'ಎಕ್ಸ್ ಆ್ಯಂಡ್ ವೈ' ಚಿತ್ರವನ್ನು ಯಾಕೆ ನೋಡಬೇಕು ? ಚಿತ್ರದ ವಿಶೇಷತೆ ಹೇಳಿದ ಸತ್ಯಪ್ರಕಾಶ್ ..!
ರಾಮಾ ರಾಮಾ ರೇ .. ಒಂದಲ್ಲಾ ಎರಡಲ್ಲಾ .. ಅಂತಹ ಹೊಸ ಅಲೆ ಸಿನಿಮಾಗಳನ್ನು ಕನ್ನಡಿಗರ ಮಡಿಲಿಗೆ ಹಾಕಿದವರು ಡಿ ಸತ್ಯಪ್ರಕಾಶ್. ಇವರಲ್ಲಿನ ಪ್ರತಿಭೆಗೆ ಮನ ಸೋತು ಡಾ.ಪುನೀತ್ ರಾಜ್ ಕುಮಾರ್ ಖುದ್ದು ಇವರ ಜೊತೆ ಕೈ ಜೋಡಿಸಿದ್ದರು. ಮ್ಯಾನ್ ಆಫ್ ದಿ ಮ್ಯಾಚ್ ಚಿತ್ರವನ್ನು ಮಾಡಿದ್ದರು. ಇಂಥಾ ಸತ್ಯ ಪ್ರಕಾಶ್ ಸದ್ಯ ಎಕ್ಸ್ ಆಂಡ್ ವೈ { X &Y } ಚಿತ್ರವನ್ನು ನಿರ್ದೇಶಿಸಿದ್ದಾರೆ.
ವಿಶೇಷ ಅಂದರೆ ಸತ್ಯಪ್ರಕಾಶ್ ಈ ಚಿತ್ರದ ಸೂತ್ರಧಾರಿ ಮಾತ್ರವಲ್ಲ ಪಾತ್ರಧಾರಿ ಕೂಡ ಹೌದು. ಇನ್ನು ಈಗಾಗಲೇ ಈ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು ಕುತೂಹಲವನ್ನು ಹುಟ್ಟು ಹಾಕಿದೆ. ಕನ್ನಡ ಚಿತ್ರರಂಗದಲ್ಲಿ ಕೂಡ ಈ ಚಿತ್ರದ ಕುರಿತು ಚರ್ಚೆಗಳು ನಡೆಯುತ್ತಿವೆ. ಗೆಲ್ಲುವ ಎಲ್ಲ ಲಕ್ಷಣ ಈ ಚಿತ್ರಕ್ಕಿದೆ ಎನ್ನುವ ಮಾತುಗಳು ಕೂಡ ಕೇಳಿ ಬರುತ್ತಿವೆ.

ಸಹಜವಾಗಿ ವ್ಯಕ್ತವಾಗುತ್ತಿರುವ ಈ ಅಭಿಪ್ರಾಯಗಳಿಂದ ಸತ್ಯಪ್ರಕಾಶ್ ಕೂಡ ಖುಷಿಯಾಗಿದ್ದಾರೆ. ಗೆಲ್ಲುವ ವಿಶ್ವಾಸದಲ್ಲಿ ಕೂಡ ಇದ್ದಾರೆ. ಇದರ ನಡುವೆ ಚಿತ್ರದ ಕುರಿತು ಕೆಲ ಆಸಕ್ತಿಕರ ವಿಚಾರಗಳನ್ನು ಸತ್ಯ ಪ್ರಕಾಶ್ ನಿಮ್ಮ 'ಫಿಲ್ಮಿಬೀಟ್ ಕನ್ನಡ' ವೆಬ್ ಸೈಟ್ ಜೊತೆ ಹಂಚಿಕೊಂಡಿದ್ದಾರೆ. ಜೂನ್ 26ರಂದು ತೆರೆಗೆ ಬರಲಿರುವ ತಮ್ಮ ಕನಸಿನ ಕೂಸು 'ಎಕ್ಸ್ ಆಂಡ್ ವೈ' ಚಿತ್ರದ ಕುರಿತು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಹಾಗಿದ್ದರೆ ತಮ್ಮ ಚಿತ್ರದ ಬಗ್ಗೆ ಸತ್ಯ ಪ್ರಕಾಶ್ ಹೇಳಿದ್ದೇನು ? ಎಂದು ತಿಳಿಯಲು ಮುಂದೆ ಓದಿ.
