Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕ್ವಾರಂಟೈನ್ ಕಲಿಸಿದ ಪಾಠದ ಬಗ್ಗೆ ಸುಮಲತಾ ಅಂಬರೀಷ್ ಮಾತು
ಕೋವಿಡ್ 19 ಸಮಸ್ಯೆ ಬಂದ ಬಳಿಕ ಸಾಕಷ್ಟು ಸಾಮಾನ್ಯ ಜನ ಜೀವನದಲ್ಲಿ ಸಾಕಷ್ಟು ವ್ಯತ್ಯಾಸಗಳಾಗಿವೆ. ಅದರಲ್ಲಿ ಕೂಡ ಸಿನಿಮಾರಂಗದತ್ತ ಗಮನಿಸಿದರೆ ಒಂದಷ್ಟು ಡಿಪ್ರೆಶನ್ಗೆ ಒಳಗಾದ ಮಂದಿ, ಆತ್ಮಹತ್ಯೆ ಮಾಡಿಕೊಂಡ ಘಟನೆಗಳೂ ಕಾಣುತ್ತವೆ. ಆದರೆ ಈಗಲೂ ಚಿತ್ರೀಕರಣದ ನಿರೀಕ್ಷೆಯಲ್ಲಿರುವ ತಾರೆಯರನ್ನು ಮಾತನಾಡಿಸಿದಾಗ ಅವರೆಲ್ಲ ಲಾಕ್ಡೌನ್ ತಮ್ಮಲ್ಲಿ ಒಂದು ಒಳ್ಳೆಯ ಬದಲಾವಣೆ ತಂದಿದೆ ಎನ್ನುತ್ತಾರೆ. ಉದಾಹರಣೆಗೆ ತಮ್ಮ ತಮ್ಮ ಕೆಲಸಗಳನ್ನು ತಾವೇ ಮಾಡಲು ಕಲಿಸಿದೆ ಎನ್ನುವುದು ಬಹಳಷ್ಟು ಮಂದಿಯ ಮಾತು.
Recommended Video
ಆದರೆ ಸುಮಲತಾ ಇವರೆಲ್ಲರಿಗಿಂತ ವಿಭಿನ್ನ. ಲಾಕ್ಡೌನ್ ಮಾತ್ರವಲ್ಲ; ಕೊರೊನಾ ಸೋಂಕಿತೆಯಾಗಿ ಕ್ವಾರಂಟೈನ್ ಕೂಡ ಅನುಭವಿಸಿದ್ದಾರೆ. ಅಷ್ಟೇ ಅಲ್ಲ; ಇವರು ಈಗ ಚಿತ್ರ ನಟಿ ಎನ್ನುವುದಕ್ಕಿಂತಲೂ ಸಂಸದೆಯಾಗಿ ರಾಜಕೀಯ ಕ್ಷೇತ್ರದಲ್ಲಿ ಬ್ಯುಸಿಯಾಗಿರುವವರು. ಈ ಎಲ್ಲ ವಿಭಿನ್ನ ಸಂದರ್ಭಗಳಲ್ಲಿ ಅವರಿಗೆ ಕ್ವಾರಂಟೈನ್ ದಿನಗಳು ಹೇಗಿದ್ದವು ಎನ್ನುವ ಬಗ್ಗೆ ಅವರನ್ನು 'ಫಿಲ್ಮೀಬೀಟ್' ಮಾತನಾಡಿಸಿದಾಗ ಸಿಕ್ಕ ಉತ್ತರಗಳು ತೀರಾ ಭಿನ್ನವಾಗಿದ್ದವು. ಅದೇನು? ಎರಡು ವಾರಗಳ ಬಳಿಕ ಸುಮಲತಾ ಅವರಲ್ಲಿ ಆಗಿರುವ ಬದಲಾವಣೆಗಳೇನು ಎನ್ನುವ ಕುತೂಹಲಗಳಿಗೆ ಇಲ್ಲಿದೆ ವಿವರವಾದ ಉತ್ತರಗಳು.
ಒಟ್ಟಿಗಿದ್ದರೂ ದೂರ-ದೂರ: ಮಗ ಅಭಿಷೇಕ್ ಹಂಚಿಕೊಂಡ ಸುಮಲತಾ ಚಿತ್ರ
ಕ್ವಾರಂಟೈನ್ ನಿಂದ ಹೊರಬಂದ ಬಳಿಕ ಹೊಸ ಜ್ಞಾನೋದಯ ಆದಂತಿದೆಯೇ?
