ಕನ್ನಡ ಜೊತೆ ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿಯೂ ಪಾರು ಖ್ಯಾತಿಯ ಸಿದ್ದು ಮೂಲಿಮನಿ ಬ್ಯುಸಿ..!
ಚಿತ್ರರಂಗದ ಮೇಲಿನ ಸೆಳೆತ, ಕಲಾವಿದನಾಗಬೇಕೆನ್ನುವ ಬಯಕೆ ಯಾರನ್ನು ಎಲ್ಲಿಗೆ ಬೇಕೋ ತಂದು ನಿಲ್ಲಿಸಬಹುದು. ಇದಕ್ಕೆ ಹತ್ತು ಹಲವು ಉದಾಹರಣೆಗಳು ಚಿತ್ರರಂಗದಲ್ಲಿವೆ. ಬೇರೆ ಬೇರೆ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದವರೆಲ್ಲ ಚಿತ್ರರಂಗದಲ್ಲಿ ತಮ್ಮ ಬದುಕು ರೂಪಿಸಿಕೊಂಡಿದ್ದಾರೆ. ಕೇವಲ ಸಿನಿಮಾ ಮಾತ್ರವಲ್ಲ. ಕಿರುತೆರೆಯಲ್ಲಿ ಕೂಡ ಹಲವರು ಮಿಂಚಿದ್ದಾರೆ. ಇನ್ನು ಕೆಲವರು ಕಿರುತೆರೆ ಮತ್ತು ಬೆಳ್ಳಿ ತೆರೆ ಎರಡರಲ್ಲಿ ಕೂಡ ಹೆಸರು ಮಾಡಿದ್ದಾರೆ. ಮಾಡುತ್ತಿದ್ದಾರೆ.
ಧಾರಾವಾಹಿ ಮತ್ತು ಸಿನಿಮಾ ಎಂಬ ಎರಡು ದೋಣಿಯ ಮೇಲೆ ಕಾಲಿಟ್ಟಿದ್ದಾರೆ. ಆ ಪೈಕಿ ಕನ್ನಡದ ಪ್ರತಿಭಾವಂತ ನಟ ಸಿದ್ದು ಮೂಲಿಮನಿ ಕೂಡ ಒಬ್ಬರು. ಹೌದು, ಸಿದ್ದು ಮೂಲಿಮನಿ.. ಉತ್ತರ ಕರ್ನಾಟಕದ ಪ್ರತಿಭೆ. ಪಾರು ಧಾರಾವಾಹಿಯ ಮೂಲಕ ಕನ್ನಡಿಗರ ಮನೆ ಮತ್ತು ಮನವನ್ನು ತಲುಪಿದ ಸಿದ್ದು ಮೂಲಿಮನಿ 2015ರಲ್ಲಿ 'ರಂಗಿತರಂಗ' ಸಿನಿಮಾದಲ್ಲಿ ನಟಿಸುವ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು.

ನಂತರ 'ಕೃಷ್ಣ ರುಕ್ಕು', 'ಒನ್ಸ್ ಮೋರ್ ಕೌರವ', 'ಟೋರ ಟೋರ', 'ಲಂಬೋದರ', 'ರಾಜರಥ', 'ವಿಕ್ರಾಂತ್ ರೋಣ', 'ಬಸವನಗುಡಿ ಬೆಂಗಳೂರು', 'ಸಾರ್ವಜನಿಕರಿಗೆ ಸುವರ್ಣಾವಕಾಶ', 'ಧರಣಿ ಮಂಡಳ ಮಧ್ಯದೊಳಗೆ', 'ಅಭಿರಾಮ ಚಂದ್ರ', 'ಓಮಿನಿ', 'ಹ್ಯಾಪಿ ಬರ್ತ್ಡೇ ಟು ಮಿ', 'ಧಮಾಕ' ಚಿತ್ರಗಳಲ್ಲಿ ಅಭಿನಯಿಸಿದರು. ತಮ್ಮ ಅಭಿನಯದಿಂದ ಗಮನವನ್ನು ಸೆಳೆದರು.
