Don't Miss!
- News ಕೋವಿಡ್ ಸಮಯದಲ್ಲಿ ನಾನು ತಪ್ಪು ಮಾಡಿದ್ದೇನೆಂಬುದು ಅಪಪ್ರಚಾರ:ಕೆ ಸುಧಾಕರ್
- Sports ರೋಹಿತ್ vs ಹಾರ್ದಿಕ್: ಸತತ ಸೋಲಿನ ನಡುವೆಯೇ ಮುಂಬೈ ಇಂಡಿಯನ್ಸ್ ಇಬ್ಭಾಗ!?
- Lifestyle ಕಂಡ ಕಂಡಲ್ಲಿ ಏಕೆ ಉಗುಳಬಾರದು ಗೊತ್ತಾ? ಈ ವಿಡಿಯೋ ನೋಡಿ..!
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
Interview: ಅಣ್ಣನ ಹಾದಿಯಲ್ಲಿ ತಮ್ಮ: ನಿರ್ದೇಶಕನಾಗುವ ನಿರೀಕ್ಷೆಯಲ್ಲಿ ನಿರೂಪ್ ಭಂಡಾರಿ
ನಿರೂಪ್ ಮತ್ತು ಅನೂಪ್ ಎನ್ನುವ ಭಂಡಾರಿ ಸಹೋದರರಲ್ಲಿ ನಿರ್ದೇಶಕ ಯಾರು, ನಾಯಕ ಯಾರು ಎನ್ನುವ ಗೊಂದಲ ಇಂದಿಗೂ ಕೆಲವರಿಗೆ ಇದೆ! ಅದಕ್ಕೆ ಕಾರಣ ಅವರಿಬ್ಬರ ಹೆಸರಿನ ಹೋಲಿಕೆ, ಮುಖ ಛಾಯೆಯಲ್ಲಿನ ಹೋಲಿಕೆ ಮತ್ತು ನಿರ್ದೇಶಕ ಅನೂಪ್ ಭಂಡಾರಿಯವರು ಕೂಡ ನಟಿಸಿದ್ದಾರೆ ಎನ್ನುವುದೇ ಆಗಿದೆ.
ನಿರೂಪ್ ಈಗಾಗಲೇ ನಾಯಕರಾಗಿ 'ರಂಗಿತರಂಗ', 'ರಾಜರಥ', 'ಆದಿಲಕ್ಷ್ಮಿ ಪುರಾಣ' ಚಿತ್ರಗಳ ಮೂಲಕ ಗುರುತಿಸಿಕೊಂಡವರು. ರಂಗಿತರಂಗ'ದ ನಿರ್ದೇಶಕ ಅನೂಪ್ ಭಂಡಾರಿ ಪ್ರಸ್ತುತ ಸುದೀಪ್ ನಟನೆಯ 'ಫ್ಯಾಂಟಮ್' ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.
ಸುದೀಪ್ 'ಫ್ಯಾಂಟಮ್' ಸಿನಿಮಾಗೆ ಎಂಟ್ರಿ ಕೊಟ್ಟ ಸ್ಯಾಂಡಲ್ ವುಡ್ ನ ಖ್ಯಾತ ನಟ
ಅನೂಪ್ ಕಿರಿಯ ಸಹೋದರ ನಿರೂಪ್ ಈ ಲಾಕ್ಡೌನ್ ಅವಧಿಯಲ್ಲಿ ಕಥೆಯೊಂದನ್ನು ಬರೆದಿದ್ದಾರೆ. ಅದು ಸಿನಿಮಾ ಮಾಡಲೆಂದೇ ಬರೆದ ಕಥೆ. ಮಾತ್ರವಲ್ಲ, ಆ ಕಥೆಯಲ್ಲಿ ತಮ್ಮನ್ನೇ ನಾಯಕನಾಗಿ ಕಲ್ಪಿಸಿಕೊಂಡು ಬರೆದಿದ್ದಾರೆ ನಿರೂಪ್. ತಮ್ಮ ದೃಶ್ಯಕಲ್ಪನೆಯನ್ನು ನಿಜವಾಗಿಸಬೇಕಾದರೆ ತಾವೇ ನಿರ್ದೇಶಕರಾಗುವುದು ಒಳಿತು ಎಂದು ತೀರ್ಮಾನವನ್ನು ಮಾಡಿದ್ದಾರೆ. ಹಾಗಾದರೆ ನಿರೂಪ್ ಭಂಡಾರಿ ನಿರ್ದೇಶಕರಾಗುವುದು ಯಾವಾಗ? ಸದ್ಯ ಎಲ್ಲಿದ್ದಾರೆ ಮೊದಲಾದ ಪ್ರಶ್ನೆಗಳಿಗೆ 'ಫಿಲ್ಮಿಬೀಟ್'ಗೆ ಅವರು ನೀಡಿರುವ ಉತ್ತರ ಇಲ್ಲಿದೆ.
