Don't Miss!
- News Bullet train: ಬುಲೆಟ್ ರೈಲು ಸೇವೆ ಆರಂಭದ ಬಗ್ಗೆ ಅಶ್ವಿನಿ ವೈಷ್ಣವ್ ಅವರಿಂದ ಮಹತ್ವದ ಮಾಹಿತಿ
- Automobiles ಭರ್ಜರಿ ಮೈಲೇಜ್ನ ಹೈಬ್ರಿಡ್ ಮಾರುತಿ ಸ್ವಿಫ್ಟ್: ಇವಿ ಕಾರುಗಳನ್ನೂ ಹಿಂದಿಕ್ಕಲಿದೆ ಎಂದ ಭವಿಷ್ಯವಾಣಿ!
- Sports IPL 2024: ಮುಂಬೈ ಇಂಡಿಯನ್ಸ್ಗೆ ಭಾರೀ ಹಿನ್ನಡೆ; ಹಾರ್ಟ್ಬ್ರೇಕ್ ಪೋಸ್ಟ್ ಮಾಡಿದ ಸೂರ್ಯಕುಮಾರ್
- Technology Airtel & Noise: ಇನ್ಮುಂದೆ ಏರ್ಟೆಲ್ ಪೇಮೆಂಟ್ ಬ್ಯಾಂಕ್ ಸ್ಮಾರ್ಟ್ವಾಚ್ನದ್ದೇ ಹವಾ! ಟ್ಯಾಪ್-ಟು-ಪೇ ಫೀಚರ್ಸ್..
- Finance ಬಾಬಾ ರಾಮ್ದೇವ್ಗೆ ಖುದ್ದು ಹಾಜರಾಗುವಂತೆ ಖಡಕ್ ಸೂಚನೆ ನೀಡಿದ ಸುಪ್ರೀಂ ಕೋರ್ಟ್
- Lifestyle ಈರುಳ್ಳಿ ಹಾಕದೆ 3 ಪದಾರ್ಥ ಹಾಕಿ 5 ನಿಮಿಷದಲ್ಲಿ ಚಟ್ನಿ ಮಾಡಬಹುದು.! ಇಲ್ಲಿದೆ ರೆಸಿಪಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವಿನೂತನ ಫಾರ್ಮುಲ ಜತೆ ತಯಾರಾಗಿದೆ 'ನಿರ್ಮಲ'
ನಾವು ಇದುವರೆಗೆ ಸಾಕಷ್ಟು ಮಕ್ಕಳ ಸಿನಿಮಾಗಳನ್ನು ಕಂಡಿದ್ದೇವೆ. ಕಿಶನ್ ನಂಥ ಬಾಲನಟನೇ ನಿರ್ದೇಶಿಸಿ ದಾಖಲೆ ಬರೆದ ಚಿತ್ರಕ್ಕೂ ಕನ್ನಡ ಚಿತ್ರರಂಗ ಸಾಕ್ಷಿಯಾಗಿದೆ. ಆದರೆ ಸಂಪೂರ್ಣವಾಗಿ ಮಕ್ಕಳಿಂದಲೇ ಸಿನಿಮಾ ಮಾಡಿಸುವ ವಿನೂತನ ಪ್ರಯತ್ನಕ್ಕೆ ಮುಂದಾದವರು ಉಲ್ಲಾಸ್ ಗೌಡ. ಭಾರತೀಯ ಚಿತ್ರರಂಗದಲ್ಲೇ ಇಂಥದೊಂದು ಮಕ್ಕಳ ಚಿತ್ರ ಇದೇ ಪ್ರಥಮ ಎನ್ನಲಾಗುತ್ತಿದೆ.
