Don't Miss!
- News ಬಿಜೆಪಿ 400 ಸ್ಥಾನ ಪಡೆಯಲು ಹರಸಾಹಸ ಪಡುತ್ತಿರುವುದ್ಯಾಕೆ.?-ಯತೀಂದ ಸಿದ್ದರಾಮಯ್ಯ ಹೇಳಿದ್ದೇನು?
- Sports CSK vs RCB: ದಾಖಲೆಯ ಪುಟ ಸೇರಿದ ಉದ್ಘಾಟನಾ ಪಂದ್ಯ: 16.8 ಕೋಟಿ ಜನರಿಂದ ವೀಕ್ಷಣೆ
- Finance ಮೃತರ ಖಾತೆಯಲ್ಲಿರುವ ಹಣವನ್ನು ಕುಟುಂಬಸ್ಥರು ಡ್ರಾ ಮಾಡಬಹುದಾ, ಬ್ಯಾಂಕ್ ನಿಯಮಾವಳಿ ಏನು ಹೇಳುತ್ತೆ?
- Automobiles ಇನ್ಮುಂದೆ ಟೋಲ್ ಪ್ಲಾಜಾಗಳು ಕಣ್ಮರೆ: ಖುಷಿ ಪಡುವ ಮುನ್ನ ಈ ಸುದ್ದಿ ನೋಡಿ...
- Lifestyle ಬಾಯಲ್ಲಿ ನೀರು ತರಿಸುವ ಮಾವಿನ ಕಾಯಿ ಚಟ್ನಿ..! 5 ನಿಮಿಷದಲ್ಲಿ ರೆಡಿ..!
- Technology Motorola: ಮೊಟೊರೊಲಾ ಎಡ್ಜ್ 50 ಅಲ್ಟ್ರಾ ಸ್ಮಾರ್ಟ್ಫೋನ್ ಫೀಚರ್ಸ್ ಲೀಕ್! ವಿಶೇಷತೆ ಏನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮದುವೆ ಬಗ್ಗೆ ಸುಳಿವು ಕೊಟ್ಟ ರಕ್ಷಿತ್ ಶೆಟ್ಟಿ: ಈ ಕೆಲಸ ಆದ್ಮೇಲೆ ಕಲ್ಯಾಣವಂತೆ?
Recommended Video
ರಕ್ಷಿತ್ ಶೆಟ್ಟಿಯವರು ಶಾನ್ವಿಗೆ ಜೋಡಿಯಾಗಿ, ಸಚಿನ್ ರವಿ ನಿರ್ದೇಶನದಲ್ಲಿ ನಟಿಸಿರುವ ಬಹುನಿರೀಕ್ಷಿತ ಚಿತ್ರ ಶ್ರೀಮನ್ನಾರಾಯಣ'ದ ಟ್ರೇಲರ್ ಬಿಡುಗಡೆಯ ಬಳಿಕ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಅದು ಪ್ಯಾನ್ ಇಂಡಿಯಾ ಚಿತ್ರವೆನ್ನುವ ಕಾರಣದಿಂದ ದೇಶದಾದ್ಯಂತ ಹರಡಿರುವ ಟ್ರೇಲರ್ ಕುರಿತಾದ ಅಚ್ಚರಿ, ಆಕರ್ಷಣೆಯ ವಿಚಾರ ಇರಬಹುದು. ಅಥವಾ ನೆಗೆಟಿವ್ ಕಮೆಂಟ್ ಗಳಿರಬಹುದು ಅಥವಾ ರಕ್ಷಿತ್ ಅವರ ಮದುವೆಯ ಕುರಿತಾದ ವಿಚಾರಗಳಿರಬಹುದು.
