Don't Miss!
- News Bengaluru-Tumkur Metro: 52.41 ಕಿ.ಮೀ. ಮಾರ್ಗ, 19 ನಿಲ್ದಾಣಗಳು; ತುಮಕೂರು-ಬೆಂಗಳೂರು ಮೆಟ್ರೋ ಅಪ್ಡೇಟ್
- Lifestyle ಏಪ್ರಿಲ್ನಲ್ಲಿ 14 ದಿನ ರಜೆ, ಏಪ್ರಿಲ್ 1ಕ್ಕೆ ಬ್ಯಾಂಕ್ಗಳಿಗೆ ರಜೆ ಇರಲು ಕಾರಣವೇನು?
- Sports ರೋಹಿತ್ vs ಹಾರ್ದಿಕ್: ಸತತ ಸೋಲಿನ ನಡುವೆಯೇ ಮುಂಬೈ ಇಂಡಿಯನ್ಸ್ ಇಬ್ಭಾಗ!?
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕನ್ನಡ ಎಂದರೆ ರೋಮಾಂಚನ’ ಎನ್ನುತ್ತಾರೆ ಆರ್ಯವರ್ಧನ..!
ಹಿರಿತೆರೆಯಲ್ಲಿ ತಾರೆಗಳಾಗಿ ಗುರುತಿಸಿಕೊಂಡವರು ಕಿರುತೆರೆಯಲ್ಲಿ ರಿಯಾಲಿಟಿ ಶೋ ನಡೆಸಿ ಗಮನ ಸೆಳೆಯುವುದನ್ನು ನೋಡಿರುತ್ತೀರಿ. ಆದರೆ ದಶಕದ ಹಿಂದೆ ಯೂತ್ ಸ್ಟಾರ್ ಆಗಿ ಗಮನ ಸೆಳೆದಂಥ ಯುವಕ ಇಂದು ಕಿರುತೆರೆಯಲ್ಲಿ ಸ್ಟಾರ್ ಆಗಿರುವುದು ಧಾರಾವಾಹಿಯ ಮೂಲಕ! ಇಂಥದೊಂದು ವಿಭಿನ್ನ ಪ್ರಯಾಣದಲ್ಲಿ ದಾಖಲೆಯನ್ನು ಮಾಡಿದ ಕೀರ್ತಿ ಅನಿರುದ್ಧ ಅವರಿಗೆ ಸಲ್ಲುತ್ತದೆ.
ಸಾಹಸ ಸಿಂಹನ ಅಳಿಯನಾಗಿ ಮಾಡಿರುವ ಈ ಸಾಹಸ, ಕೀರ್ತಿಯ ಪತಿಯಾಗಿ ಪಡೆದಿರುವ ಈ ಕೀರ್ತಿ, ಅವರನ್ನು ಇಂದು ಕೌಟುಂಬಿಕ ಧಾರಾವಾಹಿಯೊಂದರ ಮೂಲಕ ನೇರವಾಗಿ ಕುಟುಂಬಗಳ ಇಷ್ಟ ತಾರೆಯಾಗುವಂತೆ ಮಾಡಿದೆ. ಗಂಟೆ ರಾತ್ರಿ ಒಂಬತ್ತಾಗಿದ್ದರೂ ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ಅವರು ಸಂದರ್ಶನ ಎಂದೊಡನೆ ತಕ್ಷಣ ಬಿಡುವು ಮಾಡಿಕೊಂಡು ಮಾತನಾಡಿದರು. ಆರ್ಯವರ್ಧನ್ ಖ್ಯಾತಿಯ ಅನಿರುದ್ಧ್ ಜತೆಗೆ ಫಿಲ್ಮೀಬೀಟ್ ನಡೆಸಿರುವ ವಿಶೇಷ ಮಾತುಕತೆ ಇಲ್ಲಿದೆ.
ಜನಮನದಲ್ಲಿ ಇಷ್ಟೊಂದು ಅಭಿಮಾನ ಪಡೆದ ಮೇಲೆಯೂ ಹೇಗೆ ನಿಮ್ಮಿಂದ ಇಷ್ಟು ಸರಳವಾಗಿರಲು ಸಾಧ್ಯವಾಗುತ್ತದೆ?
