Interview: ನಿರ್ದೇಶನ ರಂಗಕ್ಕೆ ಇಳಿದ ಕವಿ ದೊಡ್ಡರಂಗೇಗೌಡ

ಕವಿ, ಕಥೆಗಾರ ಎನ್ನುವುದರೊಂದಿಗೆ ಸಿನಿಮಾರಂಗದ ಜೊತೆಗಾರನಾಗಿ ಗುರುತಿಸಿಕೊಂಡವರು ದೊಡ್ಡರಂಗೇಗೌಡ. ಒಂದು ಕಾಲದಲ್ಲಿ ಭಾವಗೀತೆಗಳ ಮೂಲಕವೇ ಗುರುತಿಸಿಕೊಂಡವರು. ಆಡಿಯೋ ಲೋಕದಲ್ಲಿ ದೊಡ್ಡರಂಗೇಗೌಡರ ಸಾಹಿತ್ಯ ಇದೆ ಎನ್ನುವ ಕಾರಣದಿಂದಲೇ ಸಿಡಿಗಳು ಖರ್ಚಾಗುತ್ತಿದ್ದ ದಿನಗಳಿದ್ದವು. ಅದಕ್ಕೆ ಅವರು ಸಿನಿಮಾದಂಥ ಜನಪ್ರಿಯ ಮಾಧ್ಯಮದಲ್ಲಿ ನೀಡಿದ ಹಾಡುಗಳು ಕೂಡ ಕಾರಣವಾಗಿತ್ತು.

Recommended Video

ತಾಯಿಯನ್ನು ಕಳೆದುಕೊಂಡ ಜೋಗಿ ಪ್ರೇಮ್! | Filmibeat Kannada

'ಪರಸಂಗದ ಗೆಂಡೇತಿಮ್ಮ' ಚಿತ್ರದ 'ತೇರ ಏರೀ ಅಂಬರದಾಗೆ' ಮತ್ತು 'ನೋಟದಾಗೆ ನಗೆಯ ಮೀಟಿ' ಹಾಡುಗಳು, 'ಆಲೆಮನೆ' ಚಿತ್ರದ 'ನಮ್ಮೂರ ಮಂದಾರ ಹೂವೇ' ಹಾಡುಗಳು ಇಂದಿಗೂ ಕನ್ನಡ ಸಿನಿಪ್ರಿಯರ ಚಿತ್ತ ಸೆಳೆಯುತ್ತವೆ.

ಕಾಲೇಜು ಉಪನ್ಯಾಸಕರಾಗಿ ಅವರು ಹಲವಾರು ಶಿಷ್ಯರಿಗೆ ಮಾರ್ಗದರ್ಶಿಯಾದರು. ಕವನಗಳಿಂದ ಹೃದಯ ಸ್ಪರ್ಶಿಯಾದರು. ಸಿನಿಮಾಗಳಿಗೆ ಹಾಡು ಬರೆಯುವ ಜತೆಗೆ ಕಲಾವಿದನಾಗಿಯೂ ಕಾಣಿಸಿಕೊಂಡರು. ಕಿರುತೆರೆ ಧಾರಾವಾಹಿಗಳಿಗೆ ಚಿತ್ರಕತೆ ಬರೆದರು. ಆದರೆ ಇದೀಗ ತಮ್ಮ 75ನೆಯ ವಯಸ್ಸಿನಲ್ಲಿ ಸಿನಿಮಾ ನಿರ್ದೇಶಕರಾಗಿಯೂ ಅವತಾರ ಎತ್ತಿದ ದೊಡ್ಡರಂಗೇಗೌಡರು ನಿರ್ದೇಶಿಸಿದ ಚಿತ್ರದ ಹೆಸರು 'ಹಾರುವ ಹಂಸಗಳು'. ಲಾಕ್ಡೌನ್ ಸಮಯದಲ್ಲೇ ಈ ಚಿತ್ರ ಹೇಗೆ ಪೂರ್ತಿಯಾಯಿತು ಎನ್ನುವುದನ್ನು ಅವರು ಫಿಲ್ಮಿಬೀಟ್ ಜತೆಗೆ ವಿವರವಾಗಿ ಹಂಚಿಕೊಂಡಿದ್ದಾರೆ. ಮುಂದೆ ಓದಿ...

 ಲಾಕ್ಡೌನ್ ಸಮಯದಲ್ಲಿ ಸಿನಿಮಾ ಹೇಗೆ ಮಾಡಿದಿರಿ?