ಅವೆಲ್ಲ ಪ್ರಶ್ನೆ, ಸಂದೇಹಗಳನ್ನು ನೇರವಾಗಿ ರಕ್ಷಿತ್ ಶೆಟ್ಟಿಯವರ ಮುಂದೆ ಇರಿಸಿದರೆ ಅವರ ಉತ್ತರ ಏನಿರಬಹುದು ಎನ್ನುವ ಸಂದೇಹ ಎಲ್ಲ ಸಿನಿ ರಸಿಕರಲ್ಲಿಯೂ ಇರುವಂಥದ್ದೇ. ಹಾಗಾಗಿ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿಯವರನ್ನು ಭೇಟಿಯಾಗಿ ಶ್ರೀಮನ್ನಾರಾಯಣ ಮಾತ್ರವಲ್ಲ, ಅವರ ಮುಂದಿನ ಸಿನಿಮಾಗಳ ಬಗ್ಗೆ, ಸುದೀಪ್ ಅವರ ಚಿತ್ರವನ್ನು ನಿರ್ದೇಶಿಸುವ ಬಗ್ಗೆ ಮತ್ತು ಖಾಸಗಿ ಬದುಕಿನ ಬಗ್ಗೆಯೂ ಕೇಳಲಾದ ವಿಶೇಷ ಪ್ರಶ್ನೆಗಳಿಗೆ ಅವರಿಂದ ಉತ್ತರ ಪಡೆದುಕೊಳ್ಳಲಾಗಿದೆ. ಇದು ಫಿಲ್ಮೀಬೀಟ್ ನಲ್ಲಿ ಮಾತ್ರ.
ಶ್ರೀಮನ್ನಾರಾಯಣ ಟ್ರೇಲರ್ ಗೆ ದೊರಕಿರುವ ಪ್ರತಿಕ್ರಿಯೆ ಹೇಗಿದೆ?
ಸುಪರ್ಬ್ ಆಗಿದೆ. ಒಂದಷ್ಟು ವಿಡಿಯೋಗಳಲ್ಲಿ ನೀಡಿರುವ ರೆಸ್ಪಾನ್ಸ್ ನೋಡಿದೆ. ತುಂಬ ಇಷ್ಟವಾಯಿತು. ಅಂತಾರಾಜ್ಯ ಸೆಲೆಬ್ರಿಟೀಸ್ ಮಾತ್ರವಲ್ಲ, ಆಂಧ್ರದ ರಸ್ತೆಬದಿಯಲ್ಲಿ ಓಡಾಡುವ ಜನಗಳು ಕೂಡ ಟ್ರೇಲರ್ ನೋಡಿ ಸಿನಿಮಾ ಬಗ್ಗೆ ಪಾಸಿಟಿವ್ ಆಗಿ ಮಾತನಾಡುತ್ತಿರುವುದು ಖುಷಿ ನೀಡಿದೆ.
ವರ್ಷಾಂತ್ಯದಲ್ಲೇ ಚಿತ್ರ ತೆರೆಗೆ ತರಬೇಕು ಎನ್ನುವ ನಂಬಿಕೆ ನಿಮ್ಮಲ್ಲಿದೆಯೇ?
ಡಿಸೆಂಬರ್ ಎಂಡ್ ಬಗ್ಗೆ ಯಾವುದೇ ಸೆಂಟಿಮೆಂಟ್ಸ್ ಇಲ್ಲ. ಆದರೆ ಈ ವರ್ಷಾಂತ್ಯದೊಳಗೆ ಹೇಗಾದರೂ ಬಿಡುಗಡೆಗೊಳಿಸಬೇಕು ಎಂದು ಇತ್ತು. ಯಾಕೆಂದರೆ ಈಗಾಗಲೇ ಮೂರು ವರ್ಷ ಆಗಿದೆ. ಮುಂದಿನ ವರ್ಷಕ್ಕೆ ದಾಟಿಸುವುದು ಬೇಡ ಎಂದು ಇತ್ತು. ನನಗೆ ಜ್ಯೋತಿಷ್ಯ, ನ್ಯೂಮರಾಲಜಿ ಬಗ್ಗೆ ಗಂಭೀರವಾದ ನಂಬಿಕೆಗಳಿಲ್ಲ. ಆದರೆ ಎಲ್ಲವೂ 6 ಅಥವಾ 9 ನಂಬರ್ ಗಳಲ್ಲಿದ್ದರೆ ಚೆನ್ನಾಗಿರುತ್ತದೆ ಎಂದು ಫಾಲೋ ಮಾಡುತ್ತೇವೆ. ಆದರೆ ಅದಕ್ಕಾಗಿ ವಿಷಯಗಳನ್ನು ಬದಲಾಯಿಸುವುದಿಲ್ಲ.
