Don't Miss!
- Automobiles HSRP ನಂಬರ್ ಪ್ಲೇಟ್ನಲ್ಲಿ ನಡೆಯುತ್ತಿದೆ ಭಾರೀ ಮೋಸ: ಬುಕ್ ಮಾಡದವರು ಇದನ್ನು ಗಮನಿಸಿ!
- News Bengaluru Rain: ಮುದ್ದಿನ ನಾಯಿಮರಿಗೆ ಮೊದಲ ಮಳೆ ತೋರಿಸಿ ಖುಷಿ ಪಟ್ಟ ವ್ಯಕ್ತಿ; ವಿಡಿಯೋ ವೈರಲ್
- Lifestyle ಮಕ್ಕಳಲ್ಲಿ ಮಲೇರಿಯಾ: ಹೇಗೆ ಬರುತ್ತದೆ, ಇದರ ಲಕ್ಷಣಗಳೇನು? ತಡೆಗಟ್ಟುವುದು ಹೇಗೆ?
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹೊಟ್ಟೆ ತುಂಬಾ ನಗು ಬಡಿಸಲಿದೆ 'ಫ್ರೆಂಚ್ ಬಿರಿಯಾನಿ': ನಿರ್ದೇಶಕ ಪನ್ನಗಾಭರಣ ಸಂದರ್ಶನ
ಪುನೀತ್ ರಾಜ್ ಕುಮಾರ್ ಅವರ ಪಿಆರ್ಕೆ ಪ್ರೊಡಕ್ಷನ್ಸ್ನ ಮತ್ತೊಂದು ಚಿತ್ರ 'ಫ್ರೆಂಚ್ ಬಿರಿಯಾನಿ' ಒಟಿಟಿ ಪ್ಲಾಟ್ಫಾರ್ಮ್ನಲ್ಲಿ ಜುಲೈ 24ರಂದು ಬಿಡುಗಡೆಯಾಗಲಿದೆ. ಈಗಾಗಲೇ ಚಿತ್ರದ ಟ್ರೇಲರ್ ಮತ್ತು 'ದಿ ಬೆಂಗಳೂರು ನಮ ನಮ ನಮಸ್ತೆ' ಹಾಡು ಸಂಚಲನ ಸೃಷ್ಟಿಸಿದೆ.
ಪನ್ನಗಾಭರಣ ನಿರ್ದೇಶನದ ಈ ಚಿತ್ರದಲ್ಲಿ ದ್ಯಾನಿಶ್ ಸೇಠ್, ಸಾಲ್ ಯೂಸುಫ್, ರಂಗಾಯಣ ರಘು, ದಿಶಾ ಮದನ್, ಮಹಾಂತೇಶ್ ಹಿರೇಮಠ್ ಮುಂತಾದವರು ನಟಿಸಿದ್ದಾರೆ. ವಾಸುಕಿ ವೈಭವ್ ಸಂಗೀತ ನೀಡಿದ್ದಾರೆ. ಎರಡು ವಾರ ಒಂದರ ಹಿಂದೊಂದು ಸಿನಿಮಾವನ್ನು ಒಟಿಟಿ ಪ್ಲಾಟ್ಫಾರ್ಮ್ನಲ್ಲಿ ಬೇರೆ ಯಾವುದೇ ನಿರ್ಮಾಣ ಸಂಸ್ಥೆ ಬಿಡುಗಡೆ ಮಾಡಿದ ಉದಾಹರಣೆ ಇಲ್ಲ. ರಘು ಸಮರ್ಥ ನಿರ್ದೇಶನದ 'ಲಾ' ಬಿಡುಗಡೆಯಾಗಿ ಮರು ವಾರವೇ ಅಮೆಜಾನ್ ಪ್ರೈಮ್ನಲ್ಲಿ 'ಫ್ರೆಂಚ್ ಬಿರಿಯಾನಿ'ಯ ಘಮಲು ಹರಡುತ್ತಿದೆ.
ಪುನೀತ್ ರಾಜ್ ಕುಮಾರ್ ಉಣಬಡಿಸುತ್ತಿದ್ದಾರೆ 'ಫ್ರೆಂಚ್ ಬಿರಿಯಾನಿ' ತಿನಿಸು!