ಇನ್ನು ತೀರಾ ಇತ್ತೀಚೆಗೆ ಇವರ ಅಜ್ಞಾತವಾಸಿ ಚಿತ್ರ ಬಿಡುಗಡೆಯಾಗಿತ್ತು. ಸದ್ಯ ಜೀ 5ನಲ್ಲಿ ಈ ಚಿತ್ರ ವೀಕ್ಷಣೆಗೆ ಲಭ್ಯ ಇದ್ದು ಅನೇಕರ ಮೆಚ್ಚುಗೆಗೆ ಚಿತ್ರ ಪಾತ್ರವಾಗುತ್ತಿದೆ. ಇಂಥಾ ಸಿದ್ದು ಮೂಲಿಮನಿ ಸದ್ಯ ತಮ್ಮ ಚಿತ್ರ ಪ್ರಯಾಣದ ಕುರಿತು ನಿಮ್ಮ ಫಿಲ್ಮಿ ಬೀಟ್ ಕನ್ನಡ ಜೊತೆ ಮಾತನಾಡಿದ್ದಾರೆ. ಹಾಗಿದ್ದರೆ ಸಿದ್ದು ಮೂಲಿಮನಿ ಮಾತನಾಡಿದ್ದೇನು ? ಎಂದು ತಿಳಿಯಲು ಮುಂದೆ ಓದಿ.
ಸದ್ಯಕ್ಕೆ ಸಿದ್ದು ಮೂಲಿಮನಿ ಏನೆಲ್ಲ ಮಾಡ್ತಿದ್ದಾರೆ.
''ಸಪ್ತಸಾಗರದಾಚೆ ಎಲ್ಲೋ ನಿರ್ದೇಶಕರು ನಿರ್ಮಾಣ ಮಾಡಿದ ಅಜ್ಞಾತವಾಗಿ ಚಿತ್ರ ಬಿಡುಗಡೆಯಾಗಿತ್ತು. ಸದ್ಯ ಜೀ5ನಲ್ಲಿ ಚಿತ್ರ ಇದೆ. ಒಳ್ಳೆಯ ಅಭಿಪ್ರಾಯ ವ್ಯಕ್ತವಾಗುತ್ತಿದೆ.
ಇನ್ನು ಮುಂದಿನ ಚಿತ್ರಗಳ ಕುರಿತು ಮಾತನಾಡಬೇಕು ಅಂದರೆ ನಾನು ಅಭಿನಯಿಸಿರುವ ಸೀಟ್ ಎಡ್ಜ್ ಎಂಬ ಚಿತ್ರ ಬಿಡುಗಡೆಗೆ ಸಿದ್ದವಾಗಿದೆ. ಜುಲೈಗೆ ಈ ಚಿತ್ರ ತೆರೆಗೆ ಬರಬಹುದು. ಇದು ಹೊರತು ಪಡಿಸಿದರೆ ಒಂದು ತಮಿಳು ಸಿನಿಮಾ ಮಾಡಿದೆ. ಕೋಲ್ಡ್ ಕಾಲ್ ಎನ್ನುವುದು ಚಿತ್ರದ ಹೆಸರು.
ಮತ್ತೊಂದು ಕನ್ನಡ ತೆಲುಗುದಲ್ಲಿ ನಿರ್ಮಾಣವಾದ ಉಗ್ರಾಣ ಎಂಬ ಚಿತ್ರ ಮಾಡಿದೆ. ಗೊಂಬೆರಾಮ ಎನ್ನುವ ಕನ್ನಡ ಚಿತ್ರ ಕೂಡ ರೆಡಿ ಇದೆ. ಇದರ ಜೊತೆ ಕೆಮೆಸ್ಟ್ರೀ ಆಫ್ ಕರಿಯಪ್ಪ ಚಿತ್ರದ ನಿರ್ದೇಶಕರ ಒಂದು ಚಿತ್ರ ಇದೆ. ಈ ಚಿತ್ರವನ್ನು ಅವರೇ ಅಧಿಕೃತವಾಗಿ ಘೋಷಣೆ ಮಾಡ್ತಾರೆ. ಇಷ್ಟೆಲ್ಲ ಆಗಿದೆ.
ಸದ್ಯ ಈ ಚಿತ್ರಗಳೆಲ್ಲ ಪ್ರಚಾರದ ಹಂತದಲ್ಲಿವೆ. ಇದೆಲ್ಲದರ ಜೊತೆ ಸದ್ಯ ಕ್ಷೇತ್ರಪತಿ ಚಿತ್ರದ ನಿರ್ದೇಶಕ ಶ್ರೀಕಾಂತ್ ಕಟಗಿ ಅವರ ನಿರ್ದೇಶನದಲ್ಲಿ ಒಂದು ಹೊಸ ಸಿನಿಮಾ ಮಾಡ್ತಿದ್ದೀನಿ, ಈ ಚಿತ್ರದಲ್ಲಿ ನನ್ನದು ನೆಗೆಟಿವ್ ಶೇಡ್ ಇರುವ ಪಾತ್ರ'' ಎಂದು ಹೇಳಿದ್ಧಾರೆ.
