Exclusive: ಯುವ ದಸರಾದಲ್ಲಿ ಕನ್ನಡಿಗರಿಗೆ ಮನ್ನಣೆ ಇರಲಿಲ್ವಾ? ಭಾಗವಹಿಸಿದ್ದ ಅನಿರುದ್ಧ ಶಾಸ್ತ್ರಿ ಕೊಟ್ರು ಉತ್ತರ

ಈ ವರ್ಷದ ಮೈಸೂರು ದಸರಾ ವೀಕ್ಷಣೆಗೆ ಎರಡು ಕಣ್ಣು ಸಾಲುತ್ತಿರಲಿಲ್ಲ ಎಂದೇ ಹೇಳಬಹುದು. ಕೊರೊನಾ ವೈರಸ್ ಅವಾಂತರದಿಂದಾಗಿ 2 ವರ್ಷಗಳ ಕಾಲ ಸರಳ ರೀತಿಯಲ್ಲಿ ನಡೆಸಲಾಗಿದ್ದ ದಸರಾ ಮಹೋತ್ಸವವನ್ನು ಈ ಬಾರಿ ಕರ್ನಾಟಕ ಸರ್ಕಾರ ಅದ್ಧೂರಿಯಾಗಿ ಆಯೋಜಿಸಿತ್ತು.
ದೀಪಾಲಂಕಾರದಿಂದ ಝಗಮಗಿಸುತ್ತಿದ್ದ ಮೈಸೂರು ದಸರಾಗೆ ಮತ್ತಷ್ಟು ಮೆರುಗು ತಂದದ್ದು ಯುವ ದಸರಾ ಕಾರ್ಯಕ್ರಮ. ಕಳೆದ ವರ್ಷ ಅಗಲಿದ ಪುನೀತ್ ರಾಜ್ ಕುಮಾರ್ ಅವರಿಗೆ ನಮನ ಸಲ್ಲಿಸುವ ಮೂಲಕ ಆರಂಭಗೊಂಡ ಈ ಬಾರಿಯ ಯುವ ದಸರಾ ಕಾರ್ಯಕ್ರಮಕ್ಕೆ ಆಗಮಿಸಿದ್ದ ಜನಸ್ತೋಮಕ್ಕೆ ಭರಪೂರ ಮನರಂಜನೆ ನೀಡಿತ್ತು.
ಭಾರತ ಚಿತ್ರರಂಗದ ಹಲವಾರು ಖ್ಯಾತ ಗಾಯಕರು ಯುವ ದಸರಾ ವೇದಿಕೆ ಹತ್ತಿ ಕನ್ನಡ ಹಾಗೂ ಇತರೆ ಭಾಷೆಯ ಹಲವು ಜನಪ್ರಿಯ ಹಾಡುಗಳನ್ನು ಹಾಡಿ ರಂಜಿಸಿದ್ದರು. ಈ ಬೃಹತ್ ಕಾರ್ಯಕ್ರಮದಲ್ಲಿ ಕನ್ನಡದ ಯುವ ಸಂಗೀತ ನಿರ್ದೇಶಕ ಹಾಗೂ ಗಾಯಕ ಅನಿರುದ್ಧ ಶಾಸ್ತ್ರಿ ಕೂಡ ಭಾಗವಹಿಸಿದ್ದರು. ಗಾಯಕಿ ಮಂಗ್ಲಿ ಜತೆ ವೇದಿಕೆ ಹಂಚಿಕೊಂಡಿದ್ದ ಅನಿರುದ್ಧ ಶಾಸ್ತ್ರಿ ಫಿಲ್ಮಿಬೀಟ್ ಕನ್ನಡದ ಜತೆ ಮಾತನಾಡಿ ತಮ್ಮ ಮೊದಲ ಯುವ ದಸರಾ ಕಾರ್ಯಕ್ರಮದ ಅನುಭವ ಹೇಗಿತ್ತು ಎಂಬುದನ್ನು ಹಂಚಿಕೊಂಡಿದ್ದಾರೆ. ಇದೇ ವೇಳೆ ಈ ಬಾರಿಯ ಯುವ ದಸರಾ ಕಾರ್ಯಕ್ರಮದಲ್ಲಿ ಕನ್ನಡ ಕಲಾವಿದರನ್ನು ಕಡೆಗಣಿಸಲಾಗಿತ್ತು ಎಂಬ ಆರೋಪದ ಕುರಿತೂ ಸಹ ಅನಿರುದ್ಧ ಶಾಸ್ತ್ರಿ ಮಾತನಾಡಿ ತಮ್ಮ ಪಾಲಿನ ಅಭಿಪ್ರಾಯವನ್ನು ತಿಳಿಸಿದರು.

