Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕನ್ನಡ ಸಿನಿಮಾದಲ್ಲಿ ಅಣ್ಣಮಲೈ ನಟನೆ, ಪಡೆದ ಸಂಭಾವನೆ ಕೇವಲ ಒಂದು ರುಪಾಯಿ!
ಐಪಿಎಸ್ ಅಧಿಕಾರಿಯಾಗಿ ಕರ್ನಾಟಕದಲ್ಲಿ ಸೇವೆ ಸಲ್ಲಿಸಿ ಹೆಸರು ಗಳಿಸಿದ್ದ ಅಣ್ಣಮಲೈ ಈಗ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ. ಕರ್ನಾಟಕದೊಂದಿಗೆ ಉತ್ತಮ ನಂಟು ಹೊಂದಿರುವ ಅಣ್ಣಮಲೈ ಕನ್ನಡದ ಒಂದು ಸಿನಿಮಾದಲ್ಲಿ ಸದ್ದಿಲ್ಲದೆ ನಟಿಸಿದ್ದಾರೆ. ಅದೂ ಕೇವಲ ಒಂದು ರುಪಾಯಿ ಸಂಭಾವನೆ ಪಡೆದು!
ಎರಡೂ ಕೈಗಳಿಲ್ಲದ ಯುವಕನೊಬ್ಬ ಕ್ರೀಡೆಯಲ್ಲಿ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ ನಿಜ ಘಟನೆಯನ್ನು ಆಧರಿಸಿ ಮಾಡಲಾಗಿರುವ ಸಿನಿಮಾದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ಮಾಜಿ ಐಪಿಎಸ್ ಅಧಿಕಾರಿ ಅಣ್ಣಮಲೈ ನಟಿಸಿದ್ದಾರೆ. ಸಿನಿಮಾದ ಕತೆ, ಸಿನಿಮಾ ಮಾಡುತ್ತಿರುವ ಉದ್ದೇಶ ಅಣ್ಣಮಲೈಗೆ ಬಹಳ ಹಿಡಿಸಿದ ಕಾರಣ ಕೇವಲ ಒಂದು ರುಪಾಯಿ ಸಂಭಾವನೆಯನ್ನು ಪಡೆದಿದ್ದಾರೆ.
ಎಳವೆಯಲ್ಲೇ ನಡೆದ ಅವಘಡದಲ್ಲಿ ಎರಡೂ ಕೈಗಳ ಜೊತೆಗೆ ತಂದೆ-ತಾಯಿಯನ್ನೂ ಕಳೆದುಕೊಂಡ ವಿಶ್ವಾಸ್, ಜೀವನದ ಮೇಲೆ ವಿಶ್ವಾಸ ಕಳೆದುಕೊಳ್ಳದೆ, ಪದವಿ ಮುಗಿಸಿ, ಬಳಿಕ ಡ್ಯಾನ್ಸ್ ಕಲಿತು, ನೃತ್ಯಗಾರನಾಗಿ, ಈಜು ಕಲಿತು ಭಾರತವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸಿ ದೇಶಕ್ಕಾಗಿ ಪದಕಗಳನ್ನು ತಂದ ನಿಜ ಕತೆಯನ್ನು ನಿರ್ದೇಶಕ ರಾಜ್ಕುಮಾರ್ 'ಅರಬ್ಬಿ' ಹೆಸರಿನಲ್ಲಿ ಸಿನಿಮಾ ಮಾಡುತ್ತಿದ್ದು, ಆ ಸಿನಿಮಾದಲ್ಲಿ ವಿಶ್ವಾಸ್ನ ಈಜು ತರಬೇತುಧಾರನ ಪಾತ್ರದಲ್ಲಿ ಮಾಜಿ ಐಪಿಎಸ್ ಅಣ್ಣಮಲೈ ಅಭಿನಯಿಸಿದ್ದಾರೆ.
