ಆತಂಕ- ಭರವಸೆ ಎರಡೂ ಇದೆ, ಪ್ರೇಕ್ಷಕರೇ ಪ್ರಭುಗಳು; ನಿರ್ದೇಶಕ ಯೋಗರಾಜ್ ಭಟ್!
ಯೋಗರಾಜ್ ಭಟ್ ನಿರ್ದೇಶನದ 'ಗಾಳಿಪಟ-2' ಸಿನಿಮಾ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಸೂಪರ್ ಹಿಟ್ ಸಿನಿಮಾ ಟೈಟಲ್ನಲ್ಲಿ ಹೆಚ್ಚು ಕಡಿಮೆ ಅದೇ ತಂಡ ಈ ಸಿನಿಮಾ ಮಾಡಿರುವುದರಿಂದ ಸಹಜವಾಗಿಯೇ ಕುತೂಹಲ ಗರಿಗೆದರಿದೆ. ಈ ಬಾರಿ ಗೋಲ್ಡನ್ ಸ್ಟಾರ್ ಗಣೇಶ್, ದೂದ್ ಪೇಡ ದಿಗಂತ್ ಜೊತೆಗೆ ಲೂಸಿಯಾ ಪವನ್ ಕುಮಾರ್ ಹೊಸ 'ಗಾಳಿಪಟ' ಹಾರಿಸೋಕೆ ಹೊರಟಿದ್ದಾರೆ.
ಈಗಾಗಲೇ 'ಗಾಳಿಪಟ-2' ಸಿನಿಮಾ ಟೀಸರ್, ಟ್ರೈಲರ್, ಸಾಂಗ್ಸ್ ರಿಲೀಸ್ ಆಗಿ ಗಮನ ಸೆಳೆದಿದೆ. ಈ ರೊಮ್ಯಾಂಟಿಕ್ ಕಾಮಿಡಿ ಎಂಟರ್ಟೈನರ್ ಸ್ನೇಹ, ಪ್ರೀತಿ, ಹಾಸ್ಯ, ಸೆಂಟಿಮೆಂಟ್ ಹೀಗೆ ಎಲ್ಲಾ ಅಂಶಗಳನ್ನು ಹದವಾಗಿ ಬೆರಸಿ ನಿರ್ದೇಶಕರು ಸಿನಿಮಾ ಕಟ್ಟಿಕೊಟ್ಟಿದ್ದಾರೆ. ಸ್ಯಾಂಪಲ್ಗಳು ಕೂಡ ಅದನ್ನೇ ಸಾರಿ ಸಾರಿ ಹೇಳ್ತಿದೆ. ಮೂವರು ಸ್ನೇಹಿತರು. ಅವರ ಬಾಳಿಗೆ ಮೂವರು ಹುಡುಗಿಯರು ಬಂದ ಮೇಲೆ ಏನೆಲ್ಲಾ ಆಗುತ್ತದೆ ಅನ್ನೋ ಕಥೆಯನ್ನು ನಿರ್ದೇಶಕ ಯೋಗರಾಜ್ ಭಟ್ ಹೇಳುತ್ತಿದ್ದಾರೆ.
ಸ್ವತಃ ನಿರ್ದೇಶಕ ಯೋಗರಾಜ್ ಭಟ್ರು ಟ್ರೈಲರ್ನಲ್ಲಿ 'ಇದು ಭಾನು ಭೂಮಿಗೆ ಸೇತುವೆ ಕಟ್ಟಿದವರ ಸಂಕಟದ ಕಥೆ, ಸಂತಸದ ಕಥೆ' ಅಂತ ಹೇಳಿದ್ದಾರೆ. ಈ ಫನ್ ಎಮೋಷನಲ್ ರೋಲರ್ ಕೋಸ್ಟರ್ ರೈಡ್ಗೆ ಪ್ರೇಕ್ಷಕರು ಸಿದ್ಧವಾಗ್ತಿದ್ದಾರೆ. ನಾಯಕಿಯರಾಗಿ ಶರ್ಮಿಳಾ ಮಾಂಡ್ರೆ, ವೈಭವಿ ಶಾಂಡಿಲ್ಯಾ, ಸಂಯುಕ್ತಾ ಮೆನನ್ ಕಾಣಿಸಿಕೊಂಡಿದ್ದಾರೆ. ಹಿರಿಯ ನಟ ಅನಂತ್ ನಾಗ್ ಕನ್ನಡ ಮೇಷ್ಟ್ರು ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಸಿನಿಮಾ ರಿಲೀಸ್ ಡೇಟ್ ಹತ್ತಿರವಾದಂತೆ ನಿರ್ದೇಶಕರಾದ ಯೋಗರಾಜ್ ಭಟ್ಟರಿಗೆ ಕೊಂಚ ಆತಂಕ, ಕೊಂಚ ನಿರೀಕ್ಷೆ ಸಿನಿಮಾ ಮೇಲಿದೆ. ಈ ಬಗ್ಗೆ ಫಿಲ್ಮಿಬೀಟ್ ಜೊತೆ ಒಂದಷ್ಟು ಮಾಹಿತಿ ಹಂಚಿಕೊಂಡಿದ್ದಾರೆ.