ಮಂಗ್ಲಿ ಅವರೇ ಖುದ್ದಾಗಿ ಆಹ್ವಾನಿಸಿದ್ರು
ರಾಬರ್ಟ್ ತೆಲುಗು ಅವತರಣಿಕೆಯ ಚಾರ್ಟ್ ಬಸ್ಟರ್ 'ಕಣ್ಣೆ ಅದಿರಿಂದಿ' ಹಾಡಿನ ಮೂಲಕ ಜನಪ್ರಿಯತೆ ಪಡೆದ ಹಾಗೂ ಕರ್ನಾಟಕದಲ್ಲಿ ಗುರುತಿಸಿಕೊಂಡ ಗಾಯಕಿ ಮಂಗ್ಲಿ ಅವರೇ ಕರೆ ಮಾಡಿ ಖುದ್ದಾಗಿ ಯುವ ದಸರಾ ವೇದಿಕೆ ಮೇಲೆ ತನ್ನೊಡನೆ ಪ್ರದರ್ಶನ ನೀಡುವಂತೆ ಆಹ್ವಾನಿಸಿದರು ಎಂದು ಅನಿರುದ್ಧ ಶಾಸ್ತ್ರಿ ಫಿಲ್ಮಿಬೀಟ್ ಜೊತೆ ಹಂಚಿಕೊಂಡರು. ಮಂಗ್ಲಿ ಅವರು ಹೆಚ್ಚಾಗಿ ಡ್ಯುಯೆಟ್ ಗೀತೆಗಳನ್ನು ಹಾಡುತ್ತಿದ್ದರಿಂದ ನನ್ನನ್ನು ಆಹ್ವಾನಿಸಿದರು ಎಂದು ಸಹ ಅನಿರುದ್ದ ಶಾಸ್ತ್ರಿ ಹೇಳಿಕೊಂಡಿದ್ದಾರೆ.

ಅಪ್ಪುಗಾಗಿ ಕನ್ನಡ ಹಾಡು ಅಭ್ಯಾಸ
ಇನ್ನು ಕಾರ್ಯಕ್ರಮಕ್ಕೆ ತಯಾರಿ ನಡೆಸಿಕೊಳ್ಳುತ್ತಿದ್ದ ಸಂದರ್ಭದಲ್ಲಿ ಮೊದಲಿಗೆ ತಾನು ಕನ್ನಡದ ಬೊಂಬೆ ಹೇಳುತೈತೆ ಹಾಡನ್ನು ಹಾಡಬೇಕು, ತನ್ನ ನೆಚ್ಚಿನ ನಟ ಅಪ್ಪು ಅವರಿಗಾಗಿ ಈ ಹಾಡನ್ನು ಅರ್ಪಿಸಬೇಕು ಎಂದು ಹೇಳಿಕೊಂಡಿದ್ದರಂತೆ ಗಾಯಕಿ ಮಂಗ್ಲಿ. ಹೀಗಾಗಿ ಈ ಹಾಡಿನ ಪಲ್ಲವಿಯನ್ನು ಕಾರ್ಯಕ್ರಮಕ್ಕೆ ಕೆಲ ಸಮಯ ಇರುವಾಗ ಕಲಿತ ಮಂಗ್ಲಿ ವೇದಿಕೆ ಮೇಲೆ ಹಾಡಿ ಅಪ್ಪು ಅವರಿಗೆ ನಮನ ಸಲ್ಲಿಸಿದರು, ಅಪ್ಪು ಅವರ ಕುರಿತು ಅವರಿಗೆ ಅಂಥ ಗೌರವ ಇತ್ತು ಎಂದರು ಅನಿರುದ್ಧ ಶಾಸ್ತ್ರಿ.

