Don't Miss!
- Sports IPL 2024: ಸಿಕ್ಸ್ ಹೊಡೆದು ತಪ್ಪಾಯ್ತು ಎಂದಿದ್ದೇಕೆ ರಿಷಬ್ ಪಂತ್ ?
- News Chardham Yatra Guidelines 2024: ಚಾರ್ಧಾಮ್ ಯಾತ್ರೆಗೆ ಹೋಗುವಾಗ ಈ ವಸ್ತುಗಳನ್ನು ಬ್ಯಾಗ್ ಅಲ್ಲಿ ಇಟ್ಟುಕೊಳ್ಳಿ....
- Automobiles ಹೊಸ ಜೀಪ್ ರಾಂಗ್ಲರ್ ಸಂಪೂರ್ಣ ರಿವ್ಯೂ ವಿಡಿಯೋ: ಆಫ್ರೋಡ್ನಲ್ಲಿ ಇದನ್ನು ಮೀರಿಸುವವರಿಲ್ಲ!
- Lifestyle ತಾವರೆಯ ಬೀಜವನ್ನು ಹಾಲಿನ ಜೊತೆ ಸೇವಿಸಿದರೆ ಇಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?
- Technology HMD ಪಲ್ಸ್ ಸರಣಿ ಅಡಿಯಲ್ಲಿ 3 ಹೊಸ ಸ್ಮಾರ್ಟ್ಫೋನ್ ಲಾಂಚ್! ಫೀಚರ್ಸ್ ಏನಿವೆ?
- Finance April 25 Gold Rate: ಇಂದಿನ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರ ಎಷ್ಟಿದೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪ್ರೊಫೆಸರ್ ದೊಡ್ಡರಂಗೇಗೌಡರು ಮಾಡಿದ ಗೋಪಾಲ ಗಾಂಧಿ’ಯ ಪಾಠ
ದೊಡ್ಡರಂಗೇಗೌಡರು ನಮಗೆಲ್ಲ ಸಾಹಿತಿಯಾಗಿ ಪರಿಚಯವಾದವರು. ಸಾಹಿತ್ಯದಲ್ಲಿನ ಸೇವೆಗಾಗಿಯೇ ಪದ್ಮಶ್ರೀ ಪಡೆದುಕೊಂಡವರು. ಆದರೆ ಸಿನಿಮಾರಂಗದಲ್ಲಿ ಅವರು ತಮ್ಮ ಚಿತ್ರಗೀತೆಗಳ ಮೂಲಕ ಗುರುತಿಸಿಕೊಂಡವರು. ಕಳೆದ ಐದು ದಶಕಗಳಲ್ಲಿ ಅವರ ರಚನೆಯಲ್ಲಿ ಹೊಮ್ಮಿದ 600ರಷ್ಟು ಗೀತೆಗಳನ್ನು ಆಸ್ವಾದಿಸುವ ಅವಕಾಶ ನಮ್ಮದಾಗಿದೆ. ವೃತ್ತಿಪರ ಉಪನ್ಯಾಸಕರಾಗಿ ಸೇವೆ ಸಲ್ಲಿಸಿರುವ ದೊಡ್ಡರಂಗೇಗೌಡರು ಓರ್ವ ಉತ್ತಮ ಕಲಾವಿದರೂ ಹೌದು.
ಇದುವರೆಗೆ ಸುಮಾರು 16 ಸಿನಿಮಾಗಳಲ್ಲಿ ಪೋಷಕ ಪಾತ್ರಗಳಿಗೆ ತಮ್ಮ ಸಹಜ ನಟನೆಯ ಮೂಲಕ ಜೀವ ನೀಡಿದ್ದಾರೆ. ಸದ್ಯದಲ್ಲೇ ತೆರೆಕಾಣಲು ಸಿದ್ಧವಾಗಿರುವ 'ಗೋಪಾಲಗಾಂಧಿ' ಚಿತ್ರದಲ್ಲಿ ಕೂಡ ಅವರು ಒಂದು ಪ್ರಧಾನ ಪಾತ್ರವನ್ನು ನಿರ್ವಹಿಸಿದ್ದಾರೆ. ಗೋಪಾಲ ಗಾಂಧಿಯ ಶಿಕ್ಷಕನಾಗಿದ್ದುಕೊಂಡು ತಮ್ಮ ಪಾಠದ ಮೂಲಕ ಗಾಂಧಿ ತತ್ವವನ್ನು ರವಾನಿಸುವವರಾಗಿ ದೊಡ್ಡರಂಗೇಗೌಡರು ಕಾಣಿಸಿಕೊಂಡಿದ್ದಾರೆ. ಎನ್ ನಾಗೇಶ್ ನಿರ್ದೇಶನದ ಈ ಚಿತ್ರಕ್ಕೆ ದೊಡ್ಡರಂಗೇಗೌಡರು ಹಾಡುಗಳನ್ನು ಕೂಡ ಬರೆದಿದ್ದಾರೆ. ಈ ಎಲ್ಲ ವಿಚಾರಗಳ ಬಗ್ಗೆ ಅವರೊಡನೆ ಫಿಲ್ಮೀಬೀಟ್ ನಡೆಸಿರುವ ವಿಶೇಷ ಮಾತುಕತೆ ಇದು.