ಇಲ್ಲಿಯವರೆಗಿನ ಪ್ರಯಾಣ ಹೇಗಿತ್ತು..?
''ನನ್ನ ಇಲ್ಲಿಯವರೆಗಿನ ಪ್ರಯಾಣ ನೆನಪು ಮಾಡಿಕೊಂಡರೆ ನನಗೆ ವ್ಯೆಯಕ್ತಿಕವಾಗಿ ತುಂಬಾನೇ ಖುಷಿ ಇದೆ. ಯಾಕೆಂದರೆ ಕೆಲಸ ಇಲ್ಲದೇ ಒದ್ದಾಡುವ ಅನೇಕರನ್ನು ನಾನು ನೋಡಿದ್ದೇನೆ, ಅಂತಹದ್ದರಲ್ಲಿ ಇಷ್ಟು ವರ್ಷಗಳ ಕಾಲ ಚಿತ್ರರಂಗ ನನ್ನನ್ನು ಸಾಕಿ ಸಲುಹಿ ಊಟ ಹಾಕಿದೆ. ಸಹಜವಾಗಿ ಇದರಿಂದ ನನಗೆ ಖುಷಿ ಇದೆ.
ಇನ್ನು ನನ್ನ ತಂದೆ ತಾಯಿ ಇರಬಹುದು, ಸ್ನೇಹಿತರು ಇರಬಹುದು, ನನ್ನ ಪತ್ನಿ ಇರಬಹುದು, ಮಾಧ್ಯಮದವರು ಇರಬಹುದು, ಕಿರುತೆರೆ ಮತ್ತು ಬೆಳ್ಳಿತೆರೆಯ ನಿರ್ದೇಶಕ, ನಿರ್ಮಾಪಕರಿರಬಹುದು, ಇವರೆಲ್ಲರ ಬೆಂಬಲದಿಂದ ಈ ಹಂತಕ್ಕೆ ಬರಲು ಸಾಧ್ಯವಾಯ್ತು, ಸದ್ಯ ಸಾಗಬೇಕಾದ ದಾರಿ ದೂರ ಇದೆ, ಮಗದಷ್ಟು ಒಳ್ಳೊಳ್ಳೆಯ ಪ್ರಾಜೆಕ್ಟ್ಗಳನ್ನು ಮಾಡೋದಿದೆ, ನನ್ನ ಚಿತ್ರ ಬದುಕು ಪಾಸಿಟಿವ್ ಆಗಿಯೇ ಸಾಗುತ್ತಿದೆ'' ಎಂದು ಸಿದ್ದು ಮೂಲಿಮನಿ ಹೇಳಿದ್ಧಾರೆ.
ಕಿರುತೆರೆ-ಬೆಳ್ಳಿತೆರೆ ಎರಡರಲ್ಲಿ ಕೂಡ ಮಿಂಚಿದವರು ನೀವು ಹೇಗೆ ಅನ್ಸುತ್ತೆ ?
ದೇವರ ಅನುಗ್ರಹ, ತಂದೆ ತಾಯಿಯ ಆಶೀರ್ವಾದ, ಸ್ನೇಹಿತರ ಬೆಂಬಲದಿಂದ ಇದೆಲ್ಲ ಸಾಧ್ಯ ಆಯ್ತು ಅನ್ಸುತ್ತೆ. ಮತ್ತೊಂದು ಪ್ರಮುಖ ವಿಚಾರ ಅಂದರೆ ಸರಿಯಾದ ಸಮಯದಲ್ಲಿ ಸರಿಯಾದ ವ್ಯಕ್ತಿಗಳು ಸಿಕ್ಕಾಗ ಪವಾಡ ನಡೆಯುತ್ತೆ ಅಂತಾ ಕೇಳಿದ್ದೇ, ನನ್ನ ಬದುಕಿನಲ್ಲಿ ಇದು ನೂರಕ್ಕೆ ನೂರು ನಿಜಾ ಅಂತ ಹೇಳಬಹುದು, ಸರಿಯಾದ ಸಮಯಕ್ಕೆ ನನಗೆ ಸಿನಿಮಾನೂ ಸಿಕ್ತು, ಸೀರಿಯಲ್ ಕೂಡ ಸಿಕ್ತು.