''ಯಾವುದೇ ಷರತ್ತುಗಳಿಲ್ಲದೆ ನಮ್ಮ ಸಿನಿಮಾದಲ್ಲಿ ನಟಿಸಿದರು''
ಈ ಬಗ್ಗೆ 'ಫಿಲ್ಮಿಬೀಟ್ ಕನ್ನಡ'ದ ಜೊತೆ ಮಾತನಾಡಿದ ಸಿನಿಮಾದ ನಿರ್ದೇಶಕ ರಾಜ್ಕುಮಾರ್, ''ಅಣ್ಣಮಲೈ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಮೂರು-ನಾಲ್ಕು ತಿಂಗಳಾಗಿದ್ದಾಗ ನಾವು ಅವರನ್ನು ಸಂಪರ್ಕಿಸಿದೆವು. ಅವರಿಗೆ ಕತೆ ಹೇಳಿದ ಕೂಡಲೆ ನಟಿಸಲು ಒಪ್ಪಿಕೊಂಡರು. ಯಾವುದೇ ಷರತ್ತುಗಳಿಲ್ಲದೆ, ನಮ್ಮ ಸಿನಿಮಾದಲ್ಲಿ ನಟಿಸಿದರು. ಬೆಂಗಳೂರು ಹಾಗೂ ರಾಮನಗರದಲ್ಲಿ ಅವರ ಭಾಗದ ಚಿತ್ರೀಕರಣ ಮಾಡಿದೆವು. ತಮ್ಮ ನಟನೆಯಿಂದ ನಮ್ಮನ್ನೆಲ್ಲ ಚಕಿತಗೊಳಿಸಿದರು ಅಣ್ಣಮಲೈ'' ಎಂದರು.
''ಪೇಜ್ ಉದ್ದ ಸಂಭಾಷಣೆ ಒಂದೇ ಟೇಕ್ನಲ್ಲಿ ಓಕೆ''
''ಅಣ್ಣಮಲೈ ಅವರಿಗೆ ನಾವು ಮೊದಲೇ ಸಂಭಾಷಣೆ ನೀಡಿರಲಿಲ್ಲ. ಕತೆಯನ್ನು ಸಹ ಪೂರ್ತಿಯಾಗಿ ಹೇಳಿರಲಿಲ್ಲ. ಬದಲಿಗೆ ವಿಶ್ವಾಸ್ ಎಂಬ ನಿಜ ಸಾಧಕನ ಕತೆ ಎಂದಷ್ಟೆ ಹೇಳಿದ್ದೆವು. ಅವರಿಗೂ ಸಹ ವಿಶ್ವಾಸ್ ಬಗ್ಗೆ ಮೊದಲೇ ಗೊತ್ತಿತ್ತು. ಅವರು ಸೆಟ್ಗೆ ಬಂದಾಗಲಷ್ಟೆ ಅವರಿಗೆ ಸಂಭಾಷಣೆ ನೀಡುತ್ತಿದ್ದೆವು. ಆದರೆ ಅವರು ಅದನ್ನು ಅಲ್ಲಿಯೇ ಅದ್ಭುತವಾಗಿ ಒಪ್ಪಿಸುತ್ತಿದ್ದರು. ಅಷ್ಟೇ ಅಲ್ಲ, ಅವರೊಬ್ಬ ಅದ್ಭುತ ನಟ ಸಹ. ನಾವು ಯಾರೂ ಊಹೆ ಸಹ ಮಾಡದ ರೀತಿಯಲ್ಲಿ ನಟನೆ ಮಾಡಿದರು. ಒಂದು ಪೇಜ್ ಉದ್ದದ ಸಂಭಾಷಣೆಯನ್ನು ಕೇವಲ ಒಂದೇ ಶಾಟ್ನಲ್ಲಿ ಹೇಳಿ ಮುಗಿಸಿದರು. ಈ ರೀತಿಯ ಸಿನಿಮಾಗಳು ಹೆಚ್ಚು ಬರಬೇಕು ಎಂದು ನಮ್ಮ ಬೆನ್ನುತಟ್ಟಿ ಸಂಭಾವನೆ ಪಡೆಯಲು ನಿರಾಕರಿಸಿ ಕೇವಲ ಒಂದು ರುಪಾಯಿ ಪಡೆದರು'' ಎಂದು ಅಚ್ಚರಿ ವ್ಯಕ್ತಪಡಿಸಿದರು ರಾಜ್ಕುಮಾರ್.
