'ಗೌರಿಶಂಕರ' ಧಾರಾವಾಹಿಯ ನಾಯಕ ಯಶವಂತ್ಗೆ ಯಶ್, ಅಪ್ಪುನೇ ಪ್ರೇರಣೆ; ನಟನ ಯಶಸ್ಸಿನ ಗುಟ್ಟೇನು?
ಸ್ಯಾಂಡಲ್ವುಡ್ ಸ್ಟಾರ್ ನಟ ಯಶ್ ಹಾಗೂ ಪುನೀತ್ ರಾಜ್ಕುಮಾರ್ ಅವರ ಸ್ಪೂರ್ತಿಯೊಂದಿಗೆ ಚಿತ್ರರಂಗಕ್ಕೆ ಕಾಲಿಟ್ಟು, ಇಂದು ಕಿರುತೆರೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ನಟ ಯಶವಂತ್ ನಟನಾ ಪಯಣ ನಿಜಕ್ಕೂ ವಿಶೇಷ.
'ಗೌರಿಶಂಕರ' ಧಾರಾವಾಹಿಯ ಮೂಲಕ ಮನೆಮಾತಾಗಿರುವ ಅವರು, ತಮ್ಮ ವೃತ್ತಿಜೀವನದ ಏಳುಬೀಳುಗಳು, ಸವಾಲುಗಳು ಹಾಗೂ ತಮ್ಮ ಅಭಿಮಾನಿಗಳ ಪ್ರೀತಿಯ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಅವರ ಈ ಅಪರೂಪದ ಸಂದರ್ಶನವನ್ನು ಈ ಕೆಳಗಿನಂತೆ ನೋಡೋಣ ಬನ್ನಿ.

ನಿಮ್ಮ ಮೂಲ ಊರು ಯಾವುದು? ನಟಿಸುವುದಕ್ಕೆ ಪ್ರೇರಣೆ ಯಾರು?
ಯಶವಂತ್: ನಮ್ಮ ಅಪ್ಪನದು ಹುಲಿಯೂರುದುರ್ಗ, ನಮ್ಮ ಅಮ್ಮನದು ಟಿ. ಬೇಗೂರ್ ಅಂತ ತುಮಕೂರು ಹತ್ತಿರ. ನಟನೆಗೆ ಬರಲು ನನಗೆ ದೊಡ್ಡ ಪ್ರೇರಣೆ ಅಂದರೆ ಅದು ಯಶ್ ಸರ್. ಅವರು ಸ್ಟಾರ್ ಆಗೋದಕ್ಕಿಂತ ಮುಂಚೆ ನಮ್ಮ ಸ್ಕೂಲ್ ಪಕ್ಕದಲ್ಲೇ ಜಿಮ್ಗೆ ಬರ್ತಾ ಇದ್ದರು. ಅವರ ಆ ಒಂದು ಜರ್ನಿ ನೋಡಿ, ನಾವು ಕೂಡ ಏನಾದರೂ ಮಾಡಬಹುದು ಅನ್ನೋ ಒಂದು ಕಾನ್ಫಿಡೆನ್ಸ್ ಬಂತು. ಜೊತೆಗೆ ನಾನು ಚಿಕ್ಕವಯಸ್ಸಿನಿಂದ ಅಪ್ಪು ಸರ್ ಅವರ ದೊಡ್ಡ ಅಭಿಮಾನಿ.
'ಗೌರಿಶಂಕರ' 800 ಸಂಚಿಕೆಗಳನ್ನು ಪೂರೈಸುತ್ತಿದೆ ನಿಮಗೇನನ್ನಿಸುತ್ತಿದೆ?
