Don't Miss!
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಯಾರ ಪ್ರತಿಭೆಯನ್ನು ಯಾರು ಕಿತ್ತುಕೊಳ್ಳಲು ಸಾಧ್ಯವಿಲ್ಲ: ನಟ ಧರ್ಮಣ್ಣ
ಸ್ಯಾಂಡಲ್ ವುಡ್ ನಲ್ಲಿ ಸದ್ಯ ಮಿಂಚುತ್ತಿರುವ ಕಾಮಿಡಿ ಕಲಾವಿದರಲ್ಲಿ ನಟ ಧರ್ಮಣ್ಣ ಸಹ ಒಬ್ಬರು. ರಾಮಾ ರಾಮಾ ರೇ ಸಿನಿಮಾ ಮೂಲಕ ಬೆಳ್ಳಿ ಪರದೆ ಮೇಲೆ ಮಿಂಚಿದ ಧರ್ಮಣ್ಣ ಬಳಿಕ ಬಹುಬೇಡಿಕೆಯ ಕಲಾವಿದನಾಗಿ ಗುರುತಿಸಿಕೊಂಡಿದ್ದಾರೆ.
ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇರುವ ಜೊತೆಗೆ ಸ್ಯಾಂಡಲ್ ವುಡ್ ನ ಸ್ಟಾರ್ ನಟರ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಈ ವರ್ಷ ಡಿ ಬಾಸ್ ದರ್ಶನ್ ಅಭಿನಯ ಬಹುನಿರೀಕ್ಷೆಯ ರಾಬರ್ಟ್ ಸಿನಿಮಾ ರಿಲೀಸ್ ಗೆ ಎದುರು ನೋಡುತ್ತಿದ್ದ ಧರ್ಮಣ್ಣಗೆ ಕೊರೊನಾ ಭಾರಿ ನಿರಾಸೆ ಮೂಡಿಸಿದೆ. ಈ ವರ್ಷ ಹೋದರೇನಂತೆ ಹೊಸ ವರ್ಷ ಮತ್ತಷ್ಟು ಅದ್ಭುತವಾಗಿರಲಿದೆ ಎನ್ನುತ್ತಾರೆ ಧರ್ಮಣ್ಣ.
2021ರಲ್ಲಿ ಉತ್ತಮ ಸಿನಿಮಾಗಳು ಬರುತ್ತೆ, ಮಾಮೂಲಿಗಿಂತನೂ ಚಿತ್ರಮಂದಿರಗಳಲ್ಲಿ ಜನ ಹೆಚ್ಚಾಗಿ ಬರ್ತಾರೆ ಎನ್ನುತ್ತಾರೆ ಧರ್ಮಣ್ಣ. ಧರ್ಮಣ್ಣ ಪಾಲಿಗೆ ಈ ವರ್ಷ ಹೇಗಿತ್ತು, ಯಾವೆಲ್ಲ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ ಎನ್ನುವ ಬಗ್ಗೆ 'ಫಿಲ್ಮಿ ಬೀಟ್ ಕನ್ನಡ'ದ ಜೊತೆ ಮಾತನಾಡಿದ್ದಾರೆ.
ನೀವು ಈಗ ಯಾವೆಲ್ಲ ಸಿನಿಮಾಗಳಲ್ಲಿ ನಟಿಸುತ್ತಿದ್ದೀರಿ?
