ನಾನು ಹಂಗ್ ಮಾಡ್ತೀನಿ ಹಿಂಗ್ ಮಾಡ್ತೀನಿ ಅನ್ನೊಲ್ಲ, ನಾಳೆ ಇರ್ತಿವೊ ಇಲ್ವೋ ಗೊತ್ತಿಲ್ಲ ಎಂದ್ರು ದರ್ಶನ್!
ರಾಬರ್ಟ್ ಚಿತ್ರದ ಬಳಿಕ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಬಿನಯದ ಯಾವ ಚಿತ್ರಗಳೂ ಸಹ ಬಿಡುಗಡೆಯಾಗಿಲ್ಲ. ಹೌದು, ಕಳೆದ ವರ್ಷ ಮಾರ್ಚ್ ತಿಂಗಳಿನಲ್ಲಿ ಬಿಡುಗಡೆಯಾಗಿದ್ದ ದರ್ಶನ್ ಹಾಗೂ ತರುಣ್ ಸುಧೀರ್ ಕಾಂಬೊನ ರಾಬರ್ಟ್ ಚಿತ್ರ ಕೊರೊನಾ ಬಳಿಕ ತೆರೆದಿದ್ದ ಹಲವು ಚಿತ್ರಮಂದಿರಗಳ ಮುಂದೆ ಹೌಸ್ ಫುಲ್ ಬೋರ್ಡ್ ಬೀಳುವಂತೆ ಮಾಡಿ ಒಳ್ಳೆಯ ಗಳಿಕೆ ಕಂಡಿತ್ತು.
ಹೀಗೆ ಬ್ಲಾಕ್ ಬಸ್ಟರ್ ಹಿಟ್ ಚಿತ್ರ ನೀಡಿದ ದರ್ಶನ್ ಇದರ ಬೆನ್ನಲ್ಲೇ ವಿ ಹರಿಕೃಷ್ಣ ನಿರ್ದೇಶನದ ಕ್ರಾಂತಿ ಚಿತ್ರದಲ್ಲಿ ನಟಿಸುವುದಾಗಿ ಅಧಿಕೃತ ಘೋಷಣೆಯಾಯಿತು. ಈ ಹಿಂದೆ ಯಜಮಾನ ರೀತಿಯ ಹಿಟ್ ಚಿತ್ರ ನೀಡಿದ್ದ ಈ ಜೋಡಿಯ ಮೇಲೆ ಅಭಿಮಾನಿಗಳಲ್ಲಿ ನಿರೀಕ್ಷೆ ಕೂಡ ಹುಟ್ಟಿಕೊಂಡಿತ್ತು. ಚಿತ್ರದ ಶೀರ್ಷಿಕೆ ಬಿಡುಗಡೆ ಮಾಡಿದ್ದ ಚಿತ್ರತಂಡ ಯಜಮಾನ ಚಿತ್ರದಲ್ಲಿ ಅಡುಗೆ ಎಣ್ಣೆ ಕ್ರಾಂತಿ ಮಾಡಿದ್ದೆವು ಈ ಬಾರಿ 'ಕ್ರಾಂತಿ' ಮೂಲಕ ಅಕ್ಷರ ಕ್ರಾಂತಿ ಮಾಡಲಿದ್ದೇವೆ ಎಂದು ಹೇಳಿಕೊಂಡಿತ್ತು.