ಖಂಡಿತವಾಗಿ ನನಗೂ ಇದು ಒಂದು ಜ್ಞಾನೋದಯ ಮಾಡಿದೆ. ಅದು ಏನು ಅಂದರೆ ತೀರ ಸಣ್ಣ ಸಣ್ಣ ವಿಷಯಗಳು ಕೂಡ ಲೈಫಲ್ಲಿ ಎಷ್ಟು ಮುಖ್ಯವಾಗುತ್ತವೆ ಎಂದು ಅರ್ಥ ಮಾಡಿಕೊಂಡೆ. ಕ್ವಾರಂಟೈನ್ ಟೈಮ್ ಮುಗಿಸಿ ಕೋಣೆಯಿಂದ ಹೊರಗೆ ಬಂದಾಗ ನನಗೇನೋ ದೊಡ್ಡ ಸ್ವಾತಂತ್ರ್ಯವೇ ಸಿಕ್ಕ ಹಾಗೆ ಆಯಿತು. ಒಂದು ರೀತಿ ರೆಕ್ಕೆಗಳು ಬಂದ ಹಾಗೆ! ಅಷ್ಟು ದಿನ ಬಾಲ್ಕನಿಯಲ್ಲೇ ಇದ್ದ ನನಗೆ ಎಂದಿನ ಡೈನಿಂಗ್ ಟೇಬಲ್ ಮುಂದೆ ಊಟಕ್ಕೆ ಕುಳಿತುಕೊಳ್ಳಲು ಸಾಧ್ಯವಾಯಿತು ಎನ್ನುವುದೇ ಫ್ರೀಡಂ ಅನಿಸಿತು! ಇಂಥ ಪರಿಸ್ಥಿತಿ ಕೂಡ ಬರುತ್ತೆ ಎಂದು ಯಾವತ್ತೂ ನಾವು ಯಾರೇ ಆಗಲಿ ಚಿಂತೇನೇ ಮಾಡಿರಲಿಲ್ಲ ಅಲ್ವಾ? ಹಾಗಾಗಿ ನಮಗೆ ನಿತ್ಯ ಬದುಕಿನಲ್ಲಿ ಗಮನವೇ ಕೊಡದೆ ಬಳಸಿಕೊಳ್ಳುವ ಹಲವಾರು ಸಂಗತಿಗಳು ಎಷ್ಟೊಂದು ಪ್ರಾಮುಖ್ಯತೆ ಪಡೆದಿವೆ ಎನ್ನುವುದು ಚೆನ್ನಾಗಿ ಅರ್ಥವಾಯಿತು.
ಜನರಿಗೆ ಚಿತ್ರ ಮಂದಿರದಲ್ಲಿನ ಮನರಂಜನೆಗೆ ಯಾವಾಗ ಅವಕಾಶ ಲಭಿಸೀತು?
ಥಿಯೇಟರ್ ತೆರೆಯುವ ವಿಚಾರವನ್ನು ಸರ್ಕಾರದ ತೀರ್ಮಾನಕ್ಕೆ ಬಿಡುವುದೇ ಉತ್ತಮ. ಯಾಕೆಂದರೆ ಇದು ಜೀವನ ಮತ್ತು ಆರೋಗ್ಯ ಕುರಿತಾದ ವಿಚಾರ. ಮಾತ್ರವಲ್ಲ, ಒಂದು ವೇಳೆ ಚಿತ್ರಮಂದಿರ ತೆರೆದೊಡನೆ ಸಮಸ್ಯೆಗಳೆಲ್ಲ ಪರಿಹಾರ ಎಂದು ಹೇಳಲಾಗದು. ಸದ್ಯದ ಪರಿಸ್ಥಿತಿ ನೋಡಿದರೆ ಚಿತ್ರಮಂದಿರ ತೆರೆದರೂ ಜನ ಅದಕ್ಕೆಂದೇ ಕಾದಿರುವ ಹಾಗೆ ಥಿಯೇಟರ್ಗೆ ಬರುತ್ತಾರೆ ಎನ್ನುವುದು ಸಂದೇಹ. ಯಾಕೆಂದರೆ ಮೊದಲು ಆರೋಗ್ಯ, ಬಳಿಕ ಥಿಯೇಟರ್, ಮನರಂಜನೆ ಎನ್ನುವ ಮನಸ್ಥಿತಿ ಅವರಲ್ಲಿ ಉಂಟಾಗಿದೆ. ಇಂಥ ಸಂದರ್ಭದಲ್ಲಿ ಚಿತ್ರ ಮಂದಿರ ತೆರೆದಾಗ ಅದರ ಬಾಡಿಗೆ, ಮತ್ತಿತರ ಖರ್ಚುಗಳೇ ಬರುವುದು ಕಷ್ಟ ಎಂದಾದರೆ ಅದನ್ನು ತಡೆದುಕೊಳ್ಳೋದು ಇನ್ನಷ್ಟು ಕಷ್ಟ. ನನ್ನ ಅನಿಸಿಕೆಯ ಪ್ರಕಾರ ಥಿಯೇಟರ್ ತೆರೆಯಲು ಇನ್ನೂ ಒಂದೆರಡು ತಿಂಗಳು ಕಾಯುವುದೇ ಒಳಿತು.