ಜೂನ್ 26ಕ್ಕೆ ಚಿತ್ರ ತೆರೆಗೆ ಬರುತ್ತಿದೆ. ಭಯ ಇದೆಯಾ ?
''ಇವತ್ತು ಇರುವ ಪರಿಸ್ಥಿತಿಯಲ್ಲಿ ಜನ ಚೂರು ಚಿತ್ರಮಂದಿರಕ್ಕೆ ನಮ್ಮ ಚಿತ್ರ ನೋಡಲು ಬಂದರೆ ಸಾಕು, ಮನರಂಜನೆ ರಸದೌತಣ ಸಿಗುತ್ತೆ. ನಮ್ಮದು ಇಡೀ ಫ್ಯಾಮಿಲಿ ಜೊತೆಯಲ್ಲಿ ಕುಳಿತು ನೋಡುವಂತಹ ಸಿನಿಮಾ. ಹೀಗಾಗಿ ಸಾಧ್ಯವಾದಷ್ಟು ನಾವು ಪ್ರಚಾರವನ್ನು ಮಾಡುತ್ತಿದ್ದೇವೆ. ಈಗಾಗಲೇ ಬಿಡುಗಡೆ ಮಾಡಿರುವ ಟ್ರೇಲರ್ ಮತ್ತು ಒಂದು ಹಾಡಿಗೆ ತುಂಬಾನೇ ಒಳ್ಳೆಯ ಪ್ರತಿಕ್ರಿಯೆ ಸಿಕ್ತಿದೆ. ಹೊಸದಾಗಿದೆ ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಪಾಸಿಟಿವ್ ವೈಬ್ ಇದೆ. ಇದರಿಂದ ಸ್ವಲ್ಪ ಆತಂಕ ಕಡಿಮೆ ಇದೆ'' ಎಂದು ಹೇಳಿದ್ದಾರೆ ಸತ್ಯಪ್ರಕಾಶ್.
ಟ್ರೇಲರ್ಗೆ ಚಿತ್ರರಂಗದ ಪ್ರತಿಕ್ರಿಯೆ
''ನಮ್ಮ ಇಂಡಸ್ಟ್ರೀಯಿಂದ ತುಂಬಾ ಜನ ನಿರ್ದೇಶಕರು ಮತ್ತು ಸ್ನೇಹಿತರು ಟ್ರೇಲರ್ ನೋಡಿ ನನಗೆ ಫೋನ್ ಮಾಡಿದ್ದರು. ಎಲ್ಲಕ್ಕಿಂತ ಹೆಚ್ಚಾಗಿ ನಮ್ಮ ಸತ್ಯ ಪಿಕ್ಚರ್ಸ್ ಯೂಟ್ಯೂಬ್ ಚಾನೆಲ್ನಲ್ಲಿ ಬಿಡುಗಡೆಯಾಗಿರುವ ಟ್ರೇಲರ್ ಆರ್ಗ್ಯಾನಿಕ್ ರೀತಿಯಲ್ಲಿ ಎಲ್ಲರನ್ನು ತಲುಪುತ್ತಿದೆ. ಕಥಾವಸ್ತು ಹೊಸತನವಾದ ಕಾರಣ ನೋಡಿದವರೆಲ್ಲ ತಮ್ಮ ಸಂಭ್ರಮವನ್ನು ನಮ್ಮ ಜೊತೆ ಹಂಚಿಕೊಳ್ಳುತ್ತಿದ್ದಾರೆ. ಪಾಸಿಟಿವ್ ಕಮೆಂಟ್ಗಳನ್ನು ಮಾಡುತ್ತಿದ್ದಾರೆ'' ಎನ್ನುವುದು ಸತ್ಯಪ್ರಕಾಶ್ ಅವರ ಅಂಬೋಣ.