ಯಶವಂತ್: ಇದೊಂದು ರೋಲರ್ ಕೋಸ್ಟರ್ ಜರ್ನಿ ಅಂತಾನೇ ಹೇಳಬಹುದು. ಯಾಕೆಂದರೆ, ಆರಂಭದಲ್ಲಿ ತುಂಬಾ ಚೆನ್ನಾಗಿತ್ತು. ಮಧ್ಯದಲ್ಲಿ ಟಿಆರ್ಪಿ ತುಂಬಾ ಡೌನ್ ಆಗಿತ್ತು. ಸೀರಿಯಲ್ ನಿಂತುಹೋಗುತ್ತೆ ಅನ್ನೋವಾಗ ನಮ್ಮ ಡೈರೆಕ್ಟರ್ ಮತ್ತು ರೈಟರ್ ಕಥೆಯಲ್ಲಿ ಬೇರೆ ತರಹದ ಪ್ರಯೋಗ ಮಾಡಿದರು. ಆ ಧೈರ್ಯ ಮತ್ತು ಪ್ರಯತ್ನದಿಂದಲೇ ಇವತ್ತು ನಾವು 800 ಎಪಿಸೋಡ್ ತಲುಪಿದ್ದೇವೆ. ನಮ್ಮ ತಂಡದಲ್ಲಿ ನಟರಿಗೆ ಅವರದ್ದೇ ಆದ ಇಂಪ್ರೊವೈಸೇಶನ್ ಮಾಡಲು ತುಂಬಾ ಫ್ರೀಡಂ ಸಿಗುತ್ತೆ.
6 ಗಂಟೆ ಸ್ಲಾಟ್ನಲ್ಲಿ ನಿಮ್ಮ ಸೀರಿಯಲ್ ನಂಬರ್ 1 ಸ್ಥಾನದಲ್ಲಿದೆ ಏನಂತೀರಾ?
ಯಶವಂತ್: ನಿಜವಾಗಿಯೂ ತುಂಬಾ ಖುಷಿಯಾಗುತ್ತೆ. ಸೀರಿಯಲ್ ವೀಕ್ ಆಗಿದ್ದಾಗ ನಮಗೆ ಚಾನೆಲ್ನವರು ತುಂಬಾ ಸಪೋರ್ಟ್ ಕೊಟ್ಟರು. ಅದಕ್ಕಿಂತ ಮುಖ್ಯವಾಗಿ ಫ್ಯಾನ್ ಪೇಜ್ಗಳವರು ಸೋಶಿಯಲ್ ಮೀಡಿಯಾದಲ್ಲಿ ಕಪಲ್ ವಿಡಿಯೋಗಳನ್ನು ಎಡಿಟ್ ಮಾಡಿ ತುಂಬಾ ಪ್ರಮೋಟ್ ಮಾಡಿದರು. ಆ ಪ್ರೀತಿ ಮತ್ತು ಸಪೋರ್ಟ್ನಿಂದಲೇ ಇವತ್ತು ನಾವು ಸತತವಾಗಿ ಏಳು ವಾರಗಳಿಂದ ನಂಬರ್ ಒನ್ ಸ್ಥಾನದಲ್ಲಿದ್ದೇವೆ. ಇದು ಮೊದಲಿನಿಂದ ಹಾಕಿದ ಗಟ್ಟಿ ಅಡಿಪಾಯದ ಪ್ರತಿಫಲ.

'ಅರಮನೆ ಗಿಳಿ'ಯಿಂದ ಜರ್ನಿ ಶುರು ಮಾಡಿದ್ದನ್ನು ಹೇಗೆ ನೆನಪಿಸಿಕೊಳ್ತೀರಾ?
ಯಶವಂತ್: 'ಅರಮನೆ ಗಿಳಿ' ಸೀರಿಯಲ್ ನನಗೆ ಒಂದು ಒಳ್ಳೆಯ ಬ್ರೇಕ್ ಕೊಟ್ಟಿದ್ದು ನಿಜ. ಆದರೆ, ಅದಕ್ಕಿಂತ ಮೊದಲು ನಾನು ಸುವರ್ಣ ಚಾನೆಲ್ನಲ್ಲಿ 'ಯಾರೇ ನೀ ಮೋಹಿನಿ', 'ಶಾಂತಂ ಪಾಪಂ' ಮತ್ತು 'ಮಾಂಗಲ್ಯಂ ತಂತುನಾನೇನ' ಅಂತಹ ಸೀರಿಯಲ್ಗಳಲ್ಲಿ ತುಂಬಾ ಚಿಕ್ಕ ಸಣ್ಣ ಪಾತ್ರಗಳನ್ನು ಮಾಡಿಕೊಂಡು ಬಂದವನು. ಅಲ್ಲಿಂದ ಇಲ್ಲಿಯವರೆಗಿನ ಪಯಣ ತುಂಬಾ ಕಲಿಸಿದೆ.