'ಫ್ರೆಂಚ್ ಬಿರಿಯಾನಿ' ಯಾವ ರೀತಿಯ ಸವಿ ನೀಡಲಿದೆ, ಒಟಿಟಿ ಸಿನಿಮಾ ಜಗತ್ತು, ಚಿತ್ರರಂಗದ ಭವಿಷ್ಯ ಮುಂತಾದವುಗಳ ಬಗ್ಗೆ ನಿರ್ದೇಶಕ ಪನ್ನಗಾಭರಣ 'ಫಿಲ್ಮಿಬೀಟ್' ಜತೆ ಮಾತನಾಡಿದ್ದಾರೆ.
ಶಿವಾಜಿನಗರದ ಹಿನ್ನೆಲೆ
'ಫ್ರೆಂಚ್ ಬಿರಿಯಾನಿ' ಚಿತ್ರ ಪರಿಪೂರ್ಣ ಹಾಸ್ಯಮಯ. ಇದು ಇಡಿಯಾಗಿ ಬೆಂಗಳೂರು ನಗರವನ್ನು ಆಧಾರಿತ ಚಿತ್ರ. ಬೆಂಗಳೂರಿನ ಸಂಸ್ಕೃತಿ, ಬೆಂಗಳೂರಿನಲ್ಲಿ ಭಾಷೆ, ಜನರು, ಪ್ರದೇಶಗಳು ಹೀಗೆ ಬೆಂಗಳೂರಿಗೆ ಎಲ್ಲ ರೀತಿಯಲ್ಲಿಯೂ ಕನೆಕ್ಟ್ ಆಗುವ ಸನ್ನಿವೇಶಗಳಿವೆ. ಇಡೀ ಸಿನಿಮಾ ಶಿವಾಜಿನಗರದಲ್ಲಿ ನಡೆಯುತ್ತದೆ. ಶಿವಾಜಿನಗರದ ಬಗ್ಗೆ ಗೊತ್ತಿರುವವರಿಗೆ ಇನ್ನೂ ಚೆನ್ನಾಗಿ ಕನೆಕ್ಟ್ ಆಗುತ್ತದೆ. ಆರಂಭದಿಂದ ಕೊನೆಯವರೆಗೂ ಪ್ರೇಕ್ಷಕರಿಗೆ ಭರಪೂರ ಮನರಂಜನೆ ಇದೆ.
ಎಲ್ಲರಿಗೂ ಇಷ್ಟವಾಗುವ ಹಾಸ್ಯ
ಐಟಿ ವಲಯದಿಂದ ಹಿಡಿದು ಕಾರ್ಮಿಕ ವರ್ಗದ ಎಲ್ಲರಿಗೂ ಇಷ್ಟವಾಗುವ ಕಾಮಿಡಿ ಕಥೆಯ ಮೇಲೆ ಕೆಲಸ ಮಾಡಿದ್ದೇವೆ. ನಿಮಗೆ ಬೆಂಗಳೂರಿನಲ್ಲಿ ಕಾಣಿಸುವ ಬೇರೆ ಬೇರೆ ಕ್ಯಾರೆಕ್ಟರ್ಗಳು, ವಲಯಗಳು ಇಲ್ಲಿವೆ. ಇಡೀ ಸಿನಿಮಾದಲ್ಲಿ ಹಾಸ್ಯವಿದೆ. ಸಿನಿಮಾ ನೋಡಿದರೆ ನೀವು ಎಂಜಾಯ್ ಮಾಡುತ್ತೀರಿ ಎಂಬ ಖಾತರಿಯಿದೆ.
'ಮೂವರೂ ಗೆಳೆಯರು ಸೇರಿ ಸಿನಿಮಾ ಮಾಡಲು ಎಲ್ಲ ತಯಾರಿ ಮಾಡಿದ್ದೆವು...'