ಈ ಕಾರಣದಿಂದ ಇದು ದಾಖಲಾರ್ಹ ಸಿನಿಮಾವಾಗಿ ಮೂಡಿ ಬರುವ ಬಗ್ಗೆ ಯಾರಿಗೂ ಸಂದೇಹವಿಲ್ಲ. ಉಲ್ಲಾಸ್ ಗೌಡರು ವಾಣಿಜ್ಯ ಮಂಡಳಿಯ ಪ್ರಮುಖ ಹುದ್ದೆಗಳಲ್ಲಿ ಗುರುತಿಸಿಕೊಂಡ ಭಾಮಾ ಹರೀಶ್ ಅವರ ಪುತ್ರ ಎನ್ನುವ ವಿಶೇಷದ ಜತೆಯಲ್ಲೇ, ನಿರ್ಮಲ ಚಿತ್ರದ ಕುರಿತಾದ ಸಂಪೂರ್ಣ ಮಾಹಿತಿಯನ್ನು ನಿಮಗೆ ನೀಡುವ ಪ್ರಯತ್ನ ಫಿಲ್ಮೀಬೀಟ್ ನದ್ದು. ಉಲ್ಲಾಸ್ ಗೌಡ ಅವರೊಂದಿಗಿನ ವಿಶೇಷ ಸಂದರ್ಶನ ನಿಮಗಾಗಿ.
ಸಿನಿಮಾ ಕ್ಷೇತ್ರದ ಆಸಕ್ತಿ ತಂದೆಯಿಂದಲೇ ಬಂತೇ?
ಹೌದು, ತಂದೆಗಿಂತ ಮೊದಲು ನಮಗೆ ಸಿನಿಮಾ ಸಂಬಂಧ ಏನೂ ಇರಲಿಲ್ಲ. ಆದರೆ ನನ್ನ ತಾತನಿಗೆ ಊರಲ್ಲಿ ಒಳ್ಳೆಯ ಹೆಸರಿತ್ತು. ಬಿ.ಟಿ ಮರಿಸ್ವಾಮಿ ಎನ್ನುವುದು ಅವರ ಹೆಸರು. ಪೊಲೀಸ್ ಅಧಿಕಾರಿಯಾಗಿದ್ದ ಅವರ ಪುತ್ರನೇ ನಮ್ಮಪ್ಪ ಬಾ.ಮಾ ಹರೀಶ್. ಮೆಜೆಸ್ಟಿಕ್ನಂಥ ಚಿತ್ರಗಳ ನಿರ್ಮಾಪಕರಾಗಿ ಹೆಸರಾದವರು. ಇದೀಗ ನಾನು ಕೂಡ ಚಿತ್ರವೊಂದನ್ನು ನಿರ್ಮಿಸಿದ್ದು ಸದ್ಯದಲ್ಲೇ ಅದರ ಟ್ರೇಲರ್ ಬಿಡುಗಡೆಯಾಗಲಿದೆ.
ಚಿತ್ರರಂಗದಲ್ಲಿ ಇದು ನಿಮ್ಮ ಪ್ರಥಮ ಪ್ರಯತ್ನವೇ?
ಹೌದು, ಚಿಕ್ಕ ವಯಸ್ಸಿನಿಂದ ಅಂದರೆ ಬಹಳ ಬೇಗನೆ ಕನ್ಸ್ಟ್ರಕ್ಟರ್ ಆಗಿ ಗುರುತಿಸಿಕೊಂಡಿದ್ದೆ. ನನಗೆ ತಂದೆಯ ಹಾಗೆ ಒಳ್ಳೆಯ ಸಿನಿಮಾಗಳ ನಿರ್ಮಾಣದಿಂದ ಹೆಸರು ಮಾಡುವ ಆಸಕ್ತಿ ಇತ್ತು. ಇದೀಗ ದಾಖಲೆ ಬರೆಯುವಂಥ ಸಿನಿಮಾವೊಂದರ ನಿರ್ಮಾಪಕರಾಗಿದ್ದೇನೆ. ತಂದೆ ತಂದು ಕೊಟ್ಟಂಥ ಹಣ, ಹೆಸರು ಎಲ್ಲವೂ ಇದ್ದರೂ ಜೀವನದಲ್ಲಿ ಏನಾದರೊಂದು ಸಾಧಿಸಬೇಕು ಎಂಬ ಕನಸು ನನ್ನದಾಗಿತ್ತು. ಇದೀಗ ಶೌಚಾಲಯದ ವಿಚಾರವನ್ನು ಪ್ರಮುಖವಾಗಿರಿಸಿ 'ನಿರ್ಮಲ' ಎನ್ನುವ ಚಿತ್ರವನ್ನು ಆರಂಭಿಸಿದ್ದೇನೆ.