ಜನರಿಗಲ್ಲದೆ ಇನ್ಯಾರಿಗೂ ಹೆದರಲ್ಲ
"ನನಗೆ ಓವರ್ ಕಾನ್ಫಿಡೆನ್ಸ್, ಕಾನ್ಫಿಡೆನ್ಸ್ ಎರಡೂ ಜನರ ವಿಷಯದಲ್ಲಿ ಇಲ್ಲ. ನಿರೀಕ್ಷೆ ಇರುವ ಕಡೆ ನಾನು ವಿನೀತನಾಗಿಬಿಡ್ತೀನಿ. ನನಗೆ ಏನು ಹೇಳಬೇಕು ಗೊತ್ತಾಗುವುದಿಲ್ಲ. ನಿಜ ಹೇಳಬೇಕು ಅಂದರೆ ಭಯ ಇದೆ. ಜನರಿಗಲ್ಲದೇ ಇನ್ನಾರಿಗೂ ಹೆದರಲ್ಲ ನಾನು. ರಿಲೀಸ್ ಹತ್ರ ಬರ್ತಾ ಬರ್ತಾ ಅವರ ಕಣ್ಣುಗಳು ಇತ್ತ ತಿರುಗಿರುವುದನ್ನು ನೋಡಿದಾಗಲೆಲ್ಲಾ ಭಯವಾಗುತ್ತೆ. ಜನ ಬರ್ತಾರೆ ಅನ್ನುವ ಖುಷಿ, ಗ್ಯಾರೆಂಟಿ ನಿರೀಕ್ಷೆ ಮ್ಯಾಚ್ ಆಗುತ್ತದೆ ಅನ್ನುವ ಖುಷಿ ಒಳಗೆ ಇದೆ. ನಿರೀಕ್ಷೆ ಹುಟ್ಟಲಿ ಅಂತಲೇ ಸಿನಿಮಾ ಮಾಡಿರ್ತೀವಿ. ನಿರೀಕ್ಷೆ ಹುಟ್ಟಿರುವುದಕ್ಕೆ ಸಂತಸ, ಸಿನಿಮಾ ನೋಡಿ ಏನ್ ಹೇಳ್ತಾರೋ ಅನ್ನುವ ಭಯ ಎರಡೂ ಇದೆ. ಏನೋ ಮಾಡಿ ಇಟ್ಟಿದ್ದೀವಿ ಅನ್ನುವ ಖುಷಿ ಖಂಡಿತ ತಂಡಕ್ಕಿದೆ. ಜನರನ್ನು ಮೆಚ್ಚಿಸಿ ಕುಣಿದಾಡಿಬಿಡುತ್ತೀವಿ ಅಂತ ಹೇಳುವುದು ತಪ್ಪು, ಗ್ಯಾರೆಂಟಿ ಪ್ರೇಕ್ಷಕರೇ ಅಲ್ಟಿಮೆಟ್ ಪ್ರಭುಗಳು. ಅವರೇ ತೀರ್ಮಾನ ಕೊಡುವುದು." ಎನ್ನುತ್ತಾರೆ ಯೋಗರಾಜ್ ಭಟ್.

ದಿಗಂತ್ ಬಟ್ಟೆ ಮೇಲೆ ಯಾಕೆ ಕಣ್ಣು?