ಇನ್ನೂ ಕಾದರೆ ಕಂಟೆಂಟ್ ಹಳೆಯದಾಗುತ್ತದೆ
ಇದು ಚಿತ್ರಮಂದಿರದ ಬಿಡುಗಡೆಗೆಂದೇ ಮಾಡಿದ್ದ ಚಿತ್ರ. ಸಿನಿಮಾ ಸಿದ್ಧವಾಗಿ ಸುಮಾರು ಒಂದು ವರ್ಷವಾಗಿದೆ. ಕಳೆದ ವರ್ಷದ ಅಂತ್ಯದಲ್ಲಿ ತರೋಣ ಎಂದುಕೊಂಡೆವು, ದೊಡ್ಡ ದೊಡ್ಡ ಸಿನಿಮಾಗಳಿದ್ದ ಕಾರಣ ಮುಂದಕ್ಕೆ ಹಾಕಿದೆವು. ಮುಂದಿನ ವರ್ಷದ ಆರಂಭದಲ್ಲಿ ಬರೋಣ ಎಂದುಕೊಂಡೆವು. ಹಾಗೆ ಸಮಯ ಕಳೆಯುವಾಗ ಕೋವಿಡ್ ಬಂತು. ಚಿತ್ರಮಂದಿರಗಳು ಸ್ಥಗಿತಗೊಂಡವು. ಇನ್ನೂ ಕಾದರೆ ಸಿನಿಮಾ ಬಹಳ ಹಳೆಯದಾಗುತ್ತದೆ. ಕಂಟೆಂಟ್ ತುಂಬಾ ಇಟ್ಟಕೊಂಡಷ್ಟೂ ಹಳೆಯದಾಗುತ್ತಾ ಹೋಗುತ್ತದೆ. ಲಾಕ್ಡೌನ್ ಸಮಯದಲ್ಲಿ ಅಮೆಜಾನ್ನವರಿಗೂ ಸಿನಿಮಾ ಬೇಕಾಗಿತ್ತು. ಹಾಗಾಗಿ ಪರ್ಚೇಸ್ ಮಾಡಿದ್ದರು. ಒಳ್ಳೆಯ ಸಂಗತಿಯೆಂದರೆ ಕಾಮಿಡಿ ಒಟಿಟಿ ಪ್ಲಾಟ್ಫಾರ್ಮ್ನಲ್ಲಿ ಯಾವಾಗಲೂ ಚೆನ್ನಾಗಿ ಕೆಲಸ ಮಾಡುತ್ತದೆ.
ಒಟಿಟಿಯಿಂದ ಲಾಭವೇ ಹೆಚ್ಚು
ಒಟಿಟಿ ಒಂದು ಪ್ಲಾಟ್ಫಾರ್ಮ್ ಅಷ್ಟೇ. ಒಟಿಟಿ ಬಂದು ಬೆಳೆದರೆ ಚಿತ್ರಮಂದಿರಗಳು ಹೋಗಿಬಿಡುತ್ತವೆ ಎನ್ನುವುದು ಸುಳ್ಳು. ಒಂದು ಕಾಲದಲ್ಲಿ ಚಿತ್ರಮಂದಿರಗಳಲ್ಲಿ ಮಾತ್ರವೇ ಸಿನಿಮಾ ಪ್ರದರ್ಶನ ಇದ್ದಾಗ ಟಿವಿ ಬಂತು, ಆಗ ಸಿನಿಮಾಗಳಿಗಾಗಿ ಮತ್ತೊಂದು ಪ್ಲಾಟ್ಫಾರ್ಮ್ ಸೃಷ್ಟಿಯಾಯಿತು. ಈಗ ಒಟಿಟಿ ಬಂದಿದೆ. ಸಿನಿಮಾವನ್ನು ಆರ್ಥಿಕವಾಗಿ ಮತ್ತಷ್ಟು ಗಟ್ಟಿಗೊಳಿಸಲು ಹಾಗೂ ವಿಸ್ತರಿಸಲು ಇನ್ನೊಂದು ಮಾರ್ಗ ಸಿಕ್ಕಿತು ಅಷ್ಟೇ. ಮುಂಚೆ ಚಿತ್ರಮಂದಿರ ಬಿಡುಗಡೆ ಇತ್ತು, ಬಳಿಕ ಚಿತ್ರಮಂದಿರ+ಸ್ಯಾಟಲೈಟ್ ಆಯ್ತು, ಈಗ ಚಿತ್ರಮಂದಿರ+ಸ್ಯಾಟಲೈಟ್+ಡಿಜಿಟಲ್ ಬಂತು. ಇದರಿಂದ ನಿರ್ಮಾಪಕರಿಗೆ ಹೆಚ್ಚು ಹಣ ಬರುತ್ತದೆ, ಖರೀದಿದಾರರಿಗೂ ಸುಲಭ.