ಮಂಗ್ಲಿ ಕನ್ನಡ ಹಾಡುಗಳನ್ನೇ ಹೆಚ್ಚು ಹಾಡಿದ್ರು
ಇನ್ನು ಗಾಯಕಿ ಮಂಗ್ಲಿ ಅವರು ಮೂಲತಃ ತೆಲುಗು ಗಾಯಕಿಯಾಗಿದ್ದರೂ ಸಹ ಯುವ ದಸರಾ ವೇದಿಕೆಯಲ್ಲಿ ಅವರು ಹಾಡಿದ ಹಾಡುಗಳ ಪೈಕಿ ಇತ್ತೀಚೆಗೆ ಬಿಡುಗಡೆಯಾದ ಅವರ ಒಂದು ತೆಲುಗು ಆಲ್ಬಮ್ ಹಾಡು ಬಿಟ್ಟರೆ ಉಳಿದೆಲ್ಲಾ ಹಾಡುಗಳು ಕನ್ನಡ ಗೀತೆಗಳೇ ಆಗಿದ್ದವು ಎಂಬುದನ್ನು ಅನಿರುದ್ದ ಶಾಸ್ತ್ರಿ ಹೆಮ್ಮೆಯಿಂದ ಹೇಳಿಕೊಂಡರು. ರಾ ರಾ ರಕ್ಕಮ್ಮ, ಹೂ ಅಂತೀಯ ಮಾವ ಸೇರಿದಂತೆ ಅನೇಕ ಕನ್ನಡ ಗೀತೆಗಳನ್ನೇ ಮಂಗ್ಲಿ ವೇದಿಕೆ ಮೇಲೆ ಹಾಡಿದರು. ಅದರಲ್ಲಿಯೂ ರಾಬರ್ಟ್ ಚಿತ್ರದ ತೆಲುಗು ಹಾಡು ತಮಗೆ ಜನಪ್ರಿಯತೆ ತಂದುಕೊಟ್ಟರೂ ಸಹ ಅವರು ಆ ಹಾಡನ್ನು ತೆಲುಗಿನಲ್ಲಿ ಹಾಡದೇ ಕನ್ನಡದಲ್ಲಿ ಹಾಡಿದ್ದು ವಿಶೇಷವೆನಿಸಿತು ಎನ್ನುತ್ತಾರೆ ಅನಿರುದ್ಧ.

ಕನ್ನಡಿಗರಿಗೆ ಮನ್ನಣೆ ಇರಲಿಲ್ವಾ?
ಇನ್ನು ಯುವ ದಸರಾ ಕಾರ್ಯಕ್ರಮದಲ್ಲಿ ಕನ್ನಡ ಕಲಾವಿದರಿಗೆ ಹೆಚ್ಚು ಅವಕಾಶ ನೀಡಿಲ್ಲ, ಬೇರೆ ಭಾಷೆಯ ಕಲಾವಿದರಿಗೆ ಹೆಚ್ಚು ಅವಕಾಶ ನೀಡಿದ್ದಾರೆ ಎಂಬ ಆರೋಪ ಈ ಬಾರಿ ದೊಡ್ಡ ಮಟ್ಟದಲ್ಲಿ ಕೇಳಿ ಬಂದಿತ್ತು ಹಾಗೂ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಟ್ರೋಲ್ ಕೂಡ ಆಗಿದ್ದವು. ಈ ಕುರಿತಾಗಿ ನಿಮ್ಮ ಅಭಿಪ್ರಾಯವೇನು ಎಂಬ ಪ್ರಶ್ನೆಗೆ ಉತ್ತರಿಸಿದ ಅನಿರುದ್ಧ ಶಾಸ್ತ್ರಿ 'ಇಲ್ಲ, ಈ ಬಾರಿ ಐದಾರು ಬೇರೆ ರಾಜ್ಯದ ಕಲಾವಿದರಿಗೆ ಅವಕಾಶ ನೀಡಿದ್ದು ಬಿಟ್ಟರೆ, ಯುವ ದಸಾರಾದಲ್ಲಿ ಭಾಗವಹಿಸಿದ್ದ ಎಲ್ಲಾ ಕಲಾವಿದರೂ ಕನ್ನಡದವರೇ' ಎಂದರು. ಮಾತು ಮುಂದುವರಿಸಿದ ಅನಿರುದ್ಧ ಶಾಸ್ತ್ರಿ ಯಾರಿಗೆ ಆಹ್ವಾನ ನೀಡಬೇಕು ಎಂಬುದು ಯುವ ದಸರಾ ಆಯ್ಕೆ ಸಮಿತಿಯ ನಿರ್ಧಾರ, ಇದನ್ನು ಓರ್ವ ವ್ಯಕ್ತಿ ಆಯ್ಕೆ ಮಾಡುವುದಿಲ್ಲ, ಆದರೆ ಕನ್ನಡಿಗರಿಗೆ ಮನ್ನಣೆ ಸಿಗಲಿಲ್ಲ ಎನ್ನುವುದನ್ನು ಒಪ್ಪಲಾರೆ, ಹಲವಾರು ಕನ್ನಡಿಗರು ಭಾಗವಹಿಸಿದ್ದನ್ನು ನಾನೇ ಕಂಡಿದ್ದೇನೆ, ಕನ್ನಡಿಗರು ಇರಲಿಲ್ಲ ಎನ್ನುವವರು ಒಮ್ಮೆ ಕಾರ್ಯಕ್ರಮದ ವೇಳಾಪಟ್ಟಿಯನ್ನು ನೋಡಬಹುದು ಎಂದರು ಹಾಗೂ ಬೇರೆ ಭಾಷೆಯ ಕಲಾವಿದರಿಗೆ ಪ್ರತಿದಿನ ಕಾರ್ಯಕ್ರಮದ ಅಂತ್ಯದಲ್ಲಿ ಅಂದರೆ ಪ್ರಮುಖ ಸಮಯದಲ್ಲಿ ವೇದಿಕೆ ನೀಡಿದ್ದ ಕಾರಣ ಕನ್ನಡಿಗರಿಗೆ ಮನ್ನಣೆ ಸಿಗಲಿಲ್ಲ ಎಂದು ಕೆಲವರಿಗೆ ಎನಿಸಿರಬಹುದು ಎಂದೂ ಅನಿರುದ್ಧ ಶಾಸ್ತ್ರಿ ಹೇಳಿದರು.

