ಚಿತ್ರರಂಗದ ಆ ದಿನಗಳು ಮತ್ತೆ ಬರಲಿವೆ: ರಿಷಬ್ ಶೆಟ್ಟಿ ಭರವಸೆ
ಲಾಕ್ ಡೌನ್ ಬಳಿಕ ಹಲವಾರು ಚಿತ್ರಮಂದಿರಗಳು ಶಾಶ್ವತವಾಗಿ ಸ್ಥಗಿತಗೊಂಡಿವೆ. ಶೂಟಿಂಗ್ ಶುರುವಾದರೂ ಥಿಯೇಟರ್ ತುಂಬಿಸುವ ರೀತಿ ಹೇಗೆ ಎನ್ನುವ ಬಗ್ಗೆ ಎಲ್ಲರಲ್ಲಿಯೂ ಗೊಂದಲಗಳಿವೆ. ಇದರ ಜತೆಗೆ ನೇರವಾಗಿ ಒಟಿಟಿ ಮಾಧ್ಯಮಗಳಲ್ಲಿಯೂ ಸಿನಿಮಾ ಬಿಡುಗಡೆಯಾಗುತ್ತಿವೆ. ಇವೆಲ್ಲವೂ ಥಿಯೇಟರ್ ಸಂಸ್ಕೃತಿಯನ್ನೇ ಇಲ್ಲದಂತೆ ಮಾಡಬಹುದು ಎನ್ನುವ ಸಂದೇಹ ಮೂಡುತ್ತಿದೆ. ಹೀಗಾದರೆ ಮರಳಿ ಚಿತ್ರಮಂದಿರಗಳತ್ತ ಪ್ರೇಕ್ಷಕರನ್ನು ಸೆಳೆಯುವ ವಿಧಾನವೇನು ಎನ್ನುವುದು ಯಕ್ಷಪ್ರಶ್ನೆಯಾಗಿದೆ.
ಈ ಬಗ್ಗೆ ಕನ್ನಡದ ಜನಪ್ರಿಯ ಯುವನಟ, ನಿರ್ದೇಶಕ ಮತ್ತು ಸ್ವತಃ ನಿರ್ಮಾಪಕರೂ ಆಗಿರುವ ರಿಷಬ್ ಶೆಟ್ಟಿ 'ಫಿಲ್ಮಿ ಬೀಟ್' ಜತೆಗೆ ಸಂದರ್ಶನದಲ್ಲಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ಜತೆಗೆ ಒಂದಷ್ಟು ಹೊಸ ವಿಚಾರಗಳನ್ನು ತಿಳಿಸಿದ್ದಾರೆ. ಅವರ ಪ್ರಕಾರ ಚಿತ್ರಮಂದಿರಗಳು ಸದ್ಯದಲ್ಲೇ ಮೊದಲಿನ ಹಾಗೆ ಜನಾಕರ್ಷಣೆಯನ್ನು ಪಡೆಯಲಿವೆ. ಅದಕ್ಕಾಗಿ ತಾವು ಸೇರಿದಂತೆ ಚಿತ್ರೋದ್ಯಮ ಮಾಡಬೇಕಾಗಿರುವುದೇನು ಎನ್ನುವುದನ್ನು ಅವರು ಸ್ಪಷ್ಟವಾಗಿ ವಿವರಿಸಿದ್ದಾರೆ. ಅವರ ಅಭಿಪ್ರಾಯಗಳೇನು? ಮುಂದೆ ಓದಿ...