ರಾಮಾ ರಾಮಾ ರೇ ಅಲ್ಲಿ ಕೃಷ್ಣ-ಅರ್ಜುನ, ಇಲ್ಲಿ ಕುಂತಿ ಮತ್ತು ಕರ್ಣ
''ಈ ಸಿನಿಮಾದಲ್ಲಿ ಆ ತರಹದ ಪ್ರಯತ್ನ ಮಾಡಲು ಮತ್ತೆ ನನಗೆ ಜಾಗ ಸಿಕ್ತು. ಕಥೆ ಅದಕ್ಕೆ ಪೂರಕವಾಗಿತ್ತು. ಹೀಗಾಗಿ ಕುಂತಿ ಮತ್ತು ಕರ್ಣನ ನಡುವೆ ಸಂಭಾಷಣೆಯನ್ನೇ ಹಾಡಿನ ಮೂಲಕ ಹೇಳುವ ಪ್ರಯತ್ನ ಮಾಡಿದ್ದೇವೆ. ಹಾಡು ಚಿಕ್ಕದಾದರು ಕೂಡ ತುಂಬಾ ವಿಶೇಷವಾದ ಹಾಡು ತುಂಬಾ ಅಪರೂಪದ ಹಾಡು. ಯಾಕೆಂದರೆ ಈ ಎರಡು ಪೌರಾಣಿಕ ಪಾತ್ರಗಳ ನಡುವಿನ ಸಂಭಾಷಣೆ ಅಥವಾ ಹಾಡಾಗಲಿ ನಾಟಕಗಳಲ್ಲಿ ಕೇಳಿರುವುದು ಬಿಟ್ಟರೆ ನಾನು ಇಲ್ಲಿಯವರೆಗೆ ಕೇಳಿಲ್ಲ. ಹೀಗಾಗಿ ಸಾಮಾನ್ಯ ಪ್ರೇಕ್ಷಕರಿಗೆ ಸುಲಭವಾಗಿ ಅರ್ಥವಾಗುವಂತೆ ಅವರ ಭಾವನೆಗಳನ್ನು ಹಾಡಿನ ಮೂಲಕ ಹೇಳುವ ಪ್ರಯತ್ನ ನಮ್ಮ ಚಿತ್ರದಲ್ಲಾಗಿದೆ'' ಎಂದು ಫಿಲ್ಮಿಬೀಟ್ ಕನ್ನಡಗೆ ನೀಡಿದ ಸಂದರ್ಶನದಲ್ಲಿ ಸತ್ಯಪ್ರಕಾಶ್ ಹೇಳಿದ್ದಾರೆ.

ಬೃಂದಾ ಆಚಾರ್ಯ, ಅಯಾನಾ ಮತ್ತು ಅಥರ್ವ ಪಾತ್ರ
''ಬೃಂದಾ ಆಚಾರ್ಯ ಅವರದ್ದು ಇಲ್ಲಿ ಕನಸು ಕಾಣುವ ಹುಡುಗಿಯ ಪಾತ್ರ. ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕೆಂದುಕೊಂಡಿರುವ ಹುಡುಗಿ, ಆತ್ಮ ಗೌರವಕ್ಕೆ ತುಂಬಾ ಮರ್ಯಾದೆ ಕೊಡುವ ಹುಡುಗಿ, ಆ ತರಹದ ಪಾತ್ರವನ್ನು ಬೃಂದಾ ಅವರು ನಿರ್ವಹಿಸಿದ್ದಾರೆ.
ಇನ್ನು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಹುಡುಗಿಯ ಪಾತ್ರ ಅಯಾನಾ ಅವರದ್ದು. ಅವರ ಬದುಕು ಯಾವತ್ತು ಬೇಕಾದರೂ ಅಂತ್ಯವಾಗಬಹುದು ಎನ್ನುವಂತಹ ಸಂದರ್ಭ. ಹೀಗೆ ಇಬ್ಬರದ್ದು ಎರಡು ತದ್ವಿರುದ್ದ ಪಾತ್ರಗಳು. ಇನ್ನು ಅಥರ್ವ ಪಾತ್ರ ನಮ್ಮ ಇಡೀ ಚಿತ್ರದ ಕೇಂದ್ರಬಿಂದು. ಹುಟ್ಟದಿರುವ ಆತ್ಮದ ಕಥೆ ನಮ್ಮ ಚಿತ್ರದ್ದು. ಆ ಆತ್ಮ ಬಂದು ಸೇರಿಕೊಳ್ಳುವುದೇ ಅಥರ್ವನ ದೇಹದಲ್ಲಿ. ಹೀಗಾಗಿ ಇಡೀ ಚಿತ್ರ ನಿಂತಿರುವುದು ಅಥರ್ವ ಅವರ ಪಾತ್ರದ ಮೇಲೆ'' ಎಂದು ಹೇಳಿದ್ದಾರೆ ಸತ್ಯ ಪ್ರಕಾಶ್.