ಸದ್ಯ ನಾನು ಶುಗರ್ ಲೆಸ್ ಚಿತ್ರೀಕರಣ ಮುಗಿಸಿದ್ದೇನೆ. ಈ ಸಿನಿಮಾ ಪಕ್ಕಾ ಕಾಮಿಡಿ ಎಂಟಟೈನರ್, ಅಧ್ಬುತವಾಗಿ ಮೂಡಿಬಂದಿದೆ. ಇನ್ನು ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ಸಖತ್, ವಸಿಷ್ಠ ಅವರ ದಂತಕಥೆ ಸಿನಿಮಾಗಳಲ್ಲಿ ನಟಿಸುತ್ತಿದ್ದೀನಿ. ಡಿ ಬಾಸ್ ದರ್ಶನ್ ಅವರ ಜೊತೆ ರಾಬರ್ಟ್ ಸಿನಿಮಾ ಮುಗಿಸಿದ್ದೇನೆ, ರಿಲೀಸ್ ಗೆ ಕಾಯುತ್ತಿದ್ದೇನೆ, ಇನ್ಸಪೆಕ್ಟರ್ ವಿಕ್ರಂ ಚಿತ್ರೀಕರಣ ಮುಗಿದಿದೆ ಮತ್ತು ಬಿಗ್ ಬಾಸ್ ಚೈತ್ರಾ ಕೋಟೂರ್ ಅವರಿಗೆ ಜೋಡಿಯಾಗಿ 'ಐ ಯಾಮ್ ಪ್ರೆಗ್ನೆಂಟ್' ಸಿನಿಮಾದಲ್ಲಿ ನಟಿಸಿದ್ದೀನಿ. ಜೊತೆಗೆ ವಿನಯ್ ರಾಜ್ ಕುಮಾರ್ ಅಭಿನಯದ ಗ್ರಾಮಾಯಣ ಸಿನಿಮಾದ ಚಿತ್ರೀಕರಣ ಸ್ವಲ್ಪ ಬಾಕಿ ಇದೆ.
ರಾಮಾ ರಾಮಾ ರೇ ತಂಡದ ಜೊತೆ ಮತ್ತೊಂದು ಸಿನಿಮಾ
ಸದ್ಯ ಸಹಿ ಮಾಡಿರುವ ಸಿನಿಮಾಗಳ ಚಿತ್ರೀಕರಣ ಮುಗಿಯಲಿ ಎಂದು ಕಾಯುತ್ತಿದ್ದೀನಿ. ಈಗಾಗಲೇ ನಾಲ್ಕೈದು ಸಿನಿಮಾಗಳ ಕಥೆ ಕೇಳಿದ್ದೇನೆ, ಈ ಬಗ್ಗೆ ಮಾತುಕತೆ ನಡೆದಿದೆ, ಮುಂದಿನ ವರ್ಷದಿಂದ ಹೊಸ ಸಿನಿಮಾಗಳ ಚಿತ್ರೀಕರಣ ಪ್ರಾರಂಭ ಮಾಡುತ್ತೇನೆ. ರಾಮಾ ರಾಮಾ ರೇ ತಂಡದ ಜೊತೆ ಮತ್ತೊಂದು ಸಿನಿಮಾ ಮಾಡುತ್ತಿದ್ದೀನಿ, ಏಪ್ರಿಲ್ ನಲ್ಲಿ ಸೆಟ್ಟೇರಲಿದೆ.
ಈ ವರ್ಷ ನಿಮ್ಮ ಪಾಲಿಗೆ ಹೇಗಿತ್ತು, ಲಾಕ್ ಡೌನ್ ಹೇಗೆ ಕಳೆದಿರಿ?
ಈ ವರ್ಷದ ಪ್ರಾರಂಭದಲ್ಲಿ ತುಂಬಾ ಚೆನ್ನಾಗಿತ್ತು, ಖುಷಿಖುಷಿಯಾಗಿ ಸಾಗುತ್ತಿತ್ತು. ರಾಬರ್ಟ್ ಸಿನಿಮಾ ರಿಲೀಸ್ ಗೆ ಕಾಯುತ್ತಿದೆ. ಇನ್ಸ್ ಪೆಕ್ಟರ್ ವಿಕ್ರಂನಲ್ಲಿ ನಟಿಸುತ್ತಿದ್ದೆ. ಆದರೆ ಅಷ್ಟೊತ್ತಿಗೆ ಲಾಕ್ ಡೌನ್ ಆಯ್ತು. ಲಾಕ್ ಡೌನ್ ನಲ್ಲಿ ನಾನು ನಮ್ಮೂರು ಕಡೂರಿನಲ್ಲಿದ್ದೆ. ಕುಟುಂಬದ ಜೊತೆ ಸಮಯ ಕಳೆಯಲು ಅವಕಾಶ ಸಿಕ್ತು. ಯಾವಾಗಲು ಸಿನಿಮಾ, ರಂಗಭೂಮಿ ಅಂತ ಬ್ಯುಸಿ ಇದ್ದೆ. ಆದರೆ ಲಾಕ್ ಡೌನ್ ನಿಂದ ಅಪ್ಪ-ಅಮ್ಮ ಮತ್ತು ಕುಟುಂಬದ ಜೊತೆ ಇರಲು ಸಾಧ್ಯವಾಯಿತು. ಕಳೆದು ಹೋಗಿದ್ದ ಫ್ಯಾಮಿಲಿ ಟೈಂ ಮತ್ತೆ ಸಿಕ್ತು.