''ಗಣಪತಿ ಕಾರ್ಯಕ್ರಮದಲ್ಲಿ ವಿಶ್ವಾಸ್ ಅನ್ನು ನೋಡಿದೆ''
'ಅರಬ್ಬಿ' ಸಿನಿಮಾದಲ್ಲಿ ಸಾಧಕ ವಿಶ್ವಾಸ್ ತಮ್ಮ ಪಾತ್ರದಲ್ಲಿ ತಾವೇ ನಟಿಸುತ್ತಿದ್ದಾರೆ. ವಿಶ್ವಾಸ್ ಬಗ್ಗೆ ಸಿನಿಮಾ ಮಾಡಬೇಕೆಂಬ ಯೋಜನೆ ಬಂದಿದ್ದು ಹೇಗೆ ಎಂಬ ಬಗ್ಗೆ ಮಾತನಾಡಿದ ರಾಜ್ ಕುಮಾರ್, ''ವಿಶ್ವಾಸ್ ಅವರನ್ನು ಒಮ್ಮೆ ಗಣಪತಿ ಹಬ್ಬದ ಕಾರ್ಯಕ್ರಮದಲ್ಲಿ ನೋಡಿದೆ. ಡ್ಯಾನ್ಸ್ ಮಾಡಿದರು, ಭಾಷಣ ಮಾಡಿದರು. ಅವರ ಕತೆ ಹೇಳಿದರು. ಅದನ್ನೆಲ್ಲ ಕೇಳಿ ನಾನು ಭಾವೋದ್ವೇಗಕ್ಕೆ ಒಳಗಾದೆ. ಕಳೆದ ಕೆಲ ದಶಕಗಳಿಂದ ಅಸೋಸಿಯೇಟ್ ನಿರ್ದೇಶಕನಾಗಿ ಕೆಲಸ ಮಾಡುತ್ತಿದ್ದ ನಾನು, ಇವರ ಜೀವನದ ಕತೆಯೇ ನನ್ನ ಮೊದಲ ಸ್ವತಂತ್ರ್ಯ ಸಿನಿಮಾ ಆಗಬೇಕು ಎಂದು ನಿಶ್ಚಯಿಸಿ ಈ ಪ್ರಾಜೆಕ್ಟ್ಗೆ ಕೈ ಹಾಕಿದೆ'' ಎಂದು ನೆನಪು ಮಾಡಿಕೊಂಡರು.
ಯಾರೂ ಬಂಡವಾಳ ಹೂಡಲು ಮುಂದೆ ಬರಲಿಲ್ಲ: ರಾಜ್ ಕುಮಾರ್
''ಸಿನಿಮಾ ಮಾಡಲು ನಿಶ್ಚಯಿಸಿದ ಬಳಿಕ ಸತತ ಮೂರು ವರ್ಷ ನಾನು, ವಿಶ್ವಾಸ್ ಸಂಪರ್ಕದಲ್ಲಿದ್ದೆ. ಅವರ ಕತೆ ಕೇಳಿದೆ. ಅವರ ವ್ಯಕ್ತಿತ್ವ ಅರ್ಥ ಮಾಡಿಕೊಂಡೆ. ಆ ನಂತರ ಇಬ್ಬರೂ ಸೇರಿ ಸಿನಿಮಾಕ್ಕೆ ನಿರ್ಮಾಪಕರನ್ನು ಹುಡುಕುವ ಕಾರ್ಯ ಆರಂಭ ಮಾಡಿದೆವು. ಸುಮಾರು 100 ಕ್ಕೂ ಹೆಚ್ಚು ಮಂದಿಯನ್ನು ಭೇಟಿಯಾಗಿ ಸಿನಿಮಾಕ್ಕೆ ಬಂಡವಾಳ ಹೂಡುವಂತೆ ಕೇಳಿದೆವು. ಆದರೆ ಯಾರೂ ಸಹ ತಯಾರಿರಲಿಲ್ಲ. ಕೊನೆಗೆ ಚೇತನ್ ಸಿ.ಎಸ್. ಎಂಬುವರು ಸಿನಿಮಾಕ್ಕೆ ಬಂಡವಾಳ ಹೂಡಲು ಮುಂದೆ ಬಂದರು'' ಎಂದರು ರಾಜ್ ಕುಮಾರ್.