ಲಾಕ್ಡೌನ್ ಸಮಯದಲ್ಲಿ ಸಿನಿಮಾ ಹೇಗೆ ಮಾಡಿದಿರಿ?

ಛೇ..ಛೇ ಎಲ್ಲಾದರೂ ಉಂಟೇ? ನಮ್ಮ ಸಿನಿಮಾ ಕಳೆದ ವರ್ಷಾಂತ್ಯದಲ್ಲೇ ಆರಂಭವಾಗಿತ್ತು. ಇದೊಂದು ಮಕ್ಕಳ ಚಿತ್ರ. ನಾನೇ ಬರೆದ ಕತೆಯನ್ನು ಆಧಾರವಾಗಿರಿಸಿ ಮಾಡಿರುವಂಥ ಚಿತ್ರ. ಚಿತ್ರದಲ್ಲಿ ಮಕ್ಕಳ ಮೊಬೈಲ್ ಹುಚ್ಚಿನ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದೇನೆ. ಮಕ್ಕಳು ಮತ್ತು ಮೊಬೈಲನ್ನು ಕೇಂದ್ರೀಕರಿಸಿದ ಚಿತ್ರವಾದ ಕಾರಣ, ಹೆಚ್ಚು ಲೊಕೇಶನ್‌ಗಳಿಗೆ ಹೋಗಬೇಕಾದ ಅಗತ್ಯ ಇರಲಿಲ್ಲ. ಮದ್ದೂರಿನ ದೊಡ್ಡಬ್ಬಲೂರು ತೋಟ, ಒಂದು ಪ್ರೌಢ ಶಾಲೆ, ಅದರ ಹಿಂದಿನ ಬೆಟ್ಟ, ಗುಡಿಯನ್ನು ಒಳಗೊಂಡ ಪ್ರದೇಶದಲ್ಲಿ ಚಿತ್ರೀಕರಣ ಮಾಡಲಾಗಿದೆ.

ನಗರದ ಮಕ್ಕಳಿಗೆ ಹಳ್ಳಿಯ ಪರಿಸರ ಹೇಗಿರುತ್ತದೆ? ಅಲ್ಲಿ ಹೇಗೆ ಮಡಿಕೆಯನ್ನು ಅಡುಗೆಗೆ ಬಳಸುತ್ತಾರೆ, ಸೌದೆಯಲ್ಲಿಯೇ ಅಡುಗೆ ಮಾಡುತ್ತಾರೆ, ರಾಗಿ ತೊಟ್ಟಿ ಹೇಗೆ ಮಾಡುತ್ತಾರೆ, ಬೆಣ್ಣೆ ಹೇಗೆ ಕಡೆಯುತ್ತಾರೆ ಎನ್ನುವುದನ್ನೆಲ್ಲ ಪ್ರಾಯೋಗಿಕವಾಗಿ ಅರ್ಥ ಮಾಡಿಸುವ ಸನ್ನಿವೇಶವನ್ನು ಇರಿಸಲಾಗಿದೆ. ಚಿತ್ರೀಕರಣ ಒಟ್ಟು ಹದಿನಾಲ್ಕು ದಿನಗಳೊಳಗೆ ಪೂರ್ತಿಯಾಗಿತ್ತು. ಆದರೆ ಪೋಸ್ಟ್ ಪ್ರೊಡಕ್ಷನ್ ಕೆಲಸ ಶುರು ಮಾಡುವ ಮೊದಲು ಲಾಕ್ಡೌನ್ ಘೋಷಣೆಯಾಯಿತು. ಸಿನಿಮಾ ಕೆಲಸ ಮಾಡಲಾಗದ ಕಾರಣ ಬರಹದಲ್ಲೇ ದಿನ ಕಳೆದೆ.

 ಹೊಸದಾಗಿ ಯಾವುದಾದರು ಕೃತಿ ರಚಿಸಿದ್ದೀರಾ?

ಹೊಸದಾಗಿ ಯಾವುದಾದರು ಕೃತಿ ರಚಿಸಿದ್ದೀರಾ?

