Exclusive ;ಮನೆಯಲ್ಲಿ ಕಳ್ಳತನವಾದರೆ ನೀವೇನ್ ಮಾಡ್ತೀರಾ ? ಲವ್ ಮಾಕ್ಟೇಲ್ 3 ಕಥೆ ಕದ್ದ ಆರೋಪಕ್ಕೆ ಡಾರ್ಲಿಂಗ್ ಕೃಷ್ಣ ಪ್ರತಿಕ್ರಿಯೆ
ಆ ಭಾಷೆ ಈ ಭಾಷೆ ಅಂತಲ್ಲ. ಭಾರತದ ಚಿತ್ರರಂಗದಲ್ಲಿ ಅನೇಕರು.. ಕೊರಿಯನ್ ಸೇರಿದಂತೆ ಬೇರೆ ಭಾಷೆಯ ಚಿತ್ರಗಳನ್ನು ಆಧರಿಸಿ ಚಿತ್ರ ಮಾಡುತ್ತಾರೆ. ಇನ್ನೂ ಕೆಲ ಒಮ್ಮೆ ಯಾರಿಗೂ ಗೊತ್ತಾಗಲ್ಲ ಎಂದುಕೊಂಡು ಯಥಾವತ್ತು ನಕಲು ಮಾಡುತ್ತಾರೆ. ತಮ್ಮದೇ ಸೃಜನಶೀಲ ಕಲಾಕೃತಿ ಎನ್ನುವಂತೆ ಪೋಸು ಕೊಡುತ್ತಾರೆ.
ಮತ್ತೂ ಕೆಲವರು ಸ್ನೇಹ ಪ್ರೀತಿ ವಿಶ್ವಾಸವನ್ನು ದುರುಪಯೋಗ ಮಾಡಿಕೊಂಡು ಬೇರೆಯವರ ಕಲ್ಪನೆಗೆ ಕನ್ನ ಹಾಕುತ್ತಾರೆ. ಈ ಸಾಲಿನಲ್ಲಿ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಕೂಡ ಇದ್ದಾರೆ ಎನ್ನುವ ವಾದವನ್ನು ಸದ್ಯ ಹಲವರು ಮಾಡುತ್ತಿದ್ದಾರೆ. ''ಮಾರಿಗೋಲ್ಡ್'' ನಿರ್ದೇಶಕ ರಾಘವೇಂದ್ರ ನಾಯಕ್ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಆರೋಪ ಮಾಡಿದ್ದಾರೆ ಕೂಡ. ತಮ್ಮ ಫೇಸ್ ಬುಕ್ ನಲ್ಲಿ ಈ ಕುರಿತು ಸುದೀರ್ಘ ಬರಹವನ್ನು ಹಂಚಿಕೊಂಡಿದ್ದಾರೆ.

ಇಷ್ಟೇ ಅಲ್ಲ ಉತ್ಸಾಹಿ ಯುವ ನಿರ್ದೇಶಕರಿಗೆ ಕಿವಿ ಮಾತನ್ನು ಕೂಡ ರಾಘವೇಂದ್ರ ನಾಯಕ್ ಹೇಳಿದ್ದಾರೆ. ನೀವು ಯಾವುದೇ ಕಥೆ ಸಿದ್ಧಪಡಿಸಿದಾಗ, ಮೊದಲು ಅದನ್ನು SWA (Screenwriters Association) ನಲ್ಲಿ ನೋಂದಾಯಿಸಿಕೊಳ್ಳಿ. ಕಥೆ ಮತ್ತು ಚಿತ್ರಕಥೆ ಸಿದ್ಧವಾಗುವ ಪ್ರತಿ ಹಂತದ ಕಡತವನ್ನೂ (File) ನಿಮ್ಮ ಸ್ವಂತ ಇಮೇಲ್ ವಿಳಾಸಕ್ಕೆ ಕಳುಹಿಸಿ ಸುರಕ್ಷಿತವಾಗಿಟ್ಟುಕೊಳ್ಳಿ ಎಂದು ಹೇಳಿದ್ದಾರೆ.
ಇನ್ನೂ ರಾಘವೇಂದ್ರ ನಾಯಕ್ ಕೃತಿಚೌರ್ಯದ ಆರೋಪ ಮಾಡಿದ್ದೇ ತಡ ಹಲವರು ಡಾರ್ಲಿಂಗ್ ಕೃಷ್ಣ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ''ಕಳ್ಳ ಕೃಷ್ಣ'' ಎಂದೆಲ್ಲಾ ಟ್ರೋಲ್ ಮಾಡುತ್ತಿದ್ದಾರೆ. ಆದರೆ ತಮ್ಮ ಮೇಲಿನ ಈ ಆರೋಪಕ್ಕೆ ಡಾರ್ಲಿಂಗ್ ಕೃಷ್ಣ ಹೇಳುವುದೇ ಬೇರೆ.