'ನಿರ್ಮಲ' ಚಿತ್ರಕ್ಕಾಗಿ ನೀವು ಮಾಡಿಕೊಂಡಂಥ ತಯಾರಿಗಳೇನು?
ತಂದೆಯವರಿಗೆ ಚಿತ್ರರಂಗದ ನಂಟು ಇರುವ ಕಾರಣ ಹೆಚ್ಚು ತಕೆಕೆಡಿಸುವ ಪರಿಸ್ಥಿತಿ ನನಗೆ ಬರಲಿಲ್ಲ. ಅವರ ಮಾರ್ಗದರ್ಶನದಲ್ಲೇ ‘ಉಲ್ಲಾಸ್ ಸ್ಕೂಲ್ ಆಫ್ ಸಿನಿಮಾ' ಸಂಸ್ಥೆ ಆರಂಭಿಸಿದೆ. ಇದು ಇತರ ಸಿನಿಮಾ ತರಬೇತಿ ಸಂಸ್ಥೆಗಳ ಹಾಗೆ ಇರದೆ ಹೊಸತನವನ್ನು ಹೊಂದಿರಬೇಕು ಎನ್ನುವ ಕಡೆಗೆ ಒಂದು ಪ್ರಾಮಾಣಿಕ ಪ್ರಯತ್ನ ನಡೆಸಿದೆ. ಮಕ್ಕಳಲ್ಲಿ ಓದು, ಪಠ್ಯದ ಆಸಕ್ತಿಯ ಜತೆಗೆ ಅವರಲ್ಲಿ ಅಡಗಿರುವ ಕಲೆಯನ್ನು ಹೇಗೆ ಹೊರಗೆ ತರಬಹುದು ಎನ್ನುವ ವಿಚಾರದಲ್ಲಿ ಪ್ರಯೋಗಕ್ಕೆ ಮುಂದಾದೆ. ಪ್ರಸ್ತುತ ರಾಜಾಜಿನಗರದಲ್ಲಿ ಕಾರ್ಯ ನಿರ್ವಹಿಸುತ್ತಿರುವ 'ಉಲ್ಲಾಸ್ ಸ್ಕೂಲ್ ಆಫ್ ಡ್ರಾಮ' ಸಿನಿಮಾ ಈ ಎಲ್ಲ ಯೋಚನಾ ಲಹರಿಯ ಕಾರ್ಯರೂಪ ಎನ್ನಬಹುದು.
'ಉಲ್ಲಾಸ್ ಸ್ಕೂಲ್ ಆಫ್ ಡ್ರಾಮ'ದ ವಿಶೇಷತೆಗಳೇನು?
