'ಗುಮ್ಮಡಿ ನರಸಯ್ಯ' ಸ್ಕ್ರಿಪ್ಟ್ ಪುನೀತ್ ಸರ್ಗೆ ಮೇಲ್ ಮಾಡಿದ್ದೆ, ಆದ್ರೆ ಶಿವಣ್ಣ ನಟಿಸುವಂತಾಯ್ತು"- ನಿರ್ದೇಶಕ ಪರಮೇಶ್ವರ್
ಕನ್ನಡ ನಟ ಶಿವರಾಜ್ಕುಮಾರ್ ಹೀರೊ ಆಗಿ ತೆಲುಗು ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. 'ಗುಮ್ಮಡಿ ನರಸಯ್ಯ' ಬಯೋಪಿಕ್ ಚಿತ್ರದಲ್ಲಿ ನಟಿಸುತ್ತಿದ್ದು ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಸಿನಿಮಾ ಘೋಷಣೆಯಾಗಿದೆ. ಅಖಂಡ ಆಂಧ್ರ ಪ್ರದೇಶದಲ್ಲಿ 5 ಬಾರಿ ಶಾಸಕರಾಗಿದ್ದ ಗುಮ್ಮಡಿ ನರಸಯ್ಯ ಜೀವನಾಧಾರಿತ ಚಿತ್ರದಲ್ಲಿ ಬಣ್ಣ ಹಚ್ಚಿರುವುದು ವಿಶೇಷ.
ಆಂಧ್ರದ ಮಾಜಿ ಶಾಸಕನ ಪಾತ್ರದಲ್ಲಿ ಶಿವಣ್ಣ ನಟಿಸುತ್ತಿರುವುದು ವಿಶೇಷ. ಫಸ್ಟ್ ಲುಕ್ ಪೋಸ್ಟರ್ನಿಂದಲೇ 'ಗುಮ್ಮಡಿ ನರಸಯ್ಯ' ಚಿತ್ರ ಕುತೂಹಲ ಮೂಡಿಸಿದೆ. ಪರಮೇಶ್ವರ್ ಹಿರ್ವಾಲೆ ಎಂಬ ಹೊಸ ನಿರ್ದೇಶಕರು ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ನಾಲ್ಕೈದು ವರ್ಷಗಳಿಂದ ಅವರು ಈ ಚಿತ್ರಕ್ಕಾಗಿ ಚಿತ್ರಕಥೆ ಸಿದ್ಧಪಡಿಸಿಕೊಂಡಿದ್ದಾರೆ.

'ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ' (CPI)ನ ಸದಸ್ಯರಾಗಿರುವ ಗುಮ್ಮಡಿ ನರಸಯ್ಯ 5 ಬಾರಿ ಶಾಸಕರಾಗಿ ಆಯ್ಕೆಯಾಗಿ ಜನರ ಸೇವೆ ಮಾಡಿದವರು. ರಾಜಕಾರಣ ಅಂದ್ರೆ ಹಣ ಮಾಡುವುದು ಎನ್ನುವುದು ಲೆಕ್ಕಾಚಾರ ಕೆಲವರಲ್ಲಿದೆ. ಆದರೆ ನರಸಯ್ಯ ಮಾತ್ರ ತಮ್ಮ ರಾಜಕೀಯ ಜೀವನದಲ್ಲಿ ನಯಾಪೈಸೆ ಹಣ ಮಾಡಿದವರಲ್ಲ. ಅಸೆಂಬ್ಲಿಗೂ ಕೂಡ ಸೈಕಲ್ನಲ್ಲೇ ಬರುತ್ತಿದ್ದರು. ದೂರದ ಊರುಗಳಿಗೆ ಬಸ್ನಲ್ಲೇ ಪ್ರಯಾಣ, ರಸ್ತೆ ಬದಿಯಲ್ಲೇ ಊಟ. ಹೀಗೆ ತಮ್ಮ ಸರಳ ಸಜ್ಜನ ವ್ಯಕ್ತಿತ್ವದಿಂದ ನರಸಯ್ಯ ಮನೆ ಮಾತಾದವರು.