ಹೌದು. ಲಾಕ್ಡೌನ್ ದಿನಗಳಲ್ಲಿ ಬರೆಯುವುದೇ ಕೆಲಸವಾಗಿತ್ತು. ಇಷ್ಟು ದೀರ್ಘಾವಧಿ ಮನೆಯಲ್ಲಿ ಕಳೆದಿದ್ದೇ ಇಲ್ಲ. ಬೆಳಿಗ್ಗೆ ಜೋಳಿಗೆ ಹಾಕಿಕೊಂಡು ಅಲೆಮಾರಿಯಂತೆ ಮನೆಯಿಂದ ಹೊರಟರೆ ಸಂಜೆ ವಾಪಾಸಾಗುತ್ತಿದ್ದೆ. ಆದರೆ ಈ ದಿನಗಳನ್ನು ಮಾತ್ರ ಮೊಮ್ಮಕ್ಕಳೊಂದಿಗೆ ಮನೆಯಲ್ಲಿ ಕಳೆದಿದ್ದೇನೆ. ಒಳ್ಳೆಯ ಕೃತಿಗಳನ್ನು ಓದಿದೆ. ಮಾತ್ರವಲ್ಲ, ಇಪ್ಪತ್ತಮೂರು ಕಿರುಗತೆಗಳನ್ನು ಬರೆದಿದ್ದೇನೆ. ಹಿಂದೆ ಸುಧಾ, ಮಯೂರ, ಪ್ರಜಾಮತ, ಜನಪ್ರಗತಿ.. ಹೀಗೆ ಹಲವಾರು ಪತ್ರಿಕೆಗಳಲ್ಲಿ ಅರವತ್ತೈದು ಎಪ್ಪತ್ತರಷ್ಟು ಕತೆಗಳು ಪ್ರಕಟವಾಗಿವೆ.

ಕತೆ ಬರೆಯದೆ ಒಂದಷ್ಟು ಸಮಯ ಕಳೆದಿತ್ತು. ಯಾಕೆಂದರೆ ಕವಿತೆ ಬರೆದಷ್ಟು ವೇಗದಲ್ಲಿ ಕತೆ ಬರೆಯಲು ಸಾಧ್ಯವಿಲ್ಲ. ಈಗ ಸಮಯ ಸಿಕ್ಕಿತು. ಈ 23 ಕತೆಗಳಲ್ಲಿ ಐದಾರು ಮಾತ್ರ ದೊಡ್ಡ ಕತೆಗಳಿವೆ. ಉಳಿದವುಗಳೆಲ್ಲ ಕಿರುಗತೆಗಳು. ಅವುಗಳಲ್ಲಿ ಒಂದು ಫ್ಯಾಂಟಸಿ. ಉಳಿದವುಗಳೆಲ್ಲ ನೈಜ ಹಿನ್ನೆಲೆಯವು. ನನ್ನ ಜೀವನಾನುಭವದಿಂದ ಹುಟ್ಟಿಕೊಂಡವು. ಮಾಸ್ತಿ ಶೈಲಿಯಲ್ಲಿ ನೈಜವಾಗಿ ಬರೆಯುವುದೇ ನನಗೆ ಇಷ್ಟ. ಈ ಕತೆಗಳೊಳಗೆ ನನ್ನ ಎಪ್ಪತ್ತೈದು ವರ್ಷಗಳ ಬದುಕಿನಲ್ಲಿ ನಡೆದ ಘಟನೆಗಳಿವೆ. ಸಿನಿಮಾ ಇಂಡಸ್ಟ್ರಿ ಬಗ್ಗೆಯೂ ಮೂರು ನಾಲ್ಕು ಕತೆಗಳಿವೆ. ನನ್ನ ಐದಾರು ಪುಸ್ತಕಗಳನ್ನು ಪ್ರಕಟಿಸಿರುವ `ಸುಗ್ಗಿ' ಪ್ರಕಾಶನದ ಸ್ನೇಹಿತ ಈ ಬಾರಿ ತನ್ನ 'ಗೀತಾಂಜಲಿ'ಯ ಹೆಸರಲ್ಲಿ ಪ್ರಕಟಿಸುತ್ತಿದ್ದಾರೆ. ಈ ಕಥಾ ಸಂಕಲನಕ್ಕೆ `ಮಧ್ಯವರ್ತಿ' ಎಂದು ಹೆಸರಿಟ್ಟಿದ್ದೇನೆ.

 `ಹಾರುವ ಹಂಸಗಳು' ಚಿತ್ರದ ಬಗ್ಗೆ ನೀವು ಹೇಳಬಯಸುವುದೇನು?

`ಹಾರುವ ಹಂಸಗಳು' ಚಿತ್ರದ ಬಗ್ಗೆ ನೀವು ಹೇಳಬಯಸುವುದೇನು?