"ದಿಗಂತ್ ಕ್ಯಾರೆಕ್ಟರ್ ಟೀಸರ್ ನೋಡಿದಾಗ ನಿಮಗೆ ಗೊತ್ತಾಗುತ್ತದೆ. ಹಃ ಹಃ.. ಸನ್ಯಾಸಿ ಆಗಲು ಹೋದಂತಹ ಅಡ್ನಾಡಿ ವ್ಯಕ್ತಿತ್ವದವನು ಅಂತ ಹೇಳಿದ್ದೀವಿ. ಹಾಗಾಗಿ ದಿಗಂತ್ ಬಟ್ಟೆ ವಿಚಾರ ಹಾಗಿದೆ. ಇನ್ನುಳಿದಂತೆ ಬೇರೆ ಬೇರೆ ತರಹದ ಕಾಸ್ಟ್ಯೂಮ್ಸ್ ಇದೆ. ಚಳಿ ದೇಶಕ್ಕೆ ಬೇಕಾದಂತಹ ಬಟ್ಟೆ ಇದೆ. ನೀವು ನೋಡಿ, ಸಿನಿಮಾ ನೋಡಿದಾಗ ಬಟ್ಟೆಗಳ ಬಗ್ಗೆ ವಿಶೇಷವಾಗಿ ಕೆಲಸ ಮಾಡಿರುವುದು ಗೊತ್ತಾಗುತ್ತದೆ. ದಿಗಂತ್ಗೆ ನ್ಯಾಚುರಲ್ ಸಿಕ್ಸ್ಪ್ಯಾಕ್ ಇದೆ. ಜೊತೆಗೆ ಸನ್ಯಾಸ, ಇನ್ನು ಏನೇನೋ ಇದೆ. ಸಿನಿಮಾ ನೋಡಿದಾಗ ಅದು ಕರೆಕ್ಟ್ ಅಂತ ಅನ್ನಿಸುತ್ತದೆ.

ಕಾಡು ಹಂದಿ, ಡ್ರಾಕುಲ ಪಾತ್ರ ಇರುತ್ತಾ?
"ಡ್ರಾಕುಲ, ಹಂದಿಯಂತಹ ರೆಫರೆನ್ಸ್ ಈ ಚಿತ್ರದಲ್ಲಿ ಇಲ್ಲ. ಆದರೆ ಒಬ್ಬ ಸೆಕ್ಯುರಿಟಿ ಗಾರ್ಡ್ ಪಾತ್ರ ಇದೆ. ಅದು ತುಂಬಾ ಚೆನ್ನಾಗಿದೆ. ಬುಲೆಟ್ ಪ್ರಕಾಶ್ ಒಂದು ಪಾತ್ರ ಮಾಡಿದ್ದಾರೆ. ಅವರು ಒಮ್ಮೆ ಕೇಳಿಕೊಂಡಿದ್ದರು ನಿಮ್ಮ ಜೊತೆ ಕೆಲಸ ಮಾಡಿಲ್ಲ ಅಂತ. ಪ್ರೀತಿಪೂರ್ವಕವಾಗಿ ಕರೆದಾಗ ಅವರು ಬಂದರು. ತುಂಬಾ ಖುಷಿಯಾಗಿದ್ರು, ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ನಂತರ ಎಲ್ಲರನ್ನು ಬಿಟ್ಟು ಹೊರಟುಬಿಟ್ರು. ಗೆಸ್ಟ್ ಅಪಿಯರೆನ್ಸ್ ಅವರದ್ದು. ಹಾಡಿನಲ್ಲಿ ನನ್ನ ಧ್ವನಿಗೆ ಅವರು ಅಭಿನಯಿಸಿದ್ದಾರೆ. 'ಎಕ್ಸಾಂ' ಹಾಡು ಅವರಿಗೆ ಅರ್ಪಣೆ.

ಅರ್ಜುನ್ ಜನ್ಯ ಮ್ಯೂಸಿಕ್ ತೃಪ್ತಿ ಕೊಟ್ಟಿದ್ಯಾ?