ಈಗಾಗಲೇ 125ಕ್ಕೂ ಅಧಿಕ ಸಿನಿಮಾಗಳಲ್ಲಿ ಶಿವಣ್ಣ ನಟಿಸಿದ್ದಾರೆ. ಇದೀಗ ಅಖಂಡ ಆಂಧ್ರದ ರಾಜಕಾರಣಿ ಪಾತ್ರದಲ್ಲಿ ಶಿವರಾಜ್ಕುಮಾರ್ ನಟಿಸುತ್ತಿದ್ದು ಅವರ ವೃತ್ತಿ ಜೀವನದಲ್ಲಿ ಹೊಸ ಮೈಲಿಗಲ್ಲು ಆಗುವ ಸಾಧ್ಯತೆಯಿದೆ. 'ಗುಮ್ಮಡಿ ನರಸಯ್ಯ' ಚಿತ್ರದ ಬಗ್ಗೆ ನಿರ್ದೇಶಕ ಪರಮೇಶ್ವರ್ ಹಿವ್ರಳೆ ಎಕ್ಸ್ಕ್ಲೂಸಿವ್ ಆಗಿ ಫಿಲ್ಮಿಬೀಟ್ ಕನ್ನಡ ಜೊತೆ ಮಾತನಾಡಿದ್ದಾರೆ.

ಈ ಪಾತ್ರಕ್ಕೆ ಶಿವಣ್ಣನನ್ನು ಆಯ್ಕೆ ಮಾಡಿಕೊಂಡಿದ್ದು ಯಾಕೆ?
ನಾನು ನಾಲ್ಕು ವರ್ಷಗಳಿಂದ ಈ ಚಿತ್ರಕ್ಕಾಗಿ ಕಥೆ, ಚಿತ್ರಕಥೆ ಸಿದ್ಧಪಡಿಸಿಕೊಂಡಿದ್ದೆ. ನರಸಯ್ಯ ಹಾಗೂ ಅವರ ಕುಟುಂಬ, ಆ ಪ್ರಾಂತ್ಯದ ಜೊತೆ ಒಡನಾಟ ಇಟ್ಟುಕೊಂಡು ರಿಸರ್ಚ್ ಮಾಡಿ ತಯಾರಿ ನಡೆಸಿದ್ದೆ. ಸ್ಕ್ರಿಪ್ಟ್ಗೆ ತಕ್ಕಂತೆ ಕಲಾವಿದರನ್ನು ಆಯ್ಕೆ ಮಾಡಿಕೊಳ್ಳಲು ಮುಂದಾಗಿದ್ದೆ. ಆದರೆ ಭಗವಂತನ ನಿರ್ಣಯದಂತೆ ಈ ಕಥೆ ಶಿವಣ್ಣನ ಬಳಿಗೆ ಹೋಯಿತು. ಈ ಚಿತ್ರಕ್ಕೆ ದೊಡ್ಡ ಅಭಿಮಾನಿ ಬಳಗ ಇರುವ ನಟ ಬೇಕಿತ್ತು. ಒಬ್ಬ ಮಹಾನ್ ನಾಯಕನ ಕಥೆಯನ್ನು ಸಿನಿಮಾ ಮಾಡ್ತೀವಿ ಅಂದಾಗ ಅದನ್ನು ನೋಡಲು ಪ್ರಪಂಚ ಸಿದ್ಧವಿರಬೇಕು. ಈ ಕಥೆಯನ್ನು ಜನರ ಬಳಿ ತೆಗೆದುಕೊಂಡು ಹೋಗಲು ಶಿವಣ್ಣ ಸರಿಯಾದ ಆಯ್ಕೆ ಎಂದು ನನಗೆ ಅನ್ನಿಸಿತು. ಸ್ಕ್ರಿಪ್ಟ್ ಕೇಳಿದ ಕೂಡಲೇ ಅವರು ಒಪ್ಪಿದರು.
ಬೇರೆ ಯಾರಿಗಾದರೂ ಈ ಕಥೆಯನ್ನು ಹೇಳಿದ್ರಾ?