ಆಗಲೇ ಹೇಳಿದಂತೆ ಇದು ಮಕ್ಕಳ ಜತೆಗೆ ಪೋಷಕರು ಕೂಡ ನೋಡಬೇಕಾದ ಚಿತ್ರ. ಮೊಬೈಲ್ ಆಟಗಳ ಮೂಲಕ ಕೊಲ್ಲುವ, ಬಡಿಯುವ ದೃಶ್ಯಗಳನ್ನು ಕಂಡು ಬೆಳೆಯುವ ಮಕ್ಕಳಿಗೆ ಕಟ್ಟುವ, ಗಿಡ ನೆಡುವ, ಬೆಳೆಸುವ ಖುಷಿಯನ್ನು ತೋರಿಸಬೇಕಿದೆ. ಚಿತ್ರದಲ್ಲಿ ನನ್ನ ಕಲ್ಪನೆಯ ದೃಶ್ಯಗಳಿಗೆ ಛಾಯಾಗ್ರಾಹಕ ಪಿವಿಆರ್ ಸ್ವಾಮಿಯವರು ತಮ್ಮ ರೆಡ್ ಎಪಿಕ್ ಕ್ಯಾಮೆರಾದ ಮೂಲಕ ಜೀವ ನೀಡಿದ್ದಾರೆ. ಸುಮಾರು ಹದಿಮೂರು ವರ್ಷದೊಳಗಿನ ಹತ್ತರಷ್ಟು ಮಕ್ಕಳು ಪಾತ್ರವಾಗಿದ್ದಾರೆ. ಎಲ್ಲ ಮಕ್ಕಳು ಕೂಡ ಚೆನ್ನಾಗಿ ನಟಿಸಿದ್ದಾರೆ. ಅದರಲ್ಲಿಯೂ ಪ್ರಧಾನ ಪಾತ್ರ ನಿರ್ವಹಿಸಿರುವ ಬಾಲನಟ ಓಜಸ್ ತುಂಬ ಒಳ್ಳೆಯ ಗ್ರಹಿಕೆ ಹೊಂದಿರುವ ಕಲಾವಿದ.

ಡುಂಡಿರಾಜ್ ಗೀತೆ ಬಳಕೆ

ಡುಂಡಿರಾಜ್ ಗೀತೆ ಬಳಕೆ

ದೀಪಾಂಕರ್ ಫಿಲ್ಮ್ಸ್ ಬ್ಯಾನರಲ್ಲಿ ವಾಸು ಪ್ರಸಾದ್ ಚಿತ್ರವನ್ನು ನಿರ್ಮಿಸಿದ್ದಾರೆ. ಸೆನ್ಸಾರ್ ಮಂಡಳಿಯ ಅಧ್ಯಕ್ಷ ಶ್ರೀನಿವಾಸಪ್ಪ ಮೆಚ್ಚಿದ್ದಾರೆ. ಈಗಾಗಲೇ ಟ್ರೇಲರ್ ನೋಡಿದ ಸ್ನೇಹಿತರು ಕೂಡ ಮೆಚ್ಚುಗೆ ತಿಳಿಸಿದ್ದಾರೆ. ಇನ್ನು ಬಿಡುಗಡೆಯೊಂದೇ ಉಳಿದಿದೆ. ಇಲ್ಲಿ ನನ್ನ ಗೀತೆಗಳೊಂದಿಗೆ ಕವಿ ಡುಂಡಿರಾಜ್ ಅವರ ಒಂದು ಗೀತೆಯನ್ನು ಕೂಡ ಬಳಸಿದ್ದೇವೆ. ಪ್ರಶಸ್ತಿ ವಿಜೇತ ಗಾಯಕ ರವೀಂದ್ರ ಸೋರಗಾವಿ ಮತ್ತು ಶ್ವೇತಾ ಪ್ರಭು ಹಾಡಿದ್ದಾರೆ. ಸುರೇಶ್ ಮತ್ತು ಉಪಾಸನಾ ಮೋಹನ್ ಸಂಗೀತ ನಿರ್ದೇಶಕರು. ಬಿಡುಗಡೆಯಾದೊಡನೆ ಕುಟುಂಬ ಸಮೇತ ಜನ ಬಂದು ಸಿನಿಮಾ ನೋಡಬೇಕು ಎನ್ನುವುದಷ್ಟೇ ಸದ್ಯದ ನನ್ನ ಆಶಯ.

More from Filmibeat

English summary
Poet, writer Doddarange gowda talks about the lockdown period and his debut Directorial film.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X