ತಾವು `ಗೋಪಾಲ ಗಾಂಧಿ’ ಚಿತ್ರದಲ್ಲಿ ನಟಿಸಲು ಕಾರಣವೇನು?
ನಾನು ನಾಗೇಶ್ ಅವರ `ಅನಾಮಿಕ ಮತ್ತು ಇತರೆ ಕಥೆಗಳು' ಕಥಾ ಸಂಕಲನ ಓದಿದ್ದೆ. ಹಾಗಾಗಿ ಕತೆಯ ಬಗ್ಗೆ ಗೊತ್ತಿತ್ತು. ಅದನ್ನು ಆಧಾರವಾಗಿಸಿರುವ `ಗೋಪಾಲ ಗಾಂಧಿ' ಚಿತ್ರದಲ್ಲಿ ನನ್ನ ಪಾತ್ರ ಚೆನ್ನಾಗಿತ್ತು. ನನ್ನ ಹಾವಭಾವ, ಗುಣಧರ್ಮ, ರೀತಿ ನೀತಿಗೆ ಅವರು ನೀಡಿದ ಪಾತ್ರ ಹತ್ತಿರವಿದೆ ಎನಿಸಿದ ಕಾರಣ ಸುಲಭವಾಗಿ ನಿರ್ವಹಿಸಬಹುದು ಎನಿಸಿತು. ಹಾಗಾಗಿ ಪಾತ್ರ ಮಾಡಲು ಒಪ್ಪಿಕೊಂಡೆ.
ಚಿತ್ರದಲ್ಲಿ ನಿಮಗೆ ಇಷ್ಟವಾದ ಅಂಶ ಯಾವುದು?
ಚಿತ್ರದಲ್ಲಿನ ಪಾತ್ರವೊಂದು ಪಟ್ಟಣದಿಂದ ಹಳ್ಳಿಗೆ ಹೋಗಿ ನೆಲೆಸುತ್ತದೆ. ಅದಕ್ಕೆ ಆ ಹಳ್ಳಿಯನ್ನು ಹೇಗಾದರೂ ಮಾಡಿ ಉದ್ಧಾರ ಮಾಡುತ್ತೇನೆ ಎನ್ನುವ ನಿಲುವೇ ಕಾರಣವಾಗಿರುತ್ತದೆ. ಹಳ್ಳಿಗಳನ್ನು ಉದ್ಧಾರ ಮಾಡಬೇಕು ಎನ್ನುವುದು ಮಹಾತ್ಮಾ ಗಾಂಧಿಯವರ ಕನಸು. ಬಾಪೂಜಿಯವರ ಕನಸುಗಳೆಂದರೆ ನನಗೆ ಒಲವು. ವೈಯಕ್ತಿಕ ಜೀವನದಲ್ಲಿ ಕೂಡ ನಾನು ಗಾಂಧಿಯಂತೆ ಬದುಕಲು ಪ್ರಯತ್ನಿಸಿದವನು.
ಮಹಾತ್ಮಾ ಗಾಂಧಿಯ ತತ್ವಗಳು ಇಂದಿಗೆ ಹೇಗೆ ಪ್ರಸ್ತುತ ಎಂದು ನಿಮ್ಮ ಅನಿಸಿಕೆ?