ಸಾಕಷ್ಟು ಚಿತ್ರ ನಿರ್ಮಾಣ ಸಂಸ್ಥೆಗಳು ಈ ಕಥೆ ಸಿನಿಮಾ ಮಾಡಲು ಮುಂದೆ ಬಂದಿದ್ದವು. ಕೆಲ ನಟರಿಗೂ ಕಥೆ ಹೇಳಿದ್ದೆ. ಡಾ. ರಾಜ್ಕುಮಾರ್ ಮಹಾನ್ ಕಲಾವಿದರು. ಅವರ ಮಗ ಪುನೀತ್ ರಾಜ್ಕುಮಾರ್ ಕೂಡ ಒಳ್ಳೆ ನಟ. ಶಿವಣ್ಣ ಬಗ್ಗೆ ಎಷ್ಟು ಹೇಳಿದ್ರು ಕಮ್ಮಿ. ಇದು ಕಾಲ್ಪನಿಕ ಕಥೆ ಅಲ್ಲ. ನರಸಯ್ಯ ಅವರ ನಿಜವಾದ ಕಥೆ. ಆ ಕಥೆಯನ್ನು ಹೇಳಲು ಶಿವರಾಜ್ಕುಮಾರ್ ರೀತಿಯ ಅದ್ಭುತ ನಟ ಬೇಕು.
ಶಿವಣ್ಣನ ಬಳಿಗೆ ಕಥೆ ಬಂದಿದ್ದು ಹೇಗೆ?
ಒಂದೂವರೆ ವರ್ಷದ ಹಿಂದೆ ಸುಧೀರ್ ಎಂಬ ಮ್ಯಾನೇಜರ್ ಮೂಲಕ ಈ ಸ್ಕ್ರಿಪ್ಟ್ ಶಿವಣ್ಣನ ಬಳಿಗೆ ಬಂತು. ಈ ಕಥೆಗೆ ಸೂಕ್ತವಾದ ನಟ ತೆಲುಗಿನಲ್ಲಿ ಇರಲಿಲ್ಲವೇ ಎಂದು ನೀವು ಕೇಳಬಹುದು. ಸಾಕಷ್ಟು ಜನ ಇದ್ದರೂ ಶಿವಣ್ಣನ ರೀತಿ ಪಾತ್ರ ನಿಭಾಯಿಸಬಲ್ಲವರು ಯಾರು ಇಲ್ಲ ಎಂದು ನನಗೆ ಅನ್ನಿಸಿತು. ಯಾರಿಗೂ ಹೇಳದ ಒಂದು ವಿಷಯ ಹೇಳ್ತೀನಿ. ನಾನು 4 ವರ್ಷದ ಹಿಂದೆ ಈ ಕಥೆಯನ್ನು ಪುನೀತ್ ರಾಜ್ಕುಮಾರ್ ಸರ್ಗೆ ಮೇಲ್ ಮಾಡಿದ್ದೆ. ಆದರೆ ದುರಾದೃಷ್ಟವಶಾತ್ ಅವರು ನಮ್ಮನ್ನಗಲಿದರು. ಈ ಕಥೆ ಅಪ್ಪು ಸರ್ಗೆ ಸೂಕ್ತವಾಗಿರುತ್ತದೆ ಎಂದುಕೊಂಡಿದ್ದೆ. ಆದೆ ಕೊನೆಗೆ ಅವರ ಕುಟುಂಬದ ನಟನಿಗೆ ಆ ಕಥೆ ಸಿನಿಮಾ ಮಾಡುವಂತಾಗಿದೆ.
ಶಿವರಾಜ್ಕುಮಾರ್ ನಟಿಸಿದ ಯಾವ ಸಿನಿಮಾಗಳನ್ನು ನೋಡಿದ್ದೀರಾ?
'ಓಂ', 'ಜೋಗಿ' ಸೇರಿದಂತೆ ಶಿವರಾಜ್ಕುಮಾರ್ ನಟಿಸಿದ ಕೆಲ ಸಿನಿಮಾಗಳನ್ನು ನೋಡಿದ್ದೀನಿ. ಅವರ ನಟನೆ ನೋಡಿ ಬೆರಗಾಗಿದ್ದೀನಿ. ಒಳ್ಳೆ ನಟ ಮಾತ್ರವಲ್ಲ ಅದ್ಭುತ ವ್ಯಕ್ತಿತ್ವ ಅವರದ್ದು. 'ಜೈಲರ್' ಚಿತ್ರದಲ್ಲಿ ನರಸಿಂಹ ಪಾತ್ರದಲ್ಲಿ ಶಿವಣ್ಣ ನಟನೆ ನೋಡಿ ಅಚ್ಚರಿಗೊಂಡಿದ್ದೆ. 'ಗುಮ್ಮಡಿ ನರಸಯ್ಯ' ಚಿತ್ರದಲ್ಲಿ ಅವರನ್ನು ಮತ್ತಷ್ಟು ಅದ್ಭುತವಾಗಿ ತೋರಿಸುವ ಪ್ರಯತ್ನ ಮಾಡುತ್ತೇನೆ.
