Don't Miss!
- Lifestyle ಕಂಡ ಕಂಡಲ್ಲಿ ಏಕೆ ಉಗುಳಬಾರದು ಗೊತ್ತಾ? ಈ ವಿಡಿಯೋ ನೋಡಿ..!
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- News ಮಂಡ್ಯದ ‘ಹಲವು ಸುಮಲತಾ’ ತಂತ್ರ ಬೆಂಗಳೂರು ಗ್ರಾಮಾಂತದಲ್ಲೂ ಬಂತಾ? ಮತ್ತೊಬ್ಬ ಡಾ ಸಿಎನ್ ಮಂಜುನಾಥ್ ಕಣಕ್ಕೆ!
- Sports IPL 2024: ರಾಜಸ್ಥಾನ್ ರಾಯಲ್ಸ್ vs ಡೆಲ್ಲಿ ಕ್ಯಾಪಿಟಲ್ಸ್ ರೋಚಕ ಪಂದ್ಯದ ಟಾಸ್ ವರದಿ, ಆಡುವ 11ರ ಬಳಗ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಡ್ರೋನ್ ಪ್ರತಾಪ್ ಬಯೋಪಿಕ್ ಕಥೆ ಏನಾಯ್ತು?: ನಿರ್ದೇಶಕರು ತೆರೆದಿಟ್ಟ ರಸವತ್ತಾದ ಸಂಗತಿ
ಕಟ್ಟುಕಥೆಯ ಮೂಲಕ ಇಡೀ ದೇಶದ ಗಮನ ಸೆಳೆದ ಡ್ರೋನ್ ಪ್ರತಾಪ್, ಈಗ ಮೀಮ್ಗಳಿಗೆ ಆಹಾರವಾಗಿದ್ದಾರೆ. ಡ್ರೋನ್ ಮಾಡುವ ಮೂಲಕ ಪ್ರಶಸ್ತಿಗಳನ್ನು ಪಡೆದಿದ್ದೇನೆ ಎಂದು ಹೇಳಿದ್ದ ಪ್ರತಾಪ್ ಮಾತುಗಳನ್ನು ನಂಬದವರಿಲ್ಲ. ಹಾಗೆಯೇ ನಂಬಿ ಕೆಟ್ಟವರು ಈಗ ಆತನ ವಿರುದ್ಧ ಕಿಡಿಕಾರುತ್ತಿದ್ದಾರೆ. ಉಳಿದವರು ಲೇವಡಿ ಮಾಡುತ್ತಿದ್ದಾರೆ. ಆದರೆ ಅಂದುಕೊಂಡಂತೆ ನಡೆದಿದ್ದರೆ ಈ ವೇಳೆಗೆ ಡ್ರೋನ್ ಪ್ರತಾಪ್ ಜೀವನವನ್ನಾಧರಿಸಿದ ಸಿನಿಮಾ ಬರಬೇಕಿತ್ತು ಎನ್ನುವುದು ಗೊತ್ತೇ?
ನಿಜ. ಡ್ರೋನ್ ಪ್ರತಾಪ್ ಕುರಿತಾದ ಸಿನಿಮಾಕ್ಕೆ ಕಥೆ ಶೇ 90ರಷ್ಟು ಸಿದ್ಧವಾಗಿತ್ತು. ಕ್ಲೈಮ್ಯಾಕ್ಸ್ ಕಥೆ ಬರೆಯುವ ವೇಳೆ ಪ್ರತಾಪ್ ಸಹಕಾರ ಸಿಗದೆ ಅಲ್ಲಿಗೇ ನಿಂತುಹೋಗಿತ್ತು. ಈ ಚಿತ್ರದಲ್ಲಿ ಸ್ವತಃ ಪ್ರತಾಪ್ ನಟಿಸಲಿದ್ದರು. ಅದಕ್ಕೆ ಮುಂಗಡ ಸಂಭಾವನೆ ಪಡೆದು ಒಪ್ಪಂದ ಕೂಡ ಮಾಡಿಕೊಂಡಿದ್ದರು. ಪ್ರತಾಪ್ ವಿವರಿಸಿದ್ದ ಕಥೆ ಕೇಳಿದ್ದ ನಿರ್ದೇಶಕರು ಬೆರಗಾಗಿದ್ದರು. ನೀವು ಪ್ರತಾಪ್ ಭಾಷಣಗಳಲ್ಲಿ, ಸಂದರ್ಶನಗಳಲ್ಲಿ ಕೇಳಿದ್ದು ಏನೂ ಅಲ್ಲ, ಅಷ್ಟು ಅದ್ಭುತವಾಗಿ ಕಥೆಗಳನ್ನು ಹೇಳಿದ್ದರು ಎನ್ನುತ್ತಾರೆ ನಿರ್ಮಾಪಕ, ನಿರ್ದೇಶಕ ರಾಜಶೇಖರ್.