ಅದೇ ರೀತಿ ಚಿತ್ರದ ಫಸ್ಟ್ ಲುಕ್ ಟೀಸರ್ ಬಿಡುಗಡೆ ಮಾಡಿದಾಗ ಚಿತ್ರದಲ್ಲಿ ಸರ್ಕಾರಿ ಶಾಲೆಗಳ ಮಹತ್ವ ತಿಳಿಸುವ ಕೆಲಸ ಮಾಡಲಾಗಿದೆ ಎಂಬುದನ್ನು ಕಾಣಬಹುದಿತ್ತು. ಚಿತ್ರದ ನಾಯಕ ತಾನು ಓದಿದ ಶಾಲೆಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡುವ ಸಂಭಾಷಣೆ ಈ ಟೀಸರ್ ವಿಡಿಯೊದಲ್ಲಿತ್ತು. ಈ ಟೀಸರ್ ಬಳಿಕ ಚಿತ್ರದ ಯಾವುದೇ ಅಪ್ ಡೇಟ್ ಇರಲಿಲ್ಲ, ನವೆಂಬರ್ 1ಕ್ಕೆ ಬಿಡುಗಡೆಯಾಗಲಿದೆ ಎನ್ನಲಾಗಿದ್ದ ಕ್ರಾಂತಿ ಚಿತ್ರಮಂದಿರದಂಗಳಕ್ಕೆ ಬರಲಿಲ್ಲ. ನಂತರ ಜನವರಿ 26ಕ್ಕೆ ಕ್ರಾಂತಿ ತೆರೆ ಕಾಣಲಿದೆ ಎಂದು ಪುಟ್ಟ ಕಾರ್ಯಕ್ರಮ ನಡೆಸಿದ ಕ್ರಾಂತಿ ತಂಡ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು ಹಾಗೂ ದರ್ಶನ್ ಸಂದರ್ಶನಗಳಲ್ಲಿ ಪಾಲ್ಗೊಂಡು ಪ್ರಚಾರ ಕಾರ್ಯ ಆರಂಭಿಸುತ್ತೇನೆ ಎಂದಿದ್ದರು. ಅದರಂತೆ ಇದೀಗ ನಮ್ಮ ಕನ್ನಡ ಫಿಲ್ಮಿಬೀಟ್ ಚಾನೆಲ್ ಜತೆ ಸಂದರ್ಶನದಲ್ಲಿ ದರ್ಶನ್ ಭಾಗವಹಿಸಿದ್ದು, ಕ್ರಾಂತಿ ಹಾಗೂ ಇನ್ನಿತರ ವಿಷಯಗಳ ಕುರಿತು ಮಾತನಾಡಿದ್ದಾರೆ.

ಕ್ರಾಂತಿ ಫ್ಯಾನ್ಸ್ದು ನಮ್ಮದಲ್ಲ
ಮೊದಲಿಗೆ ಕ್ರಾಂತಿ ಸಿನಿಮಾಗೆ ಅಭಿಮಾನಿಗಳು ಸ್ವತಃ ಮಾಡುತ್ತಿರುವ ಪ್ರಚಾರದ ಬಗ್ಗೆ ಮಾತನಾಡಿದ ದರ್ಶನ್ 'ಕ್ರಾಂತಿ ಚಿತ್ರ ನಮ್ಮದಲ್ಲ ಅದನ್ನು ಅಭಿಮಾನಿಗಳ ಜೋಳಿಗೆಗೆ ಯಾವತ್ತೋ ಹಾಕಿ ಆಯಿತು. ಅದನ್ನು ಅವರು ಯಾವ ರೀತಿ ತಗೊಂಡು ಹೋಗ್ತಿದ್ದಾರೋ ನಿಮಗೇ ಗೊತ್ತು. ಯಾವುದೋ ಯುಟ್ಯೂಬ್ ಚಾನೆಲ್ನಲ್ಲಿ ಕ್ರಾಂತಿ ಚಿತ್ರದ ಬಗ್ಗೆ ವಿಡಿಯೊ ಮಾಡಿರ್ತಾರೆ. ಅವರು ಯಾರು ಅಂತ ನನಗೆ ಗೊತ್ತಿರಲ್ಲ, ಜೊತೆಗೊಂದು ಫೋಟೊನು ತೆಗೆಸಿಕೊಂಡಿರೊದಿಲ್ಲ, ಒಂದು ಸಲ ಕೈನೂ ಸಹ ಕೊಟ್ಟಿರಲ್ಲ. ಆದ್ರೆ ಅವರು ನಮ್ಮನ್ನು ಇಷ್ಟೊಂದು ಕಾಪಾಡ್ತಾ ಇದಾರಲ್ಲ. ಇದನ್ನೆಲ್ಲಾ ನೋಡಿ ನನಗೆ ಗಿಲ್ಟ್ ಕಾಡ್ತಾ ಇರುತ್ತೆ. ಏನಯ್ಯ ಇದು ಇವ್ರಿಗೆ ನಾನು ಏನು ಮಾಡ್ಲೇ ಇಲ್ಲ, ಇಷ್ಟೊಂದೆಲ್ಲಾ ಮಾಡ್ತಾ ಇದಾರಲ್ಲ ಅಂತ' ಎಂದು ಹೇಳಿದರು.