ಪ್ರತಿಯೊಬ್ಬರಿಗೂ `ಲಾಕ್ಡೌನ್' ಒಂದು ಹೊಸ ಅನುಭವ ನೀಡಿದೆಯಲ್ಲ?
ಪ್ರತಿಯೊಬ್ಬರೂ ಒಂದೇ ಬಾರಿಗೆ ಮನೆ ಸೇರಿಕೊಳ್ಳುವಂತಾಯಿತು ಎನ್ನುವುದನ್ನು ಬಿಟ್ಟರೆ, ಮನೆಯೊಳಗಿರುವುದು ಹೊಸದೇನೂ ಅಲ್ಲ. ಎಲ್ಲರ ಜೀವನದಲ್ಲಿಯೂ ಒಂದಲ್ಲ ಒಂದು ಸಮಯದಲ್ಲಿ ಇದಕ್ಕಿಂತ ಹೆಚ್ಚು ದಿನಗಳು ಕೆಲಸವಿಲ್ಲದೆ ಅಲೆದಾಡಿದ, ಮನೆಯಲ್ಲೇ ಕುಳಿತ ಸಂದರ್ಭಗಳಿರುತ್ತವೆ. ತುಂಬ ಮಂದಿ ಅದನ್ನು ಮರೆತಿದ್ದಾರೆ. ನನಗಂತೂ ಖರ್ಚಿಗೆ ಕಾಸಿಲ್ಲದೆ ಮನೆಯಲ್ಲಿ ಕುಳಿತ ಇಂಥ ಸಂದರ್ಭ ಹಿಂದೆಯೂ ಇತ್ತು. ಹಾಗಾಗಿ ನನಗೆ ಇದು ತುಂಬ ಕಷ್ಟ ಎಂದೇನೂ ಅನಿಸಲಿಲ್ಲ. ಮತ್ತೆ ನಮ್ಮ ಬ್ಯುಸಿ ಜೀವನಕ್ಕೆ ಮರಳಲಿದ್ದೇವೆ ಎನ್ನುವ ಭರವಸೆಯೊಂದಿಗೆ ಮನೆಯಲ್ಲಿ ಕಳೆಯಲು ಅವಕಾಶ ಸಿಗುವುದು ಅಪರೂಪ.
"ಸದ್ಯಕ್ಕೆ ಅಂಥ ಅವಕಾಶಗಳಿಲ್ಲ ಮನೆಯಲ್ಲೇ ಇರಬೇಕು" ಎನ್ನುವಾಗ ಹೆಚ್ಚು ಚಿಂತಿಸಲು ಹೋಗದೆ, ಇರುವ ಅವಕಾಶದಲ್ಲಿ ಖುಷಿಯಾಗಿರುವ ಜಾಯಮಾನ ನನ್ನದು. ಎಷ್ಟೇ ಕೆಲಸ ಇದ್ದರೂ ಮನೆಗೆ ಒಂದಷ್ಟು ಟೈಮ್ ಕೊಡಬೇಕು ಎನ್ನುವ ಕಾನ್ಸೆಪ್ಟ್ ಇರಿಸದಷ್ಟು ವರ್ಕೋಹಾಲಿಕ್ ಆಗಿದ್ದ ನನಗೆ, ಮನೆಯವರ ಜತೆಗಿರಲು ದೇವರು ಕೊಟ್ಟ ಅವಕಾಶ ಇದು ಎಂದು ನಾನು ಅಂದುಕೊಂಡಿದ್ದೇನೆ. ನಾನು ಕುಂದಾಪುರದ ಹಳ್ಳಿ ಮನೆಯಲ್ಲಿದ್ದೆ. ಎರಡು ವಾರಗಳ ಹಿಂದೆ ಬೆಂಗಳೂರಿಗೆ ಮರಳಿದ್ದೇನೆ.

ಚಿತ್ರಮಂದಿರಗಳಿಗಿಂತ ಒಟಿಟಿ ಪ್ಲಾಟ್ಫಾರ್ಮ್ಗೆ ಡಿಮ್ಯಾಂಡ್ ಹೆಚ್ಚಬಹುದೇ?
ಖಂಡಿತವಾಗಿಯೂ ಇಲ್ಲ! ನನಗಂತೂ ಒಟಿಟಿಗಾಗಿ ಸಿನಿಮಾ ಮಾಡುವ ಬಗ್ಗೆ ಯಾವುದೇ ಆಸಕ್ತಿ ಇಲ್ಲ. ಥಿಯೇಟರ್ ಎನ್ನುವುದು 'ಎಲ್ಲ ಮನರಂಜನೆಗಳ ಅಪ್ಪ' ಎನ್ನಬಹುದು! ನಿರ್ಮಾಪಕನಾಗಿ ಒಟಿಟಿ ಒಂದು ಒಳ್ಳೆಯ ಪ್ಲಾಟ್ಫಾರ್ಮ್ ಎಂದು ಒಪ್ಪಬಹುದೇ ಹೊರತು ಅದು ಥಿಯೇಟರ್ಗೆ ಸ್ಪರ್ಧಿಯೇ ಅಲ್ಲ. ಲಾಕ್ಡೌನ್ ಸಂದರ್ಭದಲ್ಲಿ ಜನ ಅಮೆಜಾನ್ ಪ್ರೈಮ್, ನೆಟ್ ಫ್ಲಿಕ್ಸ್ ನಲ್ಲಿ ಅನಿವಾರ್ಯವಾಗಿ ಸಿನಿಮಾ ನೋಡಿರಬಹುದು. ಆದರೆ ಅವರಿಗೆ ಚಿತ್ರ ಇಷ್ಟ ಆದಾಗ ಇದನ್ನು ಥಿಯೇಟರಲ್ಲಿಯೇ ನೋಡಬೇಕಿತ್ತು ಎಂದು ಅಂದುಕೊಳ್ಳುತ್ತಾರೆಯೇ ವಿನಾ ಅದಕ್ಕೆ ಅಭ್ಯಾಸವಾಗಲಾರರು. ಮಾತ್ರವಲ್ಲ, ಹೊಸ ನಿರ್ಮಾಪಕರಿಗೆ ಒಟಿಟಿ ಪ್ಲಾಟ್ಫಾರ್ಮ್ ಸಂಪರ್ಕ ಇಲ್ಲ. ಹಳೆಯ ನಿರ್ಮಾಪಕರಿಗೆ ಬರೇ ಒಟಿಟಿ ಪ್ಲಾಟ್ಫಾರ್ಮ್ ಸಾಲಲ್ಲ. ಅವರು ಯಾವಾಗ ತಮ್ಮ ಚಿತ್ರವನ್ನು ಥಿಯೇಟರ್ಗೆ ತರುವುದು ಎನ್ನುವ ಚಿಂತೆಯಲ್ಲಿದ್ದಾರೆ.
ಮುಂದೆ ಒಂದಷ್ಟು ಕಾಲ ಸಿನಿಮಾಗಳ ನಿರ್ಮಾಣ ಸಂಖ್ಯೆ ಕಡಿಮೆಯಾಗಬಹುದು. ಸಿನಿಮಾ ನಿರ್ಮಾಣವನ್ನೇ ಉದ್ಯೋಗ ಮಾಡಿಕೊಂಡವರಿಗಷ್ಟೇ ಸದ್ಯಕ್ಕೆ ಇಲ್ಲಿ ಏಗಲು ಸಾಧ್ಯ. ಸಣ್ಣ ಬಜೆಟ್ಟಲ್ಲಿ ಒಂದು ಚಿತ್ರ ಮಾಡಿ ನೋಡುವ ಎನ್ನುವ ಹೊಸಬರಿಗೆ ಪ್ರಯೋಗ ಮಾಡಿ ನೋಡಲು ಕಷ್ಟ ಇದೆ. ಹಾಗಾಗಿ ಚಿತ್ರ ನಿರ್ಮಾಣದ ಸಂಖ್ಯೆ ಕುಸಿಯಬಹುದೇ ಹೊರತು, ಥಿಯೇಟರ್ಗೆ ಬರುವ ಸಿನಿಮಾಗಳಿಗೆ ಕೊರತೆ ಇರದು.