ಹೀರೊ ಆಗಿ ಆಫರ್ ಬಂದಾಗ ಅದನ್ನು ಹೇಗೆ ಸ್ವೀಕರಿಸಿದ್ರಿ?
ಯಶವಂತ್: ಸೈಡ್ ರೋಲ್ ಮಾಡ್ತಿದ್ದಾಗ ಒಂದು ಭಯ ಇದ್ದೇ ಇತ್ತು. ಆದರೆ 'ಅರಮನೆ ಗಿಳಿ' ನನಗೆ ಆ ಧೈರ್ಯ ತುಂಬಿತು. ಅಲ್ಲಿ ಕೆಲಸ ಕಲಿತ ಮೇಲೆ ಹೀರೊ ಆಗಿ ಚಾನ್ಸ್ ಸಿಕ್ಕಾಗ ಅದನ್ನು ಒಂದು ಚಾಲೆಂಜ್ ಆಗಿ ತಗೊಂಡೆ.
'ಇವಳು ಸುಜಾತಾ' ಸೀರಿಯಲ್ ನಂತರ ಶಂಕರನ ಪಾತ್ರ ಕೊಟ್ಟ ಫೇಮಸ್ ಎಂತಹದ್ದು?
ಯಶವಂತ್: 'ಹೂಮಳೆ' ಆದ್ಮೇಲೆ ನನಗೆ ಶಂಕರನ ಪಾತ್ರ ಸಿಕ್ಕಿತು. ಇದು ಆರಂಭದಲ್ಲಿ ತುಂಬಾ ಇಮ್ಮೆಚೂರ್ (immature) ಆಗಿರುವ, ಪ್ರಪಂಚ ಜ್ಞಾನ ಸ್ವಲ್ಪ ಕಮ್ಮಿ ಇರೋ ಹಾಗೂ ತಾನು ಹೇಳಿದ್ದೇ ಆಗಬೇಕು ಎನ್ನುವ ಪಾತ್ರವಾಗಿತ್ತು. ಇದಕ್ಕಾಗಿ ನಾನು ತುಂಬಾ ಹೋಂ ವರ್ಕ್ ಮಾಡಬೇಕಾಯ್ತು. ಭಾಷೆ ಮತ್ತು ಬಾಡಿ ಲಾಂಗ್ವೇಜ್ ಕಲಿಯೋದಕ್ಕೆ ತುಂಬಾ ಸಮಯ ಬೇಕಾಯ್ತು.

ಕನ್ನಡದ ಜೊತೆಗೆ ತೆಲುಗು ಸೀರಿಯಲ್ಗಳಲ್ಲಿ ನಟಿಸಿದ ಅನುಭವ ಹೇಳಿ?
ಯಶವಂತ್: ಕನ್ನಡದಲ್ಲಿ ನಮಗೆ ಡೈಲಾಗ್ ಮತ್ತು ಇಂಟೋನೇಷನ್ ಮೇಲೆ ಪೂರ್ಣ ಹಿಡಿತ ಇರುತ್ತದೆ. ಆದರೆ, ತೆಲುಗಿನಲ್ಲಿ ಡಬ್ಬಿಂಗ್ ಆಗೋದ್ರಿಂದ ಆ ಹಿಡಿತ ನಮ್ಮ ಕೈಯಲ್ಲಿ ಇರೋದಿಲ್ಲ. ಅಲ್ಲಿ ನಮ್ಮ ಮನೆಯವರನ್ನು ಮಿಸ್ ಮಾಡ್ಕೊತೀವಿ. ಆದರೆ ಕಲಾವಿದರಿಗೆ ಎಲ್ಲಾ ಕಡೆ ಪ್ರೀತಿ ಸಿಕ್ಕೆ ಸಿಗುತ್ತೆ.