ನಿರ್ದೇಶನ ಎನ್ನುವುದು ನಟನೆಗಿಂತ ದೊಡ್ಡ ಜವಾಬ್ದಾರಿ ಅಲ್ಲವೇ?
ಹೌದು. ನಟನಿಗಾದರೆ ತನ್ನ ಪೋರ್ಷನ್ ಏನಿದೆಯೋ ಅದನ್ನು ನಿರ್ದೇಶಕರು ಹೇಳಿಕೊಟ್ಟಂತೆ ಅಭಿನಯಿಸಿ ಬಂದರೆ ಆಯಿತು. ಆದರೆ ನಿರ್ದೇಶಕನಾದವನು ಪ್ರತಿಯೊಂದು ಪಾತ್ರದ, ದೃಶ್ಯದ ಬಗ್ಗೆ ಗಮನ ಇರಿಸಿರಬೇಕಾಗುತ್ತದೆ. ಚಿತ್ರೀಕರಣ ಮುಗಿದರೂ ಆತನ ಜವಾಬ್ದಾರಿ ಮುಗಿಯುವುದಿಲ್ಲ. ಚಿತ್ರ ಬಿಡುಗಡೆಯಾಗಿ ಮೊದಲ ದಿನದ ಪ್ರೇಕ್ಷಕರ ಅಭಿಪ್ರಾಯದ ಬಗ್ಗೆ ನಟನಿಗಿಂತಲು ಹೆಚ್ಚು ಆತಂಕ ನಿರ್ದೇಶಕನಿಗಿರುತ್ತದೆ. ಇದೆಲ್ಲವೂ ನನಗೆ ಗೊತ್ತು. ಮಾತ್ರವಲ್ಲ, ಸ್ವತಃ ನಿರ್ದೇಶಕನಾಗಿಯೂ ಗೊತ್ತು! ಆದರೆ ಅದು ನಾನು ವೃತ್ತಿಯಲ್ಲಿದ್ದ ಕಾರ್ಪೊರೇಟ್ ಸಂಸ್ಥೆಯ ವಿಡಿಯೋ ಮಾಡಿದಂಥ ಅನುಭವಷ್ಟೇ.
ಅಣ್ಣನ ಸಿನಿಮಾಗಳಲ್ಲಿ ನಟಿಸುವಾಗ ನಾನು ಕಲಾವಿದ ಮಾತ್ರ ಆಗಿರುತ್ತಿರಲಿಲ್ಲ. ಜತೆಗೆ ನಿರ್ದೇಶನ ವಿಭಾಗದ ಬಗ್ಗೆಯೂ ಆಸಕ್ತಿ ವಹಿಸುತ್ತಿದ್ದೆ. ಇಂದಿಗೂ ಕೂಡ ಅಣ್ಣ ಒಬ್ಬ ಅಸಿಸ್ಟೆಂಟ್ ಡೈರೆಕ್ಟರ್ಗೆ ಹೇಳುವ ಕೆಲಸವನ್ನು ನನಗೆ ಹೇಳಿದರೂ ಅದನ್ನು ಆಸ್ಥೆಯಿಂದ ಮಾಡಬಲ್ಲೆ. ಅದಕ್ಕೆ ಕಾರಣ ಅಣ್ಣನ ಮೇಲಿನ ಗೌರವ ಅಷ್ಟೇ ಅಲ್ಲ, ನಿರ್ದೇಶನ ವಿಭಾಗದಲ್ಲಿನ ಆಸಕ್ತಿಯೂ ಹೌದು. ಆದುದರಿಂದಲೇ ಅಣ್ಣನಲ್ಲಿ ಕಥೆಯ ಬಗ್ಗೆ ವಿವರಿಸಿದೆ. ನಿನ್ನದೇ ಕಲ್ಪನೆಯಾಗಿರುವ ಕಾರಣ ನೀನೇ ನಿರ್ದೇಶಿಸಿದರೆ ಅಂದುಕೊಂಡ ಹಾಗೆ ತೆಗೆಯಬಹುದು ಎನ್ನುವ ಮೂಲಕ ಅಣ್ಣನ ಪ್ರೋತ್ಸಾಹವೂ ದೊರಕಿದೆ. ಆದರೆ ಪ್ರಸ್ತುತ ನಾನು ನಟನಾಗಿರುವ ಚಿತ್ರದತ್ತ ಪೂರ್ತಿಯಾಗಿ ಗಮನ ನೀಡಿದ್ದೇನೆ.