ಚಿರಂಜೀವಿ ಸರ್ಜಾ ಅಗಲಿ ಒಂದು ತಿಂಗಳು: ನಗುಮೊಗದ ಚಿರುವನ್ನು ಆಪ್ತರು ಸ್ಮರಿಸಿದ್ದು ಹೀಗೆ...
ಒಟಿಟಿ ಒಂದು ಸೇರ್ಪಡೆಯಷ್ಟೇ
ಒಟಿಟಿ ಸಿನಿಮಾ ಹೂಡಿಕೆಯನ್ನೂ ಸುಲಭಗೊಳಿಸುತ್ತದೆ. ಒಬ್ಬರು ಒಂದು ಸಿನಿಮಾಕ್ಕೆ ಒಂದು ಕೋಟಿ ಹಾಕುವ ಬದಲು ಇಬ್ಬರು ಡಿವೈಡ್ ಆದಾಗ ನಿರ್ಮಾಪಕರಿಗೂ ಜಾಸ್ತಿ ಲಾಭ ಬರುತ್ತದೆ ಮತ್ತು ಖರೀದಿ ಮಾಡುವವರಿಗೂ ಕಡಿಮೆ ದರದಲ್ಲಿ ಸಿಗುತ್ತದೆ. ಒಟಿಟಿಗಾಗಿಯೇ ಸಿನಿಮಾ ಮಾಡುತ್ತಾರೆ ಎನ್ನುವುದು ಸುಳ್ಳು. ಹಾಗೆಯೂ ಸಿನಿಮಾ ಮಾಡುವುದು ಆಗಬಹುದು. ಇದು ಮತ್ತೊಂದು ಮಾರ್ಗ. ಸಿನಿಮಾ ಬಿಡುಗಡೆಗೆ ಹೊಸ ಜಾಗವೇ ಸೃಷ್ಟಿಯಾಯ್ತು. ಹಾಗೆಂದು ಒಟಿಟಿಯೇ ಇನ್ನು ಮುಂದೆ ಎಲ್ಲವೂ ಎನ್ನಲಾಗುವುದಿಲ್ಲ. ಈಗಿರುವ ಅವಕಾಶಗಳಿಗೆ ಹೊಸ ಸೇರ್ಪಡೆಯಷ್ಟೇ.
ಮನರಂಜನೆ ನಿಲ್ಲುವುದಿಲ್ಲ
ತಂತ್ರಜ್ಞಾನ ಸುಧಾರಣೆಯಾದಂತೆ ನಾವೂ ಬದಲಾಗಬೇಕು. ಬದಲಾವಣೆಯೇ ಜೀವನ. ಕಾಲಕ್ಕ ತಕ್ಕಂತೆ ಎಲ್ಲವೂ ಬದಲಾವಣೆ ಆಗಲೇಬೇಕು, ಆಗುತ್ತದೆ. ಸಿನಿಮಾ ಮಾತ್ರವಲ್ಲ, ಎಲ್ಲ ವಿಭಾಗದಲ್ಲಿಯೂ ಹಣಕಾಸಿನ ಹರಿವು ಕಡಿಮೆ ಇದೆ. ಆರ್ಥಿಕತೆಯಲ್ಲಿ ಹಣ ರೊಟೇಷನ್ ಆಗಿ ಸಹಜ ಸ್ಥಿತಿಗೆ ಬರಲು ಹತ್ತು ವರ್ಷವೇ ಬೇಕಾಗುತ್ತದೆ ಎನ್ನುತ್ತಿದ್ದಾರೆ. ಏಕೆಂದರೆ ಇದು ಇಡೀ ಜಗತ್ತಿನಾದ್ಯಂತ ಆಗಿರುವುದು. ಈ ಹತ್ತು ವರ್ಷ ನಾವು ಹೇಗೆ ಜೀವನ ಮಾಡುತ್ತೇವೆ, ಆರ್ಥಿಕತೆಯನ್ನು ಸುಧಾರಿಸುತ್ತೇವೆ ಎನ್ನುವುದು ಮುಖ್ಯ. ಇಲ್ಲಿ ಮನರಂಜನೆ ನಿಲ್ಲುವುದಿಲ್ಲ. ಸಿನಿಮಾ ರಂಗ ಕೂಡ ಸ್ಥಗಿತಗೊಳ್ಳುವುದಿಲ್ಲ.