ಮಂಗಳೂರು ಕಡೆಯ ಶೆಟ್ಟಿಗಳ ಹಾಗೆ ಪ್ಲ್ಯಾನ್ ಮಾಡುವ ಟೀಮ್ ಸಿಕ್ರೆ ಚಿತ್ರಕ್ಕೆ ದುಡ್ಡು ಹಾಕ್ತೇವೆ ಎನ್ನುವವರಿಗೇನು ಹೇಳುತ್ತೀರಿ?
ನಮ್ಮಿಂದಾಗಿ ಅಂಥದೊಂದು ಹೆಸರು ಬಂದಿರುವುದಕ್ಕೆ ಖುಷಿಯಿದೆ. ಆದರೆ ಅದೇ ಸಂದರ್ಭದಲ್ಲಿ ಅದೇ ಸಮಯ ನನ್ನದೊಂದು ವಿನಂತಿ ಇದೆ. ಟ್ಯಾಲೆಂಟ್ ಎನ್ನುವುದು ಯಾವುದೇ ಒಂದು ಊರಿಗೆ ಅಥವಾ ಜಾತಿಗೆ ಸೀಮಿತವಾಗಿರುವುದಿಲ್ಲ, ಎಲ್ಲರಲ್ಲಿಯೂ ಎಲ್ಲ ಕಡೆಯಲ್ಲಿಯೂ ಇರುತ್ತದೆ. ನಾವು ಅದನ್ನು ಅರ್ಥಮಾಡಿಕೊಂಡು ಸರಿಯಾಗಿ ಬಳಸಬೇಕು ಅಷ್ಟೇ. ಆದರೆ ಅದೇ ವೇಳೆ ಇನ್ನೊಂದು ವಿಚಾರ ಏನೆಂದರೆ ನಾವು ಎಲ್ಲಿ ಬೆಳೆದಿದ್ದೇವೆಯೋ ಅಲ್ಲಿನ ಸಂಸ್ಕೃತಿಯನ್ನು ಅರ್ಥಮಾಡಿಕೊಂಡರೆ ಅದೇ ನಮ್ಮ ಬೆಳವಣಿಗೆಗೆ ಪೂರಕವಾಗಿರುತ್ತದೆ. ಅಂದರೆ ನನ್ನ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಾಗಿ ನನ್ನೂರು ಉಡುಪಿ ಮತ್ತು ನನ್ನ ಪೋಷಕರು ಕಲಿಸಿದ ಸಂಸ್ಕಾರ ಮುಖ್ಯವಾಗಿದೆ.
ಗೆದ್ದ ಚಿತ್ರದ ಫಾರ್ಮುಲಾದಲ್ಲೇ ಚಿತ್ರ ಮಾಡಿ ಸೋಲುವ ಸಾಕಷ್ಟು ನಿರ್ಮಾಪಕರುಗಳಿಗೆ ನಿಮ್ಮ ಕಿವಿಮಾತೇನು?
ಸಿನಿಮಾ ಹೀಗೆಯೇ ಇರಬೇಕು ಎಂದು ಯಾರೂ ರೂಲ್ಸ್ ಮಾಡಿಲ್ಲ. ಆದರೂ ಹೊಸದಾಗಿ ಬರುವ ಹೆಚ್ಚಿನ ನಿರ್ಮಾಪಕರು ಯಾವುದಾದರೂ ಗೆದ್ದ ಚಿತ್ರದ ಶೈಲಿಯ ಫೈಟು, ಹಾಡು, ದೃಶ್ಯಗಳನ್ನೇ ಹೋಲುವ ಸನ್ನಿವೇಶಗಳೇ ತಮ್ಮ ಚಿತ್ರದಲ್ಲಿಯೂ ಇರಬೇಕು ಎಂದುಕೊಳ್ಳುತ್ತಾರೆ. ಹಾಗಂತ ಅದು ಅವರ ವೈಯಕ್ತಿಕ ಅಭಿರುಚಿಯೇನೂ ಅಲ್ಲ. ಹಾಗೆ ಮಾಡಿದರೆ ಗೆಲ್ಲುವ ಸಾಧ್ಯತೆ ಹೆಚ್ಚು ಎನ್ನುವ ವ್ಯಾಪಾರೀ ಮನೋಭಾವ ಅದಕ್ಕೆ ಕಾರಣವಾಗಿರುತ್ತದೆ. ನೈಜ ಆಸಕ್ತಿ, ಕಾಳಜಿ, ಶ್ರಮಗಳನ್ನು