Don't Miss!
- News ಒಂದಲ್ಲ.. ಎರಡಲ್ಲ.. 128 ಲಕ್ಷ ಕೋಟಿ ರೂಪಾಯಿ ಲಾಭ!
- Automobiles Brezza: ಮಾರುತಿ ಸುಜುಕಿ ಬ್ರೆಝಾ ಖರೀದಿಸಬೇಕೇ.. ಆನ್ ರೋಡ್ ಬೆಲೆ ಎಷ್ಟು? EMI ಏನು?
- Sports IPL 2024: RCB ವಿರುದ್ಧ ಪಂದ್ಯಕ್ಕೆ KKRನ ಆಡುವ 11ರ ಬಳಗ ಮರೆತ ಶ್ರೇಯಸ್ ಅಯ್ಯರ್
- Lifestyle ಏಪ್ರಿಲ್ 1ರಿಂದ 800 ಔಷಧಗಳು ದುಬಾರಿ..! ಎಷ್ಟು ಬೆಲೆ ಹೆಚ್ಚಳ.?
- Technology WhatsApp: ವಾಟ್ಸಾಪ್ನಲ್ಲಿ ಈ ಕರೆಗಳನ್ನು ಸ್ವೀಕರಿಸದಂತೆ ಕೇಂದ್ರದಿಂದ ಎಚ್ಚರಿಕೆ! ಯಾಕೆ ಗೊತ್ತಾ?
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಖುಷಿಗೆ ಪಾರವೇ ಇಲ್ಲ: 'ದಿಯಾ' ನಾಯಕಿಯ ವಿಶೇಷ ಸಂದರ್ಶನ
ಜನ ದಿಯಾ.., ದಿಯಾ... ಎನ್ನುವುದು ಕೇಳಿ ಖುಷಿ ಮತ್ತಷ್ಟು ಖುಷಿಯಾಗಿದ್ದಾರೆ! ದಿಯಾ ಚಿತ್ರದಲ್ಲಿ ನಾಯಕಿಯ ಹೆಸರೇ ಖುಷಿ. ಪ್ರಥಮ ಚಿತ್ರದಲ್ಲೇ ಇಂಥದೊಂದು ಪ್ರಖ್ಯಾತಿ ಸಿಗುವುದು ಅಪರೂಪ. ಅದಕ್ಕೆ ಹೆಸರೇ ಅನ್ವರ್ಥವಾಗುವಂತೆ ಸಂಭ್ರಮದ ನಗು ಚೆಲ್ಲುತ್ತಿದ್ದಾರೆ ಖುಷಿ. ಆದರೆ ಚಿತ್ರರಂಗದ ಇಂದಿನ ವಿಷಮ ಪರಿಸ್ಥಿತಿಯ ಕಾರಣ, ಸಿನಿಮಾ ಬಹಳ ಬೇಗ ಚಿತ್ರಮಂದಿರ ಬಿಟ್ಟು ಹೋಗಿದೆ.
ಅಚ್ಚರಿ ಏನೆಂದರೆ ಅದಕ್ಕಾಗಿ ಇಂದು ಚಿತ್ರದ ನಿರ್ಮಾಪಕರಿಗಿಂತಲೂ ಹೆಚ್ಚಾಗಿ ಕೊರಗುತ್ತಿರುವವರೇ ಪ್ರೇಕ್ಷಕರು! ಸಿನಿಮಾ ನೋಡದವರಿಗೆ ಅದು ಇಂದು ಅಮೆಜಾನ್ ನಲ್ಲಿ ಲಭ್ಯವಿದೆ. ಆದರೆ ಈಗ ನೋಡುತ್ತಿರುವವರಿಗೆಲ್ಲ ಒಂದೇ ಕೊರಗು! ಕಲಾವಿದರ ಇಷ್ಟು ಚಂದದ ನಟನೆಯನ್ನು ದೊಡ್ಡ ಪರದೆಯಲ್ಲಿ ನೋಡಲಾಗಲಿಲ್ಲವಲ್ಲ ಎಂದು.