ಹೌದು, ತಮ್ಮ ಮೇಲೀನ ಈ ''ಕೃತಿ ಚೌರ್ಯ''ದ ಆರೋಪದ ಕುರಿತು ಡಾರ್ಲಿಂಗ್ ಕೃಷ್ಣ ನಿಮ್ಮ ''ಫಿಲ್ಮಿಬೀಟ್ ಕನ್ನಡ''ಗೆ ಪ್ರತಿಕ್ರಿಯೆ ನೀಡಿದ್ದಾರೆ. ಅವರ ಮನದ ಮಾತುಗಳನ್ನು ಹಂಚಿಕೊಂಡಿದ್ದಾರೆ. ಸುಖಾಸುಮ್ಮನೆ ಆರೋಪ ಮಾಡುವ ಮೊದಲು ಸತ್ಯಾಸತ್ಯತೆ ತಿಳಿದುಕೊಳ್ಳಿ ಎಂದಿದ್ದಾರೆ. ಹಾಗಿದ್ದರೆ ಡಾರ್ಲಿಂಗ್ ಕೃಷ್ಣ ತಮ್ಮ ಮೇಲೀನ ಈ ಕೃತಿಚೌರ್ಯದ ಆರೋಪದ ಕುರಿತು ನಿಮ್ಮ ''ಫಿಲ್ಮಿಬೀಟ್ ಕನ್ನಡ''ಗೆ ಹೇಳಿದ್ದೇನು ಎಂದು ತಿಳಿಯಲು ಮುಂದೆ ಓದಿ.
ಈ ಕುರಿತು ''ಫಿಲ್ಮಿಬೀಟ್ ಕನ್ನಡ''ಗೆ ಪ್ರತಿಕ್ರಿಯೆ ನೀಡಿರುವ ಡಾರ್ಲಿಂಗ್ ಕೃಷ್ಣ, ನಿಮ್ಮ ಮನೆಯಲ್ಲಿ ಕಳ್ಳತನಾದರೆ ನೀವೇನು ಮಾಡ್ತೀರಾ..? ಎಂದು ಪ್ರಶ್ನೆ ಕೇಳಿದ್ದಾರೆ. ಕಳ್ಳತನ ಆದರೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮೊರೆ ಹೋಗಬೇಕು..? ನಿರ್ಮಾಪಕರ ಸಂಘಕ್ಕೆ ದೂರು ಕೊಡಬೇಕು..? ಅದಲ್ಲವಾ ಪ್ರಬುದ್ಧತೆ ಎಂದು ಕೇಳಿದ್ದಾರೆ.

ನನ್ನ ಮೇಲೆ ಆರೋಪ ಬಂದಿದೆ. ಹಾಗಂಥ ನಾನು ಅವರಂತೆ ಫೇಸ್ ಬುಕ್ ಅಥವಾ ಸೋಶಿಯಲ್ ಮೀಡಿಯಾ ಮೂಲಕ ಉತ್ತರ ಕೊಡಲು ಅಥವಾ ಅಲ್ಲಿ ಬರೆದುಕೊಂಡು ಕೂರಲು ಸಾಧ್ಯ ಇಲ್ಲ ಎಂದು ಹೇಳೀರುವ ಡಾರ್ಲಿಂಗ್ ಕೃಷ್ಣ, ಹಾಗೊಂದು ವೇಳೆ ನಾನು ಅವರಂತೆಯೇ ಎಲ್ಲವೂ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡರೆ ನನಗೂ ಅವರಿಗೂ ವ್ಯತ್ಯಾಸವೇನು ..? ಎಂದು ಕೂಡ ಪ್ರಶ್ನೆ ಮಾಡಿದ್ಧಾರೆ.
