'ಜಿಂಗೋ' ಪದದ ಅರ್ಥ ಏನು? ಧನಂಜಯ್ ಪಾತ್ರ ಹೇಗಿರುತ್ತೆ?; ಶಶಾಂಕ್ ಸೊಗಾಲ್ ಮಾತು
ಡಾಲಿ ಧನಂಜಯ ಹುಟ್ಟುಹಬ್ಬದ ಸಂಭ್ರಮದಲ್ಲಿ ಬಿಡುಗಡೆಯಾಗಿರುವ 'ಜಿಂಗೋ' ಟೀಸರ್ ಸೂಪರ್ ಹಿಟ್ ಆಗಿದೆ. ಮೊದಲ ನೋಟದಲ್ಲೇ ಧನು ನಟನೆ ನೋಡುಗರ ಗಮನ ಸೆಳೆದಿದೆ. ಫಸ್ಟ್ ಡೇ ಫಸ್ಟ್ ಸಿನಿಮಾ ನೋಡಬೇಕು ಎಂದು ಕೆಲವರು ಫಿಕ್ಸ್ ಆಗುವ ಮಟ್ಟಿಗೆ ಟೀಸರ್ ಸದ್ದು ಮಾಡ್ತಿದೆ.
ಟೀಸರ್ ಮೇಕಿಂಗ್, ಹೇಳೋಕೆ ಹೊರಟಿರುವ ವಿಷಯ, ಡಾಲಿ ಧನಂಜಯ್ ಖಡಕ್ ಡೈಲಾಗ್, ವೇದಿಕೆ ಏರಿ ಭಾಷಣ ಮಾಡುವ ಪತಿ ಎಲ್ಲವೂ ಮೆಚ್ಚುಗೆಗೆ ಪಾತ್ರವಾಗಿದೆ. ಏನೋ ಹೊಸತನ್ನು ಹೇಳಲು ಚಿತ್ರತಂಡ ಮುಂದಾಗಿದೆ ಎನ್ನುವುದು ಗೊತ್ತಾಗುತ್ತಿದೆ. ಇನ್ನು ಡಾಲಿ ಇಂತಾದೊಂದು ಪಾತ್ರ ಒಪ್ಪಿಕೊಂಡಿರುವುದು ಅಭಿಮಾನಿಗಳಿಗೆ ಇಷ್ಟವಾಗಿದೆ.

"ನಾನು ಗಂಢಬೇರುಂಢನಾಗಿ ಹಾರ್ತಿದ್ರೆ ನನ್ನ ರೆಕ್ಕೆ ನೀವಾಗಿರಬೇಕು. ನಾನು ಬೆಂಕಿಯಾಗಿ ಉರೀತಿದ್ರೆ ಬೀಸೊ ಬಿರುಗಾಳಿ ನೀವಾಗಿರಬೇಕು" ಎನ್ನುವ 'ಜಿಂಗೋ' ಧನಂಜಯ್ ಡೈಲಾಗ್ ವೈರಲ್ ಆಗುತ್ತಿದೆ. ಧನು ವಾಯ್ಸ್ ಓವರ್ನಲ್ಲಿ ಒಂದು ಕಥೆ ರೂಪದಲ್ಲಿ ಕಥೆಯ ಸಾರಾಂಶವನ್ನು ಹೇಳುವ ಪ್ರಯತ್ನ ಮಾಡಲಾಗಿದೆ. ಕುರಿಗಳ ರಕ್ಷಣೆಗೆ ನಿಂತ ನಾಯಕನ ಕಥೆ ಏನು? 'ಜಿಂಗೋ' ಗನ್ ಬಿಟ್ಟು ಮೈಕ್ ಹಿಡಿಯುವುದು ಯಾಕೆ? ಎನ್ನುವ ಕುತೂಹಲವೂ ಪ್ರೇಕ್ಷಕರಲ್ಲಿದೆ.
'ಜಿಂಗೋ' ಅಂದರೆ ಏನು? ಎಂದು ಸಾಕಷ್ಟು ಜನ ಕೇಳುತ್ತಿದ್ದಾರೆ. ಈ ಪದವೇ ವಿಭಿನ್ನವಾಗಿದೆ. ಇದರ ಅರ್ಥ ಏನು? ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ. ಸ್ವತಃ ಚಿತ್ರದ ನಿರ್ದೇಶಕ ಶಶಾಂಕ್ ಸೊಗಾಲ್ ಈ ಬಗ್ಗೆ ಫಿಲ್ಮಿಬೀಟ್ಗೆ ಪ್ರತಿಕ್ರಿಯಿಸಿದ್ದಾರೆ. ಟೈಟಲ್ ಅರ್ಥ ಏನು? ಸಿನಿಮಾ ಜಾನರ್ ಯಾವುದು? ಎಂದು ವಿವರಿಸಿದ್ದಾರೆ.
