Don't Miss!
- Finance ಬೆಂಗಳೂರು-ತುಮಕೂರು ನಮ್ಮ ಮೆಟ್ರೋ ಯೋಜನೆ: ಬರಲಿವೆ 19 ಎತ್ತರದ ನಿಲ್ದಾಣಗಳು
- News ಬೆಳಗಾವಿಯಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪ: ಲಕ್ಷ್ಮಿ ಹೆಬ್ಬಾಳ್ಕರ್ಗೆ ಸಮನ್ಸ್ ಜಾರಿ
- Technology iPhone: ಆಪಲ್ ಅಂತಿಮವಾಗಿ ಐಫೋನ್ 12 ಬಳಕೆದಾರರಿಗೆ ಗುಡ್ ನ್ಯೂಸ್ ನೀಡಿಯೇ ಬಿಟ್ಟಿತು! ಏನದು?
- Automobiles Tata Nexon: ಟಾಟಾ ನೆಕ್ಸಾನ್ ಹೊಸ ರೂಪಾಂತರಗಳು ಬಿಡುಗಡೆ, ರೂ.10 ಲಕ್ಷ ಬೆಲೆ.. ಆಕರ್ಷಕ ವೈಶಿಷ್ಟ್ಯಗಳು
- Sports Riyan Parag: 'ಗಾಯದಿಂದ ಮೂರು ದಿನ ಒದ್ದಾಡಿ ಹೋಗಿದ್ದೆ': ರಿಯಾನ್ ಪರಾಗ್
- Lifestyle ಗುಡ್ಫ್ರೈಡೆ ಆಚರಣೆ ಹುಟ್ಟಿದ್ದು ಹೇಗೆ? ಇದರ ಮಹತ್ವವೇನು ಗೊತ್ತಾ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪೃಥ್ವಿ ಅಂಬಾರ್ ಬಾಳಲ್ಲಿ ಪ್ರೇಮ ಪಯಣದ ಆರಂಭ
ಪೃಥ್ವಿ ಅಂಬಾರ್ ಎಂದರೆ ತಕ್ಷಣ ಈ ನಟನ ನೆನಪಾಗುವುದು ಕಷ್ಟ. ಆದರೆ ಒಮ್ಮೆ ಮುಖ ನೋಡಿದರೆ ತಕ್ಷಣ ಇವರು ನಮ್ಮ ಕಲಾವಿದ ಎಂದು ಗುರುತಿಸಿ ಬಿಡಬಹುದು. ಆ ಮಟ್ಟಿನ ಜನಪ್ರಿಯತೆಯನ್ನು ಇವರು ತಮ್ಮ ನಟನೆಯ ಮೂಲಕ ಮೂಡಿಸಿದ್ದಾರೆ. ವರ್ಷಗಳ ಹಿಂದೆ 'ರಾಧಾ ಕಲ್ಯಾಣ' ಧಾರಾವಾಹಿಯ ನಾಯಕನಾಗಿ ಜನಮನ ಗೆದ್ದ ನಾಗರಾಜ್ ಅಂಬಾರ್, ಸಿನಿಮಾರಂಗ ಪ್ರವೇಶಿಸುವಾಗ ತಮ್ಮ ಹೆಸರನ್ನು ಪೃಥ್ವಿ ಅಂಬಾರ್ ಎಂದು ಬದಲಾಯಿಸಿದರು.
ಒಬ್ಬ ಉತ್ತಮ ನೃತ್ಯಗಾರನಾಗಿ, ಮಧುರ ಕಂಠದ ನಿರೂಪಕನಾಗಿ, ಸಹಜ ಅಭಿನಯದ ಕಲಾವಿದನಾಗಿ ಗುರುತಿಸಿಕೊಂಡಿರುವ ಬಹುಮುಖ ಪ್ರತಿಭೆ ಇವರು. ಇಂದು ಕಾಸರಗೋಡು ತಾಲೂಕಿನ ಉಪ್ಪಳದಲ್ಲಿ ವೈವಾಹಿಕ ಬದುಕಿಗೆ ಕಾಲಿಡುತ್ತಿರುವ ಪೃಥ್ವಿಯವರು ಫಿಲ್ಮೀಬೀಟ್ ಜತೆಗೆ ತಮ್ಮ ಪ್ರೇಮಕತೆಯನ್ನು ಹಂಚಿಕೊಂಡಿದ್ದಾರೆ.
ಮದುಮಗನಿಗೆ ಅಭಿನಂದನೆಗಳು. ನಿಮ್ಮ ಬಾಳ ಸಂಗಾತಿಯ ಬಗ್ಗೆ ಏನು ಹೇಳುತ್ತೀರಿ?