ಅದನ್ನೂ ಮೀರಿದ್ದು ಏನೆಂದರೆ ಇಷ್ಟು ಮುದ್ದಾದ ನಾಯಕಿಯನ್ನು, ಆಕೆಯ ಭಾವಗಳನ್ನು ದೊಡ್ಡ ಪರದೆಯಲ್ಲಿ ಕಾಣದೇ ಹೋದೆವಲ್ಲ ಎನ್ನುವ ಕೊರಗು ಹಲವರಲ್ಲಿದೆ. ಅದನ್ನು ಅರ್ಥ ಮಾಡಿಕೊಂಡಿರುವ ಫಿಲ್ಮೀಬೀಟ್' ದಿಯಾ ಪಾತ್ರಧಾರಿ ಖುಷಿಯ ಪರಿಚಯದ ಮಾತುಕತೆಯನ್ನು ನಿಮಗಿಲ್ಲಿ ನೀಡುತ್ತಿದೆ.
ಮೊದಲ ಚಿತ್ರದಲ್ಲೇ ಸಿಕ್ಕ ಅಪಾರ ಮೆಚ್ಚುಗೆ ಕಂಡು ಖುಷಿ ಹೆಚ್ಚಿದೆಯೇ?
ಖಂಡಿತವಾಗಿ ಖುಷಿಯಾಗಿದ್ದೇನೆ. ಆದರೆ ಇದು ನನಗೆ ನಾಯಕಿಯಾಗಿ ಮಾತ್ರ ಮೊದಲ ಚಿತ್ರ. ಸಣ್ಣ ಪುಟ್ಟ ಪಾತ್ರಗಳಲ್ಲಿ ಹಿಂದೆಯೇ ಒಂದೆರಡು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದೇನೆ. ಆದರೆ ಮೊದಲ ನಾಯಕಿಯ ಪಾತ್ರ ಎನ್ನುವುದರ ಜತೆಗೆ ಚಿತ್ರಕ್ಕೇನೇ ನನ್ನ ಪಾತ್ರದ ಹೆಸರಿದೆ ಎಂದಾಗ ತುಂಬ ಖುಷಿಯಾಗಿತ್ತು. ಈಗ ಚಿತ್ರ ನೋಡಿದವರು ನೀಡುತ್ತಿರುವ ಪ್ರತಿಕ್ರಿಯೆಯಂತೂ ಇನ್ನಷ್ಟು ಖುಷಿ ತಂದು ಕೊಟ್ಟಿದೆ.
ನಿಮ್ಮ ಹಿನ್ನೆಲೆಯ ಬಗ್ಗೆ ಹೇಳಿ?
ಸಂಗೀತ ಮತ್ತು ನೃತ್ಯ ಎಂದರೆ ನನಗೆ ಬಾಲ್ಯದಿಂದಲೂ ಇಷ್ಟ. ನಾನು ಜೆ.ಪಿ ನಗರದ ಆಕ್ಸ್ಫರ್ಡ್ ಇಂಗ್ಲಿಷ್ ಹೈಸ್ಕೂಲ್ನಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮಾಡಿದೆ. ಜಯನಗರದ ಎನ್ಎಂಕೆಆರ್ ವಿಯಲ್ಲಿ ಕಾಲೇಜು ಮುಗಿಸಿದೆ. ಅಲ್ಲೇ ಎಸ್ಎಸ್ಎಂಆರ್ ವಿಯಲ್ಲಿ ಗ್ರ್ಯಾಜುಯೇಶನ್ ಮಾಡಿದ್ದೇನೆ. ಆರ್.ಡಿ ಕೆಡೆಟ್ ಆಗಿದ್ದುಕೊಂಡು ಕರ್ನಾಟಕ ಮತ್ತು ಗೋವಾ ರಿಪಬ್ಲಿಕ್ ಡೇ ಕ್ಯಾಂಪ್ ಮೂಲಕ 2012ರ ದೆಹಲಿಯ`ರಾಜ್ ಪಥ್ ಮಾರ್ಚ್'ನಲ್ಲಿ ಭಾಗವಹಿಸಿದ್ದೆ. ವೀಣಾ ಮಂಜುನಾಥ್ ಅವರ ಬಳಿ ಭರತನಾಟ್ಯ ಕಲಿತ್ತಿದ್ದೇನೆ. ಉಮಾದೇವಿಯವರ ಬಳಿ ಕರ್ನಾಟಕ ಶಾಸ್ತ್ರೀಯ ಸಂಗೀತ ಅಭ್ಯಾಸ ಮಾಡಿದ್ದೇನೆ. ಗಾಯಕಿಯಾಗಿಯೇ ನನ್ನ ರಂಗಭೂಮಿ ಪ್ರವೇಶವೂ ಆಯಿತು.