ಇನ್ನೂ ಎಲ್ಲರಿಗೂ ಗೊತ್ತಿರುವಂತೆ ಮೌನಂ ಸಮ್ಮತಿ ಲಕ್ಷಣಂ ಎಂದುಕೊಳ್ಳುವ ಕಾಲ ಇದು. ಈ ಕಾಲದಲ್ಲಿ ಡಾರ್ಲಿಂಗ್ ಕೃಷ್ಣ ಅವರಾಗಲಿ ಮಿಲನಾ ನಾಗರಾಜ್ ಅವರಾಗಲಿ ಉತ್ತರ ಕೊಡದೇ ಇದ್ದರೆ ತಪ್ಪು ಅವರದ್ದೇ ಎನ್ನುವ ತೀರ್ಮಾನಕ್ಕೆ ಬರುವ ಸಾಧ್ಯತೆ ಇರುತ್ತೆ. ಈ ಕುರಿತು ಕೂಡ ಪ್ರಶ್ನೆ ಕೇಳಿದಾಗ ಉತ್ತರ ನೀಡಿರುವ ಕೃಷ್ಣ ಅಯ್ಯಯ್ಯೋ ಹಾಗೇನು ಇಲ್ಲ ಎಂದು ಹೇಳಿದ್ದಾರೆ. ನಮ್ಮ ಮೌನ ನಮ್ಮ ದೌರ್ಬಲ್ಯವಲ್ಲ ಎಂದಿದ್ದಾರೆ.
ಅವರೇನೇ ನಮ್ಮ ಮೇಲೆ ಆರೋಪ ಮಾಡಲಿ, ನಾವು ಅವರಂತೆ ರೂಮ್ನಲ್ಲಿ ಕುಳಿತು ಫೇಸ್ಬುಕ್ ಮೂಲಕ ಪ್ರತ್ಯಾರೋಪ ಮಾಡಲ್ಲ, ಮಾಡಲು ಸಾಧ್ಯವೂ ಇಲ್ಲ ಅಥವಾ ಅದಕ್ಕೆ ಉತ್ತರ ಕೊಡಲ್ಲ ಎಂದು ಹೇಳಿರುವ ಡಾರ್ಲಿಂಗ್ ಕೃಷ್ಣ ನಾವು ಕಾನೂನು ಮೂಲಕ ಉತ್ತರ ಕೊಡುತ್ತೇವೆ ಎಂದು ಹೇಳಿದ್ದಾರೆ.
ಈಗ ನನ್ನ ಮೇಲೆ ಆರೋಪ ಮಾಡಿದ್ದಾರೆ, ನಾನು ಸುಮ್ಮನೆ ಬಿಡುವ ಮಾತಿಲ್ಲ, ಯಾಕೆಂದರೆ 15-16 ವರ್ಷ ನಾನು ಚಿತ್ರರಂಗದಲ್ಲಿ ಕಷ್ಟ ಪಟ್ಟಿದ್ದೇನೆ , ಡಾರ್ಲಿಂಗ್ ಕೃಷ್ಣ ಅಂದರೆ ಏನು ಅಂತ ಎಲ್ಲರಿಗೂ ಗೊತ್ತು ಎಂದು ಹೇಳಿರುವ ಕೃಷ್ಣ, ಸುಮ್ ಸುಮ್ಮನೆ ಮಾತನಾಡಿ ನಾನು ಸಮಯ ವ್ಯರ್ಥ ಮಾಡಲ್ಲ ಎಂದಿದ್ದಾರೆ. ಸಮಯ ಸಂದರ್ಭ ಬಂದಾಗ ಎಲ್ಲಿ ಉತ್ತರ ಕೊಡಬೇಕೋ ಅಲ್ಲಿ ಕೊಡುತ್ತೇನೆ ಎಂದು ಖಂಡ ತುಂಡವಾಗಿ ಮಾತನಾಡಿದ್ದಾರೆ. ಅವರು ಹೇಳಿದ್ದು ಸುಳ್ಳು ಅಂತ ನಾನು ಹೇಳ್ತಿಲ್ಲ, ಬದಲಿಗೆ ಅವರು ಮಾಡಿದ್ದು ಈ ದಶಕದ ಬಹುದೊಡ್ಡ ಜೋಕ್ ಎಂದು ಕಿಡಿ ಕಾರಿದ್ದಾರೆ ಡಾರ್ಲಿಂಗ್ ಕೃಷ್ಣ.
ಸದ್ಯ ಡಾರ್ಲಿಂಗ್ ಕೃಷ್ಣ ಈ ಮೂಲಕ ತಮ್ಮ ಮೇಲೀನ ಆರೋಪಕ್ಕೆ ಉತ್ತರ ನೀಡಿದ್ದಾರೆ. ಕಾನೂನು ಹೋರಾಟದ ಎಚ್ಚರಿಕೆಯನ್ನು ಕೂಡ ನೀಡಿದ್ದಾರೆ. ರಾಘವೇಂದ್ರ ನಾಯಕ್ ಇದಕ್ಕೆ ಹೇಗೆ ಪ್ರತಿಕ್ರಿಯಿಸುತ್ತಾರೆ ಎನ್ನುವುದನ್ನು ಈಗ ಕಾದು ನೋಡಬೇಕಿದೆ.


Click it and Unblock the Notifications