'ಭೂವಿ' ಜೊತೆ ಶೂಟಿಂಗ್ ಸೆಟ್ನಲ್ಲಿ ನಿಮ್ಮ ಒಡನಾಟ ಹೇಗಿರುತ್ತೆ?
ಯಶವಂತ್: ನಮಗಿಬ್ಬರಿಗೂ ತುಂಬಾ ಕಡಿಮೆ ಸಮಯ ಸಿಗುತ್ತದೆ. ಆದರೂ ಬೆಡ್ ರೂಮ್ ಸೀನ್ ಇರುವಾಗ ನಾವೆಲ್ಲಾ ಒಂದೇ ಕಡೆ ಇರ್ತೀವಿ. ಅವಳು ಆರಂಭದಲ್ಲಿ ನನ್ನ ಹತ್ತಿರ ಬರಲು ತುಂಬಾ ಭಯ ಪಡ್ತಾ ಇದ್ಲು, ಆದರೆ, ಈಗ ನನ್ನ ಜೊತೆ ತುಂಬಾ ಚೆನ್ನಾಗಿ ಹೊಂದಿಕೊಂಡಿದ್ದಾಳೆ. ಕೆಲವೊಮ್ಮೆ ನಾನು ರೇಗಿಸಿದಾಗ ನನ್ನ ಮೇಲೆ ಎಗರಿ ಕಚ್ತಾಳೆ.
ಶಂಕರನ ಪಾತ್ರದಲ್ಲಿ ನಿಮಗೆ ಎಷ್ಟು ಸವಾಲು?
ಯಶವಂತ್: ಕೆಲವೊಮ್ಮೆ ಪರ್ಸನಲ್ ಆಗಿ ಬೇಜಾರಾಗುತ್ತೆ. ಒಬ್ಬ ಮನುಷ್ಯ ತನ್ನ ಲೈಫ್ನಲ್ಲಿ ಎಷ್ಟು ಅಂತ ನೋವು ತಿನ್ನೋದು, ಎಲ್ಲರೂ ಅವನಿಗೆ ಸುಳ್ಳು ಹೇಳ್ತಾರಲ್ಲ ಅಂತ ಅನ್ನಿಸುತ್ತೆ. ಆದರೆ ಅವನ ಇನೋಸೆನ್ಸ್ ಹಾಗೇ ಇರಲಿ ಅಂತ ರೈಟರ್ಸ್ ಮತ್ತು ಡೈರೆಕ್ಟರ್ಸ್ ಅವನಿಗೆ ಮಗಳು ಮತ್ತು ಹೆಂಡತಿಯ ಜೊತೆ ಕೆಲವು ಫನ್ನಿ ಸೀನ್ ಇಟ್ಟಿರುತ್ತಾರೆ. ಅವರಿಬ್ಬರು ಇರೋದರಿಂದಲೇ ಶಂಕರನ ಬದುಕು ಬ್ಯಾಲೆನ್ಸ್ ಆಗುತ್ತಿದೆ.
ನಿಮ್ಮ ಅಭಿಮಾನಿಗಳಿಗೆ ಏನು ಹೇಳಲು ಬಯಸುತ್ತೀರಿ?
ಯಶವಂತ್: ಅಭಿಮಾನಿಗಳಿಗೆ ಹೇಳಲು ನನ್ನ ಹತ್ತಿರ ಪದಗಳೇ ಇಲ್ಲ. ನಾನು ಸೀರಿಯಲ್ ಇರಲಿ ಅಥವಾ ಇಲ್ಲದಿರಲಿ ಅವರ ಪ್ರೀತಿ ಹಾಗೆಯೇ ಇರುತ್ತದೆ. ಅವರ ಬೆಂಬಲ ಮತ್ತು ಸೋಶಿಯಲ್ ಮೀಡಿಯಾದಲ್ಲಿ ಮಾಡುವ ಪ್ರಚಾರದಿಂದಲೇ ಇವತ್ತು ನಾವು ಈ ಮಟ್ಟಕ್ಕೆ ಬೆಳೆದಿದ್ದೇವೆ.


Click it and Unblock the Notifications