ನೀವು ಈಗ ನಟಿಸುತ್ತಿರುವ ಚಿತ್ರ ಯಾವುದು?
ನಾನು ನಟಿಸಿ ಮುಗಿದಿರುವ ಚಿತ್ರ `ವಿಂಡೋ ಸೀಟ್'. ಅದರಲ್ಲಿ ನನ್ನದು ಒಬ್ಬ ಮ್ಯೂಸಿಶಿಯನ್ ಪಾತ್ರ. ಇದು ಶೀತಲ್ ಶೆಟ್ಟಿಯವರ ಚೊಚ್ಚಲ ನಿರ್ದೇಶನದ ಚಿತ್ರ. ಅವರು ಕತೆ ಹೇಳಿದಾಗಲೇ ನನಗೆ ಮೆಚ್ಚುಗೆಯಾಗಿತ್ತು. ಅವರ ನಿರ್ದೇಶನದ ಮೇಲೆ ಭರವಸೆ ಮೂಡಲು ಒಂದು ಕಾರಣವಿತ್ತು. ಅವರು ಈ ಹಿಂದೆ ಎರಡು ಕಿರುಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಅವುಗಳಲ್ಲಿ ಒಂದಾದ `ಕಾರು' ಚಿತ್ರವನ್ನು ನನಗೆ ತೋರಿಸಿದರು. ಅದನ್ನು ನೋಡಿದ ಮೇಲೆ ಅವರ ಸಾಮರ್ಥ್ಯದ ಬಗ್ಗೆ ನಂಬಿಕೆ ಬಂದಿತು. ಅದೇ ರೀತಿಯಲ್ಲಿ ಅವರು ತಮ್ಮ ತಂಡದೊಂದಿಗೆ ಸೇರಿ ಚಿತ್ರವನ್ನು ಪೂರ್ತಿ ಮಾಡಿದ್ದಾರೆ. ಆ ಟೀಮ್ ಬಗ್ಗೆ ಹೇಳಲೇಬೇಕಾದ ಸಂಗತಿ ಏನೆಂದರೆ, ಅವರಲ್ಲೊಂದು ಉತ್ಸಾಹ ಇದೆ. ಶ್ರಮವಹಿಸಿ ಚಿತ್ರ ಮಾಡಿದ್ದಾರೆ. ಛಾಯಾಗ್ರಾಹಕ ವಿಘ್ನೇಶ್ ಅವರ ಹೆಸರನ್ನು ನಾನು ವಿಶೇಷವಾಗಿ ಉಲ್ಲೇಖಿಸಬೇಕಿದೆ. ನನ್ನ ಪಾತ್ರ ಸೇರಿದಂತೆ ಒಟ್ಟು ಚಿತ್ರವೇ ಚೆನ್ನಾಗಿ ಮೂಡಿ ಬಂದಿದೆ. ಕೊರೊನಾ ಸಮಸ್ಯೆ ಮುಗಿದೊಡನೆ ಚಿತ್ರದ ಬಿಡುಗಡೆಯನ್ನು ನಿರೀಕ್ಷಿಸುತ್ತಿದ್ದೇನೆ.
ದೂರಾದರೇನೇ ಕೊರೊನಾ; ಸೇಫು ಚಿತ್ರೀಕರಣ: ಸೋನು ಗೌಡ
ಲಾಕ್ಡೌನ್ ನಿಮಗೆ ತಂದ ಸಮಸ್ಯೆಗಳೇನು?