ಹೊಟ್ಟೆ ತುಂಬಾ ನಗು ಬಡಿಸಲಿದೆ 'ಫ್ರೆಂಚ್ ಬಿರಿಯಾನಿ': ನಿರ್ದೇಶಕ ಪನ್ನಗಾಭರಣ ಸಂದರ್ಶನ
ಅಂದಹಾಗೆ, ಡ್ರೋನ್ ಪ್ರತಾಪ್ ಸಿನಿಮಾ ಕಥೆ ಶುರುವಾಗಿದ್ದು ಹೇಗೆ? ಅದು ಎಲ್ಲಿಯವರೆಗೆ ಹೋಯ್ತು? ಮುಂದಿನ ಕಥೆ ಏನು? ಇತ್ಯಾದಿ ಕುತೂಹಲಗಳನ್ನು ರಾಜಶೇಖರ್ ರಸವತ್ತಾದ ಪ್ರಸಂಗಗಳ ಮೂಲಕ ತಣಿಸಿದ್ದಾರೆ. 'ಫಿಲ್ಮಿಬೀಟ್' ಜತೆ ಅವರ ಮಾತುಕತೆಯ ಆಯ್ದ ಭಾಗ ಇಲ್ಲಿದೆ. ಮುಂದೆ ಓದಿ.
ಎಲ್ಲರಿಗೂ ರೋಮಾಂಚನವಾಗಿತ್ತು
ಒಂದು ವರ್ಷದ ಹಿಂದೆ ಡ್ರೋನ್ ಪ್ರತಾಪ್ ಮತ್ತು ನಾನು ಭೇಟಿಯಾಗಿದ್ದೆವು. ಆಗ ನಾನು ಸಿನಿಮಾ ನಿರ್ದೇಶಕ ಎಂದು ಅವರಿಗೆ ಗೊತ್ತಾಯ್ತು. ಹಾಗೆ ಮಾತನಾಡುವಾಗ ನಿಮ್ಮದೇ ಸಿನಿಮಾ ಮಾಡೋಣ ಎಂದೆ. ಆಗ ಅವರು 'ಮಾಡಿ ಮಾಡಿ' ಎಂದು ಬಹಳ ಹುಮ್ಮಸ್ಸು ತೋರಿಸಿದರು. ನಿರ್ದೇಶಕರಾದ ಅರ್ಜುನ್ ಕುಮಾರ್, ಚಂದ್ರಕಾಂತ್, ಉಮಾಕಾಂತ್ ಎಲ್ಲರ ಜತೆ, ನಾಲ್ಕೈದು ಸ್ಕ್ರಿಪ್ಟ್ ರೈಟರ್ಗಳನ್ನು ಕೂರಿಸಿಕೊಂಡು ನಾಲ್ಕೈದು ದಿನ ಕಥೆ ಕೇಳಿದೆವು. ಅಬ್ಬಾ! ಎಲ್ಲರಿಗೂ ಬಹಳ ರೋಮಾಂಚನವಾಯ್ತು.
ಯಾರೂ ಇಷ್ಟು ಚೆನ್ನಾಗಿ ಕಥೆ ಹೇಳುವುದಿಲ್ಲ!