ನಟನೆ, ನೃತ್ಯ, ಸಂಗೀತವನ್ನು ನುರಿತ ಶಿಕ್ಷಕರಿಂದ ನೀಡುವ ಮೂಲಕ ಎಳೆಯ ಮಕ್ಕಳ ಪ್ರತಿಭೆಗೆ ಕನ್ನಡಿ ಹಿಡಿದು ಸಣ್ಣ ಸಮಯದಲ್ಲೇ ದೊಡ್ಡ ಹೆಸರು ಮಾಡಿಕೊಂಡಂಥ ಸಂಸ್ಥೆ ಇದು. ಇಲ್ಲಿ ಕಲಿತ ಮಕ್ಕಳು ಝೀ ಕನ್ನಡ ವಾಹಿನಿಯ ‘ಡ್ರಾಮ ಜ್ಯೂನಿಯರ್ಸ್'ನಲ್ಲಿಯೂ ಹೆಸರು ಮಾಡಿರುವುದು ಅದಕ್ಕೊಂದು ಉದಾಹರಣೆ. ಆದರೆ ಈ ಸಂಸ್ಥೆಯ ವಿಶೇಷ ಇಲ್ಲಿಗೇ ಮುಗಿಯುವುದಿಲ್ಲ. ನನ್ನ ನಿರ್ಮಾಣದಲ್ಲಿ ಮಕ್ಕಳೇ ನಿರ್ದೇಶಿಸುವ ಈ ಮಕ್ಕಳ ಚಿತ್ರದಲ್ಲಿ ಇವರೆಲ್ಲ ಪಾಲ್ಗೊಳ್ಳಲಿದ್ದಾರೆ.
ಚಿತ್ರದಲ್ಲಿ ಅಂದಾಜು ಎಷ್ಟು ಮಂದಿ ಮಕ್ಕಳು ಅಭಿನಯಿಸಿದ್ದಾರೆ?
ಸಾಮಾನ್ಯವಾಗಿ ಮಕ್ಕಳ ಚಿತ್ರವೆಂದರೆ ಕಲಾವಿದರಾಗಿ ಮಾತ್ರ ಒಂದೆರಡು ಮಕ್ಕಳು ಕಾಣಿಸುತ್ತಾರೆ. ಅದರ ಹೊರತು ಬೇರೆ ಎಲ್ಲಿಯೂ ಮಕ್ಕಳ ಸಹವಾಸ ಕಾಣಿಸುವುದಿಲ್ಲ. ಬಹುತೇಕ ಮಕ್ಕಳ ಚಿತ್ರಗಳನ್ನು ವಿಮರ್ಶಕರಷ್ಟೇ ನೋಡಿ ಪ್ರಶಸ್ತಿಗೆ ಆಯ್ಕೆ ಮಾಡುವಲ್ಲಿಗೆ ಅದರ ಕತೆ ಮುಗಿದೇ ಬಿಡುತ್ತದೆ. ಆದರೆ ಮಕ್ಕಳಿಂದ ಹಿಡಿದು ದೊಡ್ಡವರ ತನಕ ಆಸಕ್ತಿಯಿಂದ ನೋಡಬಹುದಾದ ವಿಷಯವೊಂದನ್ನು ಎತ್ತಿಕೊಂಡು ಸಂಪೂರ್ಣವಾಗಿ ಮಕ್ಕಳಿಂದಲೇ ಚಿತ್ರ ಮಾಡಿಸುವ ಪ್ರಯತ್ನಕ್ಕೆ ಕೈ ಹಾಕಿದ್ದೇವೆ. ಇಲ್ಲಿ ನಿರ್ಮಾಪಕನಾಗಿ ನಾನು ಮತ್ತು ಛಾಯಾಗ್ರಾಹಕರಾಗಿ ಬಿ. ಪವನ್ ಕುಮಾರ್ ಎನ್ನುವ ಇಬ್ಬರಷ್ಟೇ ಯುವಕರು. ಉಳಿದಂತೆ ಕಲಾವಿದರು, ತಾಂತ್ರಿಕ ವಿಭಾಗ ಎಲ್ಲ ಕಡೆಯೂ ಮಕ್ಕಳೇ ತುಂಬಿದ್ದಾಾರೆ.
'ನಿರ್ಮಲ' ಚಿತ್ರದ ನಿರ್ಮಾಣ ಎಷ್ಟರ ಮಟ್ಟಿಗೆ ಚಾಲೆಂಜಿಂಗ್ ಆಗಿತ್ತು?