ಬದಿಗಿಟ್ಟು ವ್ಯಾಪಾರೀ ಮನೋಭಾವದಿಂದ ಚಿತ್ರ ಮಾಡಿದರೆ ಅಂಥ ವ್ಯಾಪಾರದಲ್ಲಿ ಸೋಲಾದರೂ ಅವರು ಎದುರಿಸುವ ಹಾಗಿರಬೇಕು. ಆದರೆ ಸಿನಿಮಾ ಒಂದು ಕಲೆ. ಹಾಗಾಗಿ ನಿರ್ಮಾಪಕರಿಗೆ ಅವರೊಳಗೆಯೇ ಸಿನಿಮಾ ಬಗ್ಗೆ ಒಂದು ಪ್ಯಾಷನ್ ಇರಬೇಕು. ಅದು ಹೇಗಿರಬೇಕು ಎನ್ನುವುದನ್ನು ಪುಷ್ಕರ್ ಅವರನ್ನು ನೋಡಿ ಕಲಿಯಬಹುದು. ಯಾಕೆಂದರೆ ಅವರ ಸಪೋರ್ಟ್ ಇರದಿದ್ದರೆ ಇಂದು `ಅವನೇ ಶ್ರೀಮನ್ನಾರಾಯಣ' ಇಷ್ಟು ದೊಡ್ಡದಾಗಿ ತೆರೆಗೆ ಬರಲು ಸಾಧ್ಯವಾಗುತ್ತಿರಲಿಲ್ಲ.
ಸುದೀಪ್ ಚಿತ್ರವನ್ನು ನಿರ್ದೇಶಿಸುವ ನಿಮ್ಮ ಕನಸು ಏನಾಯಿತು?
ಡೆಫಿನೆಟ್ ಆಗಿ ಸುದೀಪ್ ಅವರೊಂದಿಗೆ ಚಿತ್ರ ಮಾಡುವ ಯೋಜನೆ ನನ್ನಲ್ಲಿ ಈಗಲೂ ಇದೆ. ಅದು ಅವನೇ ಶ್ರೀಮನ್ನಾರಾಯಣಕ್ಕಿಂತ 20 ಪಟ್ಟು ದೊಡ್ಡ ಚಿತ್ರ. ನಾನು ಚಿತ್ರರಂಗಕ್ಕೆ ಬಂದಿರುವುದೇ ನಾಯಕನಾಗಲು. ನಿರ್ದೇಶಕನಾಗಿದ್ದು ಕೂಡ ಮತ್ತೊಬ್ಬರನ್ನು ನಿರ್ದೇಶಿಸುವುದಕ್ಕಲ್ಲ. ನನ್ನ ಚಿತ್ರಗಳನ್ನೇ ನಿರ್ದೇಶಿಸಬೇಕು ಎನ್ನುವುದಕ್ಕಾಗಿ! ಆದರೆ ನನ್ನ ಚಿತ್ರ ಬದುಕಿನಲ್ಲಿ ಇನ್ನೊಬ್ಬರನ್ನು ನಿರ್ದೇಶಿಸಬೇಕು ಎಂದು ಆಶಿಸಿರುವುದು ಸುದೀಪ್ ಸರ್ ಅವರನ್ನು ಮಾತ್ರ. ಚಿತ್ರಕ್ಕೆ ಥಗ್ಸ್ ಆಫ್ ಮಾಲ್ಗುಡಿ ಎನ್ನುವ ಹೆಸರನ್ನು ಹಿಂದೆಯೇ ಘೋಷಿಸಿದ್ದೆ. ಆದರೆ ಆ ಬಳಿಕ ಹಿಂದಿಯಲ್ಲಿ ಥಗ್ಸ್ ಆಫ್ ಹಿಂದೂಸ್ಥಾನ್ ಚಿತ್ರ ತೆರೆಗೆ ಬಂತು. ಶೀರ್ಷಿಕೆಯ ಹೋಲಿಕೆ ಬಿಟ್ಟರೆ ನನ್ನ ಕಲ್ಪನೆಗೂ ಅದಕ್ಕೂ ಯಾವುದೇ ಸಂಬಂಧಗಳಿರಲಿಲ್ಲ. ಆದರೆ ಈಗ ನಾನು ನನ್ನ ಶೀರ್ಷಿಕೆ ಬಳಸಲು ತುಸು ಸಮಯ ಬೇಕು. ಮತ್ತೆ ಸುದೀಪ್ ಸರ್ ಕೂಡ ಮನಸು ಮಾಡಬೇಕು. ಕಾಲ ಕೂಡಿ ಬರಬೇಕು.
