2009ರಲ್ಲಿ ವಿಷ್ಣು ಬರೆದಿದ್ದ ಕವಿತೆ ಯಾವುದು? ತಮ್ಮ ಸ್ನೇಹಿತನಿಗಾಗಿ ಸಾಹಸಸಿಂಹ ಬರೆದಿದ್ದ ಹಾಡು ಹೇಗಿದೆ?ನೋಡಿದ್ದೀರಾ?
ಕನ್ನಡ ಚಿತ್ರರಂಗದ ಯಜಮಾನ ಡಾ. ವಿಷ್ಣುವರ್ಧನ್ ಅವರು ನಡೆದ ಮುಳ್ಳಿನ ಹಾದಿಯ ಕಥೆ ನಿಮಗೆ ಸಂಪೂರ್ಣವಾಗಿ ಗೊತ್ತಿರಲಿಕ್ಕಿಲ್ಲ. ಕನ್ನಡ ಚಿತ್ರರಂಗದಲ್ಲಿ ಸಾಹಸಸಿಂಹ ಅನುಭವಿಸಿದಷ್ಟು ಕಷ್ಟವನ್ನು ಬಹುಶಃ ಯಾವ ಧ್ರುವತಾರೆಯೂ ಅನುಭವಿಸಿರಲಿಕ್ಕಿಲ್ಲ. ಬದುಕಿನೂದ್ದಕ್ಕೂ ನೋವನ್ನೇ ಉಂಡು.. ಪ್ರೀತಿ ಹಂಚಿ.. ಕನ್ನಡಿಗರ ಮನದಲ್ಲಿ ಶಾಶ್ವತವಾದ ಸ್ಥಾನ ಪಡೆದ ಡಾ.ವಿಷ್ಣುವರ್ಧನ್ ಕೇವಲ ನಾಯಕನಾಗಿರಲಿಲ್ಲ. ಗಾಯಕ ಕೂಡ ಆಗಿರಲಿಲ್ಲ. ಅವರಲ್ಲಿ ಒಬ್ಬ ಸಾಹಿತಿ ಕೂಡ ಇದ್ದ ಎನ್ನುವುದು ಬಹುತೇಕರಿಗೆ ಗೊತ್ತಿರದ ವಿಷಯ.
ಹೌದು. ಇನ್ನೇನು.. ಕೆಲವೇ ದಿನಗಳು ಉರುಳಿದರೆ ಡಾ.ವಿಷ್ಣುವರ್ಧನ್ ಅವರ 75ನೇ ಜನ್ಮದಿನೋತ್ಸವ ಬರಲಿದೆ. ತಮ್ಮ ನೆಚ್ಚಿನ ಯಜಮಾನರ ಅಮೃತ ಮಹೋತ್ಸವವನ್ನು ಅದ್ದೂರಿಯಾಗಿ ಆಚರಿಸಲು ಡಾ. ವಿಷ್ಣು ಸೇನಾ ಸಮಿತಿ ಮುಂದಾಗಿದೆ. ಈ ಹಿನ್ನೆಲೆ .. ಅಭಿನಯ ಭಾರ್ಗವನ ನೆನಪುಗಳ ಜಾಡು ಹಿಡಿದು ನಿಮ್ಮ''ಫಿಲ್ಮಿ ಬೀಟ್ ಕನ್ನಡ'' ಹೊರಟಿದ್ದು ಕನ್ನಡ ಚಿತ್ರರಂಗದ ಯಜಮಾನನ ಕುರಿತು ಕೆಲ ಆಸಕ್ತಿಕರ ವಿಚಾರಗಳನ್ನು ಈ ಮೂಲಕ ಉಲ್ಲೇಖಿಸುವ ಪ್ರಯತ್ನ ಮಾಡುತ್ತಿದೆ.

ನಮ್ಮ ಈ ಪ್ರಯತ್ನಕ್ಕೆ ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಅವರನ್ನು ಹತ್ತಿರದಿಂದ ಬಲ್ಲ ಕನ್ನಡ ಚಿತ್ರರಂಗದ ಹಿರಿಯ ಪ್ರಚಾರಕರ್ತ ಸುಧೀಂದ್ರ ವೆಂಕಟೇಶ್ ಅವರು ಕೂಡ ಕೈ ಜೋಡಿಸಿದ್ದು ವಿಷ್ಣು ಅವರ ಕುರಿತು ಕೆಲ ಆಸಕ್ತಿಕರ ವಿಚಾರಗಳನ್ನು ನಮ್ಮ ಮೂಲಕ ನಿಮ್ಮ ಜೊತೆ ಹಂಚಿಕೊಂಡಿದ್ದಾರೆ.