ಗಾಂಧೀಜಿಯ ತತ್ವಗಳು ಎಂದೆಂದಿಗೂ ಪ್ರಸ್ತುತ ಎಂದು ನನ್ನ ಬಲವಾದ ನಂಬಿಕೆ. ಸತ್ಯವನ್ನು ನುಡಿಯುವುದು, ಪ್ರಾಮಾಣಿಕವಾಗಿರುವುದು, ಎಲ್ಲ ಧರ್ಮಗಳನ್ನು ಪ್ರೀತಿಸುವ ಸಹಿಷ್ಣುತೆ, ಉಜ್ವಲವಾದ ರಾಷ್ಟ್ರಭಕ್ತಿ, ವಿಶ್ವಮಾನವ ತತ್ವ ಇವೆಲ್ಲವೂ ಇಂದಿಗೂ ಅಗತ್ಯ. ಅದಕ್ಕೆ ಒಂದು ಸ್ಪಷ್ಟ ಉದಾಹರಣೆ ಸ್ವಚ್ಛ ಭಾರತ ಅಭಿಯಾನಕ್ಕೆ ಈಗ ಚಾಲನೆ ದೊರೆತಿರುವುದು ಎಂದು ಹೇಳಬಹುದು.
ನಿಮ್ಮ ಮೇಲೆ ಗಾಂಧೀಜಿಯ ತತ್ವಗಳು ಪ್ರಭಾವ ಬೀರಲು ಕಾರಣವೇನು?
ನಮ್ಮ ತಂದೆಯಿಂದ ನನಗೆ ಗಾಂಧೀತತ್ವಗಳು ಒಲಿದು ಬಂದಿವೆ. ಹಿಂಸೆ ಇರಬಾರದು. ಜಗಳ, ಮೋಸ ಮಾಡಬಾರದು. ಜೀವನದಲ್ಲಿ ನಾಲ್ಕು ಮಂದಿಗೆ ಉಪಕಾರಿಯಾಗಿರು. ಕೆಟ್ಟದ್ದನ್ನು ಕೇಳಬೇಡ. ಆಡಬೇಡ. ಇನ್ನೊಬ್ಬರ ವಸ್ತುವಿಗೆ ಆಸೆ ಪಡಬಾರದು. ಹೀಗೆ ಹೇಳಿ ಬದುಕಿ ತೋರಿಸಿದ ತಂದೆಯನ್ನು ಆದರ್ಶವಾಗಿಸಿಕೊಂಡ ನನಗೆ ಮತ್ತೆ ಅದೇ ಗಾಂಧೀಜಿಯವರೇ ಸ್ಫೂರ್ತಿಯಾದರು. ನಾನು ಉಪನ್ಯಾಸಕ ವೃತ್ತಿಯಲ್ಲಿದ್ದಾಗ `ಟೆಕ್ಸ್ಟ್ ಈಸ್ ಎ ಪ್ರಿಟೆಕ್ಸ್ಟ್' ಎಂದು ಹೇಳಿದ್ದೇನೆ. ಅಂದರೆ ಪಠ್ಯವನ್ನು ನೆಪವಾಗಿಸಿಕೊಂಡು ಜೀವನಮೌಲ್ಯವನ್ನು ಹೇಳಬೇಕು ಎಂದು. ಚಿತ್ರದಲ್ಲಿ ಕೂಡ ಶಿಕ್ಷಕ ಅದನ್ನೇ ಮಾಡುತ್ತಾನೆ.
ಇಂದಿನ ರಾಜಕೀಯದ ಘಟನೆಗಳನ್ನು ಕಂಡಾಗ ಗಾಂಧೀತತ್ವಗಳು ಮುಂದುವರಿಯುವ ಭರವಸೆ ಇದೆಯೇ?