ಒಟಿಟಿಗಿಂತ ಚಿತ್ರಮಂದಿರನೇ ಉತ್ತಮ ಎನ್ನುವುದು ಅರಿವಾಗಿದೆ
ಲಾಕ್ ಡೌನ್ ನಿಂದ ಸಿನಿಮಾರಂಗ ನಿಂತ ನೀರಾಯ್ತು. ಎಲ್ಲರೂ ಒಟಿಟಿಗೆ ಹೆಚ್ಚು ಪ್ರಮುಖ್ಯತೆ ಸಿಗುತ್ತೆ ಅಂತ ಅಂದುಕೊಂಡಿದ್ದರು. ಆದರೀಗ ಚಿತ್ರಮಂದಿರನೇ ಉತ್ತಮ ಎನ್ನುವುದು ಅರಿವಾಗಿದೆ. ಚಿತ್ರಮಂದಿರದಲ್ಲಿ ಸಿನಿಮಾ ನೋಡಿ ಎಂಜಾಯ್ ಮಾಡಿದ ಹಾಗೆ, ಮೊಬೈಲ್ ನಲ್ಲಿ ನೋಡಿ ಎಂಜಾಯ್ ಮಾಡಲು ಸಾಧ್ಯವಿಲ್ಲ.
ರಾಮಾ ರಾಮ ರೇ ಬಳಿಕ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದೀರಿ, ಸ್ಟಾರ್ ನಟರ ಜೊತೆ ಅಭಿನಯಿಸುತ್ತಿದ್ದೀರಿ, ಏನು ಹೇಳುತ್ತೀರಿ?
2005ರಲ್ಲೇ ಬಣ್ಣದ ಲೋಕಕ್ಕೆ ಕಾಲಿಟ್ಟೆ. ರಂಗಭೂಮಿ, ಧಾರಾವಾಹಿಗಳಲ್ಲಿ ಬ್ಯುಸಿ ಇದ್ದೆ. ಆದರೆ ಒಂದೇ ಕಡೆ ಫೋಕಸ್ ಮಾಡುತ್ತಿದ್ದೆ. ಆದರೆ ರಾಮಾ ರಾಮಾ ರೇ ಸಿನಿಮಾ ಒಟ್ಟಿಗೆ ಎಲ್ಲಾ ಅವಕಾಶಗಳನ್ನು ತಂದುಕೊಡ್ತು. ಅಷ್ಟು ವರ್ಷದ ಶ್ರಮ ಆ ಒಂದು ಸಿನಿಮಾ ಮೂಲಕ ಫಲ ಸಿಕ್ತು. ತುಂಬಾ ಖುಷಿ ಆಗುತ್ತೆ.
ದರ್ಶನ್ ಜೊತೆ ನಟಿಸಿದ ಅನುಭವ ಹೇಗಿತ್ತು?