ಹೌದು. ಅಸಲಿಗೆ ಚಿತ್ರರಂಗದಲ್ಲಿ ಕೆಲವೇ ಕೆಲವರು ಆತ್ಮೀಯ ಗೆಳೆಯರು ವಿಷ್ಣುವರ್ಧನ್ ಅವರಿಗೆ ಇದ್ದರು. ಆ ಪೈಕಿ ಕನ್ನಡ ಚಿತ್ರರಂಗದ ಪ್ರತಿಷ್ಠಿತ '' ಶ್ರೀ ರಾಘವೇಂದ್ರ ಚಿತ್ರವಾಣಿ''ಯ ಸಂಸ್ಥಾಪಕ, ಹಿರಿಯ ಪತ್ರಿಕಾ ಪ್ರಚಾರಕರ್ತ, ನಿರ್ಮಾಪಕ ಡಿ.ವಿ. ಸುಧೀಂದ್ರ ಕೂಡಾ ಒಬ್ಬರಾಗಿದ್ದರು.
ಆದರೆ ಈಗ ಡಾ.ವಿಷ್ಣುವರ್ಧನ್ ಅವರು ಕೂಡ ಇಲ್ಲ. ಡಿ.ವಿ.ಸುಧೀಂದ್ರ ಅವರು ಕೂಡ ಇಲ್ಲ. ಆದರೆ ''ಶ್ರೀ ರಾಘವೇಂದ್ರ ಚಿತ್ರವಾಣಿ'' ಇವತ್ತು ಕೂಡ ಸೇವೆಯನ್ನು ಮುಂದುವರೆಸಿದೆ. ಸುಧೀಂದ್ರ ಅವರ ಕಾಲಾನಂತರ ಅವರ ಅಣ್ಣನ ಮಗ ವೆಂಕಟೇಶ್ ''ಶ್ರೀ ರಾಘವೇಂದ್ರ ಚಿತ್ರವಾಣಿ''ಯ ಮುಖ್ಯಸ್ಥಿಕೆ ವಹಿಸಿದ್ದಾರೆ. ಜೊತೆಗೆ ಸುಧೀಂದ್ರ ಅವರ ಮಗ ಸುನಿಲ್ ಮತ್ತು ವೆಂಕಟೇಶ್ ಅವರ ಸಹೋದರ ಡಿ.ಜಿ. ವಾಸುದೇವ್ ಕೂಡ ಹೆಗಲಿಗೆ ಹೆಗಲು ಕೊಟ್ಟು ದುಡಿಯುತ್ತಿದ್ದಾರೆ.

ಇವರೆಲ್ಲರ ಶ್ರಮದ ಪ್ರತಿಫಲವಾಗಿ ಇಂದು ''ಶ್ರೀರಾಘವೇಂದ್ರ ಚಿತ್ರವಾಣಿ'' ಮತ್ತು ಸುಧೀಂದ್ರ ವೆಂಕಟೇಶ್ ಸಹೋದರರು ಚಿತ್ರರಂಗದಲ್ಲಿ ಹೆಚ್ಚು ಹೆಸರು ಮಾಡಿದ್ದಾರೆ. ಹೀಗೆ ಡಿ.ವಿ.ಸುಧೀಂದ್ರ ಅವರ ಸಂಸ್ಥೆಯನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಬರುತ್ತಿರುವ ಸುಧೀಂದ್ರ ವೆಂಕಟೇಶ್ ತಮ್ಮ ಚಿಕ್ಕಪ್ಪ ಮತ್ತು ಡಾ. ವಿಷ್ಣುವರ್ಧನ್ ಒಡನಾಟವನ್ನು ಮೆಲುಕು ಹಾಕಿದ್ದಾರೆ.
ಈ ಕುರಿತು ನಿಮ್ಮ ''ಫಿಲ್ಮಿಬೀಟ್ ಕನ್ನಡ'' ಜೊತೆ ಮಾತನಾಡಿರುವ ಸುಧೀಂದ್ರ ವೆಂಕಟೇಶ್ "ನಮ್ಮ ಚಿಕ್ಕಪ್ಪ ಅವರು ಬದುಕಿನ ಪ್ರಯಾಣ ಮುಗಿಸಿ 2006ರಲ್ಲಿ ಎದ್ದು ನಡೆದಾಗ ವಿಷ್ಣುವರ್ಧನ್ ಅವರು ಅಪಾರವಾಗಿ ನೊಂದುಕೊಂಡಿದ್ದರು. ಸುಧೀಂದ್ರರ ಕುರಿತಾಗಿ ಪುಸ್ತಕವೊಂದನ್ನು ತರುವ ಪ್ರಯತ್ನವಾದಾಗ ವಿಷ್ಣುವರ್ಧನ್ ಅವರು ಸ್ವತಃ ಬಯಸಿ ಕವನದಂತಾ ಸಾಲುಗಳನ್ನು ಬರೆದಿದ್ದರು" ಎಂದು ಹೇಳಿದ್ದಾರೆ.