ರಂಗಭೂಮಿಯಲ್ಲಿನ ಅನುಭವ ಹೇಗಿತ್ತು?
ಚೆನ್ನಾಗಿತ್ತು. `ಕಿವುಡು ಸರ್ ಕಿವುಡು' ಎನ್ನುವ ಹಾಸ್ಯ ನಾಟಕದ ಮೂಲಕ ರಂಗಪ್ರವೇಶ ಮಾಡಿದೆ. ಆಮೇಲೆ ಕವಿಮಾಯೆ, ಚಿತ್ರಪಟ, ಸಂಸಾರ ಸಾಗರ, ರೆವೆಲ್ಯೂಶನ್ 2020, ಮೌನ, ಸದರಾಮೆ ಸೇರಿದಂತೆ ಏಳೆಂಟು ನಾಟಕಗಳಲ್ಲಿ ಸೇರಿಕೊಂಡು ನಾನು ನೀಡಿದ ಪ್ರದರ್ಶನಗಳು ಹಲವಾರು! ರಾಜ್ಯದಲ್ಲಿ ಮಾತ್ರವಲ್ಲದೆ ಕೊಲ್ಲತ್ತಾ, ಅಸ್ಸಾಂ, ಒಡಿಶಾ ಮೊದಲಾದಲ್ಲಿ ಕೂಡ ನಾಟಕ ಪ್ರದರ್ಶನ ನೀಡಿದ್ದೆವು. `ತ್ರಿನೇತ್ರ', `ದಿ ರೆಡ್ ಥಿಯೇಟರ್ಸ್',`ಸರ್ವಸ್ವ' ಸೇರಿದಂತೆ ಬಿ. ಜಯಶ್ರೀಯವರ `ಸ್ಪಂದನಾ' ಮೊದಲಾದ ನಾಟಕ ತಂಡಗಳಲ್ಲಿಯೂ ಅಭಿನಯಿಸಿದೆ. ಸ್ಪಂದನಾದಲ್ಲಿ ವರ್ಕ್ ಶಾಪ್ ನೀಡಿದ್ದ ಮಂಡ್ಯ ರಮೇಶ್ ಸರ್ ಒಂದು ಮಾತು ಹೇಳಿದ್ದರು, "ನೀನು ಒಳ್ಳೆಯ ನಟಿ. ಸಿನಿಮಾದಲ್ಲಿ ಖಂಡಿತವಾಗಿ ನಿನಗೆ ಒಳ್ಳೆಯ ಭವಿಷ್ಯವಿದೆ. ಆದರೆ ಚಿಕ್ಕಪುಟ್ಟ ಪಾತ್ರವನ್ನೆಲ್ಲ ಒಪ್ಪಿಕೊಳ್ಳಬೇಡ" ಎಂದಿದ್ದರು.
ಸಿನಿಮಾದಲ್ಲಿ ಒಳ್ಳೆಯ ಪಾತ್ರಕ್ಕಾಗಿ ಕಾದು ಕುಳಿತಿರಾ?