ಟಿವಿನಲ್ಲಿ ಏನು ಹೇಳುತ್ತಾನೋ ಅದಕ್ಕಿಂತಲೂ ಅದ್ಭುತವಾಗಿ ಹೇಳಿದ್ದ. ನನ್ನ ಅನುಭವದ ಪ್ರಕಾರ ಯಾವ ಸ್ಕ್ರಿಪ್ಟ್ ರೈಟರ್ ಕೂಡ ಇಷ್ಟು ಚೆನ್ನಾಗಿ ಕಥೆ ಹೇಳುವುದಿಲ್ಲ. ಏಕೆಂದರೆ ಈಗ ಗೊತ್ತಾಗಿದ್ದು ತಾನೆ ಅದೆಲ್ಲವೂ ಕಥೆ ಎಂದು. ಚಿಕ್ಕ ಹುಡುಗನಾಗಿದ್ದಾಗ ಸೈಕಲ್ಗೆ ಒಂದು ಮೋಟಾರ್ ಹಾಕಿದ್ದನಂತೆ. ಅ ಮೋಟಾರಲ್ಲಿ ತಂಗಿಯನ್ನು ಮತ್ತು ಪಕ್ಕದ ಮನೆಯ ಚಿಕ್ಕ ಹುಡುಗಿಯನ್ನು ಕೂರಿಸಿದ್ದನಂತೆ. ಅದು ಡರ್ ಎಂದು ತಿರುಗಿ ಇಬ್ಬರನ್ನೂ ಬೀಳಿಸಿಬಿಟ್ಟಿತಂತೆ. ಪಕ್ಕದ ಮನೆಯವರು ಇವನ ಅಪ್ಪ ಅಮ್ಮನಿಗೆ ದೂರು ನೀಡಿದರಂತೆ. ಅಪ್ಪ ಅವನನ್ನು ಮೋರಿಯಲ್ಲಿ ಹಾಕಿ ರಕ್ತ ಬರುವಂತೆ ತುಳಿದು ಹಾಕಿಬಿಟ್ಟರಂತೆ. ಈ ರೀತಿಯ 15-20 ಕಥೆಗಳಿದ್ದವು.
ಡೈಲಾಗ್ ಬರೆದರೆ ಸಾಕಿತ್ತು
ನಾವು ಇದೆಲ್ಲ ಸತ್ಯ ಎಂದೇ ತಿಳಿದೇ ಸ್ಕ್ರಿಪ್ಟ್ ಮಾಡಿಕೊಂಡಿದ್ದೆವು. ಯಾವ ನಿರ್ದೇಶಕರಿಗೂ ಇಷ್ಟು ಚೆನ್ನಾಗಿ ಕಥೆ ಬರೆಯಲು ಬರುವುದಿಲ್ಲ. ಅವನು ಹೇಳಿದ್ದ ಕಥೆ ಹೇಗಿತ್ತು ಎಂದರೆ ಆ ಸ್ಕ್ರಿಪ್ಟ್ ಬದಲಿಸಲು ಆಗುತ್ತಿರಲಿಲ್ಲ, ಅಷ್ಟು ಚೆನ್ನಾಗಿ ಹೇಳಿದ್ದ. ನಾವು ಬರಿ ಡೈಲಾಗ್ ಬರೆದರೆ ಸಾಕಿತ್ತು!