ನಿಮ್ಮ ನಿರ್ದೇಶನದ ಚಿತ್ರಗಳಷ್ಟೇ ಅಲ್ಲ, ನಟನೆಯ ಚಿತ್ರಗಳು ಕೂಡ ತಡವಾಗುವುದೇಕೆ?
ನಾನು ನಟನಾಗಿ ಒಂದು ಚಿತ್ರವನ್ನು ಒಪ್ಪಿಕೊಳ್ಳುವುದಿದ್ದರೂ ಸಂಪೂರ್ಣವಾಗಿ ಅದರಲ್ಲಿ ತೊಡಗಿಕೊಳ್ಳುತ್ತೇನೆ. ನನಗೆ ಕಂಫರ್ಟ್ ಅನಿಸದ ಪಾತ್ರ, ಚಿತ್ರವನ್ನು ನಾನು ಒಪ್ಪಿಕೊಳ್ಳುವುದೇ ಇಲ್ಲ. ಪಾತ್ರದೊಳಗೆ ಸೇರಿಕೊಳ್ಳಲು ನಾನು ಸಾಕಷ್ಟು ಸಮಯ ತೆಗೆದುಕೊಳ್ಳುತ್ತೇನೆ. ಹಾಗಾಗಿ ಅತಿಥಿ ಪಾತ್ರಗಳಲ್ಲಿ ನಟಿಸಲು ನಾನು ಒಪ್ಪಿಕೊಳ್ಳುವುದಿಲ್ಲ. ಪ್ರಸ್ತುತ ಚಾರ್ಲಿ ಚಿತ್ರದ ಐವತ್ತು ಪರ್ಸೆಂಟ್ ಚಿತ್ರೀಕರಣವಾಗಿದೆ. ಮಾರ್ಚ್ ತಿಂಗಳಲ್ಲಿ ಶೂಟಿಂಗ್ ಕಂಪ್ಲೀಟಾಗುತ್ತದೆ. ಆಮೇಲೆ ಪುಣ್ಯಕೋಟಿ ಚಿತ್ರೀಕರಣ ಶುರು ಮಾಡಲಿದ್ದೇನೆ. ತಡವಾದರೂ ನಾನು ವರ್ಕ್ ಎಂಜಾಯ್ ಮಾಡುತ್ತೇನೆ.
ಶ್ರೀಮನ್ನಾರಾಯಣ ಟ್ರೇಲರ್ ನೋಡಿಯೇ ಆಂಗ್ಲ ಸಿನಿಮಾಗಳ ಕಾಪಿ ಎನ್ನುವವರಿಗೇನು ಹೇಳುತ್ತೀರಿ?
ಇದು ವೆಸ್ಟರ್ನ್ ಜಾನರ್ ನಲ್ಲಿ ಮಾಡಿದ ಚಿತ್ರ. ಟೀಕಾಕಾರರು ಹೋಲಿಸುವ ರೇಂಗೊ, ಗುಡ್ ಬ್ಯಾಡ್ ಅಗ್ಲಿ, `ದಿ ಬಲ್ಲಡ್ ಆಫ್ ಬಸ್ಟರ್ ಕ್ರಗ್ಸ್' ಮಾತ್ರವಲ್ಲ ಆ ಜಾನರ್ ನಲ್ಲಿ ಸಾಕಷ್ಟು ಚಿತ್ರಗಳು ಬಂದಿವೆ. ಅದು ಬಾಲಿವುಡ್ ಶೈಲಿಯ ಹಾಗೆ ಒಂದು ಶೈಲಿ ಮಾತ್ರ. ಚಿತ್ರ ಬೇರೆಯೇ ಇರುತ್ತದೆ. ವಿಮರ್ಶೆಗಳನ್ನು ಚಿತ್ರ ನೋಡಿದ ಮೇಲೆ ಮಾಡಿದರೆ ಚೆನ್ನ. ಮೊದಲೆಲ್ಲ ಅಂಥ ಮಾತುಗಳು ಬೇಸರ ನೀಡುತ್ತಿತ್ತು. ಈಗ ಎಫೆಕ್ಟ್ ಆಗುತ್ತಿಲ್ಲ.