ಫೋಟೊ ಶೂಟ್ ಎಲ್ಲಿ, ಯಾವಾಗ ಮಾಡಿದ್ದು?
ವಾರದ ಹಿಂದೆ ಬೆಂಗಳೂರಿಗೆ ಬಂದಿದ್ದೆ. ಡಾ. ರಾಜ್ಕುಮಾರ್, ಪುನೀತ್ ರಾಜ್ಕುಮಾರ್, ಪಾರ್ವತಮ್ಮ ರಾಜ್ಕುಮಾರ್ ಸಮಾಧಿಗೆ ಭೇಟಿ ನೀಡಿದ್ದೆ. ಬಳಿಕ ಅರ್ಧ ದಿನದಲ್ಲಿ ಶಿವಣ್ಣನಿಗೆ ಆ ಗೆಟಪ್ ಹಾಕಿಸಿ ಫೋಟೊಶೂಟ್ ಮಾಡಿಸಿದ್ದು. ಅವರಿಗೆ ಕಥೆ ಹೇಳುವಾಗ ನಾನು ಒಬ್ಬ ಸ್ಟಾರ್ ನಟನನ್ನು ನೋಡಲಿಲ್ಲ. ಅವರಲ್ಲಿ ಗುಮ್ಮಡಿ ನರಸಯ್ಯ ಅವರನ್ನು ನೋಡಿದೆ. ಈ ಚಿತ್ರದಲ್ಲಿ ಸಾಕಷ್ಟು ಭಾವನಾತ್ಮಕ ಸಂಗತಿಗಳಿವೆ. ಅದನ್ನೆಲ್ಲಾ ಶಿವಣ್ಣ ಅದ್ಭುತವಾಗಿ ತೆರೆಮೇಲೆ ತರುತ್ತಾರೆ ಎನ್ನುವ ನಂಬಿಕೆಯಿದೆ. ಮೊದಲ ಪ್ರಯತ್ನದಲ್ಲೇ ನನಗೆ ಅವರನ್ನು ನಿರ್ದೇಶಿಸುವ ಅವಕಾಶ ಸಿಕ್ಕಿರುವುದು ನನ್ನ ಭಾಗ್ಯ.
ನಿಮ್ಮ ಹಿನ್ನೆಲೆ, ಯಾವೆಲ್ಲಾ ಸಿನಿಮಾಗಳಲ್ಲಿ ಕೆಲಸ ಮಾಡಿದ್ದೀರಾ?
ನಾನು ನಟನಾಗಿ 10 ಸಿನಿಮಾಗಳಲ್ಲಿ ನಟಿಸಿದ್ದೀನಿ. ತೆಲುಗು ಹಾಗೂ ಮರಾಠಿ ಚಿತ್ರಗಳಿಗೆ ಕಾಣಿಸಿಕೊಂಡಿದ್ದೀನಿ. ಆದರೆ 5 ವರ್ಷಗಳಿಂದ ಸಿನಿಮಾ ನಿರ್ದೇಶಕನಾಗುವ ಕನಸು ಕಾಣುತ್ತಿದ್ದೇವೆ. ಅದಕ್ಕಾಗಿ ಗುಮ್ಮಡಿ ನರಸಯ್ಯ ಅವರ ಕಥೆಯನ್ನು ಸಿದ್ಧಪಡಿಸುತ್ತಿದ್ದೇನೆ. ನಿರ್ದೇಶಕನಾಗಿ ಇದು ನನ್ನ ಮೊದಲ ಸಿನಿಮಾ. ನಾವು ಬದುಕಲು ರಾಜಕೀಯಕ್ಕೆ ಬರಬಾರದು, ನಮ್ಮನ್ನು ನಂಬಿದವರಿಗಾಗಿ ರಾಜಕೀಯಕ್ಕೆ ಬರಬೇಕು ಎನ್ನುವ ಅಂಶವನ್ನು ಈ ಸಿನಿಮಾ ಮೂಲಕ ಹೇಳಲು ಹೊರಟ್ಟಿದ್ದೇನೆ. ಕಮರ್ಷಿಯಲ್ ಅಂಶಗಳನ್ನು ಬೆರಸಿ ಸಿನಿಮಾ ಕಟ್ಟಿಕೊಡುತ್ತಿದ್ದೇನೆ.