ಆಸೆಗಳಿದ್ದರೆ ತಾನೆ ಈ ಸಮಯದಲ್ಲಿ ಕಷ್ಟ ಎನಿಸೋದು?: ಬಿರಾದಾರ್ ಜೀವನ ಪಾಠ
ಕೈಕೊಟ್ಟ ಕ್ಲೈಮ್ಯಾಕ್ಸ್
ಪ್ರತಿಯೊಂದನ್ನೂ ಕಣ್ಣಿಗೆ ಕಟ್ಟುವಂತೆ ಚೆನ್ನಾಗಿ ಹೇಳಿದ್ದ ಪ್ರತಾಪ್, ಕೊನೆಯ ಹತ್ತು ನಿಮಿಷದ ಕಥೆ ಮಾತ್ರ ಹೇಳಲಿಲ್ಲ. ಕ್ಲೈಮ್ಯಾಕ್ಸ್ನಲ್ಲಿ ಪ್ರೈಜ್, ಗೋಲ್ಡ್ ಮೆಡಲ್ ತೆಗೆದುಕೊಂಡಿದ್ದರ ದಾಖಲೆಗಳನ್ನು ಕೇಳಿದಾಗ ಟುಸ್ ಆದ. ಅವುಗಳನ್ನು ಮತ್ತೆ ಕೊಡುತ್ತೇನೆ ಎಂದು ಹೊರಟು ಹೋದ. 2017ರ ಜಪಾನ್ ಕಾರ್ಯಕ್ರಮ ಸೇರಿದಂತೆ ಆತ ಹೇಳಿದ ಪ್ರಶಸ್ತಿಗಳಿಗೆಲ್ಲ ಹುಡುಕಿ ನೋಡಿದರೆ ಎಲ್ಲೂ ಇಲ್ಲ. ಆತನನ್ನೇ ಕೇಳಿದೆವು. ಎಲ್ಲಪ್ಪಾ ಫೋಟೊಗಳೇ ಇಲ್ವಲ್ಲಾ ಎಂದು. ನಮಗೆ ಬೇಕಾಗಿದ್ದು ಕ್ಲೈಮ್ಯಾಕ್ಸ್ ಮಾತ್ರ. ಹೀಗಾಗಿ ಚಿತ್ರದ ಕ್ಲೈಮ್ಯಾಕ್ಸ್ ಬಗ್ಗೆಯಷ್ಟೇ ಆತನಿಗೆ ನಮ್ಮ ಪ್ರಶ್ನೆಗಳಿದ್ದವು.
ಸಿನಿಮಾ ಮಾಡಲು ಪೈಪೋಟಿ
ಆದರೆ ಆತ ಕೊಡ್ತೀನಿ, ಬರ್ತೀನಿ ಎನ್ನುತ್ತಾ ಹೇಳಿಕೊಂಡೇ ಹೋದ. ಕೊನೆಗೂ ಬರಲಿಲ್ಲ. ಈ ಸಿನಿಮಾವನ್ನು ನಾನು ನಿರ್ದೇಶಿಸಬೇಕು ಎಂದುಕೊಂಡಿದ್ದೆ. ಬಳಿಕ ಕವಿತಾ ಲಂಕೇಶ್ ಅವರ ನಿರ್ದೇಶನದಲ್ಲಿ ಮಾಡಿಸಲು ಮುಂದಾಗಿದ್ದೆ. ಅವರೊಂದಿಗಿನ ಒಂದು ಸಿನಿಮಾ ನಿಂತು ಹೋಗಿತ್ತು. ಹೀಗಾಗಿ ಅವರ ಜತೆ ಮಾತುಕತೆ ನಡೆಸಿದ್ದೆ. ಅವರಿಗೆ ಅಡ್ವಾನ್ಸ್ ಕೂಡ ನೀಡಿದ್ದೆ. ಐದಾರು ಕೋಟಿ ಬಜೆಟ್ನ ಸಿನಿಮಾ ಆಗುತ್ತಿತ್ತು. ಅತ್ತ ನಿರ್ದೇಶಕ ಉಮಾಶಂಕರ್ ನಾನು ಸಿನಿಮಾ ಮಾಡುತ್ತೇನೆ ಎಂದಿದ್ದರು. ಹೀಗೆ ಡ್ರೋನ್ ಪ್ರತಾಪನ ಸಿನಿಮಾ ಮಾಡಲು ಪೈಪೋಟಿ ಹೇಗಿತ್ತು ಎಂಬುದನ್ನು ರಾಜಶೇಖರ್ ವಿವರಿಸಿದರು.