ನಿಜವಾಗಲು ಅವರು ಡಿ ಬಾಸ್. ಅವರ ಜೊತೆ ನಟಿಸುವುದೇ ಒಂದು ಅದೃಷ್ಟ. ಅವರಿಂದ ತುಂಬ ಕಲಿತಿದ್ದೇನೆ. ದೊಡ್ಡ ಕಲಾವಿದರ ಜೊತೆ ನಟಿಸುವುದೇ ಒಂದು ಖುಷಿಯ ವಿಚಾರ. ದರ್ಶನ್ ಸರ್ ಜೊತೆ ಮೊದಲ ದೃಶ್ಯ ಮಾಡುವಾಗ ತುಂಬಾ ಭಯ ಆಗಿತ್ತು. ಎಲ್ಲರೂ ಧೈರ್ಯ ತುಂಬಿದ್ರು. ಆದರೆ ಭಯ ಇರಬೇಕು. ಭಯ ಒಳ್ಳೆಯ ದಾರಿಯ ಕಡೆ ಕರೆದುಕೊಂಡು ಹೋಗುತ್ತೆ ಎನ್ನುವುದನ್ನು ರಂಗಭೂಮಿ ಕಲಿಸಿದೆ.
ಕಾಮಿಡಿ ಕಲಾವಿದರು ಹೆಚ್ಚಾಗುತ್ತಿದ್ದಾರೆ, ಪೈಪೋಟಿ ಜಾಸ್ತಿ ಆಗ್ತಿದೆ ಅನಿಸುತ್ತಿದೆಯಾ?
ಪೈಪೋಟಿ ಏನು ಕಾಣಿಸುತ್ತಿಲ್ಲ. ಯಾರ ಅನ್ನವನ್ನು ಯಾರು ಕಿತ್ತುಕೊಳ್ಳಲು ಸಾಧ್ಯವಿಲ್ಲ. ಹಾಗೆ ಯಾರ ಪ್ರತಿಭೆಯನ್ನು ಯಾರು ಕಿತ್ತುಕೊಳ್ಳಲು ಸಾಧ್ಯವಿಲ್ಲ. ಆದರೆ ಶ್ರಮ, ಶ್ರದ್ಧೆ, ತಾಳ್ಮೆ ಬೇಕು. ಎಲ್ಲರೂ ಅಣ್ತಮ್ಮನ ಹಾಗೆ ಇದ್ದೀವಿ. ಎಲ್ಲರೂ ಒಟ್ಟಿಗೆ ಸೇರಿದಾಗ ಸಿನಿಮಾಗಳ ಬಗ್ಗೆ ಹೆಚ್ಚಾಗಿ ಮಾತನಾಡುತ್ತೇವೆ. ಹೀಗೆ ಇರಲಿ ಎಂದು ಹೇಳುತ್ತೇೆನೆ.
ಹಳ್ಳಿಯಲ್ಲಿ ಹೆಚ್ಚು ಕಾಲ ಕಳೆಯುತ್ತೀರಿ, ಹಳ್ಳಿ ಸೆಳೆತ ಜಾಸ್ತಿ ಯಾಕೆ?
ಶೂಟಿಂಗ್ ಇಲ್ಲ ಅಂದರೆ ಊರಿಗೆ ಹೋಗುತ್ತೇನೆ. ಹಳ್ಳಿ ಸೊಗಡು ತುಂಬಾ ಇಷ್ಟ. ಸ್ನೇಹಿತರು, ಹಳ್ಳಿ ವಾತಾವರಣ ಎಲ್ಲಾ ತುಂಬಾ ಇಷ್ಟ ಆಗುತ್ತೆ. ಧರ್ಮಣ್ಣ ಗ್ರಾಮೀಣ ಭಾಷೆ ಚೆನ್ನಾಗಿ ಮಾತನಾಡುತ್ತಾರೆ ಅಂದರೆ ಅದಕ್ಕೆ ನಮ್ಮೂರೇ ಕಾರಣ.
ನಿಮ್ಮ ಕುಟುಂಬದ ಬಗ್ಗೆ ಹೇಳಿ?