ಮುಖ್ಯ ಘಟನೆಗಳನ್ನು ಆಯ್ದು ಸಿನಿಮಾ ಮಾಡಿದ್ದೇವೆ: ರಾಜ್ಕುಮಾರ್
''ಅರಬ್ಬಿ' ಸಿನಿಮಾ ಪೂರ್ಣವಾಗಿ ವಿಶ್ವಾಸ್ ಜೀವನದ ಕತೆ ಅಲ್ಲ. ಬದಲಿಗೆ ವಿಶ್ವಾಸ್ ಜೀವನದಲ್ಲಿ ನಡೆದ ಕೆಲವು ಪ್ರಮುಖ ಘಟನೆಗಳನ್ನು ಆಯ್ದು ದೃಶ್ಯಗಳಾಗಿ ಚಿತ್ರಿಸಿ ಸಿನಿಮಾ ಮಾಡಲಾಗಿದೆ. ವಿಶ್ವಾಸ್ಗೆ ಕೈ ಹೋದ ಘಟನೆ, ಅವರು ಅನುಭವಿಸಿದ ಅವಮಾನಗಳು, ಅವರಿಗೆ ಬೆಂಬಲವಾಗಿ ನಿಂತವರು, ಸ್ಪೂರ್ತಿ ತುಂಬಿದ ವ್ಯಕ್ತಿಗಳು, ಜೀವನದಲ್ಲಿ ತಿರುವು ಬಂದಿದ್ದು ಹೇಗೆ ಇತರೆ ಅಂಶಗಳು ನಮ್ಮ ಸಿನಿಮಾದಲ್ಲಿ ಹೈಲೆಟ್ ಆಗಲಿವೆ. ಜೊತೆಗೆ ಸಿನಿಮಾದಲ್ಲಿ ಕೆಲವು ನಿಜವಾದ ಫೂಟೆಜ್ಗಳನ್ನು ಸಹ ಬಳಸಿಕೊಳ್ಳಲಾಗಿದೆ. ವಿಶ್ವಾಸ್ ಅಂತರಾಷ್ಟ್ರೀಯ ಸ್ಪರ್ಧೆಗಳಲ್ಲಿ ಈಜಿದ, ಪದಕ ಗೆದ್ದ ವಿಡಿಯೋಗಳು ಲಭ್ಯವಿದ್ದು ಅವುಗಳನ್ನು ಸಹ ಬಳಸಿಕೊಳ್ಳಲಾಗಿದೆ'' ಎಂದರು.
ಆಗಸ್ಟ್ನಲ್ಲಿ ಸಿನಿಮಾ ಬಿಡುಗಡೆ
''ನಮ್ಮ ಸಿನಿಮಾದಲ್ಲಿ ಅಣ್ಣಮಲೈ ಮಾತ್ರವೇ ಅಲ್ಲದೆ ಮುಖ್ಯ ಪಾತ್ರದಲ್ಲಿ ಚೈತ್ರಾ ರಾವ್ ನಟಿಸಿದ್ದಾರೆ. ಇನ್ನೂ ಹಲವು ನಟ-ನಟಿಯರಿದ್ದಾರೆ. ವಿಶ್ವಾಸ್ ಆರಂಭದಲ್ಲಿ ನಟಿಸಲು ಶ್ರಮಪಟ್ಟರು, ಚಿತ್ರೀಕರಣ ಮುಂದೆ ಸಾಗಿದಂತೆ ನಟನೆ ಅವರಿಗೆ ಅಭ್ಯಾಸವಾಗಿಬಿಟ್ಟಿತು. ಅನುಭವಿ ನಟನಂತೆ ಅವರ ನಟನೆ ಇದೆ. ಸಿನಿಮಾಕ್ಕೆ ಯೂ ಸರ್ಟಿಫಿಕೇಟ್ ದೊರಕಿದ್ದು, ಸೆನ್ಸಾರ್ ಮಂಡಳಿಯವರು ನಮ್ಮ ಪ್ರಯತ್ನಕ್ಕೆ ಬೆನ್ನುತಟ್ಟಿದ್ದಾರೆ. ನಮ್ಮ ಸಿನಿಮಾಕ್ಕೆ ಸರಿಗಮಪ ಕಂಬದ ರಂಗಯ್ಯ ಸಂಗೀತ ನಿರ್ದೇಶನ ಮಾಡಿದ್ದಾರೆ, ಕ್ಯಾಮೆರಾ ಕೆಲಸ ಆನಂದ್ ದಿಂಡ್ವಾರ್ ಅವರದ್ದು. ಸಿನಿಮಾದ ಟ್ರೇಲರ್ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದ್ದು, ಸಿನಿಮಾ ಬಿಡುಗಡೆ ಆಗಸ್ಟ್ ತಿಂಗಳಲ್ಲಿ ಆಗಲಿದೆ'' ಎಂದಿದ್ದಾರೆ.