ಬೇರೆಯವರ ಬಳಿ ಮಾಡಿಸುತ್ತೇನೆ ಎಂದ
ಕೊನೆಗೂ ಕ್ಲೈಮ್ಯಾಕ್ಸ್ ಸಿಗಲೇ ಇಲ್ಲ. ಹೀಗಾಗಿ ಸಿನಿಮಾವನ್ನು ಪೆಂಡಿಂಗ್ ಇಟ್ಟುಕೊಂಡಿದ್ದೆವು. ನಾಲ್ಕೈದು ತಿಂಗಳ ಹಿಂದೆ ಅವನೇ ಬಂದ. 'ಸಾರ್ ನೀವು ತಡಮಾಡುತ್ತಿದ್ದೀರಿ, ಸಿನಿಮಾ ಶುರು ಮಾಡಿಯೇ ಇಲ್ಲ' ಎಂದ. ಇಷ್ಟು ಸ್ಕ್ರಿಪ್ಟ್ ರೆಡಿ ಇದೆ. ನೀನು ಕ್ಲೈಮ್ಯಾಕ್ಸ್ಗೆ ಸರಿಯಾದ ಕಂಟೆಂಟ್ ಕೊಟ್ಟಿಲ್ಲ. ಇಷ್ಟು ರೆಡಿ ಮಾಡಿ ಸಿನಿಮಾ ಮಾಡದೆ ಇರುತ್ತೀವಾ? ಎಂದೆ. 'ಇಲ್ಲ, ಬೇರೆ ನಿರ್ದೇಶಕರು ಬಲವಂತ ಮಾಡುತ್ತಿದ್ದಾರೆ. ನಿಮ್ಮ ಹಣ ವಾಪಸ್ ಕೊಡುತ್ತೇನೆ. ಸಿನಿಮಾ ಬಿಟ್ಟುಬಿಡಿ' ಎಂದ. ಸಿನಿಮಾ ಮಾಡುವುದಾಗಿ ಆತನೊಂದಿಗೆ ಮೊದಲೇ ಒಪ್ಪಂದ ಆಗಿತ್ತು. ಸರಿಯಪ್ಪ, ನೀನು ಹಣ ವಾಪಸ್ ಕೊಡು. ಒಳ್ಳೆಯ ನಿರ್ದೇಶಕರು ಸಿನಿಮಾ ಮಾಡಲಿ, ಎಲ್ಲರಿಗೂ ಸ್ಫೂರ್ತಿಯಾಗಲಿ ಎಂದು ಸ್ವಲ್ಪ ದುಃಖ ಆದರೂ ಒಪ್ಪಿಕೊಂಡೆ. ನಮ್ಮ ಹುಡುಗರನ್ನು ಕರೆಯಿಸಿ ಆತನಿಂದ ಹಣ ವಾಪಸ್ ಬಂದ ಕೂಡಲೇ ಅಗ್ರಿಮೆಂಟ್ ಹಿಂದಕ್ಕೆ ಕೊಡಿ ಎಂದು ಹೇಳಿ ಕಳಿಸಿದ್ದೆ. ಅದಾದ ಬಳಿಕ ಮತ್ತೆ ಆಸಾಮಿ ಪತ್ತೆ ಇರಲಿಲ್ಲ.
ಈ ಸಿನಿಮಾ ಬಿಡಬೇಡಿ!
ಈಗ ನೋಡಿದರೆ ಈ ಕಥೆ ತೆರೆದುಕೊಂಡಿತು. ಆ ಕಥೆಗೆ ನಿಜವಾದ ಕ್ಲೈಮ್ಯಾಕ್ಸ್ ಈಗ ಸಿಕ್ಕಿತು! ಸಿನಿಮಾ ಬಗ್ಗೆ ಗೊತ್ತಿರುವ ಅನೇಕರು ಈಗ ಫೋನ್ ಮಾಡುತ್ತಿದ್ದಾರೆ. ಇದೇ ಕಥೆಯನ್ನು ಸಿನಿಮಾ ಮಾಡಿ, ಬಿಡಬೇಡಿ ಎಂದು ಹೇಳುತ್ತಿದ್ದಾರೆ. ನನ್ನ ಮತ್ತೊಂದು ಸಿನಿಮಾ 'ತ್ರಿಕೋನ'ದ ಪ್ರಚಾರ ಮಾಡುತ್ತಿದ್ದರೆ, ಅದು ಬೇಡ ಡ್ರೋನ್ ಬಗ್ಗೆ ಹೇಳಿ ಎನ್ನುತ್ತಾರೆ. 'ತ್ರಿಕೋನ' ಸಿನಿಮಾ ಬಿಡುಗಡೆಯಾದ ಬಳಿಕ ಡ್ರೋನ್ ಪ್ರತಾಪ್ ಸಿನಿಮಾ ಶುರು ಮಾಡುವವನಿದ್ದೆ.