ನಾನು ಎರಡನ್ನೂ ಬ್ಯಾಲೆನ್ಸ್ ಮಾಡ್ತಾ ಬಂದೆ, ಯಾಕೆಂದರೆ.. ಏನಾದರೂ ಮಾಡಬೇಕು ಅಂದರೆ ಕಲಾವಿದರ ಕೈಯಲ್ಲಿ ದುಡ್ಡು ಇರಲ್ಲ, ನನಗೆ ಧಾರಾವಾಹಿ ಸಂಭಾವನೆಯನ್ನು ನೀಡಿದೆ ನನ್ನ ಜೀವನಕ್ಕೊಂದು ದಾರಿಯನ್ನು ಕೂಡ ಮಾಡಿ ಕೊಟ್ಟಿದೆ.
ಇನ್ನು ಸಿನಿಮಾ ರಂಗದಲ್ಲಿ ರಂಗಿತರಂಗ ಆದ ನಂತರ ಓ ಇವನು ಒಳ್ಳೆ ನಟ ಅಂದುಕೊಂಡು ಕರೆದು ನನಗೆ ಅವಕಾಶಗಳನ್ನು ಕೊಡ್ತಿದ್ಧಾರೆ, ಮುಂಚೆ ಚಿಕ್ಕ ಚಿಕ್ಕ ಪಾತ್ರಗಳನ್ನು ಮಾಡ್ತಿದ್ದೆ, ಕಾಮಿಡಿ ಪಾತ್ರಗಳನ್ನು ಮಾಡ್ತಿದ್ದೆ, ಈಗ ನಾನೇ ಹೀರೋ ಆಗಿ ಸಿನಿಮಾ ಮಾಡ್ತಿದ್ದೀನಿ ಅಂದರೆ ಅದು ಇಷ್ಟು ವರ್ಷಗಳ ಕಾಲ ಪಟ್ಟಿರುವ ಕಷ್ಟದ ಪ್ರತಿಫಲ ಅನ್ನೋದು ನನ್ನ ಭಾವನೆ ಎಂದು ಸಿದ್ದು ಮೂಲಿಮನಿ ಹೇಳಿದ್ದಾರೆ.
ಪ್ರೇಕ್ಷಕರ ಕೊರತೆಗೆ ಕಾರಣವೇನು ?
ನನ್ನ ಪ್ರಕಾರ ಒಂದು ಚಿತ್ರ ಚೆನ್ನಾಗಿ ಬರಬೇಕು ಅಂದರೆ ಒಂದು ಬಲಿಷ್ಠವಾದ ತಂಡ ಇರಬೇಕು. ಪ್ರಾಮಾಣಿಕವಾಗಿ ಹೇಳಬೇಕು ಅಂದರೆ ಯಾವ ಚಿತ್ರಕ್ಕೆ ತುಂಬಾ ಹಣ ಖರ್ಚು ಮಾಡಿರುತ್ತಾರೆ ಆ ಚಿತ್ರ ಪ್ರೇಕ್ಷಕರನ್ನು ತಲುಪುತ್ತೆ ಆದರೆ ಚಿತ್ರಮಂದಿರಗಳಲ್ಲಿ ಆ ಚಿತ್ರ ಓಡಲ್ಲ ಮತ್ತೊಂದು ಕಡೆ ಚಿತ್ರಮಂದಿರಗಳಲ್ಲಿ ಓಡುವ ಸಾಮರ್ಥ್ಯ ಇರುವ ಚಿತ್ರಗಳಿಗೆ ಹಣ ಸರಿಯಾಗಿ ಹೂಡಿಕೆ ಆಗಿರುವುದಿಲ್ಲ, ಆ ಚಿತ್ರದ ಪ್ರಚಾರ ಆಗಿರುವುದಿಲ್ಲ, ಇಂತಹದ್ದೊಂದು ಚಿತ್ರ ಬರುತ್ತಿದೆ ಎನ್ನುವುದು ಪ್ರೇಕ್ಷಕರಿಗೆ ಗೊತ್ತೇ ಇರುವುದಿಲ್ಲ, ಗೊತ್ತಾಗುವಷ್ಟರಲ್ಲಿ ಆ ಚಿತ್ರ ಚಿತ್ರಮಂದಿರದಲ್ಲಿಯೇ ಇರಲ್ಲ ಎಂದು ಸಿದ್ದು ಮೂಲಿಮನಿ ಹೇಳಿದ್ದಾರೆ.


Click it and Unblock the Notifications











