ಕಾಲ ಕಾಲಕ್ಕೆ ನಡೆಯಬೇಕಾದದ್ದು ನಡೆದೇ ನಡೆಯುತ್ತೆ..!- ಜೆ.ಕೆ
ಬೆಳ್ಳಿತೆರೆಯ ಮೇಲೆ ಸ್ಟಾರ್ ಎನಿಸಿಕೊಂಡವರು ಕಿರುತೆರೆಗೆ ಬರುವುದು ಸಾಮಾನ್ಯ. ಆದರೆ ಕಿರುತೆರೆಯಲ್ಲಿದ್ದುಕೊಂಡೇ ಬೆಳ್ಳಿತೆರೆಯ ಸ್ಟಾರ್ ಇಮೇಜ್ ಪಡೆದವರು ಜೆ.ಕೆ ಅಲಿಯಾಸ್ ಕಾರ್ತಿಕ್ ಜಯರಾಮ್. ಅಶ್ವಿನಿ ನಕ್ಷತ್ರದಲ್ಲಿನ ಅವರ ಸೂಪರ್ ಸ್ಟಾರ್ ಜೆಕೆಯ ಪಾತ್ರ ಪ್ರೇಕ್ಷಕರು ಅವರನ್ನು ಅದೇ ಎತ್ತರದಲ್ಲಿ ನೋಡುವಂತೆ ಮಾಡಿತು. ಅದಕ್ಕೆ ತಕ್ಕಂತೆ ಕಾಣಿಸುವ ಜೆಕೆಗೆ ಮಾತ್ರ ಸಿನಿಮಾದಲ್ಲಿ ಅವರನ್ನು ನಿರೂಪಿಸುವಂಥ ಪಾತ್ರಗಳೇ ದೊರೆಯಲಿಲ್ಲ.
ಸಾಮಾನ್ಯವಾಗಿ ಪೌರಾಣಿಕ ಪಾತ್ರಗಳೆಂದರೆ ಆಸೆ ಪಡುವವರು ಕೂಡ ಅದನ್ನು ನಿಭಾಯಿಸಲಾಗದೇ ಕೈಚೆಲ್ಲುವಂಥ ಸಂದರ್ಭದಲ್ಲಿ, ಹಿಂದಿ ಧಾರಾವಾಹಿಯಲ್ಲಿ ರಾವಣನಾಗಿ ಜನಪ್ರಿಯತೆ ಪಡೆದವರು ಜೆ.ಕೆ. ಆದರೆ ಕನ್ನಡದಲ್ಲಿ ಕುರುಕ್ಷೇತ್ರದಂಥ ದೊಡ್ಡ ಸಿನಿಮಾ ನಡೆಯಬೇಕಾದರೆ ಜೆ.ಕೆಯನ್ನು ಬಳಸಿಕೊಳ್ಳದೆ ಹೋದದ್ದು ನಮ್ಮ ದುರಾದೃಷ್ಟ. ಆದರೆ ಜೆ.ಕೆ ಕೂಡ ಅವಕಾಶಕ್ಕಾಗಿ ಎಂದಿಗೂ ತಮ್ಮತನವನ್ನು, ತಮ್ಮ ನಿಬಂಧನೆಗಳನ್ನು ಬಿಟ್ಟು ಕೊಟ್ಟವರಲ್ಲ. ಅವರಿಗೆ ಅಭಿನಯದಿಂದ ಹಣ ಸಂಪಾದನೆ ಮುಖ್ಯವಲ್ಲವಾದರೂ, ಕನ್ನಡದ ಕಲಾವಿದರೆನ್ನುವ ಕಾರಣಕ್ಕೆ ಸಂಭಾವನೆಯಲ್ಲಿ ಅಸಡ್ಡೆ ಮಾಡುವುದನ್ನು ಸಹಿಸಲಾರರು.
ಹಾಗಾಗಿ ಕಲಾವಿದನಾಗಿ ಸಮರ್ಪಣಾ ಮನೋಭಾವದಿಂದ ಬರುವವರನ್ನು ಅಷ್ಟೇ ಆದರಣೀಯವಾಗಿ ನಡೆಸಿಕೊಂಡಾಗ ಒಂದು ಉತ್ತಮ ಪ್ರಾಜೆಕ್ಟ್ ಸೃಷ್ಟಿಯಾಗುತ್ತದೆ ಎನ್ನುವ ನಂಬಿಕೆ ಅವರಲ್ಲಿದೆ. ಅವರು ತಮ್ಮ ಹೊಸ ಪ್ರಾಜೆಕ್ಟ್ ಗಳ ಬಗ್ಗೆ ಫಿಲ್ಮೀಬೀಟ್ ಜತೆಗೆ ಮಾತನಾಡಿದ್ದಾರೆ.