ದರ್ಶನ್ ಹಾಡು ಹಾಡಿದೆ, ಜನ ಸಾಗರ ಕಂಡು ರೋಮಾಂಚನವಾಗಿತ್ತು
ಇನ್ನು ಮಂಗ್ಲಿ ಅವರ ಜತೆಗೆ ಹಲವು ಡ್ಯುಯೆಟ್ ಗೀತೆಗಳನ್ನು ಹಾಡಿದ ಅನಿರುದ್ಧ ಶಾಸ್ತ್ರಿ ದರ್ಶನ್ ಅಭಿನಯದ ರಾಬರ್ಟ್ ಚಿತ್ರದ 'ಬಾ ಬಾ ಬಾ ನಾ ರೆಡಿ' ಹಾಡನ್ನು ಹಾಡಿದರು. ಈ ಪ್ರದರ್ಶನಕ್ಕೆ ಅಭಿಮಾನಿಗಳು ಹುಚ್ಚೆದ್ದು ಕುಣಿದರು ಎಂಬುದನ್ನು ಅನಿರುದ್ಧ ಶಾಸ್ತ್ರಿ ಮೆಲುಕು ಹಾಕಿದರು. ವೇದಿಕೆ ಮೇಲೆ ಹಾಡುವುದಕ್ಕಿಂತ ಅಲ್ಲಿ ನೆರೆದಿದ್ದ ಜನರ ಮಧ್ಯೆ ನಾವೂ ಕೂಡ ಮೈಮರೆತು ಕುಣಿಯಬೇಕೆನಿಸುವ ಮಟ್ಟಿಗೆ ಜನರು ಹೆಜ್ಜೆ ಹಾಕಿ ಎಂಜಾಯ್ ಮಾಡುತ್ತಿದ್ದರು ಎಂದು ಅನಿರುದ್ಧ ಹೇಳಿದರು. ಹಾಗೂ ಅಂದು ನೆರೆದಿದ್ದ ಜನರನ್ನು ಕಂಡು ರೋಮಾಂಚನಗೊಂಡಿದ್ದೆ, ಪೆಂಡಾಲ್ ಹಾಕಿದ್ದಕ್ಕಿಂತ ಹೆಚ್ಚಿನ ಜನ ಸೇರಿದ್ದರು, ಮಳೆ ಬಂದರೂ ಸಹ ಜನರು ಡಾನ್ಸ್ ಮಾಡುತ್ತಿದ್ದರು, ಎಷ್ಟೋ ಜನ ಕಾರ್ಯಕ್ರಮದ ವಿಡಿಯೋವನ್ನು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಕಳುಹಿಸಿದ್ದರು, ನಿಜಕ್ಕೂ ಅವರ ಪ್ರೀತಿಗೆ ಬೆಲೆಕಟ್ಟಲಾಗುವುದಿಲ್ಲ, ಅವರ ಬೆಂಬಲಕ್ಕೆ ಮನಸೋತಿದ್ದೇನೆ ಎಂದರು. ಅಂತಿಮವಾಗಿ ಯುವ ದಸರಾ ಆಯೋಜಕರು ಎಲ್ಲಿಯೂ ಸಹ ಕಿಂಚಿತ್ತೂ ಬೇಸರವಾಗದೇ, ಕಿರಿಕಿರಿ ಎನಿಸದೆ ಇರುವಷ್ಟು ಅಚ್ಚುಕಟ್ಟಾಗಿ ಕಲಾವಿದರಿಗೆ ಅಗತ್ಯವಿದ್ದ ಅಂಶಗಳನ್ನೆಲ್ಲಾ ಆಯೋಜಿಸಿದ್ದರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.


Click it and Unblock the Notifications