ಚಿತ್ರರಂಗದಲ್ಲಿ 19 ವರ್ಷ, ಅದಕ್ಕೂ ಮೊದಲು ರಂಗಭೂಮಿ ಹೀಗೆ ಎಲ್ಲವನ್ನೂ ನೋಡಿಕೊಂಡು ಬಂದಿದ್ದೇನೆ. ಆದರೆ ಈ ಮಟ್ಟದ ಹೆಸರು ಇದೇ ಪ್ರಥಮ ಎಂದೇ ಹೇಳಬಹುದು. ಸಿನಿಮಾಗಳ ಗೆಲುವು, ಸೋಲು ಮತ್ತು ನಾನು ಬೆಳೆದಿರುವ ವಾತಾವರಣ ಎಲ್ಲವೂ ನನಗೆ ಬದುಕನ್ನು ಕಲಿಸುತ್ತಾ ಬಂದಿದೆ. ಹಾಗಾಗಿ ಪ್ರಯತ್ನ ಒಂದನ್ನು ಬಿಟ್ಟು ಬೇರೆ ಯಾವುದು ಕೂಡ ನಮ್ಮ ಕೈಯ್ಯಲ್ಲಿ ಇಲ್ಲ ಎನ್ನುವ ಸ್ಪಷ್ಟ ಅರಿವು ಇರುವ ಕಾರಣ ಎಷ್ಟೇ ದೊಡ್ಡ ಯಶಸ್ಸು, ಅಭಿಮಾನ ಕೂಡ ನನ್ನ ತನವನ್ನು ಬದಲಾಯಿಸಿಲ್ಲ ಎನ್ನಬಹುದು.
ಕಿರುತೆರೆಯ ರಿಯಾಲಿಟಿ ಶೋನಲ್ಲಿ ಪಾಲ್ಗೊಳ್ಳುವುದು ಬೇರೆ. ಆದರೆ ಧಾರಾವಾಹಿಯನ್ನು ಒಪ್ಪಿಕೊಳ್ಳುವ ಧೈರ್ಯ ಹೇಗೆ ಬಂತು?
ಇತ್ತೀಚೆಗೆ ನನಗೆ ಸಿನಿಮಾಗಳಲ್ಲಿ ಯಶಸ್ಸು ಸಿಗಲಿಲ್ಲವೆಂದಾದಾಗ ನಾನು ಸಿನಿಮಾಗಳನ್ನಷ್ಟೇ ನಂಬಿ ಕುಳಿತಿರಲಿಲ್ಲ. ವಿಭಾ ಟ್ರಸ್ಟ್ ನಲ್ಲಿ ವಿವಿಧ ವಿಭಾಗದ ಕೆಲಸ, ಅಪ್ಪಾವರ ಸ್ಮಾರಕದ ಕೆಲಸ, ಕಿರುಚಿತ್ರಗಳ ನಿರ್ದೇಶನದ ಕೆಲಸ, ಅಮ್ಮನ ಕುರಿತಾದ ಸಾಕ್ಷ್ಯಚಿತ್ರ.. ಹೀಗೆ ಬೇರೆ ಬೇರೆ ಕೆಲಸಗಳಲ್ಲಿ ತೊಡಗಿರುತ್ತಿದ್ದೆ. ಹಾಗಾಗಿ ನನಗೆ ಈ ಎಲ್ಲ ವಿಚಾರಗಳಿಗೆ ಸಮಯ ನೀಡಲು ಸಾಧ್ಯವಾಗಬಹುದೇ ಎನ್ನುವ ಗೊಂದಲ ಹುಟ್ಟಿತೇ ಹೊರತು, ಉಳಿದಂತೆ ಒಬ್ಬ ಸಿನಿಮಾ ಕಲಾವಿದನಾಗಿದ್ದು ಧಾರಾವಾಹಿ ಮಾಡಬಾರದು ಎನ್ನುವ ನಿಲುವು ನನ್ನದಾಗಿರಲಿಲ್ಲ. ಉದಾಹರಣೆಗೆ `ಜೊತೆ ಜೊತೆಯಲಿ' ಧಾರಾವಾಹಿ ಇಷ್ಟು ಹೆಸರು ತರುತ್ತಿರುವ ಹಾಗೆ, ಚಿತ್ರರಂಗದಿಂದ ಕೂಡ ಬೇಡಿಕೆ ಹೆಚ್ಚಾಗಿರುವುದು ಸತ್ಯ.