ನಾವು ಕೃಷಿಕರು. ಹೂವಿನ ವ್ಯಾಪಾರಿಗಳು. ನಮ್ಮದು ಅವಿಭಕ್ತ ಕುಟುಂಬ. ಮನೆಯಲ್ಲಿ ಅಪ್ಪ-ಅಮ್ಮ, ಅಣ್ಣ-ಅತ್ತಿಗೆ ಮತ್ತು ಅವರ ಮಕ್ಕಳು ಇದ್ದಾರೆ. ಅಣ್ಣನೆ ನನಗೆ ಬೆನ್ನೆಲುಬು, ಅಣ್ಣ ನನಗೆ ಎನರಡನೇ ತಂದೆ. ಇನ್ನು ನನ್ನ ಪತ್ನಿ ಕಾವ್ಯ ಮತ್ತು ನನಗೆ ಇಬ್ಬರು ಮಕ್ಕಳಿದ್ದಾರೆ. ಮೊದಲ ಮಗ ಶಶಾಂಕ್ ಮತ್ತು ಎರಡನೆಯವಳು ಮಗಳು. ಮಗಳು ಜನಿಸಿ 20 ದಿನಗಳಾಗಿದೆ ಅಷ್ಟೆ. 2014ರಲ್ಲಿ ನಾನು ಮದುವೆಯಾಗಿದ್ದು. ಎರಡು ಲವ್ ಬ್ರೇಕ್ ಅಪ್ ಆದಮೇಲೆ, ನಮ್ಮ ಮನೆಯಲ್ಲಿ ಹೀಗೆ ಬಿಟ್ಟರೆ ಆಗಲ್ಲ ಎಂದು ಮಾವನ ಮಗಳ ಜೊತೆ ಮದುವೆ ಮಾಡಿಸಿದರು. ಸಂತೋಷವಾಗಿದ್ದೀನಿ.
ನೀವು ರಂಗಭೂಮಿಯಿಂದ ಬಂದವರು, ಈಗಲೂ ರಂಗಭೂಮಿಯಲ್ಲಿ ತೊಡಗಿಕೊಂಡಿದ್ದೀರಾ?
ನಮ್ಮನೆಯನ್ನು ಬಿಡಲು ಸಾಧ್ಯವೇ ಇಲ್ಲ. ನಾಟಕವನ್ನು ಯಾವತ್ತು ಬಿಡಲ್ಲ. ಇದನ್ನು ಬದಲಾಯಿಸಲು ಸಾಧ್ಯವಿಲ್ಲ. ನನ್ನ ಮೊದಲ ಆದ್ಯತೆ ನಾಟಕ. ಈಗಲು ನಾಟಕ ಮಾಡಲು ಹೋಗುತ್ತೇನೆ ನಾನು.
ಅನೇಕ ಕಾಮಿಡಿ ಕಲಾವಿದರು ಹೀರೋ ಆಗಿ ಕಾಣಿಸಿಕೊಳ್ಳುತ್ತಾರೆ, ನಿಮಗೂ ಆ ಕನಸಿದೆಯಾ?
ರಾಮ ರಾಮಾ ರೇ ಸಿನಿಮಾ ಬಳಿಕ 5 -6 ಕಥೆಗಳು ಬಂದಿತ್ತು. ಆದರೆ ನಾನು ಹೀರೋ ಬ್ರಾಂಡ್ ಅಲ್ಲ. ಮಾಸ್, ಕ್ಲಾಸ್ ಹೀರೋ ಎಲ್ಲಾ ನನಗೆ ಸೂಟ್ ಆಲ್ಲ. ಪಾತ್ರ ಚೆನ್ನಾಗಿ ಮಾಡುತ್ತಾನೆ. ಫ್ಯಾಮಿಲಿ ಡ್ರಾಮ ಸಿನಿಮಾಗಳು ತುಂಬಾ ಇಷ್ಟ ಆಗುತ್ತೆ. ಈ ಹಿಂದೆ ಅನಂತ್ ನಾಗ್ ಸರ್, ಶಶಿ ಕುಮಾರ್ ಸರ್ ಮಾಡಿದ ಕೆಲವು ಕಾಮಿಡಿ ಎಂಟಟೈನರ್ ಸಿನಿಮಾದ ಹಾಗೆ ಇದ್ದರೆ ಖಂಡಿತ ಮಾಡುತ್ತೇನೆ. ಪಾತ್ರನೇ ಹೀರೋ ಆಗಿದ್ದರೆ ಮಾಡುತ್ತೇನೆ.