ಕೊರೊನಾ ಮುಕ್ತವಾದ ಸಂಸದೆ ಸುಮಲತಾ: ಈಗಲೇ ಹೊರಬರುವುದಿಲ್ಲವಂತೆ
ಒಟಿಟಿ ಫ್ಲಾಟ್ಫಾರ್ಮ್ ನಲ್ಲಿ ಸಿನಿಮಾ ಜನಪ್ರಿಯವಾಗುತ್ತಿರುವ ಬಗ್ಗೆ ಏನಂತೀರ?
ಒಟಿಟಿ ಎನ್ನುವುದು ಒಂದು ಒಳ್ಳೆಯ ಆಪ್ಷನ್. ಥಿಯೇಟರ್ ತೆರೆದರೂ ಪ್ರೇಕ್ಷಕರು ಬರುವುದಿಲ್ಲ ಎನ್ನುವಂತಹ ಸಂದರ್ಭದಲ್ಲಿ ಸಿನಿಮಾ ಮಂದಿಗೆ ಸಿಕ್ಕಿರುವ ಒಂದು ಒಳ್ಳೆಯ ವೇದಿಕೆಯಾಗಿ ಕಾಣುತ್ತೇನೆ. ಥಿಯೇಟರ್ ಗೆ ಹೋಗದೇ ಸಿನಿಮಾ ನೋಡುವವರು ಹಿಂದೆಯೂ ಇದ್ದರು. ಈಗ ಇನ್ನಷ್ಟು ಹೆಚ್ಚಾಗಿದ್ದಾರೆ. ಅವರಿಗೆಲ್ಲ ತಾವು ಇರುವಲ್ಲೇ ಚಿತ್ರ ನೋಡಲು ಇದು ಒಂದು ಒಳ್ಳೆಯ ಅವಕಾಶ ಎಂದೇ ಹೇಳಬಹುದು. ಲಾಕ್ಡೌನ್ ಸಮಯದಲ್ಲಿ ನಾನು ಹೊರಗಡೆ ರಾಜಕೀಯ ಕಾರ್ಯಚಟುವಟಿಕೆಗಳಲ್ಲಿ ಆಕ್ಟಿವ್ ಆಗಿಯೇ ಇದ್ದೆ. ಕೊರೊನಾ ಬಂದು ಕ್ವಾರಂಟೈನ್ ಆದಾಗ ಒಂದಷ್ಟು ಬಿಡುವು ಸಿಕ್ಕಿತ್ತು. ಆ ಸಮಯದಲ್ಲಿ ನಾನು ಕೂಡ ಒಟಿಟಿ ಮೂಲಕ ಸಿನಿಮಾ ನೋಡಿದೆ. ಆಗ ನನಗೆ ಇಷ್ಟವಾಗಿದ್ದು `ದಿಯಾ' ಎನ್ನುವ ಕನ್ನಡ ಸಿನಿಮಾ. ನಿಜಕ್ಕೂ ಅದು ಒಂದು ಬ್ರೇವ್ ಅಟೆಂಪ್ಟ್. ಹೊಸಬರೆಲ್ಲ ಸೇರಿ ಒಂದು ಒಳ್ಳೆಯ ಸಿನಿಮಾ ಮಾಡಿದ್ದಾರೆ. ನಟಿಸಿದ ಎಲ್ಲ ಕಲಾವಿದರು ಉತ್ತಮ ಅಭಿನಯ ನೀಡಿದ್ದರು. ಉಳಿದಿರುವುದು ಒಂದಷ್ಟು ಇಂಗ್ಲಿಷ್ ವೆಬ್ ಸೀರೀಸ್ ನೋಡಿದ್ದೇನೆ. ಸದ್ಯದ ಪರಿಸ್ಥಿತಿಯಲ್ಲಿ ಥಿಯೇಟರ್ ಗೆ ಅದೇ ಪರ್ಯಾಯ ಮನರಂಜನೆ ಅನಿಸುತ್ತದೆ.