ಕಲಾವಿದರನ್ನೂ ಆಯ್ಕೆ ಮಾಡಿದ್ದ
ವಿಶೇಷ ಗೊತ್ತೇ? ತಮ್ಮ ಚಿತ್ರದಲ್ಲಿ ಯಾರು ನಟಿಸಬೇಕು ಎಂದು ಕಲಾವಿದರನ್ನೂ ಆತನೇ ಹೆಸರಿಸಿದ್ದ. ಅಪ್ಪನ ಪಾತ್ರಕ್ಕೆ ಅಚ್ಯುತ್ ರಾವ್, ಅಮ್ಮನ ಪಾತ್ರಕ್ಕೆ ಶ್ರುತಿ ಮೇಡಂ ಹಾಕಿ, ತಮ್ಮ ಬಾಲ್ಯದ ಕಥೆಗೆ ಸರ್ಕಾರಿ ಪ್ರಾಥಮಿಕ ಶಾಲೆ ಮಾಡಿದ್ದ ಹುಡುಗನನ್ನು ಹಾಕಿ ಎಂದು ಪ್ರತಿ ಕಲಾವಿದರನ್ನೂ, ಕ್ಯಾಮೆರಾ ಯಾವುದನ್ನು ಬಳಸಬೇಕು, ತಂತ್ರಜ್ಞರನ್ನು ಯಾರನ್ನು ಹಾಕಿಕೊಳ್ಳಬೇಕು ಎಂಬ ಸಲಹೆಯನ್ನೂ ಆತನೇ ನೀಡಿದ್ದ.
ಟಿವಿ ಸಂದರ್ಶನದಲ್ಲಿ ನೋಡಿದ್ದು ಏನೂ ಅಲ್ಲ
ನೀವು ಟಿವಿಯಲ್ಲಿ ನೋಡಿರುವುದು ಏನೂ ಅಲ್ಲ. ನನಗೆ ಕೊಟ್ಟಿರುವ ಕಥೆ ಅಷ್ಟೊಂದಿದೆ! ಆಫೀಸರ್ ಹತ್ತಿರ ಸೈನ್ ಹಾಕಿಸಿಕೊಂಡು ಬರಲು ಒಂದು ವಾರ ನಿಂತಿದ್ದೆ ಎಂದು ಟಿವಿಯಲ್ಲಿ ಹೇಳಿದ್ದ. ಆದರೆ ನಮ್ಮ ಬಳಿ ಹೇಳಿದ್ದು ಮೂವತ್ತು ದಿನ ಎಂದು. ಟೀ ಅಂಗಡಿಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದನಂತೆ. ಟೀ ಕುಡಿಯುವುದು, ಅಲ್ಲಿ ಕೆಲಸ ಮಾಡೋದು, ಬೆಳಿಗ್ಗೆಯಿಂದ ಸಂಜೆಯವರೆಗೂ ಆಫೀಸ್ ಮುಂದೆ ನಿಲ್ಲೋದು. ಮೂವತ್ತ ಒಂದನೇ ದಿನ ಆ ಅಧಿಕಾರಿ ಸಹಿ ಹಾಕಿದ್ದರಂತೆ. ಅವರು ಫಾರ್ಮುಲಾ ಕೇಳುತ್ತಿದ್ದರು. ನಾನು ಕೊಡುತ್ತಿರಲಿಲ್ಲ. ಒಬ್ಬ ಸೈಂಟಿಸ್ಟ್ ಆಗಿ ಇನ್ನೊಬ್ಬ ಸೈಂಟಿಸ್ಟ್ ಫಾರ್ಮುಲಾ ಏಕೆ ಕೇಳುತ್ತಾರೆ ಎಂದು ನನಗೆ ಗೊತ್ತಾಗುವುದಿಲ್ಲವೇ? ಹೇಗೆ ಕೊಡಲಿ ಸಾರ್. ದಿನವೂ ಹೋಗಿ ನಿಲ್ಲುತ್ತಿದ್ದೆ ಎಂದು ಹೇಳಿದ್ದ. ಈ ರೀತಿಯ ಎಷ್ಟು ಕಥೆಯೋ ಲೆಕ್ಕವಿಲ್ಲ. ಎರಡು ಪಾರ್ಟ್ ಸಿನಿಮಾ ಮಾಡಬಹುದು.