ನನಗೆ ಸಿನಿಮಾ ನಟಿಯಾಗಲೇಬೇಕು ಎನ್ನುವ ಗುರಿ ಇರಲಿಲ್ಲ. ಆದರೆ ನಟಿಸಿದರೆ ಒಳ್ಳೆಯ ಪಾತ್ರವನ್ನೇ ಮಾಡಬೇಕು ಅಂತ ಇತ್ತು. ರಂಗಭೂಮಿಗೆ ಸಂಬಂಧಿಸಿದವರು ಚಿತ್ರ ಮಾಡುವಾಗ ನಾನು ಕೂಡ ನಟಿಯಾಗಿ ಪಾಲ್ಗೊಂಡಿದ್ದೆ. ಟಿ.ಎನ್ ಸೀತಾರಾಮ್ ಅವರ ಪುತ್ರ ಸತ್ಯಜಿತ್ ನಿರ್ದೇಶಿಸಿದ್ದಂಥ `ಹಿಂಗ್ಯಾಕೆ' ಎನ್ನುವ ಸಿನಿಮಾದಲ್ಲಿ `ಹಿಂಗೆ ಬಂದು ಹಂಗೆ ಹೋಗುವ' ಒಂದು ಸಣ್ಣ ಪಾತ್ರ ಮಾಡಿದ್ದೆ. ಅದರ ಬಳಿಕ `ದಿ ಗ್ರೇಟ್ ಸ್ಟೋರಿ ಆಫ್ ಸೋಡಾಬುಡ್ಡಿ' ಚಿತ್ರದ ದ್ವಿತೀಯಾರ್ಧದಲ್ಲಿ ಬರುವಂಥ ಪಾತ್ರವಾಗಿದ್ದೆ. ಇದರ ನಡುವೆ `ಜಾತ್ರೆ' ಎನ್ನುವ ಕಿರುಚಿತ್ರ ಮಾಡಿದ್ದೆ. ತಮಿಳು, ತೆಲುಗು ವಿಡಿಯೋ ಆಲ್ಬಮ್ ಗಳಲ್ಲಿಯೂ ನಟಿಸಿದ್ದೇನೆ. ರಘು ದೀಕ್ಷಿತ್ ಪಾಲ್ಗೊಂಡಿದ್ದಂಥ ಭೀಮ ಜ್ಯುವೆಲ್ಲರಿಯ ಹಳೆಯ ಜಾಹೀರಾತೊಂದರಲ್ಲಿಯೂ ಕಾಣಿಸಿಕೊಂಡಿದ್ದೆ.
`ದಿಯಾ’ ಚಿತ್ರ ತಂಡಕ್ಕೆ ನೀವು ಸೇರಿಕೊಂಡಿದ್ದು ಹೇಗೆ?
ನಾನು ತಮಿಳಲ್ಲಿ `ಶಿವಶಕ್ತಿ' ಎನ್ನುವ ಶಾರ್ಟ್ ಫಿಲ್ಮ್ ಮಾಡಿದ್ದೆ. ವಾಸ್ತವದಲ್ಲಿ ಅದು ಯಾವುದೋ ಪ್ರೊಡ್ಯೂಸರ್ ಗೆ ತೋರಿಸುವ ಉದ್ದೇಶದಿಂದ ಮಾಡಿದ್ದಂಥ ಚಿತ್ರ. ಹಾಗಾಗಿ ಅದು ಯೂಟ್ಯೂಬ್ ಸೇರಿದಂತೆ ಹೊರಗಡೆ ಎಲ್ಲಿಯೂ ಲಭ್ಯವಿಲ್ಲ. ಆದರೆ ಅದಕ್ಕೆ ಛಾಯಾಗ್ರಾಹಕರಾಗಿದ್ದ ಶಂಕರ್ ಎನ್ನುವವರು, `ದಿಯಾ' ನಿರ್ದೇಶಕ ಅಶೋಕ್ ಸರ್ ಅವರಿಗೆ ನನ್ನ ಹೆಸರನ್ನು ರೆಫರ್ ಮಾಡಿದ್ದರು. ಹಾಗೆ ನನಗೆ ದಿಯಾ ಚಿತ್ರಕ್ಕಾಗಿ ಆಡಿಶನ್ ನೀಡುವಂತೆ ಕರೆ ಬಂದಿತ್ತು. ಹೋದೆ. ನಾಯಕಿಯೂ ಆದೆ.
