ಶಿವಣ್ಣನ ಬಗ್ಗೆ ಬರ್ತಿರೋ ಈ ಹೊಸ ಪುಸ್ತಕದಲ್ಲಿ ಏನೇನಿದೆ?
Recommended Video

ನಟ ಶಿವರಾಜ್ ಕುಮಾರ್ ಅವರ ಹುಟ್ಟುಹಬ್ಬಕ್ಕೆ ಎರಡೇ ದಿನ ಬಾಕಿ ಇದೆ. ಪ್ರತಿ ವರ್ಷ ಶಿವಣ್ಣನ ಬರ್ತ್ ಡೇಗೆ ಹೊಸ ಹೊಸ ಸಿನಿಮಾಗಳ ಲಾಂಚ್ ಆಗುತ್ತವೆ. ಆದರೆ, ಈ ಬಾರಿ ಅವರ ಹುಟ್ಟುಹಬ್ಬದ ದಿನ ಒಂದು ಪುಸ್ತಕ ಲೋಕಾರ್ಪಣೆ ಆಗುತ್ತಿದೆ.
'ಕರುನಾಡ ಚಕ್ರವರ್ತಿ ಡಾ.ಶಿವರಾಜ್ ಕುಮಾರ್ ಯಶೋಗಾಥೆ' ಪುಸ್ತಕ ಇದೇ ಗುರುವಾರ ಬಿಡುಗಡೆಯಾಗಲಿದೆ. ಪತ್ರಕರ್ತ ಜನಾರ್ಧನರಾವ್ ಸಾಳಂಕೆ ಈ ಪುಸ್ತಕವನ್ನು ಬರೆದಿದ್ದಾರೆ. ಅಂದಹಾಗೆ, ಸದ್ಯ ತಮ್ಮ ಈ ಹೊಸ ಪುಸ್ತಕದ ಬಗ್ಗೆ 'ಫಿಲ್ಮಿಬೀಟ್ ಕನ್ನಡ'ದ ಜೊತೆಗೆ ಅವರು ಮಾತನಾಡಿದ್ದಾರೆ. ತಮ್ಮ ಪುಸ್ತಕದ ಬಗ್ಗೆ ಅನೇಕ ಕುತೂಹಲಕಾರಿ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಮುಂದೆ ಓದಿ...

ಶಿವಣ್ಣನ ಈ ಪುಸ್ತಕ ಯಾವ ಯಾವ ಅಂಶಗಳನ್ನು ಒಳಗೊಂಡಿದೆ ?
''ಡಾ.ಶಿವರಾಜ್ ಕುಮಾರ್ ಅವರ ಜೀವನದಲ್ಲಿ ನಡೆದ ಮುಖ್ಯ ವಿಚಾರಗಳನ್ನು ಇಲ್ಲಿ ಹೇಳಿದ್ದೇವೆ. ಅವರ ಹುಟ್ಟು, ಶಾಲಾ ಜೀವನ, ಕಾಲೇಜು, ರಂಗಭೂಮಿ ಬಗ್ಗೆ ಅವರಿಗೆ ಇದ್ದ ಒಲವು, ಚಿತ್ರರಂಗಕ್ಕೆ ಬರಬೇಕಾದಾಗ ಮಾಡಿದ ತಯಾರಿ, ಅವರ ಸಂಪೂರ್ಣ ಸಿನಿಯಾನ ಈ ಅಂಶಗಳು ಪುಸ್ತಕದಲ್ಲಿ ಇವೆ. ಇವುಗಳ ಜೊತೆಗೆ ಶಿವಣ್ಣನ ಸಮಾಜಮುಖಿ ಕೆಲಸಗಳು, ದಾನಧರ್ಮ, ಅವರ ಸಿನಿಮಾಗಳ ಪಟ್ಟಿ, ಪ್ರಶಸ್ತಿ ಪುರಸ್ಕಾರಗಳು, 32 ಪುಟಗಳಲ್ಲಿ ವಿಶೇಷ ಚಿತ್ರಗಳು ಇವೆ.''

ಪುಸ್ತಕ ಎಷ್ಟು ಪುಟ ಹೊಂದಿದೆ ಹಾಗೂ ಅದರ ವಿನ್ಯಾಸ ಹೇಗಿದೆ?
''ಪುಸ್ತಕ 303 ಪುಟ ಇದೆ. ಅದನ್ನು ಹಾರ್ಟ್ ಬೈಂಡಿಗ್ ಮಾಡಿದ್ದೇವೆ. ಯೂವಿ ಕೋಟಿಂಗ್ ನಲ್ಲಿ ಮುಖಪುಟ ಬಂದಿದೆ. 'ಡಾ.ಶಿವರಾಜ್ ಕುಮಾರ್' ಎಂಬ ಪುಸ್ತಕದ ಮೇಲಿನ ಪದವನ್ನು ಚಿನ್ನದ ಲೇಪನದ ರೀತಿ ಎಂಬೋಸಿಂಗ್ ಮಾಡಿದ್ದಾರೆ. ಮುನ್ನುಡಿಯನ್ನು ಚಿ.ಗುರುದತ್ ಬರೆದಿದ್ದಾರೆ. ಬೆನ್ನುಡಿಯನ್ನು ಹಿರಿಯ ನಟ ಹೊನ್ನಾವಳಿ ಕೃಷ್ಣ ಅವರು ಬರೆದಿದ್ದಾರೆ. ಪುಸ್ತಕದ ಬೆಲೆ ಮುನ್ನೂರು ರೂಪಾಯಿ ಇದೆ.''