ಅನುಮಾನ ಹೇಗೆ ಬರುತ್ತದೆ?
ಆತನ ಬಾಲ್ಯದಿಂದಲೂ ಮಾಡಿದ ಸಾಹಸಗಳ ಕಥೆ ಇದೆ. ಸಿನಿಮಾ ಚೆನ್ನಾಗಿ ಆಗಬೇಕೆಂದು ನಿರ್ದೇಶಕ ಉಮಾಕಾಂತ್ ಇಸ್ರೋದಲ್ಲಿ ಕೆಲಸ ಮಾಡುವ ಎಂಜಿನಿಯರ್ಗಳನ್ನು ಕರೆದುಕೊಂಡು ಬಂದಿದ್ದರು. ಉಮಾಕಾಂತ್ ಕೂಡ ಎಂಜಿನಿಯರ್. ಅವರು ಕೇಳುವ ಕೆಲವು ಪ್ರಶ್ನೆಗಳಿಗೆ ಇವನು ಸರಿಯಾಗಿ ಉತ್ತರ ನೀಡಿರಲಿಲ್ಲ. ಹಾಗಾಗಿ ಸಿನಿಮಾ ತಡವಾಯ್ತ. ಇಲ್ಲದಿದ್ದರೆ ಯಾವಾಗಲೋ ಸಿನಿಮಾ ಬರುತ್ತಿತ್ತು. ಹಾಗಿದ್ದೂ ನಮಗೆ ಒಂದೂ ಚೂರು ಕೂಡ ಅನುಮಾನ ಬಂದಿಲ್ಲ. ಕ್ಲೈಮ್ಯಾಕ್ಸ್ ಸಿಕ್ಕಿಲ್ಲ ಎಂದು ಕೊನೆಯ ಸ್ಕ್ರಿಪ್ಟ್ ಮಾತ್ರ ನಿಲ್ಲಿಸಿದ್ದೆವು. ಆಗ ಆತನಿಗೆ ನಿರಂತರ ಪ್ರಚಾರ ಸಿಗುತ್ತಿತ್ತು. ಹಾಗಿರುವಾಗ ಅನುಮಾನ ಹೇಗೆ ಮೂಡಲು ಸಾಧ್ಯ?