ಪೂರ್ತಿಯಾಗಿ ಮಕ್ಕಳೇ ಚಿತ್ರದ ಜವಾಬ್ದಾರಿ ಹೊತ್ತುಕೊಳ್ಳುವುದಕ್ಕಿಂತ ಛಾಯಾಗ್ರಹಣದಲ್ಲಿ ಹಿರಿಯ ನೋಟವೊಂದರ ಅಗತ್ಯವಿದೆ ಎಂದು ಅರಿತುಕೊಂಡು ಅದಕ್ಕಾಗಿ ಹಿರಿಯರನ್ನೇ ನೇಮಿಸಿದ್ದೇನೆ. ಪವನ್ ಕುಮಾರ್ ಈಗಾಗಲೇ ಕನ್ನಡ ಹಾಗೂ ತುಳು ಚಿತ್ರರಂಗದಲ್ಲಿ ಮತ್ತು ಧಾರಾವಾಹಿಗಳಲ್ಲಿ ಕೆಲಸ ಮಾಡಿರುವಂಥ ಅನುಭವ ಹೊಂದಿದ್ದಾರೆ. ಇವರು ಮಕ್ಕಳಿಗೆ ಎಲ್ಲ ವಿಭಾಗದ ಬಗ್ಗೆಯೂ ಮೇಲ್ನೋಟದ ತರಬೇತಿ ನೀಡಿದ್ದಾರೆ.
ನಿಮ್ಮ ಚಿತ್ರತಂಡದ ಬಗ್ಗೆ ವಿವರಿಸಿ
ಮಕ್ಕಳಲ್ಲಿ ಚರ್ಚಿಸಿ ಅವರೆಲ್ಲರ ಸಹಮತದ ತೀರ್ಮಾನದ ಮೂಲಕ ನಿರ್ದೇಶಕರನ್ನು ಆಯ್ಕೆ ಮಾಡಲಾಯಿತು. ಲೋಹಿತ್ ಪಿ. ಹೆಸರಿನ ಹುಡುಗ ಡೈರೆಕ್ಟರ್ ಕ್ಯಾಪ್ ಧರಿಸಿದ್ದು, ಆತ ಕೇಂಬ್ರಿಡ್ಜ್ ಸ್ಕೂಲ್ನ ವಿದ್ಯಾರ್ಥಿ. ಚಿಕ್ಕ ವಯಸ್ಸಲ್ಲೇ ತಂದೆಯನ್ನು ಕಳೆದುಕೊಂಡು ತಾಯಿ ಮಮತೆಯಲ್ಲಿ ಬೆಳೆಯುತ್ತಿರುವ ಲೋಹಿತ್ಗೆ ಸಿನಿಮಾ ಅಂದರೆ ಪಂಚ ಪ್ರಾಣ. ಸಿನಿಮಾದ ತಾಂತ್ರಿಕತೆಯನ್ನು ಕರಗತ ಮಾಡುವ ಆಸೆ. ಅದಕ್ಕೆ ಬೇಕಾದ ತರಬೇತಿಯನ್ನು ಯುವ ನಿರ್ದೇಶಕ ಪ್ರೀತಮ್ ಶೆಟ್ಟಿಯ ಮೂಲಕ ಕಳೆದ ಆರು ತಿಂಗಳಿನಿಂದ ಕೊಡಿಸಲಾಗಿದೆ. ಸರ್ವೋದಯ ಪಿಯು ಕಾಲೇಜ್ ವಿದ್ಯಾರ್ಥಿನಿ ವರ್ಣಶ್ರೀ ಸಂಗೀತ ನಿರ್ದೇಶಕಿ. ಉದಯೋನ್ಮುಖ ಸಂಗೀತ ನಿರ್ದೇಶಕ ಪ್ರವೀಣ್ ಆಲಿವರ್ ಮೂಲಕ ಆಕೆಗೆ ಸಂಗೀತದ ತರಬೇತಿ ನೀಡಲಾಗಿದೆ. ಸಂಗೀತದಲ್ಲಿ ಪ್ರತಿಭಾ ಸಂಪನ್ನೆಯಾದ ಆಕೆ ಈಗಾಗಲೇ ಹಲವಾರು ಸಂಗೀತ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಮನೆ ತುಂಬಾ ಪ್ರಶಸ್ತಿಗಳನ್ನು ಜೋಡಿಸಿಟ್ಟಿದ್ದಾರೆ. 1,101 ಮಂದಿ ಗಾಯಕರು ಒಂದಾಗಿ ಹಾಡಿ ಲಿಮ್ಕಾ ದಾಖಲೆ ಮಾಡಿದಾಗ ಅದರಲ್ಲಿದ್ದ ಪ್ರಮುಖ ಐದು ಹಾಡುಗಾರರಲ್ಲಿ ಈಕೆಯೂ ಒಬ್ಬಳಾಗಿದ್ದಳೆಂಬುದನ್ನು ಸ್ಮರಿಸಬಹುದು.