ಚಿತ್ರೋದ್ಯಮಕ್ಕೆ ಎದುರಾಗಿರುವ ಸಮಸ್ಯೆಗಳಿಂದ ಮುಕ್ತವಾಗುವುದು ಹೇಗೆ?
ಸಮಸ್ಯೆ ಚಿತ್ರೋದ್ಯಮಕ್ಕೆ ಮಾತ್ರವಲ್ಲ; ಇಡೀ ವಿಶ್ವಕ್ಕೆ ಆಗಿದೆ. ಹಾಗಾಗಿ ಇದನ್ನು ಪರಿಹರಿಸಿಕೊಳ್ಳುವುದು ಎಲ್ಲರಂತೆ ಸಿನಿಮಾರಂಗದ ಜವಾಬ್ದಾರಿಯೂ ಹೌದು. ಅವರವರ ಉದ್ಯಮಗಳು ಎಚ್ಚೆತ್ತುಕೊಳ್ಳುವ ಹೊತ್ತಿಗೆ ಸರಿಯಾಗಿ ನಾವು ಕೂಡ ತಯಾರಾಗಿರಬೇಕು. ಪ್ರಾಕೃತಿಕ ದುರಂತದಲ್ಲಿ ಸುನಾಮಿಯಂಥ ಸಮಸ್ಯೆಯನ್ನು ಕಂಡವರು ನಾವು. ಅದರಲ್ಲಿ ಮನೆ, ಮಠ, ಊರನ್ನೇ ಕಳೆದುಕೊಂಡವರು ಕೂಡ ಮತ್ತೆ ಬದುಕು ಕಟ್ಟಿದ್ದಾರೆ. ನಮಗೆ ದೇವರು ಒಂದು ಒಳ್ಳೆಯ ಕಾಲಾವಕಾಶ ಮಾತ್ರ ಕೊಟ್ಟಿದ್ದಾರೆ. ಅದನ್ನು ಸದುಪಯೋಗ ಪಡಿಸಿಕೊಳ್ಳುವುದು ಹೇಗೆ ಎನ್ನುವುದು ನಮ್ಮ ಕೈಯ್ಯಲ್ಲೇ ಇದೆ.

ಶ್ರೇಷ್ಠ ಚಿತ್ರಗಳನ್ನು ನೀಡಬೇಕು
ನಾನಂತೂ ಸಮಸ್ಯೆಗಳಿಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದಕ್ಕಿಂತ ನಮ್ಮ ಕೆಲಸದಲ್ಲಿ ಪ್ರಾಮಾಣಿಕವಾಗಿರುತ್ತೇನೆ. ನಮ್ಮ ಪ್ರೇಕ್ಷಕರು ಈಗಾಗಲೇ ಮನೆಯಲ್ಲಿದ್ದುಕೊಂಡು ಎಲ್ಲ ಮಾದರಿಯ ಚಿತ್ರಗಳನ್ನು ನೋಡಿರುತ್ತಾರೆ. ಅಂಥವರನ್ನು ಮತ್ತೆ ಥಿಯೇಟರ್ಗೆ ಕರೆದು ತರಲು ಆದಷ್ಟು ಶ್ರೇಷ್ಠ ಚಿತ್ರವನ್ನಂತೂ ನೀಡಲೇಬೇಕು. ನಾವು ಹೊಸ ಕಂಟೆಂಟ್ಗಳ ಬಗ್ಗೆ ಹೊಸದಾಗಿ ಶುರುವಿನಿಂದ ಥಿಂಕ್ ಮಾಡಬೇಕಾಗಿದೆ.


Click it and Unblock the Notifications