ಕತೆಯಾಗಿ ಕೇಳುವಾಗ ನಿಮ್ಮದು ದ್ವಂದ್ವ ಮನಸ್ಥಿತಿಯ ಪಾತ್ರ ಅನಿಸಿಲ್ಲವೇ?
ಹೌದು. ನಿರ್ದೇಶಕರು ನಾನು ಆಯ್ಕೆಯಾಗಿದ್ದನ್ನು ತುಂಬ ತಡವಾಗಿ ಹೇಳಿದರು! ಪಾತ್ರವನ್ನು ತುಂಬ ಶಿಸ್ತಾಗಿ ವಿವರಿಸುತ್ತಿದ್ದರು. ಸೆಟ್ ನಲ್ಲಿ ಪಾತ್ರದ ಮೂಡ್ ನಿಂದ ಹೊರಗೆ ಬರಬಾರದು. ಯಾರ ಜತೆಯೂ ನಕ್ಕು ಮಾತನಾಡಿಸಬಾರದು ಎಂದು ತಾಕೀತು ಮಾಡಿದ್ದರು. ಇಂಥದೊಂದು ಮೂಡಿ ಪಾತ್ರವನ್ನು ಜನ ಮೆಚ್ತಾರ ಎನ್ನುವ ಸಂದೇಹ ನನ್ನೊಳಗೆ ಇತ್ತು. ನನ್ನದು ತುಂಬ ಉದ್ದಕೂದಲು ಇತ್ತು. ಅವರು ಪಾತ್ರಕ್ಕಾಗಿ ಬಾಬ್ ಕಟ್ ಮಾಡಿಸಿದ್ದರು. ನಾನು ಎಲ್ಲದಕ್ಕೂ ಒಪ್ಪಿಕೊಂಡಿದ್ದೆ. ಯಾಕೆಂದರೆ ನನಗೆ ನಿರ್ದೇಶಕ ಅಶೋಕ್ ಸರ್ ಅವರ ಮೇಲೆ ಅಷ್ಟು ನಂಬಿಕೆ ಇತ್ತು. ದ್ವಂದ್ವ ಮನಸ್ಥಿತಿಯ ಹುಡುಗಿಯ ಕತೆಯನ್ನು ಕೂಡ ಪ್ರಧಾನವಾಗಿ ಮಾಡಿ ತೋರಿಸಿ ಜನರು ಮೆಚ್ಚುವಂತೆ ಮಾಡಬಹುದು ಎನ್ನುವುದನ್ನು ಅವರು ಇಂದು ತೋರಿಸಿಕೊಟ್ಟಿದ್ದಾರೆ.
ಪ್ರಸ್ತುತ ಪ್ರೇಕ್ಷಕರ ಪ್ರತಿಕ್ರಿಯೆ ಕಂಡಾಗ ನಿಮಗೇನು ಅನಿಸುತ್ತಿದೆ?