ಬಜೆಟ್ ಗಮನದಲ್ಲಿಟ್ಟು ಕೆಲಸ ಮಾಡಬೇಕು
ಸಿನಿಮಾ, ಹಾಸ್ಪಿಟಾಲಿಟಿ, ಆಹಾರ ಉದ್ಯಮ, ಐಟಿ ಎಲ್ಲರಿಗೂ ನಷ್ಟ ಆಗಿದೆ. ಹಾಗೆಂದು ಯಾವ ಉದ್ಯಮವೂ ನಿಲ್ಲುವುದಿಲ್ಲ. ಇಂತಹ ಸನ್ನಿವೇಶದಲ್ಲಿ ನಾವು ಹೇಗೆ ಕೆಲಸ ಮಾಡಬೇಕು, ಯಾವ ರೀತಿಯ ಕಂಟೆಂಟ್ ಮೇಲೆ ವರ್ಕ್ ಮಾಡಬೇಕು. ಆರ್ಥಿಕತೆಯನ್ನು ಗಮನದಲ್ಲಿಟ್ಟುಕೊಂಡು ಹೇಗೆ ಕೆಲಸ ಮಾಡಬೇಕು, ಇಂಡಸ್ಟ್ರಿಗೆ ಪ್ರಾಫಿಟಬಲ್ ಆಗಿ ಹೇಗೆ ಮಾಡಬೇಕು ಎಂದೆಲ್ಲ ಯೋಚಿಸಬೇಕು. ಮುಂಚಿನಂತೆ ವೆಚ್ಚ ಮಾಡಿ ಕೆಲಸ ಮಾಡಲು ಆಗೊಲ್ಲ. ಆದರೆ ಸ್ಮೂತ್ ಆಗಿ ಮಾಡಬೇಕು.
ಮನರಂಜನೆಯನ್ನೂ ಬಯಸುತ್ತಾರೆ
ಜನರು ಒಟಿಟಿಯಲ್ಲಿ ಕಂಟೆಂಟ್ ಆಧಾರಿತ ಚಿತ್ರಗಳನ್ನು ನೋಡಲು ಅವಕಾಶ ಸಿಕ್ಕಿದೆ. ಹಾಗೆಂದು ಅವರು ಯಾವಾಗಲೂ ಕಂಟೆಂಟ್ ಚಿತ್ರವನ್ನೇ ನೋಡಲು ಆಗೊಲ್ಲ. ಹತ್ತು ಸಿನಿಮಾ ನೋಡಿದಾಗ ಹನ್ನೊಂದನೆಯ ಸಿನಿಮಾ ಮನರಂಜನೆ ಬೇಕಾಗುತ್ತದೆ. ಎಲ್ಲ ರೀತಿಯ ಪ್ರೇಕ್ಷಕರೂ ಇರುತ್ತಾರೆ. ಎಲ್ಲ ರೀತಿಯ ಅಗತ್ಯಗಳೂ ಇರುತ್ತದೆ. ನಾವು ಸ್ಮಾರ್ಟ್ ಆಗಿ ಯೋಚಿಸಿ ಸಿನಿಮಾ ಮಾಡಬೇಕು. ಜನರಿಗೆ ಮನರಂಜನೆ ನೀಡುತ್ತಲೇ ಉತ್ತಮ ಕಥೆ ಹಾಗೂ ಕಡಿಮೆ ಬಜೆಟ್ನಲ್ಲಿ ಹೇಗೆ ಕೆಲಸ ಮಾಡಬೇಕು ಎಂಬುದನ್ನು ಯೋಚನೆ ಮಾಡಬೇಕು ಎಂದು ಮುಂದಿನ ಸವಾಲುಗಳನ್ನು ವಿವರಿಸಿದ್ದಾರೆ ಪನ್ನಗಾಭರಣ.