ಚಿತ್ರದ ಇತರ ತಂತ್ರಜ್ಞರು ಮತ್ತು ಕಲಾವಿದರ ಬಗ್ಗೆ ಹೇಳಿ
ಕೇಂಬ್ರಿಜ್ಶಾಲೆಯಲ್ಲೇ 9ನೇ ತರಗತಿ ವಿದ್ಯಾಾರ್ಥಿಯಾಗಿರುವ ಲೋಹಿತ್ ಚಂದನ್ ಮಕ್ಕಳ ಚಿತ್ರದ ಮೂಲಕ ಸಂಕಲನಕಾರರಾಗಿ ಗುರುತಿಸಿಕೊಳ್ಳಲಿದ್ದಾರೆ. ಆತನಿಗೆ ರಾಜ್ಯ ಪ್ರಶಸ್ತಿ ವಿಜೇತರಾದ ಸಿ.ರವಿಚಂದ್ರನ್ ರವರ ‘ವಿಶ್ಯುವಲ್ ಮ್ಯಾಜಿಕ್ ಸ್ಟುಡಿಯೋ'ದಲ್ಲಿ ಅವರದ್ದೇ ಮಾರ್ಗದರ್ಶನದಲ್ಲಿ ಸಂಕಲನದ ತರಬೇತಿ ನೀಡಲಾಗಿದೆ. ಎಂಟನೇ ತರಗತಿ ವಿದ್ಯಾರ್ಥಿನಿ ಅಂಕಿತಾ ನಾಯ್ಡು ಚಿತ್ರದ ಪೋಸ್ಟರ್ ಡಿಸೈನಿಂಗ್ ಜವಾಬ್ದಾಾರಿ ಹೊತ್ತುಕೊಂಡಿದ್ದು, ಕಳೆದ 3 ತಿಂಗಳಿನಿಂದ ಜೋಗಿ ಮೋಹನ್ ಅವರಿಂದ ಆ ಕುರಿತಾದ ಶಿಕ್ಷಣ ಪಡೆಯುತ್ತಿದ್ದಾರೆ. ಚಿತ್ರ ಮಕ್ಕಳದ್ದಾದರೂ ಕತೆಯ ವಿಚಾರದಲ್ಲಿ ಯಾವುದೇ ಮಕ್ಕಳಾಟ ನಡೆಯಬಾರದು ಎನ್ನುವ ಬಗ್ಗೆ ಎಚ್ಚರಿಕೆ ತೆಗೆದುಕೊಂಡಿದ್ದೆ. ಆ ಕಾರಣದಿಂದಲೇ ವೆಂಕಟಗಿರಿ ಸಹೋದರರ ಮೂಲಕ ಚಿತ್ರಕ್ಕೆ ಕತೆ, ಚಿತ್ರಕತೆ, ಸಂಭಾಷಣೆಯನ್ನು ಬರೆಸಿದ್ದೇನೆ.