ನಿರ್ದೇಶಕರು ನಮ್ಮ ನಂಬಿಕೆಯನ್ನು ಉಳಿಸಿದ್ದಾರೆ. ಫಸ್ಟ್ ಹಾಫ್ ಎಲ್ಲ ಯುರೋಪಿಯನ್ ಶೈಲಿಯಲ್ಲಿ ವಿಭಿನ್ನವಾಗಿ ತೆಗೆದಿದ್ದಾರೆ. ಅಜನೀಶ್ ಸರ್ ಬ್ಯಾಕ್ ಗ್ರೌಂಡ್ ಸ್ಕೋರ್ ನನಗೆ ತುಂಬ ಇಷ್ಟವಾಗಿತ್ತು. ಅದರಲ್ಲಿಯೂ ಅಮ್ಮ ಮಗನ ಸನ್ನಿವೇಶಗಳಲ್ಲಿರುವಂಥ ಹಿನ್ನೆಲೆ ಸಂಗೀತ ನನಗೆ ಫೇವರಿಟ್. ಥಿಯೇಟರ್ ಗೆ ಭೇಟಿ ಕೊಟ್ಟಾಗ ಗಂಡಸರ ಕಣ್ಣಲ್ಲಿಯೂ ಕಣ್ಣೀರು ನೋಡಿದ್ದೆ. ನಮ್ಮ ಚಿತ್ರ ಬಾಕ್ಸ್ ಆಫೀಸಲ್ಲಿ ಸದ್ದು ಮಾಡದಿದ್ದರೂ ಜನರ ಮನಸು ಗೆದ್ದಿದೆ ಎಂದು ಸಾಮಾಜಿಕ ಜಾಲತಾಣಗಳ ಮೂಲಕ ಗೊತ್ತಾಗುತ್ತಿದೆ. ಇಂದು ಚಿತ್ರ ನೋಡಿದವರೆಲ್ಲ `ಭಾವನಾತ್ಮಕವಾಗಿ ಕಾಡಿತು' ಎಂದು ಬರೆಯುತ್ತಿದ್ದಾರೆ. ಟ್ರೋಲ್ ಪೇಜ್ ಗಳ ಮೂಲಕ ಪಾಸಿಟಿವ್ ಆಗಿ ಟ್ರೋಲ್ ಮಾಡುತ್ತಿದ್ದಾರೆ. ಪರಭಾಷೆಗಳ ಪ್ರೇಕ್ಷಕರು ಕೂಡ ಮೆಚ್ಚಿ ಬರೆಯುತ್ತಿದ್ದಾರೆ. ಅಮೆಜಾನ್ ನಲ್ಲಿಯೂ ಹತ್ತರಲ್ಲಿ 9.2 ರೇಟಿಂಗ್ಸ್ ಕೊಟ್ಟಿದ್ದಾರೆ.
ನಿಮಗೆ ಸಿನಿಮಾ ಆಫರ್ ಗಳ ಸಂಖ್ಯೆ ಹೆಚ್ಚಿವೆಯೇ?
ಈಗಾಗಲೇ ಐದಕ್ಕಿಂತ ಅಧಿಕ ಆಫರ್ ಗಳು ಬಂದಿವೆ. ಆದರೆ ಒಂದೇ ಒಂದು ಚಿತ್ರದ ಮೂಲಕ ನನಗೆ ಈ ಮಟ್ಟದ ಹೆಸರು ಬಂದಿದೆ ಎನ್ನುವುದು ನೆನಪಿದೆ. ಹಾಗಾಗಿ ಮುಂದಿನ ಪ್ರತಿಯೊಂದು ಚಿತ್ರವನ್ನು ಒಪ್ಪಿಕೊಳ್ಳುವಾಗಲೂ ಇನ್ನಷ್ಟು ಜವಾಬ್ದಾರಿಯುತವಾಗಿರಬೇಕು ಎಂದು ಗೊತ್ತಾಗಿದೆ. ಕಡಿಮೆ ಚಿತ್ರಗಳನ್ನು ಮಾಡಿದರೂ ಪರವಾಗಿಲ್ಲ. ಇಂಥ ಒಳ್ಳೆಯ ಪಾತ್ರಗಳ ಮೂಲಕ ಗುರುತಿಸಿಕೊಂಡರೆ ಸಾಕು ಎಂದುಕೊಂಡಿದ್ದೇನೆ.