ನಾನು ಹಂಗ್ ಮಾಡ್ತೀನಿ ಹಿಂಗ್ ಮಾಡ್ರೀನಿ ಅನ್ನೊಲ್ಲ
ಇನ್ನು ತಮಗಾಗಿ ಸಾಲು ಸಾಲು ಪ್ರಚಾರ ಕಾರ್ಯಕ್ರಮಗಳನ್ನು ಮಾಡಿರುವ ಅಭಿಮಾನಿಗಳಿಗೆ ಏನು ಹೇಳ್ತೀರಾ ಎಂಬ ಪ್ರಶ್ನೆ ಎದುರಾದಾಗ ಉತ್ತರಿಸಿದ ದರ್ಶನ್ 'ನಾನು ಅದನ್ ಮಾಡ್ತೀನಿ, ನಾನು ಇದನ್ ಮಾಡ್ತೀನಿ. ನಾನ್ ಹಂಗ್ ಮಾಡ್ತೀನಿ, ಹಿಂಗ್ ಮಾಡ್ತೀನಿ ಅಂತ ಹೇಳೊಲ್ಲ. ಗೊತ್ತಿಲ್ಲ ನಾಳೆ ಇರ್ತಿವೋ ಇಲ್ವೋ ಗೊತ್ತಿಲ್ಲ. ದಿನ ಚಿಟಿಕೆ ಹೊಡೆದ ಹಾಗೆ ಮುಗಿದುಹೋಗುತ್ತೆ. ಆದ್ದರಿಂದ ಇರೋ ಅಷ್ಟು ದಿನ ಅವರು ಏನ್ ಇಷ್ಟ ಪಡ್ತಾರೋ ಅದನ್ನಷ್ಟೇ ಚೆನ್ನಾಗಿ ರಂಜಿಸಿಕೊಂಡು ತಗೊಂಡು ಹೋಗೋಕೆ ಇಷ್ಟಪಡ್ತೀನಿ ಅಷ್ಟೇ' ಎಂದರು.

ಏನು ಮಾಡದಿದ್ದವನನ್ನು ಇಲ್ಲಿಯವರೆಗೂ ಕರೆತಂದರು
ಇನ್ನು ಸಂದರ್ಶನದ ಮೊದಲಿಗೆ ಚಿತ್ರರಂಗದಲ್ಲಿ ತಮ್ಮ ಇಪ್ಪತ್ತು ವರ್ಷದ ಪಯಣದ ಬಗ್ಗೆ ಮಾತನಾಡಿದ ದರ್ಶನ್ 'ಇಲ್ಲಿಯವರೆಗೆ ಏನು ಮಾಡಿಕೊಂಡು ಬಂದಿದ್ದೀವೋ ಅದು ತುಂಬಾನೇ ಕಷ್ಟವಾದದ್ದೇನಲ್ಲ. ಆದರೆ ಏನು ಮಾಡದೇ ಇದ್ದವನನನ್ನು ಇಲ್ಲಿಯವರೆಗೂ ಕರೆದುಕೊಂಡು ಬಂದಿದ್ದಾರಲ್ಲ, ಅದನ್ನು ಉಳಿಸಿಕೊಂಡು ಬೆಳೆಸಿಕೊಂಡು ಹೋಗಬೇಕು' ಎಂದರು.


Click it and Unblock the Notifications