ಲಾಕ್ಡೌನ್ ಗಿಂತಲೂ ನನಗೆ ಕೊರೊನಾ ಸಮಸ್ಯೆ ಎನಿಸಿದೆ. ಯಾಕೆಂದರೆ ನನಗೆ ಮುಂಚೆಯಿಂದಲೂ ಹೆಚ್ಚಾಗಿ ಮನೆಯೊಳಗೆ ಕಾಲ ಕಳೆದು ಅಭ್ಯಾಸವಿದೆ. ಆದರೆ ಆತ್ಮೀಯರನ್ನು ಕೂಡ ದೂರದಿಂದಲೇ ನೋಡಿ, ಮಾತನಾಡಿಸಿ, ದೂರದಿಂದಲೇ ಕಳಿಸಿಕೊಡುವ ಅಭ್ಯಾಸ ಇಲ್ಲ! ಇದೀಗ ಕೊರೊನಾದಿಂದಾಗಿ ಆ ರೀತಿ ವರ್ತಿಸಬೇಕಾಗಿರುವುದು ಸಮಸ್ಯೆ ಎನಿಸಿದೆ. ಉದಾಹರಣೆಗೆ ಇತ್ತೀಚೆಗೆ ನನ್ನ ಅಣ್ಣನ ಮನೆಗೆ ಹೋಗಿದ್ದೆ. ಅಲ್ಲಿ ಆತನ ಮಗುವನ್ನು ಎತ್ತಿಕೊಳ್ಳಲಿಕ್ಕೂ ನನ್ನಿಂದ ಸಾಧ್ಯವಾಗಲಿಲ್ಲ. ಯಾಕೆಂದರೆ ಹೊರಗಿನಿಂದ ಬಂದ ನಾನು ನನಗೆ ಅರಿವಿಲ್ಲದೆ ಕೊರೊನಾ ವಾಹಕವಾಗಿದ್ದರೆ ಗತಿಯೇನು? ಜತೆಗೆ ಬೆಂಗಳೂರಲ್ಲಂತೂ ದಿನದಿಂದ ದಿನಕ್ಕೆ ಕೊರೊನ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಹೊರಗಡೆ ಹೋಗಿ ಕೆಲಸ ಮಾಡಲೇಬೇಕಾದವರು, ದಿನಗೂಲಿ ಕಾರ್ಮಿಕರು ಈಗ ಇನ್ನಷ್ಟು ಎಚ್ಚರಿಕೆ ವಹಿಸಲೇಬೇಕಾಗಿದೆ.
ಮನೆಯೊಳಗಿದ್ದುಕೊಂಡು ಹೇಗೆ ಕಾಲ ಕಳೆದಿರಿ?
ನನ್ನ ಮನೆ ಇರುವುದು ಮೈಸೂರಲ್ಲಿ. ಫೆಬ್ರವರಿ ಸುಮಾರಿಗೆ ನನ್ನ ಪತ್ನಿ ಧನ್ಯಾ ಕೂಡ ವಿದೇಶದಿಂದ ಬಂದಿದ್ದಳು. ಅವಳು ಮತ್ತು ನಾನು ಮನೆಯವರೊಂದಿಗೆ ಸೇರಿ ಇಷ್ಟು ದಿನಗಳನ್ನು ಕಳೆಯುವ ಅವಕಾಶ ಅಪರೂಪದಲ್ಲಿ ದೊರಕಿತು. ಬೆಳಿಗ್ಗೆ ಎದ್ದೊಡನೆ ಜಿಮ್ಗೆ ಹೋಗುವ ಅಭ್ಯಾಸ ಇತ್ತು. ನನ್ನ ಪತ್ನಿಗೆ ಯೋಗಾಭ್ಯಾಸ ಗೊತ್ತು. ಹಾಗಾಗಿ ಜಿಮ್ ಬಿಟ್ಟು ಯೋಗ ಮಾಡಲು ಆರಂಭಿಸಿದೆ. ಮೈಕಟ್ಟು ಫ್ಲೆಕ್ಸಿಬಲ್ ಆಯಿತು. ಉಳಿದಂತೆ ನನಗೊಂದಷ್ಟು ಆತ್ಮೀಯ ಸ್ನೇಹಿತರಿದ್ದಾರೆ. ಅವರಲ್ಲಿ ಬಹಳ ಮಂದಿಗೆ ಓದು ಇಷ್ಟ. ಮ್ಯೂಸಿಶಿಯನ್ಸ್ ಕೂಡ ಇದ್ದಾರೆ. ನನ್ನ ಮಡದಿಗೂ ಓದು ಇಷ್ಟ. ಜವಾಹರಲಾಲ್ ನೆಹರು ಅವರು ರಚಿಸಿರುವ `ಲೆಟರ್ಸ್ ಟು ಇಂದಿರಾ' ಸೇರಿದಂತೆ ಒಂದಷ್ಟು ಪುಸ್ತಕಗಳನ್ನು ಅವಳು ನನಗೆ ಸಜೆಸ್ಟ್ ಮಾಡಿದಳು. ಹೀಗೆ ಓದು, ಸಂಗೀತದ ಜತೆಗೆ ಕಾಲ ಕಳೆದಿದ್ದು ಗೊತ್ತೇ ಆಗಲಿಲ್ಲ.
ಆಸೆಗಳಿದ್ದರೆ ತಾನೆ ಈ ಸಮಯದಲ್ಲಿ ಕಷ್ಟ ಎನಿಸೋದು?: ಬಿರಾದಾರ್ ಜೀವನ ಪಾಠ