ಇದೊಂದು ಫಿಕ್ಷನಲ್(ಕಾಲ್ಪನಿಕ) ಹಳ್ಳಿಯಲ್ಲಿ ನಡೆಯುವ ಕಥೆ. ಅಲ್ಲಿನ ಗ್ರಾಮ ಪಂಚಾಯತಿ ಪ್ರೆಸಿಡೆಂಟ್ 'ಜಿಂಗೋ'. ಇದೊಂದು ಮರ್ಡರ್ ಇನ್ವೆಸ್ಟಿಗೇಷನ್ ಕಥಾಹಂದರದ ಸಿನಿಮಾ. ಚಿತ್ರದಲ್ಲಿ 'ಜಿಂಗೋ' Anti-hero. ನಾಯಕ ಕೂಡ ಇರುತ್ತಾನೆ. ಆ ಪಾತ್ರವನ್ನು ಮತ್ತೊಬ್ಬ ನಟ ನಿಭಾಯಿಸಲಿದ್ದಾರೆ. ಆ ಬಗ್ಗೆ ಮಾತುಕತೆ ನಡೆಯುತ್ತಿದೆ ಎಂದು ಶಶಾಂಕ್ ಸೊಗ್ಗಾಲ್ ಮಾಹಿತಿ ನೀಡಿದ್ದಾರೆ.

'ಜಿಂಗೋ' ಎನ್ನುವುದು ಧನಂಜಯ್ ಪಾತ್ರದ ನಿಕ್ನೇಮ್. ಉದಾಹರಣೆಗೆ ಡಾಲಿ ರೀತಿಯಲ್ಲೇ ಅದು ಕೂಡ ಪಾತ್ರದ ಹೆಸರು ಅಷ್ಟೆ. 'ಜಿಂಗೋ' ಎನ್ನುವ ಪದಕ್ಕೆ ತೀವ್ರ ಹೋರಾಟ, ಅತಿಯಾದ ಭಕ್ತಿ, ಹೀಗೆ ಒಬ್ಬ ನಾಯಕನ ಬಗ್ಗೆ ನಾನಾ ಅರ್ಥಗಳಿವೆ. ನಮ್ಮ ಚಿತ್ರದಲ್ಲಿ ಒಂದು ಪಾತ್ರದ ಹೆಸರು. ಇದು ಫಿಕ್ಷನಲ್ ಹಳ್ಳಿಯ ಕಥೆ ಆಗಿರುವುದರಿಂದ ಇಂತಹ ವಿಭಿನ್ನ ಹೆಸರುಗಳ ಸಾಕಷ್ಟು ಪಾತ್ರಗಳಿವೆ ಎಂದು ಶಶಾಂಕ್ ಹೇಳಿದ್ದಾರೆ.
ಸದ್ಯ ಟೀಸರ್ ಶೂಟ್ ಮಾಡಿ 'ಜಿಂಗೋ' ಮಾಡಿ ಸಿನಿಮಾ ಘೋಷಣೆ ಮಾಡಿದ್ದೇವೆ. ಚಿತ್ರಕಥೆ ಸಿದ್ಧವಿದೆ. ಶೀಘ್ರದಲ್ಲೇ ಪ್ರೀ ಪ್ರೊಡಕ್ಷನ್ಸ್ ಶುರುವಾಗುತ್ತದೆ. ಅಕ್ಟೋಬರ್ ವೇಳೆಗೆ ಸಿನಿಮಾ ಚಿತ್ರೀಕರಣ ಪ್ರಾರಂಭ ಆಗಬಹುದು ಎನ್ನುವ ನಿರೀಕ್ಷೆಯಿದೆ. ಮುಂದಿನ ವರ್ಷಾಂತ್ಯಕ್ಕೆ ಸಿನಿಮಾ ತೆರೆಗೆ ಬರಬಹುದು. ಚಿತ್ರದಲ್ಲಿ ನಟಿಸುವ ನಾಯಕ ನಟನ ಪಾತ್ರವೂ ದೊಡ್ಡದಾಗಿರುತ್ತದೆ.
ಊರಿನಲ್ಲಿ ಒಬ್ಬ ರಾವಣದ ಕಥೆಯೂ ಇರುತ್ತದೆ. ರಾಮನ ಕಥೆ ಕೂಡ ಇರುತ್ತದೆ. ಆದರೆ ನಾವು ರಾವಣ ಎಂದು ಟೈಟಲ್ ಇಟ್ಟು ಸಿನಿಮಾ ಮಾಡ್ತಿದ್ದೀವಿ. ಆದರೆ ಈ ಕಥೆಯಲ್ಲೂ ರಾಮ, ಸೀತೆ ಸಹ ಇರ್ತಾರೆ. ಫಿಕ್ಷನಲ್ ಕಥೆ ಆಗಿದ್ದರೂ ಇವತ್ತಿನ ಕಾಲಘಟ್ಟದ ಕಥೆ ಸಾಗಲಿದೆ.