"ಗಾಳಿಪಟ ಒಂದಕ್ಕೆ 14 ವರ್ಷ ಇತಿಹಾಸ ಇದೆ. ಆ ಹಾಡುಗಳನ್ನು ಇವತ್ತಿಗೂ ಕೇಳುತ್ತಲೇ ಇದ್ದಾರೆ. ಈ ಸಿನಿಮಾ ಹಾಡುಗಳು ಬಂದು ಒಂದೂವರೆ ತಿಂಗಳಾಯ್ತು. ಸಿನಿಮಾ ರಿಲೀಸ್ ನಂತರ ಅರ್ಜುನ್ ಜನ್ಯಾ ಮ್ಯಾಜಿಕ್ ಗೊತ್ತಾಗುತ್ತಾ ಹೋಗುತ್ತದೆ. ಕಥೆ ಜೊತೆಗೆ ಹಾಡುಗಳನ್ನು ನೋಡಿದಾಗ ಒಂದು ಫೀಲಿಂಗ್ ಬರುತ್ತಲ್ಲ, ಅಲ್ಲಿಂದ ಹಾಡುಗಳ ಆಟ ಶುರುವಾಗುತ್ತೆ. ಸದ್ಯ ಬಿಲ್ಡಿಂಗ್ ಗೇಟ್ ಓಪನ್ ಮಾಡಿ ಗಾಡಿಗಳನ್ನು ಒಳಗೆ ಬಿಟ್ಟಿದ್ದೀವಿ. ಅವರ ರೀ-ರೆಕಾರ್ಡಿಂಗ್, ಹಾಕಿರುವ ಶ್ರಮ ಸಾರ್ಥಕ ಅಂತ ಗೊತ್ತಾಗುವುದು ಆಗಸ್ಟ್ 12ರ ಮಧ್ಯಾಹ್ನ. ತುಂಬಾ ಕಷ್ಟ ಜೀವಿ. ಅದ್ಭುತ ಕೆಲಸ ಮಾಡಿದ್ದಾನೆ. ಪ್ರತಿ ಗಾಯಕರಿಗೂ ಅರ್ಜುನ್ ಜನ್ಯಾ ಹಾಗೂ ಜಯಂತ್ ಕಾಯ್ಕಿಣಿ ಅವರಿಗೂ ನಮನ".

ನಾನು ಸಿನಿಮಾ ಮಾಡುವಾಗಷ್ಟೇ ನಿರ್ದೇಶಕ
"ನಾನು ಒಬ್ಬ ಪ್ರೇಕ್ಷಕ. ಸಿನಿಮಾ ಮಾಡುವಾಗಷ್ಟೇ ನಿರ್ದೇಶಕ. ನಂತರ ನಾನು ಒಬ್ಬ ಸಾಮಾನ್ಯ ಮನುಷ್ಯನೇ. ನನಗೆ ತೀವ್ರ ಕುತೂಹಲ ಇದೆ ಇದರಲ್ಲಿ. ಇದರ ಒಂದು ತಮಾಷೆ ಮತ್ತು ವೇದಾಂತ ಹೊಸ ರೀತಿಯ ಮೈಲಿಗಲ್ಲು ಆಗಬೇಕು ಅನ್ನೋದು ಟೀಂ ಲೀಡರ್ ಆಗಿ ನನ್ನ ಆಸೆ. ಅದನ್ನು ಪ್ರೇಕ್ಷಕರು ನೀಡುತ್ತಾರೆ ಅನ್ನುವುದು ನಿರೀಕ್ಷೆ. ಜನರಿಗೆ ನಮ್ಮ ಮೇಲೆ ನಿರೀಕ್ಷೆ ಇದ್ದಂತೆ. ಜನರ ಮೇಲೆ ನಮಗೂ ನಿರೀಕ್ಷೆ ಇದೆ. ಏನ್ ಮಾಡುತ್ತಾರೋ ಗೊತ್ತಿಲ್ಲ. ನಾನು ಫೈನಲಿ ಹೆದರುವುದು ಪ್ರೇಕ್ಷಕ ಪ್ರಭುಗಳಿಗೆ. ನನ್ನೊಳಗಿನ ಪ್ರೇಕ್ಷಕ ತುಂಬಾ ತೃಪ್ತನಾಗಿದ್ದಾನೆ. ಜನಕ್ಕೂ ತೃಪ್ತಿ ಆದಾಗ ಸಾರ್ಥಕ. ಒಬ್ಬ ಪ್ರೇಕ್ಷಕನಾಗಿ ಆಗಸ್ಟ್ 12ನೇ ತಾರೀಖಿಗೆ ಕಾಯುತ್ತಿದ್ದೀನಿ".


Click it and Unblock the Notifications