ಮುಂದುವರೆದು "ಡಾ.ವಿಷ್ಣುವರ್ಧನ್ ಅವರು ಬರೆದ ಈ ಗೀತೆಯನ್ನು 2020ರ ಜನವರಿಯಲ್ಲಿ, ರಾಘವೇಂದ್ರ ಚಿತ್ರವಾಣಿಯ 43ನೇ ವಾರ್ಷಿಕೋತ್ಸವದ ಸಮಯದಲ್ಲಿ ಹೊರತರಲಾಯ್ತು, ಅಜಯ್ ವಾರಿಯರ್ ಈ ಹಾಡಿಗೆ ಧ್ವನಿಯಾದರು, ಶ್ರೀಧರ್ ವಿ ಸಂಭ್ರಮ ಸಂಗೀತ ನಿರ್ದೇಶನ ಮಾಡಿ ಕೊಟ್ಟರು"ಎಂದು ಹೇಳಿದ್ದಾರೆ.

"ಡಿ ವಿ ಸುಧೀಂದ್ರ ಅವರ ಬದುಕಿಗೆ ಕೈಗನ್ನಡಿ ಹಿಡಿಯುವಂತಹ ಈ ಹಾಡು
ನನ್ನ ಮಗ ಪವನ್ ಕಲ್ಪನೆಯಡಿ ಮೂಡಿ ಬಂದಿದ್ದು, ನನ್ನ ಚಿಕ್ಕಪ್ಪ ಅವರ ಹಲವಾರು ಫೋಟೋಗಳನ್ನು ಬಳಸಿಕೊಂಡು ಈ ಹಾಡನ್ನು ಸಿದ್ಧಪಡಿಸಲಾಯ್ತು. ಈ ಸಾಕ್ಷ್ಯ ಚಿತ್ರದಲ್ಲಿ ರಿಯಲ್ ಸ್ಟಾರ್ ಉಪೇಂದ್ರ, ಚಾಲೆಂಜಿಂಗ್ ಸ್ಟಾರ್ ದರ್ಶನ್, ರಾಘವೇಂದ್ರ ರಾಜ್ ಕುಮಾರ್, ಪುನೀತ್ ರಾಜ್ ಕುಮಾರ್ ಸೇರಿದಂತೆ ಚಿತ್ರರಂಗದ ಅನೇಕ ಗಣ್ಯರು, ಹಿರಿಯ ಕಲಾವಿದ, ತಂತ್ರಜ್ಞರು ನಮ್ಮ ಚಿಕ್ಕಪ್ಪ ಡಿ.ವಿ.ಎಸ್. ಬಗ್ಗೆ ಮಾತಾಡಿದ್ದಾರೆ.ನಮ್ಮದೇ ರಾಘವೇಂದ್ರ ಚಿತ್ರವಾಣಿ ಯೂಟ್ಯೂಬ್ ಚಾನೆಲ್ ನಲ್ಲಿ ಈ ಹಾಡು ಬಿಡುಗಡೆಯನ್ನು ಮಾಡಿದ್ವಿ, ಚಿತ್ರರಂಗದಿಂದ ಮತ್ತು ವಿಷ್ಣುವರ್ಧನ್ ಅವರ ಅಭಿಮಾನಿಗಳಿಂದ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿತು" ಎಂದು ಕೂಡ ಹೇಳಿದ್ದಾರೆ.
ಇನ್ನೂ ಡಿ.ವಿ.ಸುಧೀಂದ್ರ ಮತ್ತು ಡಾ.ವಿಷ್ಣುವರ್ಧನ್ ಅವರ ಒಡನಾಟ, ಸಂಬಂಧ ಎಷ್ಟು ಆತ್ಮೀಯತೆಯಿಂದ ಕೂಡಿತ್ತು ಎಂದರೆ ನಮ್ಮ ಪ್ರತಿಯೊಂದು ಕಾರ್ಯಕ್ರಮಕ್ಕೂ ವಿಷ್ಣುವರ್ಧನ್ ಅವರು ಎಲ್ಲಿಯೇ ಇದ್ದರೂ ಕೂಡ ತಪ್ಪದೇ ಬರುತ್ತಿದ್ದರು,ತಾವೊಬ್ಬ ಸ್ಟಾರ್ ಎನ್ನುವುದನ್ನು ಮರೆತು ನಮ್ಮೆಲ್ಲರ ಜೊತೆ ಕಾಲಕಳೆಯುತ್ತಿದ್ದರು ಎಂದು ಕೂಡ ಸುಧೀಂದ್ರ ವೆಂಕಟೇಶ್ "ಫಿಲ್ಮಿಬೀಟ್ ಕನ್ನಡ"ಗೆ ನೀಡಿದ ಸಂದರ್ಶನದಲ್ಲಿ ನೆನಪು ಮಾಡಿಕೊಂಡಿದ್ದಾರೆ.


Click it and Unblock the Notifications