ವಂದನೆಗಳು. ನನ್ನವಳ ಹೆಸರು ಪಾರುಲ್ ಶುಕ್ಲಾ. ನಾವಿಬ್ಬರು ಇಂದು ವೈವಾಹಿಕ ಬದುಕಿಗೆ ಕಾಲಿಡುತ್ತಿದ್ದರೂ ನಮ್ಮ ಪ್ರೇಮಕ್ಕೆ ದಶಕದ ಹಿನ್ನೆಲೆ ಇದೆ! ಪಾರುಲ್ ಪ್ರಸ್ತುತ ಖಾಸಗಿ ವಾಹಿನಿಯೊಂದರಲ್ಲಿ ವೃತ್ತಿಯಲ್ಲಿದ್ದಾರೆ. ಆಕೆ ಮೂಲತಃ ಮುಂಬೈ ಹುಡುಗಿಯಾದರೂ ಕುಟುಂಬ ಸಮೇತ ಬೆಂಗಳೂರಲ್ಲಿ ವಾಸವಾಗಿದ್ದಾರೆ. ಮಾತೃಭಾಷೆ ಹಿಂದಿಯಾದರೂ ಕನ್ನಡ ಚೆನ್ನಾಗಿ ಮಾತನಾಡಬಲ್ಲಳು. ಈಗ ನನ್ನ ಮಾತೃಭಾಷೆ ತುಳುವನ್ನು ಕೂಡ ಕಲಿತುಕೊಂಡಿದ್ದಾಳೆ. ಹತ್ತು ವರ್ಷಗಳ ಕಾಲ ಆಕೆ ನನ್ನನ್ನು ಸಹಿಸಿಕೊಂಡಿರುವುದೇ ದೊಡ್ಡ ವಿಚಾರ.
ನಿಮಗೆ ಪ್ರೇಮ ಮೂಡಿದ ಸಂದರ್ಭ ಯಾವುದಾಗಿತ್ತು?
ನಮ್ಮ ಪ್ರೀತಿ ಶುರುವಾಗಿದ್ದು ಮಾತ್ರ ಹತ್ತು ವರ್ಷಗಳ ಹಿಂದೆ. ಅಂದು ಈ ಟಿವಿ ವಾಹಿನಿ ನಡೆಸಿದ್ದ `ಗ್ರೇಟ್ ಕರ್ನಾಟಕ ಡ್ಯಾನ್ಸ್ ಲೀಗ್' ರಿಯಾಲಿಟಿ ಶೋನಲ್ಲಿ ನಾವಿಬ್ಬರು ಬೇರೆ ಬೇರೆ ತಂಡದ ಸ್ಪರ್ಧಿಗಳಾಗಿದ್ದೆವು. ಸ್ಪರ್ಧೆಯ ಕೊನೆಗೆ ನಾನು ಗೆದ್ದೆ. ಆದರೆ ಪಾರುಲ್ ನನ್ನ ಹೃದಯ ಗೆದ್ದಳು. ಬಳಿಕ ವರ್ಷಗಳ ಕಾಲ ಫೋನಲ್ಲೇ ಮಾತುಕತೆ ನಡೆಯುತ್ತಿತ್ತು. ವಿವಾಹವು ಗಡಿನಾಡಿನ ನನ್ನ ಊರಲ್ಲಿ ನೆರವೇರುತ್ತಿದ್ದು ಎರಡು ಕುಟುಂಬಗಳ ಸಂಪೂರ್ಣ ಸಹಭಾಗಿತ್ವ ಇರಲಿದೆ.
ನಿಮ್ಮ ಕುಟುಂಬದಿಂದ ಸಿನಿಮಾರಂಗದಲ್ಲಿರುವವರು ನೀವೊಬ್ಬರೇ ತಾನೇ?
ಹೌದು. ವೀರಪ್ಪ ಅಂಬಾರ್ ಮತ್ತು ಸುಜಾತ ದಂಪತಿಯ ಮೂವರು ಮಕ್ಕಳಲ್ಲಿ ನಾನೇ ಹಿರಿಯವನು. ವರುಣ್ ಮತ್ತು ಅರುಣ್ ನನ್ನ ತಮ್ಮಂದಿರು. ಬಿಬಿಎಮ್ ಬಳಿಕ ಕಮ್ಯುನಿಕೇಶನ್ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದ ನಾನು ವಥ್ತಿ ಬದುಕು ಶುರು ಮಾಡಿದ್ದು ರೇಡಿಯೋ ಜಾಕಿಯಾಗಿ. ರಾಧಾಕಲ್ಯಾಣ, ಲವಲವಿಕೆ, ಸಾಗರ ಸಂಗಮ ಧಾರಾವಾಹಿಗಳ ಬಳಿಕ ರಾಜರು ಮೊದಲಾದ ಚಿತ್ರಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸುವ ಅವಕಾಶ ದೊರೆಯಿತು. ತುಳುವಿನಲ್ಲಿ ಈಗಾಗಲೇ ನಾಲ್ಕೈದು ಚಿತ್ರಗಳಲ್ಲಿ ನಟಿಸಿದ್ದೇನೆ. ಕಲಾ ಬದುಕಿಗೆ ಮನೆ ಮಂದಿಯ ಜತೆಗೆ ಪಾರುಲ್ ಪ್ರೋತ್ಸಾಹವೂ ಇದೆ.