ಆದರೂ ನಿಮ್ಮ ಸ್ಟೈಲಲ್ಲೇ ಹೇಳುವುದಾದರೆ ಬಿರಿಯಾನಿ ನಿರೀಕ್ಷೆ ಮಾಡಿದಾಗ ಇಡ್ಲಿ ಸಿಕ್ಕಿದಂತಿದೆ ಎಂದರೆ?
ನಾವು ಬಿರಿಯಾನಿ ಮೆಚ್ಚುವವರಿಗಾಗಿ ಇಡ್ಲಿ ಮಾಡಿಲ್ಲ. ಬಿರಿಯಾನಿಗಿಂತ ಇಡ್ಲಿ ಇಷ್ಟಪಡುವವರು ಕೂಡ ನಮ್ಮೊಂದಿಗೆ ಇದ್ದಾರೆ ತಾನೇ? ಅವರು ಖಂಡಿತವಾಗಿ ಮೆಚ್ಚಿದ್ದಾರೆ. ಇನ್ನು ಚಿತ್ರ ಬಂದ ಮೇಲೆ ಅದು ಬಿರಿಯಾನಿ ಬಯಸಿದವರಿಗೂ ಇಷ್ಟವಾಗದೇ ಇರದು ಎನ್ನುವ ನಂಬಿಕೆ ಇದೆ. `ಸಿಂಪಲ್ ಆಗಿ ಒಂದು ಲವ್ ಸ್ಟೋರಿ' ಟೈಮಲ್ಲಿ ಜನರಿಗೆ ನನ್ನ ಕನ್ನಡ ತಮಾಷೆಯಾಗಿತ್ತು. ಆಮೇಲೆ ಒಪ್ಪಿಕೊಂಡರು. ಹಾಗೆ ನನ್ನ ನಿರ್ದೇಶನದ ಶೈಲಿಗೂ ಮನ್ನಣೆ ಸಿಗುವ ನಂಬಿಕೆ ಇದೆ. ಮಕ್ಕಳಿಂದ ಹಿಡಿದು ಎಲ್ಲರೂ ನನ್ನ ಚಿತ್ರ ನೋಡಬೇಕು ಎಂದು ಬಯಸುವವನು ನಾನು. ಹಾಗಾಗಿ ಹಿಂಸೆ, ಅತಿರೇಕದ ರೊಮಾನ್ಸ್ ದೃಶ್ಯಗಳಿರದ ಈ ಚಿತ್ರ ಎಲ್ಲರೂ ಮೆಚ್ಚಿ ನೋಡಬಹುದೆನ್ನುವ ನಿರೀಕ್ಷೆ ಇದೆ.
ಚಿತ್ರ ಬಿಡುಗೆಯಾದ ತಕ್ಷಣ ಮದುವೆಯಂತೆ?
ಹೌದಾ? ನನಗೆ ಒಪ್ಪಿಗೆಯಾಗುವ ಹುಡುಗಿ ಸಿಕ್ಕರೆ ಆಗಬಹುದು. ಆದರೆ ಈಗ ನನ್ನ ಮದುವೆ ಬಗ್ಗೆ ಕೇಳಿ ಬರುತ್ತಿರುವ ಎಲ್ಲ ಸುದ್ದಿಗಳು ನಾನ್ಸೆನ್ಸ್. ಸಿನಿಮಾ ಬಿಡುಗಡೆಯ ಬಳಿಕ ನನ್ನ ಆಸೆ ಮೊದಲು ಬೆಂಗಳೂರಲ್ಲಿ ಒಂದು ಮನೆ ಮಾಡಬೇಕು ಎಂದು. ಅದು ಆಗುವ ಹೊತ್ತಿಗೆ ಅಮ್ಮ ಯಾವುದಾದರೂ ಹುಡುಗಿ ಹುಡುಕಿ ಇಟ್ಟಿದ್ದರೆ ಆಮೇಲೆ ಮದುವೆ ಮಾತು.