ಶಿವಣ್ಣನ ಬಗ್ಗೆ ಬಂದ ಇತರ ಪುಸ್ತಕಕ್ಕಿಂತ ಈ ಪುಸ್ತಕ ಹೇಗೆ ಭಿನ್ನ?
''2007ರಲ್ಲಿ 'ಮುತ್ತುರಾಜನ ಮುತ್ತು' ಎಂದು ಒಂದು ಪುಸ್ತಕ ಬಂದಿತ್ತು. ಅದು ನಿರೂಪಣಾ ಶೈಲಿಯಲ್ಲಿ ಇತ್ತು. ಶಿವಣ್ಣ ಅವರು ಹೇಳಿದ ಕೆಲವು ಘಟನೆಗಳನ್ನು ಇಟ್ಟುಕೊಂಡು ಆ ಪುಸ್ತಕ ಬಂದಿತ್ತು. ಆದರೆ ಈ ಪುಸ್ತಕ ಅವರ ಇಡೀ ಜೀವನ ಚರಿತ್ರೆಯನ್ನು ಒಳಗೊಂಡಿದೆ. ಇದರಲ್ಲಿ ಶಿವಣ್ಣನ ಬಗ್ಗೆ ಹೆಚ್ಚಿನ ಮಾಹಿತಿ ಸಿಗುತ್ತದೆ.''

ಪುಸ್ತಕಕ್ಕಾಗಿ ಎಷ್ಟು ಬಾರಿ ಶಿವಣ್ಣನ ಸಂದರ್ಶನ ಮಾಡಿದ್ದೀರಾ ?
''ಪುಸ್ತಕಕ್ಕಾಗಿ ನೇರವಾಗಿ ಶಿವಣ್ಣನ ಸಂದರ್ಶನ ಮಾಡಿಲ್ಲ. ಆದರೆ ಅವರು ಹಿಂದೆ ನೀಡಿರುವ ಸಾಕಷ್ಟು ಸಂದರ್ಶನಗಳು, ಕಾರ್ಯಕ್ರಮಗಳಲ್ಲಿ ಮಾತನಾಡಿರುವ ವಿಷಯಗಳನ್ನು ಇಟ್ಟುಕೊಂಡು ಮಾಹಿತಿ ಕಲೆ ಹಾಕಿದ್ದೇನೆ. ರಾಘವೇಂದ್ರ ರಾಜ್ ಕುಮಾರ್ ಹಾಗೂ ಯುವ ರಾಜ್ ಕುಮಾರ್ ಅವರ ಸಂದರ್ಶನ ಮಾಡಿದ್ದೇವೆ. ಚೆನ್ನೈನಲ್ಲಿ ಇರುವ ಶಿವಣ್ಣನ ಶಾಲಾ ಸ್ನೇಹಿತರ ಮಾತು ಪುಸ್ತಕದ ಬಲವನ್ನು ಹೆಚ್ಚಿಸಿದೆ.

ಶಿವರಾಜ್ ಕುಮಾರ್ ಅವರನ್ನು ನೀವು ಮೊದಲ ಭೇಟಿ ಮಾಡಿದ್ದು ಯಾವಾಗ?
''ಮೂರು ಬಾರಿ ಶಿವಣ್ಣ ಅವರನ್ನು ಭೇಟಿ ಮಾಡಿದ್ದೇನೆ. 11 ಸಪ್ಟೆಂಬರ್ 2011 ರಂದು ಮೊದಲ ಬಾರಿಗೆ ಶಿವಣ್ಣನ ಜೊತೆಗೆ ಒಂದು ಪುಟ್ಟ ಭೇಟಿಯಾಗಿತ್ತು. ಸ್ನೇಹಲೋಕ ಕ್ರಿಕೆಟ್ ಆಡಲು ಅವರು ಜಯನಗರಕ್ಕೆ ಬಂದಿದ್ದರು. ಇತ್ತೀಚಿಗಷ್ಟೆ ಪುಸ್ತಕವನ್ನು ನೀಡಲು ಅವರ ಮನೆಗೆ ಹೋಗಿದೆ.''

ಪುಸ್ತಕ ಬಿಡುಗಡೆ ಯಾವಾಗ ?
''ಜುಲೈ 12ಕ್ಕೆ ಶಿವಣ್ಣ ಹುಟ್ಟುಹಬ್ಬಕ್ಕೆ ಪುಸ್ತಕ ಬಿಡುಗಡೆ ಮಾಡುತ್ತಿದ್ದೇವೆ. ಶಿವರಾಜ್ ಕುಮಾರ್ ಅವರ 'ಶ್ರೀಮುತ್ತು' ನಿವಾಸದಲ್ಲಿ ಅವರೇ ಅಭಿಮಾನಿಗಳ ನಡುವೆ ಪುಸ್ತಕವನ್ನು ಲೋಕಾರ್ಪಣೆ ಮಾಡಲಿದ್ದಾರೆ. ಅವರ ಸರಳತೆ ಹಾಗೂ ನೇರ ನುಡಿ ನನಗೆ ಪುಸ್ತಕ ಬರೆಯಲು ಸ್ಫೂರ್ತಿ ನೀಡಿತ್ತು.''


Click it and Unblock the Notifications