ನಿಮ್ಮ ಹೊಸ ಪ್ರಾಜೆಕ್ಟ್ ಗಳ ಬಗ್ಗೆ ಹೇಳಿ?
ಕನ್ನಡದಲ್ಲಿ ನನ್ನ ಬಹುನಿರೀಕ್ಷಿತ ಚಿತ್ರ ದಿಯಾ. ಕೃಷ್ಣ ಚೈತನ್ಯ ನಿಮಿಸಿ, ಅಶೋಕ್ ನಿರ್ದೇಶಿಸಿರುವ `ದಿಯಾ' ಚಿತ್ರದಲ್ಲಿ ನಾನು ಪ್ರಮುಖ ಪಾತ್ರದಲ್ಲಿ ನಟಿಸಿದ್ದೇನೆ. ಇದುವರೆಗೆ ನನ್ನ ಪಾತ್ರವನ್ನು ಸಸ್ಪೆನ್ಸ್ ನಲ್ಲಿ ಇಡಲಾಗಿತ್ತು. ಆದರೆ ಚಿತ್ರ ಇದೇ ನವೆಂಬರ್ ತಿಂಗಳ ಕೊನೆಯ ವಾರ ಬಿಡುಗಡೆಯಾಗಲಿದೆ. ಹಾಗಾಗಿ ತಂಡದ ಒಪ್ಪಿಗೆಯ ಮೇರೆಗೆ ಈ ಖುಷಿಯನ್ನು ಹಂಚಿಕೊಳ್ಳುತ್ತಿದ್ದೇನೆ. ಇದರ ಜತೆಗೆ ತುಳುವಿನಲ್ಲಿ ನಾನು ನಟಿಸಿರುವ ಆರು ಚಿತ್ರಗಳು ಬಿಡುಗಡೆಗೆ ತಯಾರಾಗುತ್ತಿವೆ. ರಡ್ಡ್ ಎಕ್ರೆ, ಇಂಗ್ಲಿಷ್, ಆಟಿಡೊಂಜಿ ದಿನ, ಕುದ್ಕನ ಮದ್ಮೆ, ಪ್ರವೇಶ ಮತ್ತು ಲಾಸ್ಟ್ ಬೆಂಚ್ ಎನ್ನುವುದು ಅವುಗಳ ಹೆಸರು.
ದಿಯಾ ಚಿತ್ರದ ಬಗ್ಗೆ ನಿಮ್ಮ ವಿಶೇಷ ನಿರೀಕ್ಷೆಗೆ ಕಾರಣವೇನು?
ದಿಯಾ ಎನ್ನುವುದು 6-5=2 ಚಿತ್ರವನ್ನು ನೀಡಿರುವಂಥ ಅಶೋಕ್ ನಿರ್ದೇಶಿಸಿರುವ ಚಿತ್ರ. ಕರ್ವದ ಬಳಿಕ ತೆರೆ ಕಾಣುತ್ತಿರುವ ಅವರ ಬಹುನಿರೀಕ್ಷಿತ ಚಿತ್ರದಲ್ಲಿ ನಾನು ನಾಯಕನಾಗಿರುವುದು ಖುಷಿ ತಂದಿದೆ. ದಿ ಗ್ರೇಟ್ ಸ್ಟೋರಿ ಆಫ್ ಸೋಡಾ ಬುಡ್ಡಿ ಚಿತ್ರದಲ್ಲಿ ನಾಯಕಿಯಾಗಿದ್ದ ಖುಷಿ ಈ ಸಿನಿಮಾದಲ್ಲಿ ನಾಯಕಿ. ಚಿತ್ರದಲ್ಲಿ ಪವಿತ್ರಾ ಲೋಕೇಶ್, ಅರವಿಂದ ರಾವ್ ಮೊದಲಾದವರು ಇದ್ದಾರೆ. ನಾಗಿಣಿ ಧಾರಾವಾಹಿಯ ನಾಯಕ ದೀಕ್ಷಿತ್ ಕೂಡ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಈಗಾಗಲೇ ವಿದ್ಯಾರ್ಥಿಗಳಿಗೆ ಮತ್ತು ಚಿತ್ರೋದ್ಯಮಕ್ಕೆ ಚಿತ್ರದ ವಿಶೇಷ ಪ್ರದರ್ಶನ ನೀಡಿದಾಗ ವೀಕ್ಷಕರು ಕೊನೆಯಲ್ಲಿ ಕಣ್ಣೀರಾಗಿರುವುದನ್ನು ಕಂಡಿದ್ದೇನೆ. ಹಾಗಾಗಿ ಚಿತ್ರದ ಬಗ್ಗೆ ದೊಡ್ಡ ನಿರೀಕ್ಷೆ ಇದೆ.