`ನೀರೇ’ ಚಿತ್ರವನ್ನು ನೀವು ಒಪ್ಪಿಕೊಳ್ಳಲು ಕಾರಣವೇನು?
ನೀರೇ ಎನ್ನುವುದು ಫ್ರೆಂಡ್ಸ್ ಮತ್ತು ಫ್ಯಾಮಿಲಿ ಓರಿಯೆಂಟೆಡ್ ಸಿನಿಮಾ. ಒಂದೊಳ್ಳೆಯ ಎಮೋಶನ್ಸ್ ಇರುವ ಚಿತ್ರಕತೆ ಇದೆ. ಶೀರ್ಷಿಕೆಯ ಪ್ರಕಾರ ತಾಯಿ ಎಂಬ ನೀರೆ ಮತ್ತು ನೀರಿನಂತೆ ಬೆರೆಯುವ ಸಂಬಂಧಗಳ ಬಗ್ಗೆ ಚಿತ್ರ ಹೇಳುತ್ತದೆ. ಮಾತ್ರವಲ್ಲ, ಟೆಕ್ನಿಕಲಿ ವೆಲ್ ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಹಾಗಾಗಿಯೇ ಒಪ್ಪಿಕೊಂಡೆ. ಮಾತ್ರವಲ್ಲ, ನಮಗೋಸ್ಕರ ಯಾರೋ ಒಂದು ಹಂಡ್ರೆಡ್ ಪರ್ಸೆಂಟ್ ಒಪ್ಪಿಕೊಳ್ಳುವಂಥ ಚಿತ್ರ ಬರುತ್ತದೆ ಎಂದು ಕಾದು ಕುಳಿತರೆ ಕಾಲ ನಮಗಾಗಿ ಕಾಯುವುದಿಲ್ಲ. ಹಾಗಾಗಿ ಒಂದು ಮಟ್ಟಿಗೆ ಇಷ್ಟವಾದಂಥ ಅವಕಾಶಗಳು ಬಂದೊಡನೆ ಅದನ್ನು ಬಳಸಿಕೊಳ್ಳಬೇಕು ಎನ್ನುವುದು ನಾನು ಕಂಡುಕೊಂಡ ಸತ್ಯ.

ಸ್ವತಃ ಸಿನಿಮಾ ನಿರ್ದೇಶಿಸುವ ಕನಸು ಇದೆಯೇ?
ಸಿನಿಮಾ ನಿರ್ದೇಶನ ಎನ್ನುವುದು ಸುಲಭದ ವಿಷಯವಲ್ಲ. ಆ ವಿಶನ್ನೇ ಬೇರೆ. ಅದರಲ್ಲಿ ಅರ್ಥಮಾಡಿಕೊಳ್ಳಬೇಕಾದ ತಾಂತ್ರಿಕ ವಿಚಾರಗಳು ತುಂಬಾನೇ ಇವೆ. ಹಾಗಾಗಿ ಎಲ್ಲ ಕಲಾವಿದರು ಕೂಡ ನಿರ್ದೇಶಕರಾಗಲು ಸಾಧ್ಯವಿಲ್ಲ. ನಟನೆಯ ವಿಚಾರ ತೆಗೆದುಕೊಂಡರೂ ನಾನು ಕಲಾವಿದನಾಗಿ ಬೆಳೆಯುತ್ತಿರುವ ಮಗು ಅಷ್ಟೇ. ಮೊದಲು ಒಳ್ಳೆಯ ನಟನೆಂದು ಗುರುತಿಸಿಕೊಳ್ಳುವಂತಾಗಲಿ. ಆಮೇಲೆ ಉಳಿದಿರುವುದನ್ನು ನೋಡೋಣ.

ನಿಮ್ಮ ನಟನೆ ಚೆಲುವಿನ ಜತೆಯಲ್ಲೇ ಇತ್ತೀಚೆಗೆ ನಿಮ್ಮ ಮೈಕಟ್ಟು ಕೂಡ ಗಮನ ಸೆಳೆಯುತ್ತಿದೆಯಲ್ಲ?
ನಾನು ಸುಮಾರು 23 ವರ್ಷಗಳಿಂದ ದೇಹವನ್ನು ಫಿಟ್ಟಾಗಿ ಇರಿಸಿಕೊಂಡಿದ್ದೇನೆ. ಆದರೆ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳ ಮೂಲಕ ಹೆಚ್ಚು ಜನರು ಗುರುತಿಸುವಂತಾಗಿದೆ. ಅದರಿಂದ ತುಂಬ ಜನ ಉಪಯೋಗವಾಗುವುದಾಗಿ ಹೇಳಿದರು. ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ಫಿಟ್ನೆಸ್ ಬಗ್ಗೆ ಮಾತನಾಡಲು ಕರೆಸಿಕೊಂಡಿದ್ದರು. ಅದು ಡಾಕ್ಟರ್ ಗಳ ಸಮಾವೇಶವಾಗಿತ್ತು. ನೂರಾರು ಜನ ಸೇರಿದ್ದರು. ಫಿಟ್ನೆಸ್ ನಿಂದ ಇರುವುದು ನನಗೆ ಎಷ್ಟು ಉಪಯೋಗಕಾರಿಯಾಗಿದೆ ಎಂದು ತಿಳಿಸಿದೆ. ಅವರು ಮೆಚ್ಚಿಕೊಂಡರು.