ಮೂಲ ಮರಾಠಿ ಧಾರಾವಾಹಿಯನ್ನು ಮೊದಲೇ ನೋಡಿದ ಕಾರಣ ಈ ಕತೆಯನ್ನು ಒಪ್ಪಿಕೊಂಡಿರ?
ಆ ಧಾರಾವಾಹಿಯನ್ನು ನಾನು ನೋಡಿರಲಿಲ್ಲ. ಆದರೆ ಅದರ ಯಶಸ್ಸಿನ ಬಗ್ಗೆ ಕೇಳಿದ್ದೆ. ಅಲ್ಲಿನ ಸ್ಟಾರ್ ಒಬ್ಬರು ನಟಿಸಿದ ಆ ಪಾತ್ರದ ಆಫರ್ ಇಲ್ಲಿ ನನಗೆ ಸಿಕ್ಕ ಮೇಲೆಯಂತೂ ನೋಡದಿರುವುದೇ ಉತ್ತಮ ಎಂದುಕೊಂಡೆ! ಯಾಕೆಂದರೆ ಮೂಲ ಪಾತ್ರಧಾರಿಯ ಯಾವುದೇ ಹಾವಭಾವ, ಶೈಲಿ ನನ್ನ ಮೇಲೆ ಪ್ರಭಾವ ಬೀರದಿರಲಿ ಎನ್ನುವುದೇ ನನ್ನ ಉದ್ದೇಶವಾಗಿತ್ತು. ನಿರ್ದೇಶಕ ಆರೂರು ಜಗದೀಶ್ ಅವರು ಕೂಡ ನಮ್ಮ ನೇಟಿವಿಟಿಗೆ ತಕ್ಕಂತೆ ಅವರ ಕಲ್ಪನೆಯ ನಾಯಕನನ್ನು ತೋರಿಸಿದ್ದಾರೆ. ಪ್ರಾಜೆಕ್ಟ್ ಒಪ್ಪಿಕೊಳ್ಳಲು ಮುಖ್ಯವಾಗಿ ಜೀ ವಾಹಿನಿಯ ರಾಘವೇಂದ್ರ ಹುಣಸೂರು ನಮ್ಮೊಂದಿಗೆ ಸಂವಹಿಸಿದ ರೀತಿ, ತೋರಿದ ಪ್ರೀತಿಯೇ ಪ್ರಮುಖ ಕಾರಣವಾಗಿತ್ತು ಎನ್ನಬಹುದು.
ಒಮ್ಮೆಲೆ ಹಚ್ಚಿದ ಜನರ ಅಭಿಮಾನದ ರೀತಿ, ಪ್ರತಿಕ್ರಿಯೆಗಳು ಹೇಗೆ ಇವೆ?
ಸಾಕಷ್ಟು ಜನಗಳ ಪತ್ರ ಬರುತ್ತಿವೆ. ನಮ್ಮ ಮನೆ ಮುಂದೆ ಬಂದು ಆಳುಗಳ ಕೈಗೆ ಕೊಟ್ಟು ಹೋಗಿರುತ್ತಾರೆ. ಫೇಸ್ಬುಕ್ ನಲ್ಲಂತೂ ಬರುತ್ತಿರುವ ಸಾವಿರಾರು ಸಂದೇಶಗಳಿಗೆ ಪ್ರತಿಕ್ರಿಯೆ ನೀಡುವುದಕ್ಕೇನೇ ಸಮಯ ಸಾಕಾಗುತ್ತಿಲ್ಲ. ವೈಯಕ್ತಿಕವಾಗಿ ವಿಡಿಯೋಗಳನ್ನು ಮಾಡಿ ಹಂಚುತ್ತಾರೆ. ಸ್ವೀಕರಿಸಿದ ಎಲ್ಲರ ಬಗ್ಗೆಯೂ ಅಭಿಮಾನ ಇದೆ.