ಡೈರೆಕ್ಟರ್ To ಆಕ್ಟರ್, ಜನ ಹೇಗೆ ಸ್ವೀಕರಿಸುತ್ತಾರೆ ?
''ನಟನಾಗಿ ಪ್ರೇಕ್ಷಕರು ನನ್ನನ್ನು ಹೇಗೆ ಸ್ವೀಕರಿಸುತ್ತಾರೆ ಎನ್ನುವ ಭಯ ನನಗೆ ಇಲ್ಲ. ಯಾಕೆಂದರೆ.. ನಮ್ಮ ಚಿತ್ರದಲ್ಲಿ ಸುಂದರ್ ಇದ್ದಾರೆ. ವೀಣಾ ಸುಂದರ್ ಅವರಿದ್ದಾರೆ. ಹರಿಣಿ, ದೊಡ್ಡಣ್ಣ, ಬೃಂದಾ, ಅಯನಾ, ಅಥರ್ವ ಹೀಗೆ ಒಳ್ಳೊಳ್ಳೆಯ ಕಲಾವಿದರಿದ್ದಾರೆ. ಹೀಗಾಗಿ ನಾನು ಚೆನ್ನಾಗಿ ಅಭಿನಯಿಸಿದ್ದೆ ಇದ್ದರೆ ಅವರು ಅಲ್ಲಿಯೇ ಆಕ್ಟಿಂಗ್ ಚೆನ್ನಾಗಿಲ್ಲ ಎಂದು ಹೇಳಿ ಬಿಡ್ತಿದ್ದರು. ಅವರು ಆ ತರಹದ ಮಾತುಗಳನ್ನು ಹೇಳಿಲ್ಲ. ಹೀಗಾಗಿ ನನ್ನ ಪಾತ್ರ ಅಚ್ಚು ಕಟ್ಟಾಗಿ ನಿಭಾಯಿಸಿರುವ ನಂಬಿಕೆ ನನಗೆ ಇದೆ. ಅವರು ಕೂಡ ಅದನ್ನೇ ಹೇಳಿದ್ದಾರೆ'' ಎನ್ನುವುದು ಸತ್ಯಪ್ರಕಾಶ್ ಅವರ ಮಾತು.
ಚಿತ್ರದ ಮೂರು ಹೈಲೆಟ್ಸ್ ಏನು ?
''ಚಿತ್ರದ ಮೂರು ಪ್ರಮುಖ ಹೈಲೆಟ್ ಅಂದರೆ ಅದು ಚಿತ್ರದ ಕಥೆ. ತೀರಾ ಹೊಸತನದ ಕಥೆ ಇದು. ಮತ್ತೊಂದು ಚಿತ್ರದ ಕ್ಲೈಮ್ಯಾಕ್ಸ್. ಸಿನಿಮಾದ ಕ್ಲೈಮ್ಯಾಕ್ಸ್ ತುಂಬಾನೇ ವಿಶೇಷವಾಗಿದೆ. ಇವೆರಡು ಹೊರತು ಪಡಿಸಿದರೆ ಚಿತ್ರದ ಸಂಗೀತ. ಹಿನ್ನೆಲೆ ಸಂಗೀತ ಇರಬಹುದು ಅಥವಾ ಹಾಡುಗಳಿರಬಹುದು ತುಂಬಾನೇ ಅಚ್ಚು ಕಟ್ಟಾಗಿ ಮಾಡಿದ್ದಾರೆ'' ಎಂದು ಸತ್ಯ ಪ್ರಕಾಶ್ ಹೇಳಿದ್ಧಾರೆ.


Click it and Unblock the Notifications