ನಿಮ್ಮ ದಿನಚರಿಯಲ್ಲಿ ಫಿಟ್ನೆಸ್ ಗಾಗಿ ಎಷ್ಟು ಸಮಯ ಮೀಸಲಿಡುತ್ತೀರ?
ನಾನು ಬೆಳಿಗ್ಗೆ 6 ಗಂಟೆಗೆ ಸರಿಯಾಗಿ ಏಳುತ್ತೇನೆ. ಸುಮಾರು ಅರ್ಧ, ಒಂದು ಗಂಟೆಯೊಳಗೆ ಜಿಮ್ ನಲ್ಲಿರುತ್ತೇನೆ. ಅಲ್ಲಿ ಎರಡು ಗಂಟೆ ಕಾಲ ಕಳೆಯುತ್ತೇನೆ. ಬಿಡುವು ಸಿಕ್ಕರೆ ಮತ್ತೆ ಸಂಜೆ ಕೂಡ ಜಿಮ್ ಗೆ ಹೋಗುತ್ತೇನೆ. ಬೆಳಿಗ್ಗೆ ವೆಯ್ಟ್ ಟ್ರೇನಿಂಗ್ ಮತ್ತೆ ಸಂಜೆ ಕಾರ್ಡಿಯೋ ಮತ್ತು ಆಬ್ಸ್ ವ್ಯಾಯಾಮಕ್ಕೆ ಮೀಸಲಿಡುತ್ತೇನೆ. ಶೂಟಿಂಗ್ ಇದ್ದರೆ ಯಾವುದಾದರೂ ಒಂದು ಹೊತ್ತು ಮಿನಿಮಮ್ ಒಂದು ಗಂಟೆಯಾದರೂ ಮೀಸಲಿಡುತ್ತೇನೆ.

ಮೊಬೈಲ್ ಫೋನ್ ನಲ್ಲಿರುವ ಕಾಲರ್ ಟ್ಯೂನ್ ನ ಆಯ್ಕೆಗೆ ವಿಶೇಷ ಕಾರಣಗಳೇನಾದರೂ ಇದೆಯೇ?
ಅದು `ಅಮರ್' ಚಿತ್ರದ ಹಾಡು. ಮರೆತು ಹೋಯಿತೆ ನನ್ನಯ ಹಾಜರೀ.. ಎನ್ನುವ ಈ ಹಾಡಿನ ಸಾಹಿತ್ಯ ನನಗೆ ತುಂಬ ಇಷ್ಟವಾಯಿತು. ಆದರೆ ಅಂಥದೊಂದು ಹಾಡು ನಾನು ಬಳಸಿದ್ದೇನೆ ಎನ್ನುವ ಕಾರಣಕ್ಕೆ ನನಗೆ ಲವ್ ಫೆಯಿಲ್ಯೂರ್ ಆಗಿದೆ ಎನ್ನುವ ಯೋಚನೆ ಹಲವರಿಗೆ. ಸದ್ಯಕ್ಕೆ ಲವ್ವೂ ಇಲ್ಲ, ಮದುವೆಯೂ ಇಲ್ಲ! ಎಲ್ಲವೂ ಆಯಾ ಸಮಯಕ್ಕೆ ತಕ್ಕ ಹಾಗೆ ಆಗುತ್ತವೆ ಎನ್ನುವ ನಂಬಿಕೆ ನನಗಿದೆ.

ಮುಂದಿನ ಪ್ರಾಜೆಕ್ಟ್ ಗಳ ಬಗ್ಗೆ ಹೇಳಿ
`ಪುಷ್ಪಾ ಐ ಹೇಟ್ ಟಿಯರ್ಸ್' ಚಿತ್ರ ಜನವರಿಯಲ್ಲಿ ಬಿಡುಗಡೆಯಾಗಲಿದೆ. ಇನ್ನೊಂದು ಹಿಂದಿ ವೆಬ್ ಸಿನಿಮಾದ ತಯಾರಿಯಲ್ಲಿದ್ದೇನೆ. ಇದಕ್ಕೂ `ಪುಷ್ಪಾ ಐ ಹೇಟ್ ಟಿಯರ್ಸ್' ಚಿತ್ರದ ದಿನಕರ ಕಪೂರ್ ಅವರೇ ನಿರ್ದೇಶಕರು. ಡಿಸೆಂಬರ್ ಅಂದರೆ ಮುಂದಿನ ತಿಂಗಳಲ್ಲೇ ಚಿತ್ರೀಕರಣ ಆರಂಭವಾಗಲಿದೆ. ನಾನು ಮತ್ತು ಮುಕುಲ್ ದೇವ್ ಚಿತ್ರದಲ್ಲಿ ಪ್ರಧಾನ ಪಾತ್ರಗಳನ್ನು ನಿರ್ವಹಿಸುತ್ತಿದ್ದೇವೆ. ಕನ್ನಡದಲ್ಲಿ `ನೀರೇ' ನಿಮಗೆ ಗೊತ್ತಿರುವ ಪ್ರಾಜೆಕ್ಟ್.


Click it and Unblock the Notifications