ಈ ಅಭೂತಪೂರ್ವ ಯಶಸ್ಸಿಗೆ ಭಾರತಿಯವರು ಮತ್ತು ನಿಮ್ಮ ಕುಟುಂಬ ಸಂತಸ ವ್ಯಕ್ತಪಡಿಸಿದ ರೀತಿ ಹೇಗಿತ್ತು?
ಅಮ್ಮ ತುಂಬ ಸಮಯದಿಂದ ಇಂಥದೊಂದು ಯಶಸ್ಸಿಗೆ ಕಾಯುತ್ತಿದ್ದರು. ಅಪ್ಪಾವರು (ಡಾ. ವಿಷ್ಣುವರ್ಧನ್) ಯಾವಾಗಲೂ ನಮ್ಮ ಅನಿಗೆ ಒಳ್ಳೆಯದಾಗಬೇಕು ಎಂದು ಹೇಳುತ್ತಾ ಇದ್ದರು. ಇಂದು ಅವರು ಭೌತಿಕವಾಗಿ ನಮ್ಮೆದುರು ಇರದಿದ್ದರೂ ಅಮ್ಮನ ಮೂಲಕ ನನ್ನ ಯಶಸ್ಸನ್ನು ನೋಡುತ್ತಿದ್ದಾರೆ ಎಂದು ಸಮಾಧಾನಿಸಿಕೊಳ್ಳುತ್ತೇನೆ. ಇನ್ನು ಈ ಯಶಸ್ಸು ಸಹಜವಾಗಿ ನನ್ನ ಪತ್ನಿ ಕೀರ್ತಿಯವರಿಗೆ ಮತ್ತು ನನ್ನ ತಂದೆ, ತಾಯಿ , ತಂಗಿ ಮತ್ತು ನನ್ನ ಮಕ್ಕಳು ಕೂಡ ತುಂಬ ಖುಷಿಯಾಗಿದ್ದಾರೆ. ಹತ್ತನೇ ತರಗತಿಯಲ್ಲಿರುವ ಮಗ ಮತ್ತು ಏಳನೇ ತರಗತಿಯಲ್ಲಿರುವ ಮಗಳು ತಮ್ಮ ಕ್ಲಾಸ್ಮೇಟ್ಸ್ , ಟೀಚರ್ಸ್ ಧಾರಾವಾಹಿಯ ನನ್ನ ಪಾತ್ರ ಮೆಚ್ಚಿದ್ದಾರೆಂದು ಅಭಿಮಾನದಿಂದ ಹೇಳುವುದನ್ನು ಕೇಳುವಾಗ ಸಾರ್ಥಕತೆ ಸಿಕ್ಕಂತಾಗುತ್ತದೆ.
ಇದೀಗ ರಾಜ್ಯೋತ್ಸವದ ಸಂಭ್ರಮ. ಈ ಉತ್ಸವ ನಿಮಗೆ ತರುವ ನೆನಪುಗಳೇನು?
ರಾಜ್ಯೋತ್ಸವದ ಸಂಭ್ರಮ ಎಂದೊಡನೆ ರೋಮಾಂಚನವಾಗುತ್ತದೆ. ಈ ಉತ್ಸವದ ಹಿಂದೆ ತುಂಬ ಜನಗಳ ಪರಿಶ್ರಮ ಇದೆ. ಅವರನ್ನೆಲ್ಲ ನಾವು ಸದಾ ಗೌರವಿಸಬೇಕು. ಮಾತ್ರವಲ್ಲ ನಮ್ಮಲ್ಲಿಎಂಟು ಮಂದಿ ಜ್ಞಾನಪೀಠ ಸಾಹಿತಿಗಳ ಸಾಹಿತ್ಯ ಭಂಡಾರವಿದೆ. ಇಂಥ ಸೌಭಾಗ್ಯ ಬೇರೆ ಯಾವ ರಾಜ್ಯಗಳಿಗೂ ಇಲ್ಲ. ಹಾಗಾಗಿ ಭಾಷೆ ಅರಿತು ರಾಜ್ಯದ ಪರಿಸರವನ್ನು ಚೆನ್ನಾಗಿ ಉಳಿಸಿಕೊಳ್ಳುವುದು ಮುಖ್ಯ.