಿಸೈನ್ ಮಾಡಿಸ್ತಿದ್ದೀವಿ ಅದಕ್ಕಾಗಿ ಕೊಂಚ ಸಮಯ ಹಿಡಿಯುತ್ತದೆ.
ಪ್ಯಾನ್ ಇಂಡಿಯಾ ಸಿನಿಮಾ ಆಗುತ್ತಾ?
"ನಾವು ಒಳ್ಳೆಯ ಕನ್ನಡ ಸಿನಿಮಾ ಮಾಡುತ್ತಿದ್ದೇವೆ. ಕನಕದಾಸರ ಕತೆ ಯೂನಿವರ್ಸಲ್ ಸಬ್ಜೆಕ್ಟ್. ಅದನ್ನು ಎಲ್ಲಿಗೆ ಬೇಕಾದರೂ ಕೊಂಡೊಯ್ಯಬಹುದು. ಎಲ್ಲಾ ಕಡೆಗೂ ನಮ್ಮ ಸಿನಿಮಾ ಕೂಡ ಹೋಗಬೇಕು. ಅದಕ್ಕಾಗಿ ನಾವು ಪ್ರಯತ್ನ ಪಡುತ್ತಿದ್ದೇವೆ. ಒಂದೊಳ್ಳೆ ಸಿನಿಮಾ ಮಾಡಲು ಬಹಳ ಉತ್ಸುಕರಾಗಿದ್ದೇವೆ." ಎಂದು ನಾಗಣ್ಣ ಮಾಹಿತಿ ನೀಡಿದ್ದಾರೆ.


Click it and Unblock the Notifications