40 ಪರ್ಸೆಂಟ್ ಪ್ರಾಫಿಟ್ ಕೇಳಿದ್ದ
ಆತ ಎಷ್ಟು ಚಾಲಾಕಿ ಇದ್ದಾನೆ ಎಂದರೆ ನೀವು ಕೊಡುವ ನೆಗೆಟಿವ್ ಪಬ್ಲಿಸಿಟಿಯನ್ನು ಪಾಸಿಟಿವ್ ಮಾಡಿಕೊಳ್ಳುತ್ತಾನೆ. ಅಂದಹಾಗೆ ಆತ ಇನ್ನೂ ದುಡ್ಡು ವಾಪಸ್ ಕೊಟ್ಟಿಲ್ಲ. ಮೊದಲು ಸಿನಿಮಾ ಮಾತುಕತೆ ನಡೆದಾಗ ಆತ ಐದು ಲಕ್ಷ ಅಡ್ವಾನ್ಸ್, 40 ಪರ್ಸೆಂಟ್ ಪ್ರಾಫಿಟ್ ಕೇಳಿದ್ದ. ಇಷ್ಟು ಕೊಡಲು ಆಗೊಲ್ಲ, ಬೇರೆಯವರ ಬಳಿ ಹೋಗು ಎಂದಿದ್ದೆ. ನಂತರ ಮಧ್ಯವರ್ತಿಯೊಬ್ಬರನ್ನು ಕರೆದುಕೊಂಡು ಬಂದು ಮಾತುಕತೆ ನಡೆಸಿದ್ದ. ಎರಡು ಲಕ್ಷ ಪೇಮೆಂಟ್ ಮತ್ತು 20% ಪ್ರಾಫಿಟ್ ಕೇಳಿದ. ಅಷ್ಟಕ್ಕೆ ಮಾತ್ರ ಒಪ್ಪುತ್ತೇನೆ ಇಲ್ಲದಿದ್ದರೆ ಬೇಡ ಎಂದ. ನನಗೆ ದುಡ್ಡು ಬೇಕು, ತುಂಬಾ ಎಕ್ಸ್ಪೆರಿಮೆಂಟ್, ಸಂಶೋಧನೆ ಮಾಡಬೇಕು ಎಂದ. ಸರಿ ಎಂದು ಅದಕ್ಕೆ ಒಪ್ಪಿಕೊಂಡೆ. ಹೀಗೆ ಅಡ್ವಾನ್ಸ್ ಕೂಡ ಕೊಟ್ಟು ಕಳಿಸಿದ್ದೆ.
ಹಣ ವಾಪಸ್ ಬರದಿದ್ದರೆ ಸಿನಿಮಾ ಮಾಡುವುದು ಖಚಿತ
ಆತನನ್ನು ಸಂಪರ್ಕಿಸುವ ಪ್ರಯತ್ನ ಮಾಡುತ್ತಲೇ ಇದ್ದೇನೆ. ಫೋನ್ಗೆ ಸಿಕ್ತಾ ಇಲ್ಲ. ಎಲ್ಲಿ ಸಿಕ್ತಾನೆ? ಅವನ ವಿರುದ್ಧ ದೂರು ನೀಡೋದಿಲ್ಲ. ಹಣ ಹಿಂದಿರುಗಿಸದೆ ಇದ್ದರೆ ಏನು ಸತ್ಯ ಇದೆಯೋ ಅದನ್ನೇ ಮಾಡುತ್ತೇನೆ. ಅವನ ಬಯೋಪಿಕ್ ತಾನೆ ಮಾಡಬೇಕು? ಅದನ್ನೇ ಮಾಡುತ್ತೇನೆ. ಹಿಂದಿನದ್ದಲ್ಲ, ಇಂದಿನ ಬಯೋಪಿಕ್ ಮಾಡುತ್ತೇನೆ. ಏಕೆಂದರೆ ಇಂದಿನದು ಇನ್ನೂ ಕುತೂಹಲಕಾರಿಯಾಗಿದೆ. 'ಗೋಲ್ ಮಾಲ್ ರಾಧಾಕೃಷ್ಣ 2', 'ಕೌಬಾಯ್ ಅಲ್ಲ ಡ್ರೋನ್ ಬಾಯ್'- ಹೀಗೆ ಅನೇಕರು ನನಗೆ ಈ ಸಿನಿಮಾ ಮಾಡಿ ಎಂದು ಹತ್ತಾರು ಶೀರ್ಷಿಕೆಗಳನ್ನು ಕಳುಹಿಸುತ್ತಿದ್ದಾರೆ. ಆತ ಹಣ ವಾಪಸ್ ನೀಡದೆ ಹೋದರೆ ಯಾವುದಾದರೂ ಒಂದು ಸಿನಿಮಾ ಮಾಡುವುದು ಖಂಡಿತಾ ಎಂದರು ರಾಜಶೇಖರ್.