ಈ ಸಂದರ್ಭದಲ್ಲಿ ಚಿತ್ರೋದ್ಯಮದ ಮಂದಿ ಕೂಡ ಡಿಪ್ರೆಶನ್ ಮತ್ತು ಆತ್ಮಹತ್ಯೆ ಕಡೆಗೆ ಹೊರಳುತ್ತಿರುವುದೇಕೆ?
ಖಿನ್ನತೆ ಎನ್ನುವುದು ಸಿನಿಮಾ ಇಂಡಸ್ಟ್ರಿಯವರಿಗೆ ಮಾತ್ರವೇ ಎದುರಾಗಿಲ್ಲ. ಎಲ್ಲ ಉದ್ಯಮಗಳು ಕೂಡ ಮುಚ್ಚಲ್ಪಡುತ್ತಿವೆ. ಅದು ಕೂಡ ಭಾರತದ ಸಮಸ್ಯೆ ಮಾತ್ರವಲ್ಲ. ವಿಶ್ವದಲ್ಲೇ ಈ ಸಮಸ್ಯೆ ಕಾಡಿದೆ. ನಾವು ಈ ಪರಿಸ್ಥಿತಿಯಿಂದ ಸುಧಾರಿಸುತ್ತೇವೆ ಎನ್ನುವ ಆತ್ಮವಿಶ್ವಾಸವನ್ನು ಯಾವತ್ತೂ ಕಳೆದುಕೊಳ್ಳಬಾರದು. ಆದರೆ ಅದಕ್ಕೆ ಒಂದಷ್ಟು ಸಮಯ ಹಿಡಿಯುತ್ತದೆ. ಈ ಸಮಯದಲ್ಲಿ ನಾವು ಧೈರ್ಯ ಕಳೆದುಕೊಳ್ಳಬಾರದು ಎಂದಷ್ಟೇ ನಾನು ಹೇಳುವುದು. ಏನೇ ಇದ್ದರೂ ಬಂದರೂ ಅದನ್ನು ಸವಾಲಾಗಿ ಸ್ವೀಕರಿಸುವ ಮನಸ್ಥಿತಿ ನಮ್ಮಲ್ಲಿರಬೇಕು. ಒಳ್ಳೆಯ ದಿನಗಳು ಬರಲಿವೆ ಎನ್ನುವ ನಂಬಿಕೆ ನಮ್ಮಲ್ಲೇ ಇರದಿದ್ದರೆ ಬೇರೆಯವರಿಂದ ಏನು ಮಾಡಲು ಸಾಧ್ಯ? ಆತ್ಮಹತ್ಯೆ ಸಾಯುವವರಿಗೆ ಮಾತ್ರ ಕೊನೆ ಆಗಿರಬಹುದು. ಆ ವ್ಯಕ್ತಿಗೆ ಅದುವರೆಗೆ ಬದುಕಿರುವ ಋಣವನ್ನು ತೀರಿಸಬೇಕಾದ ಬಾಧ್ಯತೆ ಇರುತ್ತದೆ. ಸೂಸೈಡ್ ಮಾಡುವವರು ಒಂದನ್ನು ಯೋಚಿಸಲೇಬೇಕು, ಅವರು ಬಿಟ್ಟು ಹೋಗುವ ಫ್ಯಾಮಿಲಿ ಇದೆಯಲ್ಲ? ಅವರ ಇಡೀ ಬದುಕು ಆನಂತರ ಎಷ್ಟೊಂದು ಕಷ್ಟ ಅನುಭವಿಸುತ್ತದೆ ಎನ್ನುವ ಕಲ್ಪನೆ ಅವರಿಗಿದೆಯಾ? ಆ ಜವಾಬ್ದಾರಿಯಿಂದಲಾದರೂ ಕೆಟ್ಟ ನಿರ್ಧಾರಗಳನ್ನು ಮಾಡಲು ಹೋಗಬಾರದು.
ಕೊರೊನಾ ಸೋಂಕಿತರನ್ನ ಅಪರಾಧಿಗಳಂತೆ ಕಾಣುವುದು, ನಿಂದನೆ ಮಾಡೋದು ಸರಿಯಲ್ಲ: ಸುಮಲತಾ ಅಂಬರೀಶ್