ಸಿನಿಮಾ ಮಾಡಲು ನರಸಯ್ಯ ಅವರ ಅನುಮತಿ ಸಿಕ್ಕಿದ್ಯಾ? ಯಾವಾಗ ಶೂಟಿಂಗ್?
ಕಳೆದ 4 ವರ್ಷಗಳಿಂದ ನರಸಯ್ಯ ಅವರೊಟ್ಟಿಗೆ ನಾನು ಜರ್ನಿ ಮಾಡುತ್ತಿದ್ದೇನೆ. ಅನುಮತಿ ವಿಚಾರದಲ್ಲಿ ಯಾವುದೇ ಗೊಂದಲ ಇಲ್ಲ. ನಾನು ಅವರ ಮನೆ ಮಗನೇ ಆಗಿಬಿಟ್ಟಿದ್ದೀನಿ. ನಮ್ಮ ನಡುವೆಯೇ ಇರುವ ನಾಯಕನ ಕಥೆಯನ್ನು ತೆರೆಗೆ ತರುವುದು ಅಷ್ಟು ಸುಲಭವಲ್ಲ. ಡಿಸೆಂಬರ್ನಲ್ಲಿ ಸಿನಿಮಾ ಚಿತ್ರೀಕರಣವಾಗುತ್ತದೆ. ನರಸಯ್ಯ ಅವರ ಯೆಲ್ಲಂಡು ಪ್ರಾಂತ್ಯದ ಸುತ್ತಾಮುತ್ತಾ ಹಾಗೂ ಬೇರೆ ಕಡೆಗಳಲ್ಲಿ ಸಿನಿಮಾ ಶೂಟಿಂಗ್ ಮಾಡುವ ತಯಾರಿ ನಡೀತಿದೆ. ಸಿನಿಮಾ ಯಾವಾಗ ಬಿಡುಗಡೆ ಎಂದು ಈಗಲೇ ಹೇಳುವುದು ಕಷ್ಟ. ಕನ್ನಡ ಹಾಗೂ ತೆಲುಗಿನಲ್ಲಿ ಏಕಕಾಲಕ್ಕೆ ಚಿತ್ರೀಕರಣ ನಡೆಸುತ್ತೇವೆ. ಬೇರೆ ಭಾಷೆಗಳಿಗೆ ಡಬ್ ಮಾಡುತ್ತೇವೆ.
ಕಲಾವಿದರು ಹಾಗೂ ತಂತ್ರಜ್ಞರ ತಂಡದ ಬಗ್ಗೆ ಹೇಳಿ
ಬೇರೆ ಭಾಷೆಯ ಸ್ಟಾರ್ ನಟರು ಕೂಡ ಈ ಚಿತ್ರದಲ್ಲಿ ನಟಿಸುವ ಸಾಧ್ಯತೆಯಿದೆ. ಆ ಬಗ್ಗೆ ಚರ್ಚೆ ನಡೀತಿದ್ದು ಮುಂದಿನ ದಿನಗಳಲ್ಲಿ ಮಾಹಿತಿ ದೊರೆಯಲಿದೆ. ಇನ್ನುಳಿದಂತೆ ಸತೀಶ್ ಮುತ್ಯಾಲ ಛಾಯಾಗ್ರಹಣ, ಸುರೇಶ್ ಬೊಬ್ಬಿಲಿ ಸಂಗೀತ ಚಿತ್ರಕ್ಕಿದೆ. ಒಳ್ಳೆ ತಂತ್ರಜ್ಞರ ತಂಡ ನನಗೆ ಸಿಕ್ಕಿದೆ. ಒಂದೊಳ್ಳೆ ಸಿನಿಮಾ ಕಟ್ಟಿಕೊಡುವ ಭರವಸೆ ಮೂಡಿದೆ.


Click it and Unblock the Notifications