ಇಂದು ಚುನಾಯಿತರಾದವರು ವರ್ಷಗಳೊಳಗೆ ಕೋಟಿಗಟ್ಟಲೆ ಸಂಪಾದಿಸುತ್ತಾರೆ. ಇಂಥ ಅಕ್ರಮ, ಅನ್ಯಾಯ, ಅಸತ್ಯಗಳ ವಿರುದ್ಧ ಹೋರಾಡಿದವರು ಗಾಂಧೀಜಿ. ಅವರು ಎಲ್ಲರಿಗೂ ಶಿಕ್ಷಣ ನೀಡುವ, ಎಲ್ಲರನ್ನು ವಿದ್ಯಾವಂತರನ್ನಾಗಿ ಮಾಡುವ, ಗ್ರಾಮವನ್ನು ಉದ್ಧಾರ ಮಾಡುವ ಗುರಿಯನ್ನು ಹೊಂದಿದ್ದರು. ಆದರೆ ಇಂದು ಎಲ್ಲವೂ ಹಣದ ಪಾಲಾಗಿದೆ. ಮಂದಿ ಗುಣದ ಹಿಂದೆ ಹೋದರೆ ನೆಮ್ಮದಿಯ ಬದುಕನ್ನು ಕಾಣಬಹುದು. ಆದರೆ ಇಂದಿನ ಮಂದಿ ಹಣದ ಹಿಂದೆ ಹೋಗುತ್ತಿದ್ದಾರೆ. ಹಾಗಾಗಿ ಅವರು ಕೆಡುವ ಜತೆಗೆ ಸಮಾಜವನ್ನೇ ವಿಕೃತಿಯಲ್ಲಿ ಮುಳುಗಿಸುತ್ತಿದ್ದಾರೆ. ಎಲ್ಲ ವಿಕೃತಿಗೆ ಕಾರಣ ಹಣ.
`ಗೋಪಾಲ ಗಾಂಧಿ’ ಚಿತ್ರಕ್ಕೆ ನೀವು ಎಷ್ಟು ಹಾಡುಗಳನ್ನು ಬರೆದಿದ್ದೀರಿ?
ಚಿತ್ರದಲ್ಲಿ ಎರಡು ಪೂರ್ಣ ಪ್ರಮಾಣದ ಹಾಡುಗಳು ಮತ್ತು ಎರಡು ಪುಟ್ಟ ಹಾಡುಗಳು ಇವೆ. ಇವುಗಳಲ್ಲಿ ಮೂರು ಹಾಡುಗಳನ್ನು ನಾನೇ ಬರೆದಿದ್ದೇನೆ. ಒಂದು ಪುಟ್ಟ ಹಾಡನ್ನು ನಿರ್ದೇಶಕ ನಾಗೇಶ್ ಎನ್ ಬರೆದಿದ್ದಾರೆ. ಮುಖ್ಯವಾಗಿ ಮಕ್ಕಳಿಗೆ ಹೊಡೆಯದೇ, ಬಡಿಯದೇ ಪಾಠ ಕಲಿಸಬಹುದು. ಮೊದಲು ಕಲಿಸುವವರು ಪಾಂಡಿತ್ಯ ಪಡೆದಿರಬೇಕು ಎನ್ನುವ ಸಂದೇಶ ಹಾಡುಗಳಲ್ಲಿಯೂ ಮೂಡಿದೆ. ಖಂಡಿತವಾಗಿ ಎಲ್ಲ ಹಾಡುಗಳು ಜನಪ್ರಿಯವಾಗುವ ಭರವಸೆ ಇದೆ.
ಈ ಸಿನಿಮಾವನ್ನು ಯಾವ ಕಾರಣಕ್ಕಾಗಿ ವೀಕ್ಷಿಸಬೇಕು ಎನ್ನುವುದು ನಿಮ್ಮ ಅನಿಸಿಕೆ?
ಇದು ಎಲ್ಲರೂ ನೋಡಬೇಕಾದ ಚಿತ್ರ. ಆದರೆ ಮುಖ್ಯವಾಗಿ ಶಾಲಾ ಕಾಲೇಜಿನ ಮಕ್ಕಳು ನೋಡುವಂತಾಗಬೇಕು. ಗಾಂಧೀಜಿಯ ಸ್ವಚ್ಛಭಾರತದ ಕಲ್ಪನೆ, ಪರೋಪಕರಾದ ಭಾವನೆ, ಇನ್ನೊಬ್ಬರಿಗೆ ಕೆಡುಕನ್ನು ಮಾಡದಿರುವುದನ್ನಾಗಲೀ ನೋಡಿ ಸ್ಫೂರ್ತಿ ಪಡೆಯುವಂತಾಗಬೇಕು. ದೊಡ್ಡವರು ಈಗಾಗಲೇ ಕೆಟ್ಟು ಹೋಗಿದ್ದಾರೆ. ಮಕ್ಕಳಾದರೂ ನವಭಾರತದ ತರುಣವನ್ನು ಅಳವಡಿಸಿಕೊಳ್ಳುವಂತಾಗಲಿ ಎನ್ನುವುದೇ ಹಾರೈಕೆ.