ಇನ್ನು 'ಜಿಂಗೋ' ಟೀಸರ್ ನೋಡಿದವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ 'ಭಾರತ್ ಜೋಡೊ ಯಾತ್ರೆ' ಭಾಷಣಕ್ಕೆ ಹೋಲಿಸಿ ಮಾತನಾಡುತ್ತಿದ್ದಾರೆ. ಆದರೆ ಅಂತಹ ಯಾವುದೇ ಹೋಲಿಕೆ ಬೇಡ. ಆ ಸನ್ನಿವೇಶ ಪವರ್ಫುಲ್ ಆಗಿ ಬರಬೇಕು ಎಂದು ಆ ರೀತಿ ಡಿಸೈನ್ ಮಾಡಿದೆವು. ರಾಹುಲ್ ಗಾಂಧಿ ಮಾತ್ರವಲ್ಲ ಶರತ್ ಪವಾರ್ ಅವರು ಮಳೆಯಲ್ಲಿ ಭಾಷಣ ಮಾಡಿರುವ ವೀಡಿಯೋ ಇದೆ. ಹಾಗಾಗಿ ಅದಕ್ಕೂ ಈ ಕಥೆಗೂ ಸಂಬಂಧವಿಲ್ಲ ಎಂದು ನಿರ್ದೇಶಕರು ಸ್ಪಷ್ಟಪಡಿಸಿದ್ದಾರೆ.
ಪೂರ್ಣಚಂದ್ರ ತೇಜಸ್ವಿಯವರು 'ಚಿದಂಬರ ರಹಸ್ಯ' ಕಾದಂಬರಿಯಲ್ಲಿ ಒಟ್ನಲ್ಲಿ ಕ್ರಾಂತಿ ಆಗಲಿ ಎನ್ನುತ್ತಾರೆ. ಅದು ಬಿಟ್ಟರೆ ಅವರ ಬೇರೆ ಯಾವುದೇ ಕಥೆ, ಕಾದಂಬರಿಯಿಂದ ಪ್ರೇರಣೆ ಆಗಲಿಲ್ಲ. ಈ ಕಥೆಗೆ ಪ್ರೇರಣೆ ಏನು ಎನ್ನುವ ಬಗ್ಗೆ ಮುಂದಿನ ದಿನಗಳಲ್ಲಿ ಹೇಳುತ್ತೇವೆ. ಇನ್ನು ಇಲ್ಲಿ Anti-Hero ಕ್ರಾಂತಿ ಎಂದು ಹೇಳುತ್ತಿದ್ದಾನೆ. ಅದು ಯಾವ ರೀತಿಯ ಕ್ರಾಂತಿ ಇರಬಹುದು ಸಿನಿಮಾದಲ್ಲೇ ನೋಡಬೇಕು ಎನ್ನುತ್ತಾರೆ.
'ಜಿಂಗೋ' ಟೀಸರ್ನಲ್ಲಿರುವ ಸಂಭಾಷಣೆ ಬಗ್ಗೆ ಒಳ್ಳೆಯ ಮಾತುಗಳು ಕೇಳಿಬರ್ತಿದೆ. ರಾಘವೇಂದ್ರ ಮಾಯಕೊಂಡ ಈ ಸಂಭಾಷಣೆ ಬರೆದಿದ್ದು. ಅವರೇ ಚಿತ್ರಕ್ಕೆ ಕಥೆ ಬರೆದಿದ್ದರು. ಇದನ್ನು ಕನ್ನಡದಲ್ಲಿ ಯಾರು ಮಾಡಲ್ಲ. ಮಲಯಾಳಂನಲ್ಲಿ ಯಾರಾದರೂ ಮಾಡಬಹುದು ಎಂದುಕೊಂಡಿದ್ದರು. ಸುಮ್ಮನೆ ನನಗೆ ಒಮ್ಮೆ ಓದಲು ಕೊಟ್ಟರು. ಅದನ್ನು ಓದಿ ಚಾಲೆಂಜ್ ಆಗಿ ತಗೊಂಡು ನಾವೇ ಯಾಕೆ ಮಾಡಬಾರದು ಎಂದು ಮಾಡ್ತಿದ್ದೇವೆ. ಇದಕ್ಕೆಲ್ಲಾ ರಾಘವೇಂದ್ರ ಮಾಯಕೊಂಡ ಕಾರಣ ಎಂದು ಶಶಾಂಕ್ ವಿವರಿಸಿದ್ದಾರೆ.


Click it and Unblock the Notifications











